Advertisement

ಜಿಲ್ಲೆಯಲ್ಲಿ ಆಹಾರ ಆಯೋಗಕ್ಕೆ ಅಕ್ರಮಗಳ ದರ್ಶನ

10:15 PM Oct 21, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಅಂಗನವಾಡಿ ಮಕ್ಕಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಶೌಚಾಲಯದ ಕೊರತೆಗೆ ಬಯಲಲ್ಲೇ ಮಕ್ಕಳು ಬಹಿರ್ದೆಸೆ. ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾದ ಅಕ್ಕಿ, ರಾಗಿ, ಬೇಳೆಯಲ್ಲಿ ಕ್ವಿಂಟಲ್‌ಗ‌ಟ್ಟಲೇ ವ್ಯತ್ಯಾಸ. ಸರ್ಕಾರಿ ಶಾಲೆಗಳ ಬಿಸಿಯೂಟ ಪದಾರ್ಥಗಳ ದಾಸ್ತಾನುವಿನಲ್ಲಿ ಶಿಕ್ಷಕರ ಗೋಲ್‌ಮಾಲ್‌. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಕೊರತೆ ಕಂಡ ಆಯೋಗ. ಅಂಗನವಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಅವ್ಯವಸ್ಥೆಗೆ ಮೂಗು ಮುಚ್ಚಿಕೊಂಡ ಆಹಾರ ಆಯೋಗದ ಸದಸ್ಯರು.

Advertisement

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಅನುಷ್ಠಾನದ ಕುರಿತು ಖುದ್ದು ಪರಿಶೀಲನೆಗಾಗಿ ಜಿಲ್ಲೆಯಲ್ಲಿ ಮೂರು ದಿನಗಳ ಭೇಟಿ ಕೈಗೊಂಡಿರುವ ರಾಜ್ಯ ಆಹಾರ ಆಯೋಗದ ತಂಡಕ್ಕೆ ಮೊದಲ ದಿನವೇ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಿಸುವ ಹಾಗೂ ಮಕ್ಕಳಿಗೆ ಪೌಷ್ಟಿಕ ಹಾಗೂ ಬಿಸಿಯೂಟ ನೀಡುವ ಅಂಗನವಾಡಿ, ನ್ಯಾಯ ಬೆಲೆ ಅಂಗಡಿಗಳಲ್ಲಿ ಕಂಡು ಬಂದ ಅಕ್ರಮಗಳ ವಾಸನೆಗೆ ಆಯೋಗದ ಸದಸ್ಯರು ದಂಗಾದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಕೊರತೆ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೆ.ಎನ್‌.ಕೃಷ್ಣಮೂರ್ತಿ ನೇತೃತ್ವದಲ್ಲಿ ಸದಸ್ಯರಾದ ಬಿ.ಜಿ.ಅಸನಾಬಿ, ಮಂಜುಳ ಬಾಯಿ, ಶಿವಶಂಕರ್‌ ಹಾಗೂ ಮಹಮ್ಮದ್‌ ಆಲಿ ತಂಡಕ್ಕೆ ಹೋದಕಡೆಯೆಲ್ಲಾ ಜಿಲ್ಲೆಯಲ್ಲಿನ ಆಹಾರ ಪದಾರ್ಥಗಳ ಗುಣಮಟ್ಟ, ವಿತರಣೆಯಲ್ಲಿನ ಅವ್ಯವಸ್ಥೆಗಳ ದರ್ಶನ ಕಂಡು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ಮೊದಲಿಗೆ ಆಯೋಗದ ತಂಡ ಭೇಟಿ ಮಾಡಿದ ಚದಲುಪುರ ಕ್ರಾಸ್‌ನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬರೀ ಇಬ್ಬರು ಮಕ್ಕಳು ಮಾತ್ರ ಕಂಡು ಬಂದರು. ಉಳಿದ ಮಕ್ಕಳು ಏಕೆ ಬಂದಿಲ್ಲ ಎಂಬ ಬಗ್ಗೆ ಅಂಗನವಾಡಿ ಶಿಕ್ಷಕಿ ಬಳಿ ಉತ್ತರ ಇರಲಿಲ್ಲ. ಇನ್ನೂ ಅಂಗನವಾಡಿಗೆ ಪೂರೈಸಿದ್ದ ಪೌಷ್ಟಿಕ ಆಹಾರದ ಪದಾರ್ಥಗಳನ್ನು ಪರಿಶೀಲಿಸಿದ ತಂಡಕ್ಕೆ ದಾಖಲೆಗಳಿಗೂ ದಾಸ್ತಾನು ಇದಿದ್ದಕ್ಕೆ ಸಾಕಷ್ಟು ವ್ಯತ್ಯಾಸ ಕಂಡು ಬಂದಿದ್ದು ಹಲವು ಅನುಮಾನಗಳಿಗೆ ಕಾರಣವಾಯಿತು. ಕೆಲವು ಕಡೆ ದಾಖಲೆ ಪುಸ್ತಕಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜುಗೊಂಡಿರುವ ಆಹಾರ ಪದಾರ್ಥಗಳ ಅಂಕಿ, ಅಂಶಗಳನ್ನು ತಿದ್ದಿರುವುದನ್ನು ಸದಸ್ಯರು ಪತ್ತೆ ಮಾಡಿದರು.

