Advertisement

ಕಲಾವಿದನಿಗೆ ಹುಟ್ಟೂರ ಗೌರವ ಅಮೂಲ್ಯ: ವಿಷ್ಣು ಆಸ್ರ

06:50 AM Oct 23, 2018 | |

ಕಾಸರಗೋಡು: ಓರ್ವ ಕಲಾವಿದನಿಗೆ ಗಣ್ಯರ, ಕಲಾಭಿಮಾನಿಗಳ ಮುಂದೆ ಸಿಗುವ ಗೌರವಾರ್ಪಣೆ ಶ್ರೇಷ್ಠವಾದದ್ದು. ಅದರಲ್ಲೂ ತನ್ನ ಜನ್ಮನಾಡಿನಲ್ಲಿ ಹುಟ್ಟೂರ ಕಲಾಭಿಮಾನಿಗಳ ಮುಂದೆ ಸಿಗುವ ಗೌರರ್ವಾಪಣೆ ತನ್ನ ಕಲಾ ಜೀವನದಲ್ಲಿ ಅಮೂಲ್ಯವಾದದ್ದು ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಹೇಳಿದರು.

Advertisement

ಯಕ್ಷಮಿತ್ರರು ಮಧೂರು ಇವರ 12ನೇ ಕಲಾಕಾಣಿಕೆಯ ಅಂಗವಾಗಿ ಮಧೂರು ಪರಕ್ಕಿಲ ದೇವಸ್ಥಾನದ ಸಭಾಭವನದಲ್ಲಿ ಮಧೂರು ಯಕ್ಷಸಂಭ್ರಮದಲ್ಲಿ ನೆರೆದ ಗಣ್ಯರ ಉಪಸ್ಥಿತಿಯಲ್ಲಿ ಕಲಾಭಿಮಾನಿಗಳ ಸಮಕ್ಷಮ ಕೂಡ್ಲು ಸದಾನಂದ ರಾಯರಿಗೆ ಸಲ್ಲಿಸಿದ ಹುಟ್ಟೂರ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಚೆಂಡೆ, ಮದ್ದಳೆಗಳಂತಹ ಚರ್ಮವಾದ್ಯ ಗಳಿಗೆ ಮುಚ್ಚಿಗೆ ಹಾಕಿ ಅದರಿಂದ ನಾದದ ಝೇಂಕಾರ ಹೊಮ್ಮಿಸುವಂತೆ ಮಾಡುವುದು ಅತ್ಯಂತ ಪರಿಶ್ರಮದ ಕಲೆಗಾರಿಕೆ. ಈ ಕಲೆಯನ್ನು ರೂಢಿಸಿಕೊಳ್ಳಬೇಕಾದರೆ ಸಂಗೀತದಲ್ಲಿ ಆಳವಾದ ಸ್ವರಜ್ಞಾನಗಳು ಅಗತ್ಯ. ಶ್ರುತಿಯ ಸುಭಗತೆಯ ಪರಿಜ್ಞಾನ ಅನಿವಾರ್ಯ. ಅಂತಹ ಅಪೂರ್ವ ವ್ಯಕಿ ಸದಾನಂದ ರಾವ್‌. ಕಾಸರಗೋಡು ಪರಿಸರದ ಹಲವಾರು ದೇವಾಲಯಗಳಲ್ಲಿ ಕ್ಷೇತ್ರ ವಾದ್ಯಗಳನ್ನು ನುಡಿಸುವ ಮೂಲಕ ಉತ್ಸವಗಳಿಗೆ ನೇತೃತ್ವ ನೀಡಿದ ಶ್ರೇಷ್ಠ ಕುಟುಂಬ ಶ್ರೀಯುತರದ್ದು. ಅಂತಹ ಕುಟುಂಬದಲ್ಲಿ ಹುಟ್ಟಿ ಕುಲಕಸುಬನ್ನೇ ಉದ್ಯೋಗವನ್ನಾಗಿಸಿ ಆ ಮೂಲಕ ಆತ್ಮ ಸಂತೃಪ್ತಿ ಪಡೆದ ರಾಯರದ್ದು. ತನ್ನ ಉಸಿರಿನ ಕೊನೆಯ ತನಕ ಈ ಕೆಲಸವನ್ನು ಮಾಡಬೇಕು ಎಂಬ ಹಂಬಲ. ಇಂತಹ ವ್ಯಕ್ತಿಗೆ ಮಾಡಿದ ಸಮ್ಮಾನ ಅದು ನಿಜವಾಗಿಯೂ ಕಲಾಮಾತೆಗೆ ಸಲ್ಲುವ ಗೌರವವಾಗಿದೆ ಎಂದು ಹೇಳಿದರು.

