Advertisement

Visa Issue… : ಭಾರತದ ಐವರಿಗೆ ತಪ್ಪಿತು ವಿಶ್ವ ಕಿರಿಯರ ಚೆಸ್‌ ಕೂಟ…

10:07 AM Sep 20, 2023 | Team Udayavani |

ಚೆನ್ನೈ: ಫಿಡೆ ನಡೆಸುವ ವಿಶ್ವ ಕಿರಿಯರ ಚೆಸ್‌ ವಿಶ್ವಚಾಂಪಿಯನ್‌ಶಿಪ್‌ ಆರಂಭಕ್ಕೂ ಮುನ್ನವೇ ಭಾರತಕ್ಕೆ ಅತ್ಯಂತ ಆಘಾತಕಾರಿ ಸುದ್ದಿಯೊಂದು ಕೇಳಿಬಂದಿದೆ. ಮೆಕ್ಸಿಕೊ ನಗರದಲ್ಲಿ ಸೆ.22ರಿಂದ ಅ.2ರವರೆಗೆ ವಿಶ್ವ ಕಿರಿಯರ ಕೂಟ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಭಾರತದ ಐವರು ಆಟಗಾರರಿಗೆ ಮೆಕ್ಸಿಕೊ ವೀಸಾ ಸಿಕ್ಕಿಲ್ಲ. ಮಂಗಳವಾರ ಬೆಳಗ್ಗೆ ಉಳಿದೆಲ್ಲ ಆಟಗಾರರು, ತರಬೇತಿ ಸಿಬ್ಬಂದಿ ಮೆಕ್ಸಿಕೊ ವಿಮಾನ ಹತ್ತಿದರೂ, ಐವರು ಎಲ್ಲ ಅರ್ಹತೆಯಿದ್ದೂ ಹೋಗಲಾಗದ ಹತಾಶ ಸ್ಥಿತಿಗೆ ತಲುಪಿದರು. ಇದಕ್ಕೆ ಕಾರಣ ಏನೆಂದು ಖಚಿತವಾಗಿ ತಿಳಿದುಬಂದಿಲ್ಲ. ಮೆಕ್ಸಿಕೊ ರಾಯಭಾರ ಕಚೇರಿಯಿಂದಲೇ ಈ ಸಮಸ್ಯೆ ಉದ್ಭವಿಸಿದೆ ಎಂದು ಫಿಡೆ ಸಲಹಾ ಮಂಡಳಿ ಮುಖ್ಯಸ್ಥ ಭರತ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

Advertisement

ವೃಷಾಂಕ್‌ ಚೌಹಾಣ್‌, ಅರುಣ್‌ ಕಟಾರಿಯ, ಭಾಗ್ಯಶ್ರೀ ಪಾಟೀಲ್‌, ಪ್ರಣೀತ್‌ ವುಪ್ಪಳ, ಫೆಮಿಲ್‌ ಚೆಲ್ಲದುರೈ ತಪ್ಪಿಸಿಕೊಂಡ ಪ್ರತಿಭಾವಂತ ಚೆಸ್‌ ಪಟುಗಳು. ಇವರು ಬರೀ ಪ್ರತಿಭಾವಂತರಷ್ಟೇ ಅಲ್ಲ, ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದವರು. ಇವರ ಜೊತೆಗೆ ತರಬೇತುದಾರರಾದ ಎಂ.ಪ್ರವಿಂದ್‌ ಥಿಪ್ಸೆ, ಕಿರಣ್‌ ಅಗರ್ವಾಲ್‌ಗ‌ೂ ವೀಸಾ ಸಿಕ್ಕಿಲ್ಲ. ಅವರು ನಿಗದಿತ ಸಮಯದಲ್ಲಿ ವಿಮಾನ ಹತ್ತಬೇಕಾದ ಸಮಯ ಬಂದರೂ, ವೀಸಾ ಅಂತೂ ಕೈಗೆ ಸಿಗಲಿಲ್ಲ. ಇದರಿಂದ ಆಟಗಾರರು ಅತಂತ್ರರಾಗಿದ್ದರು.
ಕೋಚ್‌ಗಳೂ ಅತಂತ್ರ: ವಾಸ್ತವವಾಗಿ ಪ್ರವಿಂದ್‌ ಥಿಪ್ಸೆ ಮತ್ತು ಕಿರಣ್‌ ಅಗರ್ವಾಲ್‌ ಕೋಚ್‌ಗಳಾಗಿ ತೆರಳಬೇಕಾಗಿತ್ತು. ಅವರಿಗೆ ವೀಸಾ ಸಿಗದೇ ಕೊನೆಯ ಗಳಿಗೆಯಲ್ಲಿ ಸಿಆರ್‌ಜಿ ಕೃಷ್ಣ ಮತ್ತು ತಾರಿಣಿ ಗೋಯಲ್‌ರನ್ನು ಕೋಚ್‌ಗಳಾಗಿ ಕಳುಹಿಸಿಕೊಡಲಾಯಿತು. ಈ ಇಬ್ಬರೂ ಅಮೆರಿಕ ವೀಸಾ ಹೊಂದಿರುವುದಿರಿಂದ ಮೆಕ್ಸಿಕೊ ಪ್ರವೇಶ ಸಾಧ್ಯವಾಗಿದೆ. ಒಟ್ಟಾರೆ ಪ್ರಕರಣ ಭಾರೀ ಅವಾಂತರ ಸೃಷ್ಟಿಸಿದೆ.

