Advertisement

ವಾರದೊಳಗೆ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ

09:47 PM Dec 30, 2019 | Lakshmi GovindaRaj |

ಮೈಸೂರು: ಡಾ.ವಿಷ್ಣುವರ್ಧನ್‌ 10ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮೈಸೂರಿನ ಹೊರವಲಯದಲ್ಲಿ ವಿಷ್ಣುವರ್ಧನ್‌ ಸ್ಮಾರಕ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೈಸೂರು ತಾಲೂಕಿನ ಉದೂರು ಬಳಿಯ ಹಾಲಾಳು ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ ಭಾರತಿ ವಿಷ್ಣುವರ್ಧನ್‌ ಅವರು ಅಭಿಮಾನಿಗಳ ಸಮ್ಮುಖದಲ್ಲಿ ವಿಷ್ಣುವರ್ಧನ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಡಾ. ವಿಷ್ಣು ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ವಿಷ್ಣು ಸ್ಮಾರಕದ ನಿರ್ಮಾಣ ಕಾರ್ಯ ಇನ್ನು ಒಂದು ವಾರದಲ್ಲಿ ಶುರುವಾಗಲಿದೆ.

ಮಾನಂದವಾಡಿ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಈ ಜಾಗದ ಪೈಕಿ ಎರಡು ಎಕರೆಯಲ್ಲಿ ಸ್ಮಾರಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಹಾಲಾಳು ಗ್ರಾಮದ ಸರ್ವೆ ನಂ.8ರಲ್ಲಿ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸರಕಾರ ನೀಡಿದೆ. ಆದರೆ, ಸ್ಮಾರಕ ನಿರ್ಮಾಣ ಕಾರ್ಯ 10 ವರ್ಷ ವಿಳಂಬವಾದರೂ ಬೇಸರವಾಗಿಲ್ಲ. ಎಲ್ಲದಕ್ಕೂ ತಾಳ್ಮೆಯಿರಬೇಕು ಎಂದರು.

ವಿಷ್ಣುವರ್ಧನ್‌ ಅಗಲಿ ದಶಕವಾದರೂ ಅವರ ನೆನಪು ಇನ್ನೂ ಹಸಿರಾಗಿದೆ. ಅವರು ಇಲ್ಲದೇ ಶೂನ್ಯ ಆವರಿಸಿದೆ. ಈ ಶೂನ್ಯಕ್ಕೆ ಹೆಚ್ಚಿನ ಬೆಲೆ. ಇಂದಿಗೂ ವಿಷ್ಣು ಅಭಿಮಾನಿಗಳ ಪ್ರೀತಿ, ವಿಶ್ವಾಸ ಕಡಿಮೆಯಾಗಿಲ್ಲ. ಅವರ ಘನತೆಗೆ ಯಾವುದೇ ಧಕ್ಕೆಯಾಗಿಲ್ಲ. ವಿಷ್ಣು ಇನ್ನೂ ನಮ್ಮೊಂದಿಗೆ ಇದ್ದಾರೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮೇಲಿಂದಲೇ ನಮ್ಮನ್ನು ಕಾಯುತ್ತಿದ್ದಾರೆ ಎಂದರು. ಈ ವೇಳೆ ಪುತ್ರಿ ಕೀರ್ತಿ ವಿಷ್ಣುವರ್ಧನ್‌, ಅಳಿಯ ಅನಿರುದ್‌ ಸೇರಿದಂತೆ ಹಲವರು ಹಾಜರಿದ್ದರು.

