Advertisement

ಶಾಲಾ ಅಂಗಳದಿಂದ ವರ್ಚುವಲ್‌ ಅಂಗಳಕ್ಕೆ

02:54 AM Jun 19, 2021 | Team Udayavani |

ಶಾಲೆಯ ಎಲ್ಲ ಸಂಭ್ರಮದ ದಿನಗಳನ್ನು ಕೊರೊನಾ ಎಂಬ ಹೆಮ್ಮಾರಿಯು ಕಿತ್ತುಕೊಂಡು ವರ್ಷವೇ ಕಳೆಯಿತು. ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಶಾಲೆಗಳು ಅಚಾನಕ್ಕಾಗಿ ಮುಚ್ಚಿದಾಗ ಪ್ರಾಯಶಃ ಮೊದಲ ಕೆಲವು ದಿನಗಳ ರಜೆಯನ್ನು ಮಕ್ಕಳು ಆನಂದಿಸಿರಬಹುದು. ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳು ತೇರ್ಗಡೆಯಾದಾಗ ಸಂತಸಗೊಂಡ ಮಕ್ಕಳು ಮುಂದೆ ತಾವು ಕಳೆದುಕೊಂಡ ಹಾಗೂ ಕಳೆದುಕೊಳ್ಳುವ ಶಾಲಾ ಚಟುವಟಿಕೆಗಳಿಗಾಗಿ ಪರಿತಪಿಸಿದ್ದಂತೂ ಸತ್ಯ. ಕೊರೊನಾದ ರೂಪಾಂತರಿ ವೈರಸ್‌ ಹಾಗೂ ಸಮುದಾಯ ಮಟ್ಟದಲ್ಲಿ ಹರಡುವಿಕೆ ಶಾಲಾ ಪುನರಾರಂಭದ ಬಗ್ಗೆ ಹೆಚ್ಚಿನ ಅನಿಶ್ಚಿತತೆಯನ್ನು ಮೂಡಿಸಿದೆ.

Advertisement

ಆದರೂ ಸರಕಾರ ಜುಲೈಯಿಂದ ಶೈಕ್ಷಣಿಕ ವರ್ಷವನ್ನು ಆರಂಭಿಸಲು ನಿರ್ಧರಿಸಿ ಈಗಾಗಲೇ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೂ ಈ ಬಾರಿಯೂ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳು ನಡೆಯುವುದು ಅನಿಶ್ಚತವೇ.
ಕಳೆದ ಬಾರಿ ಶಾಲಾ ಕಾಲೇಜುಗಳನ್ನು ಮುಚ್ಚಿದ ಅನಂತರ ಮಕ್ಕಳು ಸಹಜವಾಗಿ ತಮ್ಮ ಬೆಳವಣಿಗೆಗೆ ಇದ್ದಂತಹ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕವು ಶೈಕ್ಷಣಿಕ ಸಮುದಾಯವನ್ನು ಸಾಂಪ್ರದಾಯಿಕ ಶಾಲಾ ಬೋಧನ ವ್ಯವಸ್ಥೆಯಿಂದ ದೂರ ಉಳಿಯುವಂತೆ ಮತ್ತು ಆನ್‌ಲೈನ್‌ ಬೋಧನ ವಿಧಾನಗಳತ್ತ ಗಮನ ಹರಿಸುವಂತೆ ಮಾಡಿದೆ.

ಅನಿವಾರ್ಯವಾದ ವರದಾನ
ಕಂಪ್ಯೂಟರ್‌ ಅಥವಾ ಮೊಬೈಲ್‌ ಆಕರ್ಷಣೆಗೆ ಒಳಗಾಗಿರುವ ಯುವ ಸಮುದಾಯಕ್ಕೆ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ವ್ಯವಸ್ಥೆಯಾಗಿ ಆನ್‌ಲೈನ್‌ ಬೋಧನೆ ಮತ್ತು ಕಲಿಕೆ ಬೆಳೆದು ಬರುತ್ತಿದೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಲಿರುವ ಭಾಗಶಃ ಆನ್‌ಲೈನ್‌ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆ ಮಾನವ ಸಂಪನ್ಮೂಲ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯವೂ ಹೌದು. ಕೈಯಲ್ಲಿರುವ ಮೊಬೈಲ್‌ ಅಗತ್ಯ ಜ್ಞಾನ ಪಡೆದುಕೊಳ್ಳುವ ಸಾಧನವಾದಾಗ ಸುಲಭವಾಗಿ ಲಭ್ಯವಿರುವ ಅಗಾಧ ಜ್ಞಾನಸಂಪತ್ತು ಯುವಜನತೆಯ ಬೆಳವಣಿಗೆಗೆ ಪೂರಕವಾಗುತ್ತದೆ.