ಹಿರಿಯ ಧಾರ್ಮಿಕ ಮುಂದಾಳು ವಾಸುದೇವ ಹೊಳ್ಳ ಅಧ್ಯಕ್ಷರಾಗಿದ್ದರು. ಅಭಿನಂದನಾ ಭಾಷಣ ಮಾಡಿದ ಹಿರಿಯ ಕಲಾವಿದ ವಾಸುದೇವ ರಂಗಾಭಟ್‌ ಓರ್ವ ಕಲಾವಿದನ ಜೀವನದಲ್ಲಿ ಶ್ರೇಷ್ಠವಾದದ್ದು ಆತನ ಕಲಾಜೀವನ. 76ರ ಹರೆಯದ ಸದಾನಂದ ರಾವ್‌ ತನ್ನನ್ನು ಕಲಾಸೇವೆಯಲ್ಲಿ ತೊಡಗಿಸಿಕೊಂಡು ಏಳು ದಶಕಗಳು ಸಂದಿವೆ. 6ನೇ ವಯಸ್ಸಿನಲ್ಲಿ ಮದ್ದಳೆ ವಾದಕನಾಗಿ ಕಲಾಸೇವೆಯನ್ನು ಆರಂಭಿಸಿ, ಚರ್ಮವಾದ್ಯಗಳೆಲ್ಲದರ ಮರ್ಮವನ್ನರಿತ ಕುಶಲಕರ್ಮಿಯಾದ ಸದಾನಂದ ರಾಯರಿಗೆ ಈಗ ತನ್ನ ಕಲಾಜೀವನದಲ್ಲಿ ಸಪ್ತತಿಯ ಸಮಯ. ಇದನ್ನು ಗುರುತಿಸಿ ಯಕ್ಷಮಿತ್ರರು ಸಂಸ್ಥೆಯು ಅವರಿಗೆ ಸಪ್ತತಿ ಸಮ್ಮಾನ ನೀಡಿ ಗೌರವಿಸುತ್ತಿದೆ. ಇದು ಕಲಾವಿದನ ಜೀವನದ ಅಮೂಲ್ಯ ಕ್ಷಣ. 

