ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರು ಮತ್ತು ಪರ ಪ್ರತಿಭಟನಾಕಾರರ ನಡುವೆ ಕಳೆದ ಆದಿತ್ಯವಾರದಂದು ಸಣ್ಣದಾಗಿ ಪ್ರಾರಂಭಗೊಂಡ ಘರ್ಷಣೆ ವಿಕೋಪಕ್ಕೆ ತಿರುಗಿ ಒಟ್ಟು 20 ಜನರ ಪ್ರಾಣಕ್ಕೆ ಎರವಾಗಿದೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.
ಈ ನಡುವೆ ಪ್ರತಿಭಟನಾಕಾರರು ಬಸ್ಸು ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ರಾಜಕೀಯ ನಾಯಕರ ಸಹಿತ ಹಲವರು ಈ ವಿಡಿಯೋವನ್ನು ತಮ್ಮ ತಮ್ಮ ಅಕೌಂಟ್ ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಮತ್ತು ದೆಹಲಿ ದಂಗೆಯ ಸಂದರ್ಭದಲ್ಲಿ ನಿರ್ಧಿಷ್ಟ ಕೋಮಿಗೆ ಸೇರಿದ ಉದ್ರಿಕ್ತ ಪ್ರತಿಭಟನಾಕಾರರು ಈ ಕೃತ್ಯವನ್ನು ನಡೆಸುತ್ತಿದ್ದಾರೆ ಎಂಬ ಟಿಪ್ಪಣಿಯನ್ನೂ ಸಹ ಇದಕ್ಕೆ ನೀಡಿ ಶೇರ್ ಮಾಡಲಾಗತ್ತಿದೆ.
ಆದರೆ ಈ ವಿಡಿಯೋದ ಅಸಲಿಯತ್ತೇ ಬೇರೆ ಇದೆ. ವಾಸ್ತವವಾಗಿ ಇದು ಫೆಬ್ರವರಿ 18ರಂದು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದ್ದ ಘಟನೆಯ ವಿಡಿಯೋ ಆಗಿದ್ದು ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಕಾರೊಂದನ್ನು ಓವರ್ ಟೇಕ್ ಮಾಡುವ ಪ್ರಯತ್ನದಲ್ಲಿದ್ದಾಗ ಕೆಲವು ಕಿಡಿಗೇಡಿಗಳ ಗುಂಪು ಚಾಲಕನ ಮೇಲೆ ಹಲ್ಲೆ ನಡೆಸಿ ಬಸ್ಸಿಗೆ ಹಾನಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಲ್ಲೆ ತಡೆಯಲು ಬಂದ ಬಸ್ಸುನಿರ್ವಾಹಕನೂ ಸಹ ಗಾಯಗೊಂಡಿದ್ದಾನೆ. ಈ ಕುರಿತಾದ ವರದಿ ಮರಾಠಿ ಸುದ್ದಿ ವಾಹಿನಿಯಲ್ಲೂ ಪ್ರಸಾರವಾಗಿತ್ತುಮತ್ತು ಇಂಗ್ಲಿಷ್ ವೆಬ್ ಸೈಟ್ ಒಂದು ಇದರ ಫಾಲೋ ಅಪ್ ವರದಿಯನ್ನೂ ಮಾಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ 18 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
Related Articles
ಆದರೆ ಈ ವಿಡಿಯೋ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣ ಅಕೌಂಟ್ ಗಳಲ್ಲಿ ಹಾಕಿಕೊಂಡಿರುವ ಜಿತೇಂದ್ರ ಪ್ರತಾಪ್ ಸಿಂಗ್ ಎಂಬ ವ್ಯಕ್ತಿ, ‘ಶಾಂತಿದೂತರು ದೇಶದ ಅಭಿವೃದ್ಧಿಗೆ ಸಲ್ಲಿಸುತ್ತಿರುವ ಕೊಡುಗೆ’ ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಜಿತೇಂದ್ರ ಪ್ರತಾಪ್ ಸಿಂಗ್ ಅವರ ಪ್ರೊಫೈಲ್ ಚಿತ್ರದಲ್ಲಿ ಪ್ರಧಾನಿ ಮೋದಿ ಅವರ ಜೊತೆಗಿರುವ ಫೊಟೋ ಇದೆ.
ಈ ವಿಡಿಯೋವನ್ನು ಅರ್ವಿಲ್ ಶರ್ಮಾ ಎಂಬಾಕೆ ಟ್ವೀಟ್ ಮಾಡಿದ್ದು ಈಕೆಗೆ 16,400 ಫಾಲೊವರ್ಸ್ ಗಳಿದ್ದಾರೆ, ಇದೇ ಟ್ವೀಟನ್ನು ಕೇರಳ ಬಿಜೆಪಿ ನಾಯಕಿ ಶಿಲ್ಪಾ ನಾಯರ್ ಅವರು ರೀಟ್ವೀಟ್ ಮಾಡಿದ್ದಾರೆ.