ಭರತ್‌ ಸಿಂಗ್‌ ಹೇಳಿದ್ದೇನು?: ಈ ಬಗ್ಗೆ ಪಿಟಿಐಗೆ ಫಿಡೆ ಸಲಹಾ ಮಂಡಳಿ ಮುಖ್ಯಸ್ಥ ಭರತ್‌ ಸಿಂಗ್‌ ಚೌಹಾಣ್‌ ಮಾತನಾಡಿದ್ದಾರೆ. ಇದು ತಮ್ಮ 45 ವರ್ಷಗಳ ಚೆಸ್‌ ಜೀವನದಲ್ಲಿ ಕೆಟ್ಟ ಘಟನೆ ಎಂದು ಬಣ್ಣಿಸಿದ್ದಾರೆ. “ಭಾರತ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಿದರೂ, ನಮಗೆ ವೀಸಾ ಸಿಗಲಿಲ್ಲ. ಭಾರತ ತಂಡಕ್ಕೆ ಇದು ದೊಡ್ಡ ಹೊಡೆತ. ಆಟಗಾರರಿಗೆ ಇದು ಕೆಟ್ಟ ಸುದ್ದಿ. ಈ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಅವಕಾಶ ಕಳೆದುಕೊಂಡಿದ್ದಾರೆ, ಮಾತ್ರವಲ್ಲ ಅವರು ಪದಕ ಗೆಲ್ಲುವ ಭರವಸೆಯನ್ನೂ ಹುಟ್ಟಿಸಿದ್ದರು. ನನ್ನ 45 ವರ್ಷಗಳ ಚೆಸ್‌ ವೃತ್ತಿಜೀವನದಲ್ಲೇ ಇಂತಹದ್ದನ್ನು ಕಂಡಿಲ್ಲ. ನಾವು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಒದಗಿಸಿದ್ದೇವೆ. ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದು ನನಗೆ ಗೊತ್ತಿಲ್ಲ’ ಎಂದು ಭರತ್‌ ಬೇಸರದಿಂದ ನುಡಿದಿದ್ದಾರೆ.

ಮೆಕ್ಸಿಕೊ ರಾಯಭಾರ ಕಚೇರಿಯೇ ಕಾರಣ: ಇಂತಹದ್ದೊಂದು ಪರಿಸ್ಥಿತಿಗೆ ಮೆಕ್ಸಿಕೊ ರಾಯಭಾರ ಕಚೇರಿಯೇ ಕಾರಣ ಎಂದು ಭರತ್‌ ಸಿಂಗ್‌ ಚೌಹಾಣ್‌ ಭಾನುವಾರ ಹೇಳಿದ್ದರು. ಇದೇ ರೀತಿಯ ಪರಿಸ್ಥಿತಿಯನ್ನು ಕೆಲವು ನೇಪಾಳಿ ಆಟಗಾರರೂ ಎದುರಿಸಿದ್ದಾರೆ. ಆ ಆಟಗಾರರು ಭಾರತದಲ್ಲಿದ್ದರು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇದು ಮೆಕ್ಸಿಕೊ ರಾಯಭಾರ ಕಚೇರಿಯ ಉದ್ದೇಶಪೂರ್ವಕ ಕೃತ್ಯವೇ ಎಂಬ ಅನುಮಾನ ಶುರುವಾಗಿದೆ.

ಆಟಗಾರರ ಕಥೆ?: ಸದ್ಯ ಭಾರತದಲ್ಲೇ ಉಳಿದುಕೊಂಡಿರುವ ಆಟಗಾರರ ಕಥೆಯೇನು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಸದ್ಯವೇ ರಾಷ್ಟ್ರೀಯ ಕೂಟ ಆರಂಭವಾಗಲಿದೆ. ಆಸಕ್ತ ಆಟಗಾರರು ಅಲ್ಲಿ ಪಾಲ್ಗೊಳ್ಳಬಹುದು ಎಂದು ಭರತ್‌ ಹೇಳಿದ್ದಾರೆ.

Advertisement

ಇದನ್ನೂ ಓದಿ: Unruly Passenger: ಅಶಿಸ್ತಿನ ವರ್ತನೆ: ವಿಮಾನದ ತುರ್ತು ಬಾಗಿಲು ತೆರೆಯಲು ಮುಂದಾದ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next