Advertisement

ವಿಷ್ಣು ಸರ್ಕಲ್‌ನಲ್ಲಿ ಜಗ್ಗೇಶ್‌ ಪುತ್ರ

05:51 PM Sep 04, 2017 | Sharanya Alva |

ಇತ್ತೀಚೆಗಷ್ಟೇ ಶಿವರಾಜಕುಮಾರ್‌ ಅಭಿನಯದ “ಮಾಸ್‌ ಲೀಡರ್‌’ ಚಿತ್ರದಲ್ಲಿ ನಟಿಸಿದ್ದ ಜಗ್ಗೇಶ್‌ ಪುತ್ರ ಗುರುರಾಜ್‌ ಜಗ್ಗೇಶ್‌, ಈಗ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ವಿಷ್ಣು ಸರ್ಕಲ್‌’ ಎಂದು ನಾಮಕರಣ ಮಾಡಲಾಗಿದೆ. ಈ ಶೀರ್ಷಿಕೆಗೆ “ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ’ ಎಂಬ ಅಡಿಬರಹವೂ ಇದೆ.

Advertisement

ಇನ್ನು, ಈ ಚಿತ್ರಕ್ಕೆ ಲಕ್ಷ್ಮೀ ದಿನೇಶ್‌ ನಿರ್ದೇಶಕರು. ಈ ಹಿಂದೆ ನಿರ್ದೇಶಕ ಲಕ್ಷ್ಮೀ ದಿನೇಶ್‌, “ಹಾಫ್ ಮೆಂಟಲ್‌’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ ಹೊಸ ಚಿತ್ರವನ್ನು ಆರ್‌.ಬಿ. ನಿರ್ಮಾಣ ಮಾಡುತ್ತಿದ್ದಾರೆ.

ಅಂದಹಾಗೆ, ಇಲ್ಲಿ ಶೀರ್ಷಿಕೆ ಮತ್ತು ಅದರ ಅಡಿಬರಹ ನೋಡಿದ ಮೇಲೆ ಇದೊಂದು ವಿಷ್ಣುವರ್ಧನ್‌ ಅಭಿಮಾನಿ ಕುರಿತ ಸಿನಿಮಾನಾ? ಎಂಬ ಪ್ರಶ್ನೆ ಬಂದರೂ ಅಚ್ಚರಿ ಇಲ್ಲ. ಯಾಕೆಂದರೆ, ಇಲ್ಲಿ ಅವರ ಕುರಿತ ಶೀರ್ಷಿಕೆ ಇದೆ ಅಂದಮೇಲೆ, ಅದಕ್ಕೆ ಸಂಬಂಧಿಸಿದ ಕಥೆ ಇದ್ದೇ ಇರುತ್ತೆ ಅಂದುಕೊಂಡರೂ, ಅದನ್ನು ಪಕ್ಕಾ ಮಾಡಿಕೊಳ್ಳಲು ಸಿನಿಮಾ ಬರೋವರೆಗೂ ಕಾಯಲೇಬೇಕು. ಗುರುರಾಜ್‌ ಜಗ್ಗೇಶ್‌ ಈ ಸಿನಿಮಾ ಮೂಲಕ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಯೂತ್ಸ್ ಕುರಿತಾದ ಕಥೆಯಾಗಿದ್ದು, ಈಗಿನ ಟ್ರೆಂಡ್‌ಗೆ ತಕ್ಕ ಸಿನಿಮಾ ಮಾಡಲು ಹೊರಟಿದೆ ಲಕ್ಷ್ಮೀ ದಿನೇಶ್‌ ತಂಡ.

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಈ ಹಿಂದೆಯೇ “ವಿಷ್ಣು ಸರ್ಕಲ್‌’ ಚಿತ್ರಕ್ಕೆ ಚಾಲನೆ ಸಿಗಬೇಕಿತ್ತು. ಆದರೆ, ಗುರುರಾಜ್‌ ಅವರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದ ಹಿನ್ನೆಲೆಯಲ್ಲಿ, ಗುರುರಾಜ್‌ ಜಗ್ಗೇಶ್‌ ಅವರು, ವಿಶ್ರಾಂತಿ ಪಡೆದ ಬಳಿಕ ಸಿನಿಮಾಗೆ ಚಾಲನೆ ಕೊಡೋಣ ಎಂದು ಹೇಳಿದ್ದರು. ಹಾಗಾಗಿ, ನಿರ್ದೇಶಕರು, ಗುರುರಾಜ್‌ ಜಗ್ಗೇಶ್‌ ಅವರು, ಸಂಪೂರ್ಣ ಚೇತರಿಸಿಕೊಂಡ ನಂತರವೇ ಚಿತ್ರಕ್ಕೆ ಮುಹೂರ್ತ ನಡೆಸಿ, ಚಿತ್ರೀಕರಿಸುವ ನಿರ್ಧಾರ ಮಾಡಿದ್ದರು. ಅದರಂತೆ, ಈಗ ಚಿತ್ರಕ್ಕೆ ಚಾಲನೆ ಸಿಗುತ್ತಿದೆ. ಇನ್ನು, ಪಿ.ಎಲ್‌.ರವೀ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಶ್ರೀವತ್ಸ ಅವರು ಸಂಗೀತ ನೀಡುತ್ತಿದ್ದಾರೆ.

ಉಳಿದಂತೆ ಹೈಟ್‌ ಮಂಜು ಚಿತ್ರಕ್ಕೆ ನೃತ್ಯ ನಿರ್ದೇಶಕರು. ಮಾಸ್‌ಮಾದ ಅವರು ಇಲ್ಲಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ನಾಗೇಂದ್ರಪ್ರಸಾದ್‌ ಮತ್ತಿತರರು ಹಾಡುಗಳನ್ನು ಬರೆಯಲಿದ್ದಾರೆ. ಸೆ.4 ರಂದು (ಇಂದು) ಮುಹೂರ್ತ ನೆರವೇರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next