Advertisement

ಜಿಲ್ಲಾದ್ಯಂತ ಮತದಾರರ ದಿನಾಚರಣೆ

08:23 PM Jan 25, 2020 | Lakshmi GovindaRaj |

ಪ್ರತಿ ವರ್ಷದಂತೆ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜಿಲ್ಲಾದ್ಯಂತ ಅರ್ಥಪೂರ್ವವಾಗಿ ಆಚರಣೆ ಮಾಡಲಾಯಿತು. ಜಿಲ್ಲೆ ಮತ್ತು ತಾಲೂಕು ಮಟ್ಟದ ಕಚೇರಿಗಳ ಸಿಬ್ಬಂದಿ, ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಮತದಾರರ ಪ್ರತಿಜ್ಞೆ ವಿಧಿ ಸ್ವೀಕರಿಸಲಾಯಿತು. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಿದವರಿಗೆ ಗುರುತಿನ ಚೀಟಿ ಮತ್ತು ಬ್ಯಾಡ್ಜ್ಗಳನ್ನು ವಿತರಣೆ ಮಾಡಲಾಯಿತು.

Advertisement

ಕೋಲಾರ: ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಟಿ.ಡಿ.ಕೆಂಪರಾಜ್‌ ತಿಳಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ-2020 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಆಡಳಿತಾತ್ಮಕವಾಗಿ, ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವಿಶಿಷ್ಟತೆಯನ್ನು ಹೊಂದಿದ ದೇಶವಾಗಿದೆ. ಅಂಬೇಡ್ಕರ್‌ ನೀಡಿದ ಸಂವಿಧಾನದಿಂದಲೇ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯರಿಗೂ ಮತದಾನ ಮಾಡುವ ಹಕ್ಕು ಸಿಕ್ಕಿದೆ. ಅದೇ ರೀತಿ ಭಾರತೀಯ ಪ್ರಜೆಗಳು ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಕರ್ತವ್ಯಗಳನ್ನು ತಿಳಿಸಿದೆ ಎಂದು ಹೇಳಿದರು.

ಮತದಾನದಲ್ಲಿ ಪಾಲ್ಗೊಳ್ಳಿ: ಉತ್ತಮ ರಾಜಕೀಯ ವ್ಯವಸ್ಥೆಯನ್ನು ಆಯ್ಕೆ ಮಾಡುವಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಂದು ಮತಕ್ಕೂ ಅಮೂಲ್ಯವಾದ ಮೌಲ್ಯವಿದ್ದು, ಒಂದು ಮತದಿಂದ ಸೋಲು ಗೆಲುವನ್ನು ಕಂಡಿರುವ ಉದಾಹರಣೆಗಳಿವೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಗೆ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಭಾರತೀಯ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದು, ಇನ್ನು ಮುಂದೆ ಹೆಚ್ಚಿನ ತಾಂತ್ರಿಕತೆಯು ಬರಲಿದೆ. ನಗರ ಪ್ರದೇಶದಲ್ಲಿನ ವಿದ್ಯಾವಂತರೇ, ಮತದಾನದಿಂದ ದೂರ ಉಳಿಯುತ್ತಿರುವುದು ಶೋಚನೀಯ. ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.

ಬೇಧವಿಲ್ಲದೆ ಮತದಾನ ಹಕ್ಕು: ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಭಾರತದ ಜನಸಂಖ್ಯೆಯು ಪ್ರಸ್ತುತ 135 ಕೋಟಿಗೂ ಹೆಚ್ಚಿದೆ. ಇದರದಲ್ಲಿ ಕನಿಷ್ಠ 100 ಕೋಟಿಯಷ್ಟು ಮತದಾರರಿದ್ದಾರೆ. ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು 2011ರಿಂದ ಆಚರಿಸುತ್ತಿದ್ದೇವೆ. ಇದು 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ. ಬ್ರಿಟಿಷರ ಕಾಲದಲ್ಲಿ ಕೇವಲ ಶೇ.15 ಆಯ್ದ ಭಾರತೀಯರಿಗೆ ಮತದಾನ ಹಕ್ಕು ನೀಡಲಾಗಿತ್ತು. ಭಾರತ ಸಂವಿಧಾನ ಬಂದ ನಂತರ 18 ವರ್ಷ ತುಂಬಿದ ಎಲ್ಲಾ ಭಾರತೀಯರಿಗೂ ಯಾವುದೇ ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಮತದಾನ ಹಕ್ಕನ್ನು ನೀಡಲಾಗಿದೆ ಎಂದು ಹೇಳಿದರು.

