Advertisement

ಕೊಂಕಣಿ ಸಮಾಜದ ವಿಶ್ವ ಮಾನವ ಬಸ್ತಿ ಮಾಮ್‌

09:48 AM Jan 03, 2022 | Team Udayavani |

ವಿಶ್ವಮಟ್ಟದ ಅವರ ಯೋಚನೆ ಮತ್ತು ಯೋಜನೆಯಂತೆ ಬಸ್ತಿ ವಾಮನ ಶೆಣೈ ಅವರ ವ್ಯಕ್ತಿತ್ವ ಕೂಡ ಎಲ್ಲರನ್ನೂ ಪ್ರೀತಿಸುವ, ಬೆಳೆಸುವ, ಮುನ್ನಡೆಸುವ ವಿಶ್ವಮಾನವ ಸ್ವರೂಪದ್ದಾಗಿತ್ತು. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮತ್ತು ಸಮಸ್ತ ಸಮಾಜದ ಸಂದರ್ಭದಲ್ಲಿ ಹೇಳುವುದಾದರೆ ರಾಷ್ಟಕವಿ ಕುವೆಂಪು ಪರಿಕಲ್ಪನೆಯ ವಿಶ್ವಮಾನವ ವ್ಯಕ್ತಿತ್ವವನ್ನು ಬದುಕಿ ತೋರಿಸಿದವರು. ಕೊಂಕಣಿ ಭಾಷಿಕರು ಒಂದು ಬಲಿಷ್ಠ ಸಮಾಜವಾಗಿ ಬೆಳೆಯಬೇಕಾದರೆ ನಮ್ಮ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ತೀರಾ ಖಾಸಗಿಯಾಗಿ ಆಚರಿಸಬೇಕು ಎಂದು ಬಲವಾಗಿ ನಂಬಿದ ಮತ್ತು ಅಕ್ಷರಶಃ ಪಾಲಿಸಿದ ಸಂತರವರು; ನಿಜವಾದ ಅರ್ಥದಲ್ಲಿ ವಿಶ್ವಮಾನವರು.

Advertisement

ಸಹಸ್ರಮಾನ ಅಥವಾ ಶತಮಾನದಲ್ಲೊಮ್ಮೆ ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಮಹಾ ಪುರುಷರು ಜನ್ಮವೆತ್ತಿ ಬರುತ್ತಾರೆ, ತಮ್ಮ ಕಾರ್ಯ ಮುಗಿದೊಡನೆ ಸದ್ದಿಲ್ಲದೇ ನಿರ್ಗಮಿಸುತ್ತಾರೆ ಎಂಬ ಮಾತು, ವಯೋಸಹಜ ಅಸೌಖ್ಯದಿಂದ ಜ. 2ರಂದು ನಮ್ಮನ್ನಗಲಿದ ಬಸ್ತಿ ವಾಮನ ಶೆಣೈ ಅವರ ಜೀವನಕ್ಕೆ ನೂರಕ್ಕೆ ನೂರರಷ್ಟು ಅನ್ವಯಿಸುತ್ತದೆ.

ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ವೃತ್ತಿ ಜೀವನ ಆರಂಭಿಸಿ, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಹಿರಿಯ ಪ್ರಬಂಧಕರಾಗಿ ನಿವೃತ್ತರಾದ ಬಸ್ತಿ ವಾಮನ ಶೆಣೈ ಅವರು, ಕೊಂಕಣಿ ಚಳವಳಿ ಯನ್ನು ಪ್ರವೇಶಿಸುವಾಗ ಕರ್ನಾಟಕದ ಕೊಂಕಣಿ ಸಮಾಜ ತಂದೆಯಿಲ್ಲದ ಮನೆಯಂತೆ ತಬ್ಬಲಿ ಯಾಗಿತ್ತು. ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿ, ತರುವಾಯ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕರಾಗಿ ಬಸ್ತಿ ವಾಮನ ಶೆಣೆ„ಅವರು ಒಬ್ಬ ತಂದೆಯ ಸ್ಥಾನದಲ್ಲಿ ನಿಂತು ಕೊಂಕಣಿ ಸಮಾಜವನ್ನು ಪ್ರೀತಿ, ಮಮತೆ ಮತ್ತು ಮೇಧಾವಿತನ ದಿಂದ ಮುನ್ನಡೆಸಿದ್ದು ಮಾತ್ರವಲ್ಲದೆ, ಕೊಂಕಣಿಯಂತಹ ಪ್ರಾದೇಶಿಕ ಭಾಷೆಗೆ ವಿಶ್ವಮಾನ್ಯತೆ ದೊರಕಿಸಿಕೊಟ್ಟರು. ಅವರ ಯೋಚನೆ ಮತ್ತು ಯೋಜನೆ ಯಾವತ್ತೂ ಕರ್ನಾಟಕ, ಗೋವಾ, ಕೇರಳ, ಮಹಾರಾಷ್ಟ್ರ ಹೀಗೆ ನಾಲ್ಕು ರಾಜ್ಯಗಳಿಗೆ ಸೀಮಿತವಾಗಿ ಉಳಿಯದೇ ಸದಾ ವಿಶ್ವಮಟ್ಟದಲ್ಲಿ ಇರುತ್ತಿತ್ತು.

ರಾಜ್ಯ-ದೇಶದ ಸೀಮೆಗಳಾಚೆ ತಮ್ಮ ಯೋಚನೆಗಳನ್ನು ಬೆಳೆಸಿ ಕೊಂಕಣಿಯ ಕಂಪನ್ನು ಅಮೆರಿಕ ಖಂಡಕ್ಕೂ ವಿಸ್ತರಿಸುವಲ್ಲಿ ಸಫಲರಾದ ಅಪರೂಪದ ಮುತ್ಸದ್ದಿ ಅವರಾಗಿದ್ದರು. ವಿಶ್ವಮಟ್ಟದ ಅವರ ಯೋಚನೆ ಮತ್ತು ಯೋಜನೆಯಂತೆ ಅವರ ವ್ಯಕ್ತಿತ್ವ ಕೂಡ ಎಲ್ಲರನ್ನೂ ಪ್ರೀತಿಸುವ, ಬೆಳೆಸುವ, ಮುನ್ನಡೆಸುವ ವಿಶ್ವಮಾನವ ಸ್ವರೂಪದ್ದಾಗಿತ್ತು. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮತ್ತು ಸಮಸ್ತ ಸಮಾಜದ ಸಂದರ್ಭದಲ್ಲಿ ಹೇಳುವುದಾದರೆ ರಾಷ್ಟಕವಿ ಕುವೆಂಪು ಪರಿಕಲ್ಪನೆಯ ವಿಶ್ವಮಾನವ ವ್ಯಕ್ತಿತ್ವವನ್ನು ಬದುಕಿ ತೋರಿಸಿದವರು. ಕೊಂಕಣಿ ಭಾಷಿಕರು ಒಂದು ಬಲಿಷ್ಠ ಸಮಾಜವಾಗಿ ಬೆಳೆಯಬೇಕಾದರೆ ನಮ್ಮ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ತೀರಾ ಖಾಸಗಿಯಾಗಿ ಆಚರಿಸಬೇಕು ಎಂದು ಬಲವಾಗಿ ನಂಬಿದ ಮತ್ತು ಅಕ್ಷರಶಃ ಪಾಲಿಸಿದ ಸಂತರವರು; ನಿಜವಾದ ಅರ್ಥದಲ್ಲಿ ವಿಶ್ವಮಾ ನವರು. ಅವರ ಕ್ಯಾಬಿನ್‌ನಲ್ಲಿ ಯಾವುದೇ ದೇವರ ಫೋಟೋ ಗಳಿರಲಿಲ್ಲ, ಇದ್ದದ್ದು ಕೊಂಕಣಿ ಮತ್ತು ಕೊಂಕಣಿ ಪ್ರತಿಮೆಗಳು ಮಾತ್ರ. ಅವರ ಕ್ಯಾಬಿನ್‌ ಪ್ರವೇಶಿಸುವುದು ಎಂದರೆ ಕೊಂಕಣಿಯ ಪವಿತ್ರ, ನಿಶ್ಕಲ್ಮಶ ಮಂದಿರವನ್ನು ಪ್ರವೇಶಿಸಿದ ಧನ್ಯತಾ ಭಾವ -ಇಂದಿಗೂ ನನ್ನಲ್ಲಿ ಮೂಡುತ್ತದೆ.

ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಬಸ್ತಿ ವಾಮನ ಶೆಣೈ ಅವರನ್ನು ಮಹಾ ವೃಕ್ಷ ಮತ್ತು ನಾವೆಲ್ಲ ಈ ಮಹಾ ವೃಕ್ಷದ ಟೊಂಗೆಗಳಲ್ಲಿ ಆಶ್ರಯ ಪಡೆದುಕೊಳ್ಳುವ ಚಿಲಿಪಿಲಿ ಹಕ್ಕಿಗಳು ಎಂದು ಬಣ್ಣಿಸಿದ್ದುಂಟು. ನನ್ನ ಪ್ರಕಾರ ಬಸ್ತಿ ವಾಮನ ಶೆಣೈ ಅಂದರೆ ಕೊಂಕಣಿಯ ಏಕ ಮಾತ್ರ ಸಂತ ಮನುಷ್ಯ. ಬಸ್ತಿ ವಾಮನ ಶೆಣೈ ಎಲ್ಲ ವಿಶೇಷಣಗಳನ್ನು ಮೀರಿದ, ಕೊಂಕಣಿ ಸಮಾಜದ ಪುನರುತ್ಥಾನಕ್ಕಾಗಿ ಅವತಾರವೆತ್ತಿ ಬಂದ ವಾಮನ ಅವತಾರ!
ಸಾಮಾನ್ಯವಾಗಿ ಸಾಹಿತಿಗಳು ಮಾತ್ರ ಓದುಗಶೀಲರಾಗಿರುತ್ತಾರೆ, ಚಳವಳಿ ಸಂಘಟನೆ ಯಲ್ಲಿರುವವರಿಗೆ ಓದಿನಲ್ಲಿ ಕಡಿಮೆ ಆಸಕ್ತಿ, ಅಥವಾ ಬಿಡುವು ಇರುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತೆ ದಿನಪತ್ರಿಕೆಯಿಂದ ಹಿಡಿದು, ನಿಯತಕಾಲಿಕ, ಕೊಂಕಣಿಯಲ್ಲಿ ಪ್ರಕಟವಾಗುವ ಪ್ರತೀ ಪುಸ್ತಕವನ್ನು ಅವರು ಓದುತ್ತಿದ್ದರು.