ವಿದ್ಯಾರ್ಥಿಗಳ ಪಾತ್ರ ಅನನ್ಯ
ಹೊಸ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ಅವಗಣಿಸುವಂತಿಲ್ಲ. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಬೆಳೆಸಿಕೊಂಡು ಆನ್‌ಲೈನ್‌ ಕಲಿಕೆಯಲ್ಲಿ ಆಸಕ್ತಿ ವಹಿಸಿದಾಗ ಮಾತ್ರ ಈ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ. ಮಕ್ಕಳು ಆನ್‌ಲೈನ್‌ ಕಲಿಕೆಯ ಸಾಮಾನ್ಯ ಸವಾಲುಗಳನ್ನು ಗುರುತಿಸಿಕೊಂಡು ತಮ್ಮ ಮಟ್ಟದಲ್ಲಿ ಅಗತ್ಯ ಬದಲಾವಣೆಗಳನ್ನು ರೂಢಿಸಿಕೊಂಡಾಗ ಮಾತ್ರ ಬದಲಾದ ಪರಿಸ್ಥಿತಿಯಲ್ಲಿ ನವ ಪದ್ಧತಿ ಮುಂದಿನ ಕಲಿಕಾ ಪ್ರಗತಿಗೆ ನಾಂದಿಯಾಗಲಿದೆ.

ಸ್ವಯಂಪ್ರೇರಣೆ
ಮುಖಾಮುಖೀ ಕಲಿಕೆಗೆ ಒಗ್ಗಿಕೊಂಡ ನಾವು ಆನ್‌ಲೈನ್‌ ಕಲಿಕೆಯ ಆರಂಭಿಕ ಅಡಚಣೆಗಳಿಂದ ಭರವಸೆ ಕಳೆದುಕೊಳ್ಳುವತ್ತ ಸಾಗುತ್ತೇವೆ. ಪ್ರೇರಣೆಯ ಕೊರತೆ ಎಲ್ಲ ವಿದ್ಯಾರ್ಥಿಗಳಿಗೆ ಸಾಮಾನ್ಯ ಸವಾಲಾಗಿದೆ. ನಿಗದಿತ ವೇಳಾಪಟ್ಟಿ ಅಥವಾ ದಿನಚರಿ ಇಲ್ಲದೆ ಮಕ್ಕಳು ಕಲಿಕೆಯನ್ನು ಮುಂದೂಡುವ ಪ್ರಲೋಭನೆಗೆ ಒಳಗಾಗುತ್ತಾರೆ. ಬೋಧಕರೊಂದಿಗೆ ಅಥವಾ ಸಹಪಾಠಿಗಳೊಂದಿಗೆ ಸಾಂಪ್ರದಾಯಿಕವಾದ ರೀತಿ ಯಲ್ಲಿ ವೈಯಕ್ತಿಕ ಸಂವಹನಗಳಿಲ್ಲದೆ ಇರುವುದು ಕೂಡ ಇದಕ್ಕೆ ಮುಖ್ಯ ಕಾರಣ. ನಿಮ್ಮ ಆನ್‌ಲೈನ್‌ ತರಗತಿಗೆ ಪ್ರತೀದಿನ ಲಾಗ್‌ ಇನ್‌ ಆಗಿ ಎಲ್ಲ ತರಗತಿಗಳಲ್ಲಿ ಭಾಗವಹಿಸಿ ಮತ್ತು ಚರ್ಚೆಗಳಲ್ಲಿ ಕಾಣಿಸಿಕೊಳ್ಳಿ. ಮಾಹಿತಿಯನ್ನು ಕೇಳಲು ಹಾಗೂ ಹಂಚಿಕೊಳ್ಳಲು ನಿಮ್ಮ ಸಹಪಾಠಿ ಹಾಗೂ ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಿ. ಕಲಿಕೆಗೆ ವೇಳಾಪಟ್ಟಿಯನ್ನು ಸಿದ್ಧಮಾಡಿಟ್ಟುಕೊಳ್ಳಿ, ವಿರಾಮ ತೆಗೆದುಕೊಂಡು ಅದೇ ಆಸಕ್ತಿ ಮತ್ತು ಉತ್ಸಾಹದಿಂದ ಕಲಿಕೆ ಪುನರಾರಂಭಿಸಿ.