Advertisement

ನೋಟಾಗೆ ಅವಕಾಶ: ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ರಾಷ್ಟ್ರ ಭಾರತ. ಭಾರತದ ಸರಾಸರಿ ವಯೋಮಾನ 29 ವರ್ಷ ಇದೆ. ಮುಂದಿನ 25 ವರ್ಷ ಯುವಸಮುದಾಯವೇ ಭಾರತದ ಬಹುದೊಡ್ಡ ಆಸ್ತಿ. ಚುನಾವಣಾ ಪ್ರಕ್ರಿಯೆಯಲ್ಲಿ ನೋಟಾಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಕಣದಲ್ಲಿರುವ ಯಾವ ಅಭ್ಯರ್ಥಿಯೂ ಅರ್ಹರೆನಿಸದಿದ್ದರೆ ನೋಟಾಗೆ ಮತ ಚಲಾಯಿಸಬಹುದಾಗಿದೆ ಎಂದು ತಿಳಿಸಿದರು.

ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಜಿಲ್ಲೆಯಲ್ಲಿ ಪ್ರಸ್ತುತ 17 ಲಕ್ಷ ಜನಸಂಖ್ಯೆಯಿದ್ದು, ಇದರಲ್ಲಿ 12,14,746 ಮತದಾರರಿದ್ದಾರೆ. ಅಂದರೆ ಜನಸಂಖ್ಯೆಯಲ್ಲಿ ಶೇ.71.26 ಮತದಾರರಿದ್ದಾರೆ. ಜಿಲ್ಲೆಯಲ್ಲಿ 18 ವರ್ಷ ತುಂಬಿದ ಮೊದಲ ಮತದಾರರು 15,149 ಇದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 16 ಸಾವಿರ ಅಂಗವಿಕಲ ಮತದಾರರು ನೋಂದಣಿಯಾಗಿದ್ದು, ಶೇ.99 ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿಯಾಗಲು ಫಾರಂ ನಂ.6ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಥವಾ ಆನ್‌ಲೈನ್‌ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌ ಮಾತನಾಡಿ, ಯುವ ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಮತದಾನ ಚಲಾಯಿಸುವಲ್ಲಿ ಯುವಕರು ನಿರಾಸಕ್ತಿ ತೋರುತ್ತಿರುವುದು ಬೇಸರದ ಸಂಗತಿ. ಉತ್ತಮ ನಾಯಕರನ್ನು ಆಯ್ಕೆ ಮಾಡುವಲ್ಲಿ ಯುವಶಕ್ತಿಯ ಪಾತ್ರ ಬಹುಮುಖ್ಯ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಎಪಿಕ್‌ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್‌ಒಗಳಿಗೆ ಪ್ರಶಂಪನಾ ಪತ್ರ ವಿತರಿಸಲಾಯಿತು.

ಪ್ರೌಢಶಾಲೆ, ಪಿಯು ವಿಭಾಗ ಹಾಗೂ ಪದವಿ ವಿಭಾಗಗಳಲ್ಲಿ ರಸಪ್ರಶ್ನೆ, ನಾಟಕ, ಕೊಲಾಜ್‌ ಮೇಕಿಂಗ್‌ ಹಾಗೂ ಪೋಸ್ಟರ್‌ ಮೇಕಿಂಗ್‌ ವಿಭಾಗಗಳಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಎಚ್‌.ಪುಷ್ಪಲತಾ, ಎಎಸ್ಪಿ ಜಾಹ್ನವಿ, ಎಸಿ ವಿ.ಸೋಮಶೇಖರ್‌, ಡಿಡಿಪಿಐ ಕೆ.ರತ್ನಯ್ಯ, ಸ್ವೀಪ್‌ ಸಮಿತಿ ನೋಡಲ್‌ ಅಧಿಕಾರಿ ಸೌಮ್ಯಾ, ತಹಶೀಲ್ದಾರ್‌ ಶೋಭಿತಾ, ನಗರಸಭೆ ಆಯುಕ್ತ ಶ್ರೀಕಾಂತ್‌ ಉಪಸ್ಥಿತರಿದ್ದರು.

ಉದ್ಯೋಗ ಮೇಳ ನೋಂದಣಿ ವೆಬ್‌ಸೈಟ್‌ಗೆ ಇಂದು ಚಾಲನೆ: ಕೋಲಾರ ಜಿಲ್ಲೆಯಲ್ಲಿ ಫೆ.11 ಮತ್ತು 12ರಂದು ಬೃಹತ್‌ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಇದರಲ್ಲಿ 150ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸುತ್ತಿವೆ. ಭಾನುವಾರ ಬೆಳಗ್ಗೆ 11.30ಕ್ಕೆ ಅಬಕಾರಿ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಅವರು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೋಂದಣಿ ಮಾಡಿಕೊಳ್ಳುವ ವೆಬ್‌ಸೈಟ್‌ಗೆ ಚಾಲನೆ ನೀಡುವರು. ಆಸಕ್ತ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಮಂಜುನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next