Advertisement

ತಾನು ಏನು ಕೆಲಸ ಮಾಡಬೇಕು, ಏನು ಮಾತನಾಡಬೇಕು, ಹೇಗೆ ಬದುಕಬೇಕು – ಎಂಬ ಬಗ್ಗೆ ಅವರಲ್ಲಿ ಎಳ್ಳಷ್ಟೂ ಗೊಂದಲಗಳಿರಲಿಲ್ಲ. ಇಂದು ಹಿಂದಿರುಗಿ ನೋಡಿದಾಗ, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪನೆ ಮಾಡುವಾಗಲೂ ಈ ಸಂತ ಮನುಷ್ಯರಲ್ಲಿ ಯಾವುದೇ ಗೊಂದಲಗಳಿದ್ದಂತೆ ನನಗಂತೂ ಕಾಣುವುದಿಲ್ಲ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ತಳಪಾಯದ ಮೇಲೆ ಸ್ಥಾಪಿ ಸುವ ಕೇಂದ್ರಕ್ಕೆ ವಿಶ್ವ ಕೊಂಕಣಿ ಕೇಂದ್ರ ಎಂದು ಹೆಸರಿಡಬೇಕಾದರೆ, ಭವಿಷ್ಯದಲ್ಲಿ ಈ ಕೇಂದ್ರ ಕೇವಲ ಭಾಷೆ, ಸಾಹಿತ್ಯ, ಸಂಸ್ಕೃತಿಗಾಗಿ ಮಾತ್ರ ಸೀಮಿತವಾಗಿ ಉಳಿಯಬಾರದು, ಸಮಸ್ತ ಕೊಂಕಣಿ ಸಮಾಜ ವನ್ನು ಮೇಲೆತ್ತುವ ಕೆಲಸದಲ್ಲಿ ತೊಡಗಿ, ಕೊಂಕಣಿ ಸಮಾಜ ಸಶಕ್ತ ಸಮಾಜವಾಗಿ ರೂಪು ಗೊಳಿಸಬೇಕು ಮಾತ್ರ ವಲ್ಲ ವಿಶ್ವವ್ಯಾಪಿಯಾಗಬೇಕು ಎಂಬ ಸ್ಪಷ್ಟ ದೂರದೃಷ್ಟಿಯನ್ನು ಹೊಂದಿದ ಮಹಾಪುರುಷ ಅವರಾಗಿದ್ದರು. ಕಾಲಾನುಕ್ರಮದಲ್ಲಿ ಅವರ ಯೋಚನೆಯನ್ನು ಯೋಜನೆಯಾಗಿ ಸಾಕಾರ ಗೊಳಿಸಲು ಟಿ. ವಿ. ಮೋಹನದಾಸ ಪೈ, ಯು. ರಾಮದಾಸ ಕಾಮತ್‌, ಪ್ರದೀಪ್‌ ಪೈ ಅವರಂತಹ ಮಹಾನುಭಾವರು ಸಾಥ್‌ ನೀಡಿದರು.

ಇಂದು ವಿಶ್ವ ಕೊಂಕಣಿ ಕೇಂದ್ರ ಕೇವಲ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಕೊಂಕಣಿ ಮಾತೃಭಾಷೆಯಾಗಿರಬೇಕು ಎಂಬುದು ಒಂದು ಕೊಂಡಿಯಷ್ಟೇ, ಸಾವಿ ರಾರು ವಿದ್ಯಾರ್ಥಿಗಳು ಕೋಟ್ಯಂತರ ರೂ. ವಿದ್ಯಾರ್ಥಿವೇತನ ಪಡೆದು ಇಂದು ವೈದ್ಯರಾಗಿ, ಎಂಜಿನಿಯರ್‌ಗಳಾಗಿ ಕೊಂಕಣಿ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಸುಸಜ್ಜಿತ ಹಾಸ್ಟೆಲ್‌ ಇದ್ದು ಕ್ಷಮತಾ ಶಿಬಿರಗಳು ನಡೆಯು ತ್ತಿವೆ. ಕೊಂಕಣಿಯ ಮುಂದಿನ ಪೀಳಿಗೆ ಗಾಗಿ ವಿದ್ಯಾರ್ಥಿ ವೇತನ, ವೃತ್ತಿ ಮಾರ್ಗದರ್ಶನದ ರೂಪದಲ್ಲಿ ನೆರವಾಗುತ್ತಿದ್ದರೆ, ದುರ್ಬಲ ವರ್ಗದ ಮಹಿಳೆಯರಿಗೆ ಹೊಲಿಗೆ ತರಬೇತಿ, ಕರಕುಶಲ ವಸ್ತುಗಳ ತರಬೇತಿ, ಅವರು ತಯಾ ರಿಸಿದ ಉತ್ಪನ್ನಗಳ ಮಾರುಕಟ್ಟೆಗೂ ವ್ಯವಸ್ಥೆ ಮಾಡಲಾಗಿದೆ. ಅದೆಷ್ಟೋ ಹೊಲಿಗೆ ಯಂತ್ರ ಗಳನ್ನು ವಿತರಿಸಲಾಗಿದೆ.