Advertisement

ತಾಂತ್ರಿಕ ಸಮಸ್ಯೆಗಳು ನೆಪವಾಗದಿರಲಿ
ನೆನಪಿಡಿ-ಅಡಚಣೆಗಳತ್ತ ಗಮನ ಹರಿಸಿದರೆ ಅದರ ಪಟ್ಟಿಯೇ ಉದ್ದವಾಗುತ್ತಾ ಹೋಗುತ್ತದೆ. ಸಮಸ್ಯೆಯ ಭಾಗವಾಗುವುದು ಬೇಡ, ಪರಿಹಾರದ ಭಾಗವಾಗೋಣ. ಆನ್‌ಲೈನ್‌ನಲ್ಲಿ ಹಂಚಿಕೊಂಡ ಕಲಿಕಾ ಸಾಮಾಗ್ರಿಗಳನ್ನು ಸರಿಯಾಗಿ ಬಳಸಿಕೊಳ್ಳಿ.

ಸ್ವಕಲಿಕೆ
ಉತ್ತಮ ಕಕೆಯ ಫ‌ಲಿತಾಂಶಗಳಿಗಾಗಿ ಶ್ರಮ ಮತ್ತು ಸಮಯ ವಿನಿಯೋಗಿಸಿ. ಆನ್‌ಲೈನ್‌ ಕಲಿಕಾ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಕಾರ್ಯನಿರ್ವಹಣೆ ಮತ್ತು ಭಾಗವಹಿಸುವುದು ಮುಖ್ಯವಾಗುತ್ತದೆ. ಪ್ರತೀದಿನವೂ ಚಟುವಟಿಕೆಯ ಪಟ್ಟಿಗೆ ಬದ್ಧರಾಗಿರಿ. ಕಲಿಕಾ ಸಮಯದ ನಿರ್ವಹಣೆಯಲ್ಲಿ ಹೆತ್ತವರ, ಸ್ನೇಹಿತರ ಸಹಾಯ ಪಡೆಯಿರಿ. ಒಂದು ಸಮಯದಲ್ಲಿ ಒಂದೇ ಕಾರ್ಯವನ್ನು ಕೈಗೆತ್ತಿಕೊಳ್ಳಿ, ಅದು ನಿಮ್ಮ ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸುತ್ತದೆ.

ವ್ಯಾಕುಲತೆ
ಆನ್‌ಲೈನ್‌ ಕಲಿಕೆ ನಿಮಗೆ ಹೊಸತಾಗಿರುವುದರಿಂದ ಸಮಯ ನಿರ್ವಹಣೆ ಪ್ರಮುಖ ಪಾತ್ರವನ್ನು ವಹಿಸು ತ್ತದೆ. ನೀವು ನಿರೀಕ್ಷಿಸುವ ಶಾಲಾ ವಾತಾವರಣ ಮನೆಯಲ್ಲಿ ದೊರೆಯದು. ಇದರೊಂದಿಗೆ ಮನೆ ಯಲ್ಲಿ ಹಾಗೂ ಅಧ್ಯಾಪಕರ ನೇರ ದೃಷ್ಟಿಯಿರದೇ ಇರುವುದರಿಂದ ಸಹಜವಾಗಿ ಅನೇಕ ಆಕರ್ಷಣೆಗಳು ನಿಮ್ಮ ಕಲಿಕೆಯ ಮಟ್ಟವನ್ನು ಕುಗ್ಗಿಸಬಹುದು. ನಿಮ್ಮ ಹೆತ್ತವರ ಹಾಗೂ ಕುಟುಂಬದ ಇತರ ಸದಸ್ಯರ ಸಹಕಾರ ನಿಮ್ಮ ಕಲಿಕೆಗೆ ಪೂರಕ ಎಂಬುದು ನೆನಪಿರಲಿ.

ಕಲಿಕೆಯ ಶೈಲಿಗಳು
ವಿಭಿನ್ನ ಶೈಲಿಯ ಕಲಿಕೆಗೆ ಹೊಂದಿಕೊಳ್ಳಬೇಕಾದ ಅಗತ್ಯವಿದೆ. ಉತ್ತಮ ಫ‌ಲಿತಾಂಶವನ್ನು ಪಡೆಯಲು ಕಲಿಕೆಯ ಶೈಲಿಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸಂವಹನ, ಆಡಿಯೋ ತರಗತಿಗಳು, ದೃಶ್ಯ ಪ್ರಸ್ತುತಿಗಳು, ಲಿಖೀತ ಟಿಪ್ಪಣಿಗಳ ಮೂಲಕ ನೀವು ಕಲಿಯಬಹುದು.