ಸಂಗೀತೋಪಕರಣಗಳನ್ನು ನುಡಿ ಸುವ ಕಲಾವಿದರು ಅದೆಷ್ಟೋ ಮಂದಿ ಇದ್ದರೂ ಉಪಕರಣಗಳ ತಯಾರಿ, ರಿಪೇರಿ ಮತ್ತು ಮುಚ್ಚಿಗೆ ಹಾಕಿ ಕೊಡುವವರು ತೀರಾ ವಿರಳ. ಈ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡು ತೆಂಕುತಿಟ್ಟು ಯಕ್ಷಗಾನದ ಹಿರಿಯರಿಂದ ಕಿರಿಯರ ತನಕ ಬಹುತೇಕ ಹಿಮ್ಮೇಳ ವಾದಕರಿಗೆ ಅನಿವಾರ್ಯ ವ್ಯಕ್ತಿ ಎಂಬಂತೆ ರೂಪುಗೊಂಡ ರಾಯರಿಗೆ ಕುಲಕಸುಬೇ ಸರ್ವಸ್ವ. ಇದರಿಂದ ಅವರು ಆರ್ಥಿಕವಾಗಿ ಗಳಿಸಿದ್ದೇನು ಎಂಬುದಕ್ಕಿಂತಲೂ ಸಮಾಜದಲ್ಲಿ ಗಳಿಸಿದ್ದೇನು ಎಂಬುದಕ್ಕೆ ಹೆಚ್ಚಿನ ಪ್ರಾಶಸ್ತÂ. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ವೈದ್ಯರಾದ ಡಾ| ಹರಿಕಿರಣ್‌ ಬಂಗೇರ ಅವರು ಸದಾನಂದ ರಾಯರದ್ದು ಅನನ್ಯ ಪ್ರತಿಭೆ, ಅದ್ಭುತ ಸಾಧನೆ. ಕುಲಕಸುಬಿನ ಮೂಲಕ ಜೀವನದ ಯಶಸ್ಸನ್ನು ಕಂಡ ಅವರ  ಸಾಧನೆಯನ್ನು ಗುರುತಿಸಿ ಗೌರವಿಸಿರುವುದು ನಿಜಕ್ಕೂ ಕಲಾಮಾತೆಗೆ ಸಂದ ಗೌರವ. ಒಂದು ಕಲಾಪ್ರದರ್ಶನ ಯಶಸ್ವಿಯಾಗಬೇಕಿದ್ದರೆ ವೇದಿಕೆಯ ಹಿಂದೆ ಇವರಂತಹ ಹಲವಾರು ವ್ಯಕ್ತಿಗಳ ಪರಿಶ್ರಮವೂ, ಸಮರ್ಪಣಾಭಾವದ ಸೇವೆಯೂ ಅಗತ್ಯ. ಇಂತಹ ಕಾಣದ ಕೈಗಳನ್ನು ಗುರುತಿಸಿ ಗೌರವಿಸುವುದರ ಮೂಲಕ ಮಧೂರು ಯಕ್ಷಮಿತ್ರರು ಇತರರಿಗೆ ಉತ್ತಮ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

Advertisement

ಗೌರವಾರ್ಪಣೆ ಸ್ವೀಕರಿಸಿ ಮಾತ ನಾಡಿದ ಸದಾನಂದ ರಾಯರು ಅಜ್ಜ ಲಕ್ಷ್ಮಣ ರಾಯರು ಹಾಗೂ ತಂದೆ ರಾಮಚಂದ್ರರಾಯರ ಮೂಲಕವಾಗಿ ಬಂದ ಕುಲವೃತ್ತಿಯನ್ನೇ ಅನುಸರಿಸಿ ಬೆಳೆದವನು ನಾನು. ವಂಶವಾಹಿನಿಯಾಗಿ ಬಂದು ಸಿದ್ಧಿಸಿದ ಈ ಕಲೆಗೆ ತಂದೆಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ. ಗುಂಡಿಹಿತ್ತಿಲು ಕೃಷ್ಣಯ್ಯ, ಕುದ್ರೆಕೋಡ್ಲು ರಾಮ ಭಟ್ಟರಿಂದ ಹಿಮ್ಮೇಳ ವಾದನದ ಹೆಚ್ಚಿನ ಶಿಕ್ಷಣ ಪಡೆದು, ತಲೆಂಗಳ ಗೋಪಾಲಕೃಷ್ಣ ಭಟ್ಟರು ಹಾಗೂ ವಿದ್ವಾನ್‌ ಬಾಬು ರೈ ಗಳಿಂದ ಮದ್ದಳೆಯ ನುಡಿತ ಬಡಿತಗಳ ಮರ್ಮವನ್ನು ಕಲಿತೆ. ಈ ಕುಲಕಸುಬಿನ ಮೂಲಕ ನಾನು ಪಡೆದ ಆತ್ಮ ಸಂತೃಪ್ತಿ ಇನ್ಯಾವುದರಲ್ಲೂ ಸಿಗದು. ನನ್ನ ಉಸಿರಿನ ಕೊನೆಯ ತನಕ ಈ ಕೆಲಸವನ್ನು ಬಿಟ್ಟು ಇನ್ಯಾವ ಕೆಲಸಗಳ ಬಗ್ಗೆಯೂ ಯೋಚಿಸುವವನಲ್ಲ ಎಂದು ಹೇಳಿದರು. 
ಪ್ರವೀಣ ರೈ ಸ್ವಾಗತಿಸಿದರು. ಮಹೇಶ ಮಧೂರು ವಂದಿಸಿದರು. ಕೃಷ್ಣ ಪ್ರಸಾದ ಅಡಿಗ ಸಮ್ಮಾನ  ಪತ್ರ   ವಾಚಿಸಿ, ಗುರುರಾಜ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಉದಯ ನಾವಡ, ಶರತ್‌, ರಾಮಕೃಷ್ಣ ಶೆಟ್ಟಿ, ಮುರಳಿ ನಾವಡ, ಸಂದೀಪ್‌, ವಿಠಲ ಗಟ್ಟಿ, ಸುನಿಲ್‌, ಗಣೇಶ ತುಂಗ ಸಹಕರಿಸಿದರು. ನಂತರ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತುಂಬಿದ ಪ್ರೇಕ್ಷಕರ ಮುಂದೆ “ತುಳಸೀ ಜಲಂಧರ – ತಾಮ್ರಧ್ವಜ ಕಾಳಗ’ವೆಂಬ ಅಪೂರ್ವ ಆಖ್ಯಾನಗಳ ಯಕ್ಷಗಾನ ಪ್ರದರ್ಶನ ಜರಗಿತು.

