Advertisement

ಸಲಗ

10:20 AM Jan 11, 2020 | mahesh |

ಅಲ್ಲಿ ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳು, ಸಿನಿಮಾದ ವಿವಿಧ ವಿಭಾಗದವರು, ಉದ್ಯಮಿಗಳು … ಹೀಗೆ ಎಲ್ಲರೂ ಒಟ್ಟಾಗಿ ಸೇರಿದ್ದರು. ಹೀಗೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಿದ್ದು “ಸಲಗ’. ದುನಿಯಾ ವಿಜಯ್‌ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರ ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಈಗಾಗಲೇ ಚಿತ್ರದ ಮೇಕಿಂಗ್‌ ವಿಡಿಯೋ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಈಗ ಚಿತ್ರದ ಹಾಡೊಂದು ಸದ್ದು ಮಾಡುತ್ತಿದೆ. ಅದು “ಸೂರಿಯಣ್ಣ …’. ಈ ಹಾಡಿನ ಬಿಡುಗಡೆ­ಗಾಗಿಯೇ ಎಲ್ಲಾ ಕ್ಷೇತ್ರದವರು ಒಟ್ಟಿಗೆ ಸೇರಿದ್ದರು.

Advertisement

ಕೆ.ಪಿ.ಶ್ರೀಕಾಂತ್‌ ನಿರ್ಮಾಣದ ಈ ಚಿತ್ರದ “ಸೂರಿಯಣ್ಣ ….’ ಹಾಡನ್ನು ನಟ ಶಿವರಾಜಕುಮಾರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. “ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ನಮ್ಮ ಕುಟುಂಬ ಸದಸ್ಯನಂತೆ. ಕುಟುಂಬ ಎಂದ ಮೇಲೆ ಯಾವತ್ತೂ ಪ್ರೀತಿಯಿಂದಲೇ ಇರೋಕ್ಕಾಗಲ್ಲ. ಸಣ್ಣಪುಟ್ಟ ಮನಸ್ತಾಪ, ಬೇಸರ ಆಗುತ್ತದೆ. ನಾನು ಕೂಡಾ ಸಾಕಷ್ಟು ಬಾರಿ ರೇಗಾಡಿದ್ದೇನೆ. ನಾನು ಇರೋದೇ ಹಾಗೆ. ಮನಸ್ಸಿನಲ್ಲಿ ಏನು ಬರುತ್ತೋ ಅದನ್ನು ನೇರವಾಗಿ ಹೇಳುತ್ತೇನೆ. ಈಗ ಶ್ರೀಕಾಂತ್‌ “ಸಲಗ’ ಮಾಡಿದ್ದಾರೆ. ಈ ಹಿಂದೆ “ಟಗರು’ ಮಾಡಿದ್ದರು. ಈ ತಂಡವನ್ನು ನೋಡಿದಾಗ ನನಗೆ “ಟಗರು’ ತಂಡವನ್ನು ನೋಡಿದಂತಾ­ಗುತ್ತದೆ. ಚಿತ್ರದ ಹಾಡು ಚೆನ್ನಾಗಿದೆ. ಸಂಗೀತ ನಿರ್ದೇಶಕ ಚರಣ್‌ ರಾಜ್‌ಗೆ ಒಳ್ಳೆಯ ಹಾಡುಗಳನ್ನು ಕೊಡುವ ಸಾಮರ್ಥ್ಯವಿದೆ. ದುನಿಯಾ ವಿಜಯ್‌ ಈಗ ನಿರ್ದೇಶನಕ್ಕೆ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದರು. ನಿರ್ಮಾಪಕ ಶ್ರೀಕಾಂತ್‌, ಶಿವರಾಜ ಕುಮಾರ್‌ ಅವರ ಸಹಕಾರ ನೆನೆಯುತ್ತಾ ಭಾವುಕರಾದರು. ವಿಜಯ್‌ ಚಿತ್ರದ ಬಗ್ಗೆ ಹೆಚ್ಚು ಮಾತನಾಡದೇ, ಸಿನಿಮಾ ಬಿಡುಗಡೆಯಾದ ಮೇಲೆ ಮಾತನಾಡುತ್ತೇನೆ ಎಂದರು. ಉಳಿದಂತೆ ಸಂಗೀತ ನಿರ್ದೇಶಕ ಚರಣ್‌ ರಾಜ್‌, ನಾಯಕಿ ಸಂಜನಾ, ಧನಂಜಯ್‌ ತಮ್ಮ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪೊಲೀಸ್‌ ಅಧಿಕಾರಿ ಕಮಲ್‌ಪಂತ್‌, ನಿವೃತ್ತ ಪೊಲೀಸ್‌ ಅಧಿಕಾರಿ ಓಂಪ್ರಕಾಶ್‌, ಮಾಜಿ ಸಂಸದ ಶಿವರಾಮೇಗೌಡ, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next