ಸಂವಹನದ ಸವಾಲುಗಳು
ಹೊಸ ಮಾದರಿಯ ಕಲಿಕೆಯಿಂದಾಗಿ ತಮ್ಮ ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಸಂವಹನ ನಡೆಸಲು ನಾಚಿಕೆ ಪಡುವ ಹಲವು ವಿದ್ಯಾರ್ಥಿಗಳಿರುತ್ತಾರೆ. ಆಸಕ್ತಿ ಮತ್ತು ತಾಂತ್ರಿಕ ಕೌಶಲಗಳ ಕೊರತೆ, ಲೈವ್‌ ಚಾಟ್‌, ಇಮೇಲ್‌ ಮೂಲಕ ತಮ್ಮನ್ನು ವ್ಯಕ್ತಪಡಿಸಲು ಹಿಂಜರಿಕೆ ಮೊದಲಾದ ಸಣ್ಣಪುಟ್ಟ ಸಮಸ್ಯೆಗಳನ್ನು ಗುರುತಿಸಿ ಹೊರಬರಲು ಪ್ರಯತ್ನಿಸಿ. ಆನ್‌ಲೈನ್‌ ಕಲಿಕೆ ಸಂವಹನ ನಡೆಸಲು ಉತ್ತಮ ವೇದಿಕೆ ಎಂಬುದು ನೆನಪಿರಲಿ.

ವರ್ಚುವಲ್‌ ಶಿಕ್ಷಣವು ಒಂದೆಡೆ ಬೋಧನೆ- ಕಲಿಕೆಯಲ್ಲಿ ನಿರಂತರತೆಯನ್ನು ಪ್ರತಿಪಾದಿಸುತ್ತದೆ. ಭವಿಷ್ಯದಲ್ಲಿ ಸಾಂಪ್ರದಾಯಿಕ ಶಾಲಾ ಶಿಕ್ಷಣದೊಂದಿಗೆ ಆನ್‌ಲೈನ್‌ ಶಿಕ್ಷಣವೂ ಸೇರಿಕೊಳ್ಳುವುದರಲ್ಲಿ ಸಂಶಯ ಇಲ್ಲ. ಶಾಲೆಗಳನ್ನು ಮುಚ್ಚಿದ ಅನಂತರ ಮಕ್ಕಳು ತಮ್ಮ ಬೌದ್ಧಿಕ ಬೆಳವಣಿಗೆಗೆ ಇದ್ದಂಥ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಶಿಕ್ಷಣ ಕಾರ್ಯಕ್ರಮವನ್ನು ಹೇಗೆ ವಿನ್ಯಾಸಗೊಳಿಸಬೇಕು ಎಂಬ ಬಗ್ಗೆ ಚಿಂತನ-ಮಂಥನ ನಡೆಯಲಿ ಹಾಗೂ ಮಕ್ಕಳ ಮನವು ಹೊಸ ಕಲಿಕೆಯತ್ತ ತೆರೆದುಕೊಳ್ಳುವಂತಾಗಬೇಕು.

ಎಚ್ಚರಿಕೆಯ ಹೆಜ್ಜೆ ಅಗತ್ಯ
ಅನಿವಾರ್ಯವಾಗಿ ಆನ್‌ಲೈನ್‌ ಬೋಧನ ವ್ಯವಸ್ಥೆ ನಮ್ಮ ಶಿಕ್ಷಣ ವ್ಯವಸ್ಥೆಯೊಳಗೆ ಪ್ರವೇಶವನ್ನು ಪಡೆದಿದೆ. ತೆರೆದುಕೊಂಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಷ್ಟೆ. ಎಲ್ಲ ಅಡಚಣೆಗಳ ನಡುವೆ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿಯಾಗಲಿರುವ ಪದ್ಧತಿಯ ಅಳವಡಿಕೆ ದಿಕ್ಕುತಪ್ಪದಂತೆ ಎಚ್ಚರಿಕೆಯ ಹೆಜ್ಜೆಯಿಡಬೇಕಾದುದು ಇಂದಿನ ಸಂಕ್ರಮಣ ಕಾಲದ ಧರ್ಮ.

– ಡಾ| ಎ.ಜಯಕುಮಾರ ಶೆಟ್ಟಿ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next