Advertisement

ವೃಂದಾವನಸ್ಥ ಶ್ರೀ ಸ್ಮರಣಾರ್ಥ ಸವಿತೃಯಾಗ

10:53 PM Dec 31, 2019 | Lakshmi GovindaRaj |

ಬೆಂಗಳೂರು: ವೃಂದಾವನಸ್ಥರಾದ ಪೇಜಾವರ ಶ್ರೀ ವಿಶ್ವೇಶತೀರ್ಥರ ಸ್ಮರಣೆ ಅಂಗವಾಗಿ ಮಂಗಳವಾರ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಸವಿತೃಯಾಗ(ಗಾಯಿತ್ರಿ ಮಂತ್ರದಿಂದ) ನೆರವೇರಿತು. ಭಾನುವಾರದಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನದ ಜತೆಗೆ ಭಜನೆ, ಪಾರಾಯಣ, ಶ್ಲೋಕ ಪಠಣ ನಿರಂತರವಾಗಿ ನಡೆಯುತ್ತಲೇ ಇದೆ.

Advertisement

ವಿದ್ಯಾಪೀಠದ ವಿದ್ಯಾರ್ಥಿಗಳು, ವಿದ್ವಾಂಸರು, ಶಿಷ್ಯವೃಂದ ಅಹೋರಾತ್ರಿ ಶಾಸ್ತ್ರ, ಪಾರಾಯಣ, ಭಜನೆಯನ್ನು ಶ್ರೀಗಳ ವೃಂದಾವನದ ಎದುರು ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಸಾಮಾನ್ಯ ಜಿಜ್ಞಾಸುಗಳಿಗೆ ಶಾಸ್ತ್ರಚರ್ಚೆ, ಸುಧಾ ಉಪನ್ಯಾಸ ಮತ್ತು ಭಗವತ್‌ ಗೀತಾ ಪ್ರವಚನ ನಡೆಯಿತು. ವೃಂದಾವನಕ್ಕೆ ಹಸ್ತೋದಕ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಮಂಗಳವಾರವೂ ಹರಿದು ಬಂದ ಭಕ್ತಸಾಗರ: ಪೇಜಾವರ ಶ್ರೀಗಳ ವೃಂದಾವನ ವೀಕ್ಷಣೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು, ಶಿಷ್ಯರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು. ಶ್ರೀಗಳ ವೃಂದಾವನ ವೀಕ್ಷಿಸಲು ಬಂದವರು ಕೆಲಕಾಲ ಮಂತ್ರಪಠಣ ಮಾಡಿದ್ದು ವಿಶೇಷವಾಗಿತ್ತು. ಭಕ್ತ ವೃಂದ ಶ್ರೀಗಳ ವೃಂದಾವನಕ್ಕೆ ಹೂ, ತುಳಸಿ ಮಾಲೆ ಹಾಗೂ ಹೂಮಾಲೆ ಅರ್ಪಿಸಿದರು.

ವಿಶೇಷ ಆರಾಧನೆ: ಪೇಜಾವರ ಶ್ರೀಗಳ ಆರಾಧನೆ ಜ.9ರಂದು ನಡೆಯಲಿದೆ. ಶ್ರೀಗಳು ವೃಂದಾವನಸ್ಥರಾದ 12ನೇ ದಿನ ಮಾಧ್ವ ಪೀಠಾ ಧಿಪತಿಗಳನ್ನು ಆಹ್ವಾನ ಮಾಡಲಾಗುತ್ತದೆ. 24 ವಿದ್ವಾಂಸರಿಂದ ವಿಶೇಷವಾಗಿ ಭಗವಂತನ ಆರಾಧನೆ ನಡೆಯಲಿದೆ. ಇದು ಆರಾಧನೆ ನಡೆಯುವ ಒಂದು ಕ್ರಮವಾಗಿದ್ದು, ಭಗವಂತನ 24 ಮೂರ್ತಿಗಳನ್ನು ಅಲ್ಲಿ ಆವಾಹನೆ ಮಾಡಿ ಅವರಿಗೆ ವಿಶೇಷ ಸತ್ಕಾರ ನಡೆಯಲಿದೆ.

