Advertisement

ಮಹಿಳೆಯರು ಸದಾ ಸಬಲೆಯರು

05:20 PM Mar 09, 2020 | Naveen |

ವಿಜಯಪುರ: ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಂದು ಸ್ಥರದಲ್ಲಿ ಮಹಿಳೆ ಮುನ್ನಡೆ ಸಾಧಿಸಿದ್ದಾಳೆ. ಮಹಿಳೆಯ ಈ ಸಾಧನೆ ಹಿಂದೆ ಆಯಾ ಕುಟುಂಬಗಳ ಪುರುಷರ ಸಹಕಾರವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಪಂ ಕೃಷಿ-ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಪಾಟೀಲ ಅಭಿಪ್ರಾಯಪಟ್ಟರು.

Advertisement

ಹಿಟ್ನಳ್ಳಿ ಕೃಷಿ ಫಾರ್ಮ್ನಲ್ಲಿ ವಿಜಯಪುರ ಕೃಷಿ ವಿಜ್ಞಾನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಈಗಾಗಲೇ ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ. ಈ ಹಿಂದೆ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎಂದು ಭಾವಿಸುತ್ತಿದ್ದ ಕಾಲವಿತ್ತು. ವರದಕ್ಷಿಣೆ ಪಿಡುಗು ಈ ರೀತಿ ಮಾತಿಗೆ ಕಾರಣವಾಗಿತ್ತು. ಪರಿಣಾಮ ವಿಜ್ಞಾನ ಬೆಳೆದಂತೆ ಲಿಂಗಪತ್ತೆ, ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ ಇತ್ಯಾದಿ ಸಮಸ್ಯೆಗೆ ಕಾರಣವಾಯಿತು. ಆದರೆ ಬದಲಾಗುತ್ತಿರುವ ಸನ್ನಿವೇಶದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ದೀರ್ಘ‌ ಕಾಲದಿಂದ ನಿರಂತರ ಹೋರಾಟದ ಫಲವಾಗಿ ಇಂದಿನ ಮಹಿಳೆಗೆ ಹಲವು ಅವಕಾಶಗಳು ದಕ್ಕಿವೆ ಎಂದರು.

ಭಾರತೀಯರ ಮಟ್ಟಿಗೆ ಮಹಿಳೆಯರಿಗೆ ಸಂವಿಧಾನ ಬದ್ಧವಾದ ವಿಶೇಷ ಮೀಸಲಾತಿ ಸಿಕ್ಕಿದ್ದು, ಎಲ್ಲ ರಂಗಗಳಲ್ಲಿ ಮಹಿಳೆ ತನ್ನಲ್ಲಿರುವ ಪ್ರತಿಭೆ ಪ್ರದರ್ಶಿಸಲು ಸಹಕಾರಿ ಆಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಮಾನಸಿಕವಾಗಿ ಬಲಿಷ್ಟತೆ ಪಡೆಯುವಲ್ಲಿ ಸಹಕಾರಿ ಆಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಪ್ರೇಮಾ ಪಾಟೀಲ ಮಾತನಾಡಿ, 1977ರಲ್ಲಿ ವಿಶ್ವಾದ್ಯಂತ ಮಾ. 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು. ಮಹಿಳೆಯರನ್ನು ಎಲ್ಲ ಕ್ಷೇತ್ರಗಳಲ್ಲೂ ಮೇಲೆತ್ತಬೇಕು. ಪುರುಷರಷ್ಟೇ ಸಮಾನ ಅವಕಾಶ ನೀಡಿ, ಮಹಿಳೆ ಸಾಧನೆಯನ್ನೂ ಸಮಾಜ ಗುರುತಿಸಬೇಕು ಎಂಬ ಕಾರಣಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಈ ಆಚರಣೆ ಹಿಂದೆ ದೊಡ್ಡ ಹೋರಾಟವೇ ಇದೆ ಎಂದು ವಿವರಿಸಿದರು.

Advertisement

ಜಿಪಂ ಸದಸ್ಯೆ ಕವಿತಾ ರಾಠೊಡ ಮಾತನಾಡಿ, ಮಹಿಳೆ ತನಗೆ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಪ್ರಧಾನಿ, ರಾಷ್ಟ್ರಪತಿ, ರಕ್ಷಣಾಮಂತ್ರಿ ಹಾಗೂ ಹಣಕಾಸಿನ ಮಂತ್ರಿಯಂಥ ಉನ್ನತ ಹುದ್ದೆಗಳ ಮೂಲಕ ದೇಶದ ಆಡಳಿತ ಚುಕ್ಕಾಣಿ ಹಿಡಿದು, ಯಶಸ್ವಿಯಾಗಿ ನಡೆಸಿದ್ದಾರೆ. ಮತ್ತೂಂದೆಡೆ ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದು ಪುರುಷರ ಪ್ರೋತ್ಸಾಹ ಕೂಡ ಸ್ಮರಣಾರ್ಹ ಎಂದರು. ಅಧ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ| ಆರ್‌.ಬಿ. ಬೆಳ್ಳಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಎಲ್ಲ ರಂಗಳಗಳಂತೆ ಕೃಷಿ ರಂಗದಲ್ಲೂ ಅಪಾರ ಸಾಧನೆ ಮಾಡಿದ್ದಾಳೆ. ಕೃಷಿಯಲ್ಲಿ ಭೂಮಿ ಹದಗೊಳಿಸುವದರಿಂದ ಹಿಡಿದು, ಉಳುವುದು, ಬಿತ್ತುವ, ಕಳೆ ತೆಗೆಯುವ, ರಾಶಿ ಮಾಡುವ ಹಂತದವರೆಗೆ ಕೃಷಿಯಲ್ಲಿ ಪುರುಷರಿಗಿಂತ ಹೆಚ್ಚಿನ ಪರಿಶ್ರಮದ ಕೆಲಸ ಮಾಡುವುದೇ ಮಹಿಳೆ. ಇದನ್ನು ಗಮನಿಸಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ, ಯುವ ಕೃಷಿ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ವಿಜೇತ ತಾಜಪುರ ಗ್ರಾಮದ ಹಸೀನಾ ಬೇಗಂ ಗೌಸಫೀರ್‌ ಮೊಕಾಶಿ, ಯುವ ಕೃಷಿ ಮಹಿಳೆ ಭಾರತಿ ಶಿವಾನಂದ ವಿಜಯಪುರ, ಬಸವನಬಾಗೇವಾಡಿ ತಾಲೂಕಿನ ಯುವ ಕೃಷಿ ಮಹಿಳೆ ಲಕ್ಷ್ಮೀ ಅರವಿಂದ ಪಾಟೀಲ ಅವರನ್ನು  ಸನ್ಮಾನಿಸಲಾಯಿತು.

ಕೃಷಿ ಅ ಧಿಕಾರಿ ಬಸವರಾಜ ಬಿರಾದಾರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀದೇವಿ ಪೂಜಾರಿ, ಅನಿತಾ ಬಿರಾದಾರ, ಕೃಷಿ ವಿಜ್ಞಾನ ಕೇಂದ್ರದ ಡಾ| ಬಿ.ಸಿ.ಕೊಲ್ಹಾರ, ಮಲ್ಲಪ್ಪ, ಶ್ರೀಶೈಲ್‌ ರಾಠೊಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್‌.ಎ. ಬಿರಾದಾರ ಸ್ವಾಗತಿಸಿದರು. ಡಾ| ಸಂಗೀತಾ ಜಾಧವ ನಿರೂಪಿಸಿದರು. ಡಾ| ಶಿವಲಿಂಗಪ್ಪ ಹೊಟಕರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next