Advertisement

ಸಾಗರ: ಅಂಬಾರಗುಡ್ಡ ಗುಡ್ಡ ಕುಸಿತ ಪ್ರದೇಶಕ್ಕೆ ಕೃಷಿ ಅಧಿಕಾರಿಗಳ ಭೇಟಿ

11:13 AM Jul 12, 2022 | Kavyashree |

ಸಾಗರ: ಶರಾವತಿ ಹಿನ್ನೀರಿನ ಶಂಕಣ್ಣ ಶ್ಯಾನಭೋಗ್ ಗ್ರಾಮ ಪಂಚಾಯತ್‌ನ ಅಂಬಾರಗುಡ್ಡದ ಆಡಗಳಲೆ ಗ್ರಾಮದಲ್ಲಿ ಗುಡ್ಡ ಕುಸಿದು ಹಾನಿಗೀಡಾದ ಪ್ರದೇಶಕ್ಕೆ ಸೋಮವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಾಶಿನಾಥ್ ಒಂಟೇಕರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

Advertisement

ಆಡಗಳಲೆ ಗ್ರಾಮದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಗ್ರಾಮಸ್ಥರಿಂದ ಹಾನಿ ಹಾಗೂ ಗುಡ್ಡ ಕುಸಿದ ಬಗ್ಗೆ ವಿವರ ಪಡೆದರು. ಗುಡ್ಡ ಕುಸಿತದಿಂದ ನೂರಾರು ಎಕರೆ ಜಮೀನು ಜಲವೃತವಾಗಿರುವ ಕಾರಣ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಹಳ್ಳದ ದಿಕ್ಕು ಬದಲಿಸಲು ಕ್ರಮ ಕೈಗೊಳ್ಳಬೇಕು. ಇಲ್ಲಿನ ಹಾನಿಯ ಕುರಿತು ಕಂದಾಯ ಇಲಾಖೆ ಹಾಗೂ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವಂತಹ ವರದಿಯನ್ನು ಕೃಷಿ ಇಲಾಖೆ ಸಲ್ಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿನ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಕಂದಾಯ ಇಲಾಖೆಯ ಅಧಿಕಾರಿಗಳು ಇದನ್ನು ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಪರಿಗಣಿಸಿ ಸರ್ಕಾರಕ್ಕೆ ವರದಿ ನೀಡುವ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಾನಿಗೊಳಗಾದ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ವಿಜಯ ಆಡಗಳಲೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಾಶಿನಾಥ್ ಒಂಟೇಕರ್, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ಬೆಳೆ ನಾಶ, ಪ್ರಕೃತಿ ಅನಾಹುತಗಳನ್ನು ನಿರ್ವಹಿಸಲು ಯಾವುದೇ ಅನುದಾನವಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್‌ನ ನೆರವಿನಿಂದ ಎನ್‌ಆರ್‌ಇಜಿಯಲ್ಲಿ ಕೆಲಸ ಮಾಡಿಕೊಳ್ಳಬಹುದು. ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮಾಡುತ್ತೇವೆ ಎಂದರು.

ತೋಟಗಾರಿಕೆ ಇಲಾಖೆಯ ನಿರ್ದೇಶಕ ಕಿರಣ್, ತುಮರಿ ಕೃಷಿ ಅಧಿಕಾರಿ ಚಂದ್ರಪ್ಪ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ, ಎಸ್‌ಎಸ್ ಭೋಗ್ ಗ್ರಾಮ ಪಂಚಾಯತ್‌ ಪಿಡಿಒ ಉಮೇಶ, ಸುಧೀಂದ್ರ ಹೊಸಕೊಪ್ಪ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next