ರಾಗಿ ಜಾಸ್ತಿ, ಅಕ್ಕಿ ಕಡಿಮೆ ದಾಸ್ತಾನು: ತಾಲೂಕಿನ ಗವಿಗಾನಹಳ್ಳಿ ನ್ಯಾಯಬೆಲೆ ಅಂಗಡಿ 45ಕ್ಕೆ ಭೇಟಿ ನೀಡಿದ್ದ ತಂಡಕ್ಕೆ ಅಲ್ಲಿಗೆ ಪೂರೈಕೆಯಾಗಿದ್ದ ಅಕ್ಕಿ ಹಾಗೂ ರಾಗಿಯ ದಾಸ್ತುನುವಿನಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು. ವಿತರಣೆಗೂ ಅಲ್ಲಿದ್ದ ರಾಗಿ, ಅಕ್ಕಿಗೂ ತಾಳೆ ಆಗಲಿಲ್ಲ. ಹೆಚ್ಚುವರಿಯಾಗಿ 5 ಕಿಂಟಲ್‌ ರಾಗಿ ಕಂಡು ಬಂದರೆ, 2 ಕ್ವಿಂಟಲ್‌ ಅಕ್ಕಿ ಕಡಿಮೆ ಇದಿದ್ದು ಕಂಡು ಬಂತು. ಗರಂ ಆದ ಆಯೋಗದ ಸದಸ್ಯರು ಉಪ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ಉಪ ನಿರ್ದೇಶಕರು ನ್ಯಾಯಬೆಲೆ ಅಂಗಡಿ ಪರವಾನಿಗೆಯನ್ನು ಅಮಾನತುಗೊಳಿಸುವುದಾಗಿ ತಂಡಕ್ಕೆ ಭರವಸೆ ಕೊಟ್ಟರು. ಅದೇ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋದರೆ ಒಂದು ಮಗು ಮಾತ್ರ ಇತ್ತು. 11 ಗಂಟೆಯಾದರೂ ಮಗುವಿಗೆ ಹಾಲು ಕೊಡದಿದ್ದಕ್ಕೆ ತರಾಟೆಗೆ ತೆಗೆದುಕೊಂಡರು.

Advertisement

ಮೂಲ ಸೌಕರ್ಯಗಳ ಪರಿಶೀಲನೆ: ಆಹಾರ ಆಯೋಗದ ತಂಡ ಭೇಟಿ ನೀಡಿದ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ, ಹಾಲು ವಿತರಣೆ, ಬಿಸಿಯೂಟ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ, ಸ್ವತ್ಛತೆ, ಸುರಕ್ಷತೆ, ಕಟ್ಟಡ ನಿರ್ಮಾಣ, ಆಹಾರ ಧಾನ್ಯಗಳ ಸಂಗ್ರಹಣೆ, ಬಳಕೆ ಮತ್ತು ವಿತರಣೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯ ಬಳಿ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಯಾವ ರೀತಿಯಾದಂತಹ ಮಧ್ಯಾಹ್ನದ ಉಪಾಹಾರ ಹಾಗೂ ದ್ವಿದಳ ಧಾನ್ಯಗಳಗಳನ್ನು ನೀಡಲಾಗುತ್ತಿದೆ. ಎಷ್ಟು ಜನ ಮಕ್ಕಳು ಪ್ರತಿ ದಿನ ಅಂಗನವಾಡಿ ಕೇಂದ್ರಕ್ಕೆ ಕಡ್ಡಾಯವಾಗಿ ಹಾಜರಾಗುತ್ತಾರೆ ಎಂಬುವುದರ ಬಗ್ಗೆ ಮಾಹಿತಿ ಪಡೆದರು.

