Advertisement

ಪಲ್ಲವಗೆರೆಗೆ ಬಸ್‌ ಸಂಚಾರ ಆರಂಭಿಸಲು ಗ್ರಾಮಸ್ಥರ ಮನವಿ

12:32 PM Jul 04, 2017 | |

ಚಿತ್ರದುರ್ಗ: ಪಲ್ಲವಗೆರೆ ಗ್ರಾಮಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಓಡಿಸುವಂತೆ ಹಾಗೂ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ಗ್ರಾಮಕ್ಕೆ ಯಾವುದೇ ಬಸ್‌ ಸೌಲಭ್ಯ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಚಳ್ಳಕೆರೆ-ಚಿತ್ರದುರ್ಗ ಮುಖ್ಯ ರಸ್ತೆಯಿಂದ 7-8 ಕಿಮೀ ಕಾಲ್ನಡಿಗೆಯಲ್ಲಿ ಕ್ರಮಿಸಬೇಕು. ಗ್ರಾಮದ ಶಾಲೆಗೆ ಮೂವರು ಶಿಕ್ಷಕಿಯರನ್ನು ನೇಮಕ ಮಾಡಲಾಗಿದ್ದು, ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಒಂಟಿಯಾಗಿ ಶಾಲೆಗೆ ಬರಲು ಕಷ್ಟವಾಗುತ್ತಿದೆ. ಆದ್ದರಿಂದ 
ಪುರುಷ ಶಿಕ್ಷಕರನ್ನು ನೇಮಕ ಮಾಡುವಂತೆ  ಒತ್ತಾಯಿಸಿದರು.

ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಇದ್ದು, 60-70 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕಿಯರು ಚಿತ್ರದುರ್ಗ ನಗರದಿಂದ ಗ್ರಾಮಕ್ಕೆ ಬರುತ್ತಾರೆ. ಬಸ್‌ ಸೌಲಭ್ಯ ಇಲ್ಲದಿರುವುದರಿಂದ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಆಗುತ್ತಿಲ್ಲ. ಇದರಿಂದ ಮಕ್ಕಳ ಪಾಠ ಪ್ರವಚನ, ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ ಎಂದು ಆತಂಕ
ವ್ಯಕ್ತಪಡಿಸಿದರು. 

ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು ತಾಲೂಕುಗಳಿಗೆ ಪಲ್ಲವಗೆರೆ ಗಡಿ ಗ್ರಾಮವಾಗಿದ್ದು ಮೂಲ ಸೌಲಭ್ಯದಿಂದ 
ವಂಚಿತವಾಗಿದೆ. ಗ್ರಾಮಕ್ಕೆ ಕೂಡಲೇ ಸಾರಿಗೆ ಸಂಸ್ಥೆಯ ಬಸ್‌ ಓಡಿಸಬೇಕು. ನರ್ಮ್ ಯೋಜನೆ ಅಡಿ ನಗರ ವ್ಯಾಪ್ತಿಯಿಂದ 20 ಕಿಮೀ ದೂರಕ್ಕೆ ಸಾರಿಗೆ ಬಸ್‌ಗಳು ಸಂಚರಿಸುವ ಅವಕಾಶವಿದ್ದರೂ ಸಾರಿಗೆ ಇಲಾಖೆ ಅ ಧಿಕಾರಿಗಳು ಆ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಆರೋಪಿಸಿದರು. ರೈತಸಂಘ ಹಾಗೂ ಹಸಿರು ಸೇನೆಯ ಗ್ರಾಮ ಶಾಖೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗ್ರಾಮ ಶಾಖೆಯ ಅಧ್ಯಕ್ಷ ಆರ್‌. ತಿಪ್ಪೇಸ್ವಾಮಿ, ಕಾರ್ಯದರ್ಶಿ 
ಬ್ರಹ್ಮಾನಂದ, ಲಕ್ಷ್ಮೀಕಾಂತ, ಕುಮಾರ್‌, ಕರಿಯಪ್ಪ, ತಿಪ್ಪೇಸ್ವಾಮಿ, ರಂಗಸ್ವಾಮಿ, ಭದ್ರಪ್ಪ, ರಂಗನಾಥ್‌, ಹನುಮಂತಪ್ಪ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ ಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next