ವಿಷ್ಣುವರ್ಧನ್‌ ಅಭಿಮಾನಿ ಬಳಗ: ವಿಷ್ಣುವರ್ಧನ್‌ 10ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಇರುವ ಡಾ.ವಿಷ್ಣುವರ್ಧನ್‌ ಉದ್ಯಾನವನದ ಮುಂಭಾಗ ಕರುಣಾಮಯಿ ವಿಷ್ಣುವರ್ಧನ್‌ ಅಭಿಮಾನಿಗಳ ಬಳಗದ ವತಿಯಿಂದ ಸಾಹಸಿಂಹ ವಿಷ್ಣುವರ್ಧನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಸಮಾಜ ಸೇವಕ ಡಿ.ಟಿ.ಪ್ರಕಾಶ್‌, ಮೈಸೂರಿನಿಂದ ಕೆ.ಎಸ್‌.ಅಶ್ವತ್ಥ್, ಅಂಬರೀಶ್‌, ಎಂ.ಪಿ.ಶಂಕರ್‌ ಸೇರಿದಂತೆ ಇನ್ನೂ ಅನೇಕ ಚಿತ್ರ ಕಲಾವಿದರನ್ನು ಪುಟ್ಟಣ್ಣ ಕಣಗಾಲ್‌, ರಾಜೇಂದ್ರ ಸಿಂಗ್‌ ಬಾಬು ಚಿತ್ರ ನಿರ್ದೇಶಕರು ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಚಿತ್ರ ನಗರಿಯನ್ನು ಮೈಸೂರಿನಲ್ಲಿ ಸ್ಥಾಪಿಸಬೇಕು. ಚಿತ್ರ ನಗರಿಗೆ ವಿಷ್ಣುವರ್ಧನ್‌ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಪಾತಿ ಫೌಂಡೇಷನ್‌ ಅಧ್ಯಕ್ಷ ಪಾರ್ಥಸಾರಥಿ ಮಾತನಾಡಿ, ಪುಟ್ಟಣ್ಣ ಕಣಗಾಲ್‌ ಗರಡಿಯ ಶಿಷ್ಯನಾಗಿ ಗುರುತಿಸಿಕೊಂಡ ವಿಷ್ಣುವರ್ಧನ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಚಾಮಯ್ಯ ಮೇಷ್ಟ್ರ ಶಿಷ್ಯನಾಗಿಯೇ ಸಾರ್ವಜನಿಕರಿಗೆ ಗುರು-ಗುರಿಯ ಸಂದೇಶ ನೀಡುತ್ತಿದ್ದ ಮಹಾನ್‌ ವ್ಯಕ್ತಿ. ಅವರ ಸರಳಜೀವನ ಪ್ರತಿಯೊಬ್ಬರಿಗೂ ಮಾದರಿ ಎಂದರು.

ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ ಗೌಡ ಮಾತನಾಡಿ, ಎಲ್ಲಾ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದ ಜನವಿಶ್ವಾಸ ಗಳಿಸಿದ್ದಾರೆ. ಅವರು ನಟಿಸಿರುವ ಚಿತ್ರಗಳಲ್ಲಿ ಕೆಲ ಜಿಲ್ಲೆಯ ಸ್ಥಳಗಳು ಪ್ರವಾಸೋದ್ಯಮ ತಾಣವಾಗಿವೆ. ಚಾಮುಂಡಿ ಬೆಟ್ಟದಿಂದ ಚಿತ್ರದುರ್ಗದ ಕೋಟೆಯವರೆಗೂ ಹೊಸ ಕಲಾವಿದರಿಗೆ ಸ್ಫೂರ್ತಿಯಾಗಿದ್ದರು ಡಾ.ವಿಷ್ಣುವರ್ಧನ್‌.

ಇಂತಹ ಅತ್ಯುತ್ತಮ ಕನ್ನಡ ನಟನ ಜಯಂತಿಯನ್ನು ರಾಜ್ಯಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಿ ಯುವ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರಬೇಕು. ವಿಷ್ಣುವರ್ಧನ್‌ ನಮ್ಮನ್ನಗಲಿ ಹತ್ತು ವರ್ಷ ಸಂದಿದ್ದರೂ ಆಡಳಿತ ನಡೆಸಿರುವ ಸರ್ಕಾರಗಳು ಸ್ಮಾರಕ ನಿರ್ಮಿಸಲು ವಿಳಂಬ ಮಾಡುತ್ತಿರುವುದು ಖಂಡನೀಯ ಎಂದರು.

ಈ ವೇಳೆ ಬಿಜೆಪಿ ಯುವ ಮುಖಂಡ ಚರಣ್‌ ರಾಜ್‌, ಪ್ರಚಾರಕ ಮೈಕ್‌ ಚಂದ್ರು, ವಿಕ್ರಂ ಅಯ್ಯಂಗಾರ್‌, ವಿನಯ್‌ ಕಣಗಾಲ್‌, ಲೋಹಿತ್‌, ಜೀವನ್‌, ನಾಗರಾಜ್‌, ಸುಚೀಂದ್ರ, ರಘು ಕಿರಣ್‌ ಗೌಡ, ಉಮೇಶ್‌, ಮಹದೇವು, ನವೀನ್‌ ಹಾಗೂ ನೂರಾರು ವಿಷ್ಣು ಅಭಿಮಾನಿಗಳು ಹಾಜರಿದ್ದರು.

ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಸಹಕಾರ: ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ವಿಷ್ಣು ಸ್ಮಾರಕ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರು ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಇದೊಂದು ಸಂತಸ ವಿಚಾರ. 10 ವರ್ಷಗಳ ಬಳಿಕವಾದರೂ ಸ್ಮಾರಕ ನಿರ್ಮಾಣವಾಗುತ್ತಿರುವುದು ಖುಷಿ ತಂದಿದೆ ಎಂದ ಅವರು, ಸ್ಮಾರಕದ ರೂಪುರೇಷೆ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಭಾರತಿ ವಿಷ್ಣುವರ್ಧನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next