ಸದಾನಂದ ರಾಯರದ್ದು ಪರಿಶುದ್ಧತೆಯ ಕೆಲಸ. ಇವರ ಚೆಂಡೆ ಮದ್ದಳೆಗಳಿಗೆ ಅತ್ಯಂತ ಬೇಡಿಕೆ. ಧರ್ಮಸ್ಥಳ, ಎಡನೀರು, ಹನುಮಗಿರಿ ಮೊದಲಾದ ಮೇಳಗಳಿಂದ ಅಲ್ಲದೇ ದೇಶ ವಿದೇಶಗಳ ಹಲವೆಡೆಗಳಿಂದ, ಹಲವಾರು ದೇವಾಲಯಗಳಿಂದ, ವಿವಿಧ ಕಲಾಕ್ಷೇತ್ರಗಳಿಂದಲೂ ಇವರನ್ನು ಹುಡುಕಿಕೊಂಡು ಕಲಾವಿದರು ಬರುತ್ತಾರೆ. ಅದು ಅವರ ಆರಾಧನಾ ಭಾವದಲ್ಲಿ ಮಾಡುವ ಚರ್ಮ ವಾದ್ಯಗಳ ದುರಸ್ತಿ ಹಾಗೂ ತನ್ಮಯತೆಯ ಕಾಯಕಕ್ಕೆ ಸಂದ ಗೌರವ ಎಂದು ಹೇಳಿದರು.
– ವಾಸುದೇವ ಹೊಳ್ಳ

ಹೊಸ ತಲೆಮಾರಿನಲ್ಲಿ ಈ ಕಸುಬಿನ ಬಗ್ಗೆ ಗೌರವ ಇಲ್ಲದಾಗಿದೆ. ಹೆಚ್ಚಿನ ಸಂಪಾದನೆಗಾಗಿ ಇತರ ಆಕರ್ಷಣೀಯ ಕ್ಷೇತ್ರಕ್ಕೆ ತೆರಳುವ ಕಾರಣ ಚರ್ಮವಾದ್ಯಗಳ ದುರಸ್ತಿ ಕೆಲಸದಲ್ಲಿ ನಿರತರಾಗಲು ಹೊಸ ಪೀಳಿಗೆಯವರು ಯಾರು ಬರುತ್ತಿಲ್ಲದಿರುವುದು ಬೇಸರದ ಸಂಗತಿ. 
– ಕೂಡ್ಲು  ಸದಾನಂದ 

Advertisement

Udayavani is now on Telegram. Click here to join our channel and stay updated with the latest news.

Next