ಆಯೋಗದ ಸದಸ್ಯರಾದ ಶಿವಶಂಕರ್‌, ಮಂಜುಳಾ ಬಾಯಿ, ಮಹಮದ್‌ ಆಲಿ ಹಾಗೂ ಬಿ.ಜಿ. ಆಸನಾಬಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಲಕ್ಷ್ಮೀ ನಾರಾಯಣ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಜಿ.ಕೆ.ಲಕ್ಷ್ಮೀದೇವಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಲತಾ ಮತ್ತಿತರರು ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

ಸಾರ್‌ ಮಕ್ಕಳು ಬಯಲಲ್ಲೇ ಹೋಗ್ತಾರೆ: ಚಿಕ್ಕಬಳ್ಳಾಪುರದ ಗವಿಗಾನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯ ಇಲ್ಲದ ಬಗ್ಗೆ ಪತ್ತೆ ಮಾಡಿದ ತಂಡ ಮಕ್ಕಳಿಗೆ ಶೌಚಾಲಯ ಇಲ್ಲ. ಅವರನ್ನು ಎಲ್ಲಿಗೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿದರು. ಬಯಲಲೇ ಬಹಿದೆಸೆಗೆ ಕೂರಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತರು ಹೇಳಿದರು. ಮಕ್ಕಳಿಗೆ ಗ್ರಾಮದ ಟ್ಯಾಂಕ್‌ ನೀರನ್ನು ಕೊಡಿಸುತ್ತೇವೆ. ನಮಗೆ ಶುದ್ಧೀಕರಣ ಘಟಕ ಇಲ್ಲ.

ಗ್ರಾಪಂಗೆ ಪತ್ರ ಬರೆದು ಒಂದೂವರೆ ವರ್ಷ ಆಗಿದೆ. ಶೌಚಾಲಯ ಕಟ್ಟಿಸಿ ಕೊಟ್ಟಿಲ್ಲ. ಅಂಗನವಾಡಿ ಕೇಂದ್ರಕ್ಕೆ ನೀರಿನ ಸಂಪರ್ಕವು ಇಲ್ಲ ಎಂದು ಹೇಳಿದರು. ಅಂಗನವಾಡಿ ಕೇಂದ್ರದ ಅವ್ಯವಸ್ಥೆ ನೋಡಿದ ಅಧಿಕಾರಿಗಳ ತಂಡ ತಡವಾಗಿ ಅಲ್ಲಿಗೆ ಆಗಮಿಸಿದ ತಾಲೂಕು ಸಿಡಿಪಿಒ ಲತಾರನ್ನು ತರಾಟೆಗೆ ತೆಗೆದುಕೊಂಡು ಎರಡು ದಿನದಲ್ಲಿ ಕೇಂದ್ರಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕೆಲವೊಂದು ಸಮಸ್ಯೆಗಳು ಕಂಡು ಬಂದಿವೆ. ಎಲ್ಲವನ್ನು ಅಧಿಕಾರಿಗಳ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡುತ್ತೇವೆ. ಕೆಲವೊಂದು ಕಡೆ ಪಡಿತರ ವಿತರಣೆಗೆ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಕೆಲವು ಕಡೆ ಕಡಿಮೆ ಪಡಿತರ ವಿತರಿಸುತಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದಾರೆ. ಎಲ್ಲಾ ಜಿಲ್ಲೆಗಳ ಪ್ರವಾಸ ಮುಗಿಸಿ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುತ್ತೇವೆ.
-ಡಾ.ಕೆ.ಎನ್‌.ಕೃಷ್ಣಮೂರ್ತಿ, ಆಹಾರ ಆಯೋಗದ ಅಧ್ಯಕ್ಷರು

ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಉತ್ತಮ ಬೆಳವಣಿಗೆಗೆ ಗುಣಮಟ್ಟದ ಹಾಲು ವಿತರಣೆ ಹಾಗೂ ಮಧ್ಯಾಹ್ನದ ಉಪಹಾರದಲ್ಲಿ ದ್ವಿದಳ ಧಾನ್ಯಗಳನ್ನು ಉಪಯೋಗಿಸಬೇಕು. ಇದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಆಗುತ್ತದೆ. ಅಲ್ಲದೆ, ಗರ್ಭೀಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕಯುಕ್ತ ಆಹಾರ ವಿತರಿಸಬೇಕು.
-ಮಂಜುಳ ಬಾಯಿ, ಆಹಾರ ಆಯೋಗದ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next