Advertisement

ಹಣ್ಣು -ತರಕಾರಿ ತಿಪ್ಪೆ ಪಾಲು!

12:29 PM Apr 10, 2020 | Naveen |

ವಿಜಯಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಶವೇ ಸ್ತಬ್ಧಗೊಂಡಿದ್ದು, ಕಳೆದ ಎರಡು ವಾರಗಳಿಂದ ಅನ್ನದಾತ ಕಂಗಾಲಾಗಿದ್ದಾನೆ. ಅದರಲ್ಲೂ ಕೊಯ್ಲಿಗೆ ಬಂದ ಮೇಲೆ ಬೇಗ ಕೆಟ್ಟುಹೋಗುವ ಹಣ್ಣು-ತರಕಾರಿ ಬೆಳೆಗಾರರು ಮುಕ್ತ ಮಾರುಕಟ್ಟೆ ಇಲ್ಲದೆ, ಅರೆ ಮಾರುಕಟ್ಟೆಯಲ್ಲಿ ಬೆಲೆಯೂ ಸಿಗದೇ ತಮ್ಮ ಬೆಳೆ ತಿಪ್ಪೆಗೆ ಎಸೆಯುವ ದುಸ್ಥಿತಿ ಬಂದೊದಗಿದೆ.

Advertisement

ವಿಜಯಪುರ ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಹಣ್ಣು-ತರಕಾರಿ ಪ್ರತ್ಯೇಕ ಮಾರುಕಟ್ಟೆಯಲ್ಲಿ 3-4 ದಿನಗಳಿಂದ ಹಣ್ಣು-ತರಕಾರಿ ಆವಕ ಆಗುತ್ತಿದೆ. ಆದರೆ, ತರಕಾರಿ, ಹಣ್ಣುಗಳ ಮೂಲ ಬಳಕೆ ಕೇಂದ್ರಗಳಾದ ಹೊಟೇಲ್‌, ಹಣ್ಣಿನ ಅಂಗಡಿ, ಜ್ಯೂಸ್‌ ಅಂಗಡಿಗಳು ಮದುವೆ, ಉತ್ಸವಗಳಂಥ ಎಲ್ಲ ವ್ಯವಸ್ಥೆಯೂ ಸ್ತಬ್ಧಗೊಂಡಿವೆ. ಹಣ್ಣು-ತರಕಾರಿ ಬೆಳೆ ಮಾರಾಟಕ್ಕೆ ಸಾಧ್ಯವಾಗದೆ ಅನ್ನದಾತ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.

ವಿಜಯಪುರ ಜಿಲ್ಲಾಡಳಿತ ತರಕಾರಿ ಹಾಗೂ ಹಣ್ಣು ಮಾರುಕಟ್ಟೆಗೆ ಅವಕಾಶ ನೀಡಿದ್ದರೂ, ಮಾರುಕಟ್ಟೆಯಲ್ಲಿ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿದೆ. ತೋಟಗಾರಿಕೆ ಕೆಲವು ಬೆಳೆಯನ್ನು ಕೊಳ್ಳುವವರಿಲ್ಲದೇ ಅನ್ನದಾತರು ತಮ್ಮ ಬೆಳೆಯನ್ನು ತಿಪ್ಪೆಗೆ ಚೆಲ್ಲಿ ಕಣ್ಣೀರು ಸುರಿಸುತ್ತ ಕುಳಿತಿದ್ದಾರೆ. ಮತ್ತೆ ಕೆಲ ನಿರ್ದಿಷ್ಟ ಹಣ್ಣು ಖರೀದಿಗೆ ಬೆಂಗಳೂರಿನಿಂದ ಬರಬೇಕಿದ್ದ ಖರೀದಿದಾರರಿಗೆ ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ.

