Advertisement

128 ಹಳ್ಳಿಗಳಲ್ಲಿ ಶವಸಂಸ್ಕಾರಕ್ಕೂ ಅಲೆದಾಟ

01:20 PM Jan 03, 2020 | Suhan S |

ಔರಾದ: ಮನುಷ್ಯ ಇರುವ ತನಕ ತನ್ನ ಹಕ್ಕಿಗಾಗಿ ಹೋರಾಟ ಮಾಡುವುದು ಸರ್ವೇ ಸಾಮಾನ್ಯ. ಆದರೆ ವ್ಯಕ್ತಿ ಮೃತಪಟ್ಟ ನಂತರ ಶವ ಸಂಸ್ಕಾರ ಮಾಡಲೂ ಕೂಡ ಕುಟುಂಬದವರು ಸರ್ಕಾರಿ ಕಚೇರಿ ಎದುರು ಮುಂದೆ ಶವ ಇಟ್ಟುಕೊಂಡು ಹೋರಾಟ ಮಾಡುವ ಅನಿವಾರ್ಯತೆ ಗಡಿ ತಾಲೂಕು ಔರಾದನ 128 ಹಳ್ಳಿಗಳಲ್ಲಿದೆ.

Advertisement

ಇಲ್ಲಿನ ಜನರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ, ಸರ್ಕಾರ ಹಾಗೂ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಾಗದಿರುವುದರಿಂದ ಶವ ಸಂಸ್ಕಾರಕ್ಕೂ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಔರಾದ ತಾಲೂಕಿನಲ್ಲಿ ಒಟ್ಟು 154 ಹಳ್ಳಿಗಳಿದ್ದು ಈ ಪೈಕಿ 128 ಹಳ್ಳಿಗಳಲ್ಲಿ ಇಂದಿಗೂ ಸ್ಮಶಾನ ಭೂಮಿಯೇ ಇಲ್ಲ. ಅದರಂತೆ ತಾಲೂಕಿನಲ್ಲಿ 158 ತಾಂಡಾಗಳಿದ್ದು ಇದರಲ್ಲಿ ಎಷ್ಟು ತಾಂಡಾಗಳಲ್ಲಿ ಸ್ಮಶಾನ ಭೂಮಿ ಇದೆ ಎನ್ನುವುದು ಕೂಡ ತಾಲೂಕು ಆಡಳಿತಕ್ಕೆ ಗೊತ್ತಿಲ್ಲದಾಗಿದೆ.

ಔರಾದ ಮತ್ತು ಕಮಲನಗರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪ್ರತಿವರ್ಷ ವ್ಯಕ್ತಿಗಳು ಮೃತ ಪಟ್ಟಾಗ ಅವರ ಕುಟುಂಬ ಸದಸ್ಯರು ಸ್ಮಶಾನ ಭೂಮಿ ಇಲ್ಲದೇ ಇರುವುದರಿಂದ ರಸ್ತೆಯಲ್ಲಿ ಶವ ಇಟ್ಟುಕೊಂಡು ಹೋರಾಟ ಮಾಡಿದ ಉದಾರಣೆಗಳಿವೆ. ಪ್ರತಿಯೊಂದು ಸಮುದಾಯಕ್ಕೂ ಸ್ಮಶಾನ ಭೂಮಿ ಇಲ್ಲ ಎನ್ನುವ ಕೂಗು ಗಡಿ ತಾಲೂಕಿನಲ್ಲಿ ಕೇಳಿ ಬರುತ್ತಿದೆ.

ಪ್ರತಿಭಟನೆಗಿಲ್ಲ ಕಿಮ್ಮತ್ತು: ಔರಾದ ತಾಲೂಕು ಕೇಂದ್ರ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮದಲ್ಲಿ ಸ್ಮಶಾನ ಭೂಮಿಯಿಲ್ಲ ಎಂದು ತಹಶೀಲ್ದಾರ್‌ ಕಚೇರಿ ಎದುರು ಗಣೇಶಪೂರ ಗ್ರಾಮಸ್ಥರು, ದಲಿತ ಸಂಘಟನೆಯ ಮುಖಂಡರು, ಕನ್ನಪರ ಸಂಘಟನೆಯ ಮುಖಂಡರು ಮತ್ತು ಔರಾದ ತಾಲೂಕು ನಾಗರಿಕ ಸಮುದಾಯದ ಮುಖಂಡರು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಗ ಅಂದಿನ ಬೀದರ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ ಲಿಖೀತರೂಪದಲ್ಲಿ ಒಂದು ತಿಂಗಳಲ್ಲಿ ತಾಲೂಕಿನ ಎಸ್‌ಸಿ- ಎಸ್‌ಟಿ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಭೂಮಿ ನೀಡುವುದಾಗಿ ಆದೇಶ ನೀಡಿದ್ದರು. ಆದರೆ ವರ್ಷಗಳು ಕಳೆದರೂ ಇಂದಿಗೂ ಆ ಭರವಸೆ ಈಡೇರಿಲ್ಲ.