ಭಕ್ತರಿಗೆ ಪಾದುಕೆ ನೀಡುವ ವ್ಯವಸ್ಥೆ: ವೃಂದಾವನಸ್ಥರಾದ ಪೇಜಾವರ ಶ್ರೀಗಳ ಪಾದುಕೆಯನ್ನು ಭಕ್ತರ ಅಪೇಕ್ಷೆಯಂತೆ ನೀಡುವ ವ್ಯವಸ್ಥೆ ಮಾಡಲಿದ್ದೇವೆ. ಅತಿ ಶೀಘ್ರದಲ್ಲೇ ಮರದ ಪಾದುಕೆಗಳನ್ನು ಸಿದ್ಧಪಡಿಸಲಿದ್ದೇವೆ. ಸೇವಾ ರಶೀದಿ ಮಾಡಿ, ನಿರ್ದಿಷ್ಟ ಹಣ ಪಾವತಿಸಿ ಭಕ್ತರು ವೃಂದಾವನದಲ್ಲಿ ಪೂಜೆ, ಮಂತ್ರಾಕ್ಷತೆ ನಂತರ ಪಾದುಕೆಯನ್ನು ತಮ್ಮ ಮನೆಗೆ ಕೊಂಡೊಯ್ಯಬಹುದಾದ ವ್ಯವಸ್ಥೆ ಮಾಡಲಿದ್ದೇವೆ. ಎಷ್ಟು ಸಾಧ್ಯವಾಗುತ್ತದೆಯೇ ಅಷ್ಟನ್ನು ಸಿದ್ಧಪಡಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಪೂರ್ಣಪ್ರಜ್ಞಾ ವಿದ್ಯಾಪೀಠದ ಹಿರಿಯ ವಿದ್ವಾಂಸರೊಬ್ಬರು ಮಾಹಿತಿ ನೀಡಿದರು.

Advertisement

9ಕ್ಕೆ ಆರಾಧನೋತ್ಸವ
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವ ಜ.9ರಂದು ಉಡುಪಿ ಶ್ರೀಕೃಷ್ಣ ಮಠ, ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠ ಮತ್ತು ಎಲ್ಲಾ ಶಾಖಾ ಮಠ, ಸಂಸ್ಥೆಗಳಲ್ಲಿ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತ್ರ ಸಾರ್ವಜನಿಕರ ದಟ್ಟಣೆ ನಿಯಂತ್ರಿಸಲು ಕಷ್ಟವಾಗಬಹುದೆಂದು ಜ.8ರಂದು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅನ್ನಸಂತರ್ಪಣೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ.

ಬೆಂಗಳೂರಿನ ಎರಡೂ ದಿನಗಳ ಕಾರ್ಯಕ್ರಮಗಳಲ್ಲಿ ನೂತನ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪಾಲ್ಗೊಳ್ಳಲು ಅನುಕೂಲವಾಗುವಂತೆ, ಸರ್ಕಾರಿ ಆಡಳಿತದೊಂದಿಗೆ ಸಮಾ ಲೋಚನೆ ನಡೆಸಿ ಕಾರ್ಯಕ್ರಮ ಯೋಜಿಸಲಾಗುತ್ತಿದೆ.

ಉಡುಪಿಯಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಾಧನೆ ನಡೆಯಲಿದೆ. ರಾಜಾಂಗಣದಲ್ಲಿ ಜ.17ರವರೆಗೂ ಸಂಜೆ ನಡೆಯುವ ಮಹಾಭಾರತದ ಉಪನ್ಯಾಸವನ್ನು ಅಗಲಿದ ಶ್ರೀಗೆ ಸಮರ್ಪಿಸಲಾಗುತ್ತಿದೆ. ಶ್ರೀಗಳ ಭಾವಚಿತ್ರವನ್ನು ರಾಜಾಂಗಣದಲ್ಲಿರಿಸಿ ಉಪನ್ಯಾಸ ನಡೆಯುತ್ತಿದೆ. ಜ. 10ರಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಡುಪಿಗೆ ಬರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next