ಮಂಗಳೂರಿನಲ್ಲಿ ಈ ಹಿಂದೆ ಪೊಲೀಸ್‌ ಕಮಿಷನರ್‌ ಆಗಿದ್ದ ಚಂದ್ರಶೇಖರ್‌ ಅವರು ಕಾರ್ಯಕ್ರಮದ ವೇದಿಕೆಯಿಂದ ಹೇಳಿದ ಮಾತು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. “ಬಸ್ತಿ ವಾಮನ ಶೆಣೈ ನನ್ನ ಕ್ಯಾಬಿನ್‌ ಒಳಗೆ ಪ್ರಥಮ ಬಾರಿ ಬಂದಾಗ ಯಾವುದೋ ಒಂದು ವಿಶೇಷ ತೇಜಸ್ಸು ಒಳಗೆ ಪ್ರವೇಶಿಸಿದ ಅನುಭವವಾಯಿತು. ಅವರು ಬಾಗಿಲಿನಿಂದ ನನ್ನ ಎದುರಿನ ಆಸನದ ಬಳಿ ಬರುವಷ್ಟರಲ್ಲಿ ನನಗರಿವಿಲ್ಲದೇ ನಾನು ಎದ್ದು ನಿಂತಿದ್ದೆ’.
ಭಾಷೆ, ಸಾಹಿತ್ಯದ ವಲಯದ ಆಚೆಗಿರುವ ಒಬ್ಬ ಅಧಿಕಾರಿ ತಮಗಾದ ದಿವ್ಯ ಅನುಭವವನ್ನು ಕಾರ್ಯಕ್ರಮ ವೊಂದರ ತುಂಬಿದ ವೇದಿಕೆಯಿಂದ ಮುಲಾಜಿಲ್ಲದೇ ಹಂಚಿಕೊಳ್ಳುತ್ತಾರೆ ಅಂದರೆ – ಬಸ್ತಿ ವಾಮನ ಶೆಣೈ ಅವರಲ್ಲಿ ಯಾವ ಮಟ್ಟದ ತೇಜಸ್ಸು ತುಂಬಿದ್ದಿರಬಹುದು ಎಂಬುದನ್ನು ಅರಿಯಲು ವಿಶೇಷ ಅಧ್ಯಯನದ ಅಗತ್ಯವಿಲ್ಲ.

ನಮ್ಮ ನಿಲುಕಿಗೆ ಸಿಗದ ಅಗಾಧ ಮನುಷ್ಯ ಪ್ರೇಮ, ಮಮತೆ ಮತ್ತು ಮುತ್ಸದ್ದಿತನದ ಮೂರ್ತ ರೂಪದಂತೆ ಬದುಕಿ, ನಿಜವಾದ ಅರ್ಥದಲ್ಲಿ ವಿಶ್ವಮಾನವರಾಗಬೇಕಾದರೆ ನಾವೆಲ್ಲ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟು, ತನಗೆ ವಹಿಸಿಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಅಲ್ಲಲ್ಲಿ ಸಸಿಗಳಂತೆ ನಮ್ಮನ್ನು ನೆಟ್ಟು, ಸದ್ದಿಲ್ಲದೆ ಎದ್ದು ಹೋದ ತಂದೆಯಂತಹ ಧೀಮಂತ ವ್ಯಕ್ತಿ – ಬಸ್ತಿ ವಾಮನ ಶೆಣೆ„ ಅವರು.

ಈಗ ಅವರ ಕೈಯಾರೆ ಸಸಿಗಳಾಗಿ ನೆಡಲ್ಪಟ್ಟ ನಾವು ಬೆಳೆದು, ನೆರಳಾಗುವ, ಹಸುರಾಗುವ, ಉಸಿರಾಗುವ. ಅವರಂತೆ ವಿಶ್ವಮಾನವರಾಗಲು ಸಾಧ್ಯವಿಲ್ಲದಿದ್ದರೂ ಅವರನ್ನು ಅನುಕರಿಸುವುದೇ ನಾವು ಬಸ್ತಿ ವಾಮನ ಶೆಣೈ ಅವರಿಗೆ ಅರ್ಪಿಸ ಬಹುದಾದ ನಿಜವಾದ ನುಡಿನಮನ.

-ಎಚ್ಚೆಮ್‌, ಪೆರ್ನಾಲ್‌ ಕೊಂಕಣಿ ಲೇಖಕರು

Advertisement

Udayavani is now on Telegram. Click here to join our channel and stay updated with the latest news.

Next