ಇನ್ನು ಸೇಬು, ಅಂಜೂರದಂಥ ಕೆಲವು ಹಣ್ಣು ಬರಬೇಕಿರುವ ಮುಂಬೈ ಮಾರುಕಟ್ಟೆ ಮುಚ್ಚಿರುವ ಕಾರಣ ಅಲ್ಲಿಂದಲೂ ಹಣ್ಣುಗಳು ಬರುತ್ತಿಲ್ಲ. ಹಣ್ಣು-ತರಕಾರಿಯಂಥ ಅಗತ್ಯ ವಸ್ತುಗಳ ಸಾಗಾಟದ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಸರಕು ಸಾಗಾಣಿಕೆ ವಾಹನ ಸಂಚಾರ ವಾಸ್ತವಾಗಿ ಬಂದ್‌ ಆಗಿರುವ ಪರಿಣಾಮ ಮಾರುಕಟ್ಟೆಗೆ ನಿರೀಕ್ಷಿತ ಬೆಳೆ ಬಾರದೆ, ಖರೀದಿದಾರರೂ ಸಿಗದೇ ಸಗಟು ವ್ಯಾಪಾರಿಗಳೂ ಕಂಗಲಾಗಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಜ್ಯೂಸ್‌ ಅಂಗಡಿ ಹಾಗೂ ಹೋಟೆಲ್‌ಗ‌ಳಲ್ಲಿ ಹಣ್ಣು ಖರೀದಿಯಾದರು ಇತ್ತು. ಲಾಕ್‌ಡೌನ್‌ ಪರಿಣಾಮ ಅವೆಲ್ಲ ಮುಚ್ಚಿದ್ದು, ಹಣ್ಣು ಮಾರಲು ಕಿರು ಮಾರುಕಟ್ಟೆಯೂ ಇಲ್ಲದಂತಾಗಿದೆ. ಪರಿಣಾಮ ತಂದ ಬೆಳೆಯನ್ನು ಮರಳಿ ಒಯ್ಯುವ ಮಾತಿರಲಿ, ತಂದಿರುವ ವಾಹನದ ಬಾಡಿಗೆಯನ್ನೂ ಕೊಡಲೂ ಹಣವಿಲ್ಲದೇ ತಿಪ್ಪೆಗೆ ಚೆಲ್ಲಿ ರೈತರು ಕಣ್ಣೀರು ಹಾಕುತಿದ್ದಾರೆ.

Advertisement

ಇನ್ನು ತರಕಾರಿಗಳ ಮಾರುಕಟ್ಟೆ ಕಥೆಯೂ ಹೊರತಾಗಿಲ್ಲ. ಲಾಕ್‌ಡೌನ್‌ನಿಂದ ಮದುವೆ, ಜಾತ್ರೆ, ಉತ್ಸವ, ದಿಬ್ಬಣಗಳಂಥ ಎಲ್ಲ ಕಾರ್ಯಕ್ರಮಗಳಿಗೂ ಸರ್ಕಾರ ನಿರ್ಬಂಧ ಹೆರಿದ್ದು, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಮ್‌, ಟೋಮ್ಯಾಟೋ, ಬದನೆಕಾಯಿ, ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಮಾರಾಟಕ್ಕೆ ಅವಕಾಶ ಇದೆ ಎಂದು ಮಾರುಕಟ್ಟೆಗೆ ತಂದರೂ ಕೊಳ್ಳುವವರಿಲ್ಲದೇ ತರಕಾರಿಯನ್ನು ತಿಪ್ಪೆಗೆ ಸುರಿದು ಹೋಗುತ್ತಿರುವ ದೃಶ್ಯ ಮನ ಕಲುಕುವಂತಿದೆ. ಊರಿಗೆ ಮರಳಲೂ ಹಣ ಇಲ್ಲದ ರೈತರಿಗೆ ಮಧ್ಯವರ್ತಿ ವ್ಯಾಪಾರಿಗಳೇ ಹಣ ನೀಡಿ ಮನೆಗೆ ಕಳಿಸುತ್ತಿದ್ದಾರೆ. ಮತ್ತೆ ಕೆಲವು ರೈತರು ತಮ್ಮ ಹಣ್ಣು-ತರಕಾರಿಗೆ ನಾಳೆ, ನಾಡಿದ್ದು ಬೆಲೆ ಸಿಗುವ ವಿಶ್ವಾಸದಲ್ಲಿ ಮಧ್ಯವರ್ತಿಗಳ ಬಳಿಯೇ ಇರಿಸಿದ್ದ ಹಣ್ಣು-ತರಕಾರಿ ಕೊಳೆಯಲು ಆರಂಭಿಸಿದೆ.

ದುರ್ವಾಸನೆ ಹರಡಿಕೊಂಡಿದ್ದರಿಂದ ರೈತರ ಒಪ್ಪಿಗೆ ಪಡೆದು ತಿಪ್ಪೆಗೆ ಸುರಿಯುತ್ತಿದ್ದು, ಹಂದಿ, ಬಿಡಾಡಿ ದನಗಳ ಪಾಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಕೃತಿ ನಿರ್ಮಿತ ಅನಿರೀಕ್ಷಿತ ಈ ವಿಚಿತ್ರ ಸಂದರ್ಭದಲ್ಲಿ ಸರ್ಕಾರವನ್ನೂ ಹಳಿಯುವಂತಿಲ್ಲ, ಆಡಳಿತಗಾರರನ್ನು ದೂರುವಂತಿಲ್ಲ ಎನ್ನುವಂಥ ಸಂದಿಗ್ಧ ಸ್ಥಿತಿ ನಿರ್ಮಾವಾಗಿದೆ.

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next