ತಹಶೀಲ್ದಾರ್‌ ಮೇಲೆ ಹಲ್ಲೆ: ಔರಾದ ತಾಲೂಕಿನ ಗಣೇಶಪೂರ ಗ್ರಾಮದ ಪ್ರಕಾಶ ಮೋತಿರಾಮ ಕದಂ ಎನ್ನುವ ವ್ಯಕ್ತಿ ಮೃತ ಪಟ್ಟಾಗ ಶವ ಸಂಸ್ಕಾರ ಮಾಡಲು ಸ್ಥಳ ಇಲ್ಲದಿರುವುದರಿಂದ ಗಣೇಶಪೂರ ಗ್ರಾಮಸ್ಥರು ಉದಗೀರ-ಔರಾದ ಅಂತಾರಾಜ್ಯ ಹೆದ್ದಾರಿ ಮೇಲೆ ಶವ ಇಟ್ಟು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂದೆ ಪಡೆಯುವಂತೆ ತಾಲೂಕು ಆಡಳಿತಾ ಧಿಕಾರಿ ತಹಶೀಲ್ದಾರ್‌ ಎಂ.ಚಂದ್ರಶೇಖರ ಗ್ರಾಮಸ್ಥರಿಗೆ ತಿಳಿಸಿದಾಗ, ಆರು ವರ್ಷಗಳಿಂದ ಹೋರಾಟ ಮಾಡಿದರೂ ನಮಗೆ ಸ್ಮಶಾನ ಭೂಮಿ ನೀಡಿಲ್ಲ ಎಂದು ತಹಶೀಲ್ದಾರ್‌ ಮೇಲೆಯೇ ಹಲ್ಲೆ ನಡೆಸಿದ ಪ್ರಸಂಗ  ಅಂದಿನ ಸಿಪಿಐ ರಮೇಶ ಕುಮಾರ ಮೈಲುರಕರ್‌ ಸಮ್ಮುಖದಲ್ಲಿಯೇ ನಡೆದಿತ್ತು. ಅದರಂತೆ ಭವಾನಿ ಬೀಜಲಗಾಂವ ಗ್ರಾಮದಲ್ಲೂ ಗ್ರಾಮಸ್ಥರು ಹೈಕೋರ್ಟ್‌ ಮೊರೆ ಹೋದಾಗ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಕೆಲವೇ ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು.

Advertisement

ಔದಾರ ಹಾಗೂ ಕಮಲನಗರ ತಾಲೂಕಿನ ಕೆಲ ಗ್ರಾಮಗಳಲ್ಲಿ ಈ ಹಿಂದೆ ಗ್ರಾಮದ ಮುಖಂಡರ ಖಾಸಗಿ ವ್ಯಕ್ತಿಗಳ ಹೊಲದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಹಂತ ಹಂತವಾಗಿ ಖಾಸಗಿ ವ್ಯಕ್ತಿಗಳು ಶವಸಂಸ್ಕಾರ ಮಾಡಲು ಭೂಮಿ ನೀಡುವುದನ್ನು ನಿಲ್ಲಿಸಿದಾಗ ತಾಲೂಕಿನ 49 ಗ್ರಾಮಗಳಲ್ಲಿ ತಾಲೂಕು ಆಡಳಿತದಿಂದ ಸ್ಮಶಾನಭೂಮಿ ನೀಡಲಾಗಿದೆ. ಗಣೇಶಪೂರ ಸೇರಿದಂತೆ ಎಂಟು ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಹೋಗಲು ರಸ್ತೆಗಳಿಲ್ಲ. ಮಳೆಗಾಲದಲ್ಲಿ ಮರಣ ಹೊಂದಿದರೆ ಮತ್ತೆ ಹೋರಾಟ ಮಾಡುವುದು ಪರಂಪರೆಯಾಗಿ ಬೆಳೆದುಕೊಂಡು ಬಂದಿದೆ.

ಗ್ರಾಮೀಣ ಭಾಗದ ಜನರು ಸ್ಮಶಾನ ಭೂಮಿ ನೀಡುವಂತೆ ತಾಲೂಕು ಆಡಳಿತಕ್ಕೆ ಹಾಗೂ ಸರ್ಕಾರಕ್ಕೆ ಮನವಿಗಳ ಮೇಲೆ ಮನವಿ ಸಲ್ಲಿಸುತ್ತಿದ್ದಾರೆ. ಸರ್ಕಾರ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಇನ್ನು ಮುಂದಾದರೂ ಪ್ರತಿ ಗ್ರಾಮದಲ್ಲೂ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ನೀಡುವುದರ ಜತೆಗೆ ಅಲ್ಲಿಗೆ ಹೋಗಲು ರಸ್ತೆ ಸಂಪರ್ಕ ಕಲ್ಪಿಸಿಕೊಡಲು ಮುಂದಾಗಬೇಕೆನ್ನುವುದು ತಾಲೂಕಿನ ಜನರ ಮಾತಾಗಿದೆ.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲವಂತಾಗಿದೆ. ಕೆಲ ಗ್ರಾಮಗಳಿಗೆ ಸ್ಮಶಾನ ಭೂಮಿ ನೀಡಲಾಗಿದೆ. ಇನ್ನುಳಿದ ಗ್ರಾಮಗಳಿಗೂ ಸ್ಮಶಾನ ಭೂಮಿ ನೀಡುವುದರ ಬಗ್ಗೆ ಸಹಾಯಕ ಆಯುಕ್ತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವೆ. ಎಂ.ಚಂದ್ರಶೇಖರ, ತಹಶೀಲ್ದಾರ್‌.

ತಾಲೂಕಿನ ವಿವಿಧ ಸಂಘಟನೆಯ ಮುಖಂಡರು ಸೇರಿ ತಹಶೀಲ್ದಾರ್‌ ಕಚೇರಿ ಎದುರು ಹದಿನೈದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದಾಗ, ಅಂದಿನ ಬೀದರ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ ಸ್ಥಳಕ್ಕೆ ಬಂದು ಲಿಖೀತ ಭರವಸೆ ನೀಡಿದ್ದರು. ಆದರೆ ಇಂದಿಗೂ ಕೂಡ ನಮ್ಮಗೆ ಸ್ಮಶಾನಭೂಮಿ ಇಲ್ಲದಂತಾಗಿದೆ. ಶಿವಕುಮಾರ ಕಾಂಬಳೆ, ಹೋರಾಟಗಾರ.

 

-ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next