Advertisement

ನೇಪಾಳದಲ್ಲಿ ಮಹಿಳೆಯರ ಕಲಾಕೃತಿ

10:49 AM Jun 08, 2019 | Naveen |

ವಿಜಯಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕುಂಚದಿಂದ ಬಿಡಿಸಿರುವ ಅಪರೂಪದ ಕಲಾಕೃತಿಗಳ ಪ್ರದರ್ಶನಕ್ಕೆ ಆಣಿಯಾಗಿರುವ ವಿಜಯಪುರ ಜಿಲ್ಲೆಯ ಐವರು ಚಿತ್ರ ಕಲಾವಿದೆಯರು ಬಸವನಾಡಿನ ಕೀರ್ತಿಯನ್ನು ವಿದೇಶದಲ್ಲಿ ಪಸರಿಸಲು ಮುಂದಾಗಿದ್ದಾರೆ.

Advertisement

ಚಿತ್ರಕಲೆಯಲ್ಲಿ ಮಹಿಳೆಯರು ನಿರೀಕ್ಷಿತ ಪ್ರಮಾಣದಲ್ಲಿ ತೊಡಗಿಸಿಕೊಳ್ಳದ ಕಾರಣ ಮಹಿಳೆಯರ ಚಿತ್ರಕಲಾ ಕೃತಿಗಳು ಪ್ರದರ್ಶನಗೊಳ್ಳುವುದು, ರಾಷ್ಟ್ರ-ಆಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಕಾಣುವುದು ಅಪರೂಪ. ಇಂತಹ ಸಂದರ್ಭದಲ್ಲಿ ಏಕ ಕಾಲಕ್ಕೆ ದ್ರಾಕ್ಷಿ ನಾಡಿನ ಐವರು ಚಿತ್ರ ಕಲಾವಿದೆಯರು ಅಕ್ರ್ಯಾಲಿಕ್‌ ಮಾಧ್ಯಮದಲ್ಲಿ ತಮ್ಮ ಕಲಾಕೃತಿಗಳ ಪ್ರತಿಭೆ ಪ್ರದರ್ಶನಕ್ಕೆ ನೇಪಾಳ ಹೊರಟಿದ್ದಾರೆ.

ಜೂನ್‌ 8ರಿಂದ ಐದು ದಿನಗಳ ಕಾಲ ಕಠ್ಮಂಡು ನಗರದ ನೇಪಾಳ ಆರ್ಟ ಕೌನ್ಸಿಲ್ ಗ್ಯಾಲರಿಯಲ್ಲಿ ಅಂತಾರಾಷ್ಟ್ರೀಯ ಸಮೂಹ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಈ ಕಲಾ ಪ್ರದರ್ಶನದಲ್ಲಿ ವಿಜಯಪುರ ಜಿಲ್ಲೆಯ ಐವರು ಮಹಿಳಾ ಕಲಾವಿದೆಯರು ಪಾಲ್ಗೊಳ್ಳುವ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ. ಏಕ ಕಲಾಕಕ್ಕೆ ಐವರು ಕಲಾವಿದೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶಕ್ಕಾಗಿ ಭಾಗವಹಿಸುವ ಮೂಲಕ ಜಿಲ್ಲೆಯ ಮಟ್ಟಿಗೆ ವಿಶಿಷ್ಟ ಸಾಧನೆ ಮಾಡಲಿದ್ದಾರೆ.

ಇದೀಗ ಇದೆಲ್ಲವನ್ನೂ ಮೀರಿ ವಿಜಯಪುರ ಜಿಲ್ಲೆ ಕಲಾವಿದೆಯರಾದ ಡಾ| ಶಶಿಕಲಾ ಹೂಗಾರ, ಡಾ| ಸುಚಿತ್ರಾ ಲಿಂಗ್ದಳ್ಳಿ, ರಾಜೇಶ್ವರಿ ಆಲಕುಂಟೆ, ದ್ರಾಕ್ಷಾಯಣಿ ಇಮ್ನದ ಹಾಗೂ ಕಾವೇರಿ ಪೂಜಾರಿ ಅವರು ವಿದೇಶಿ ಖ್ಯಾತನಾಮ ಕಲಾವಿದರೊಂದಿಗೆ ವಿದೇಶಿ ನೆಲದಲ್ಲಿ ತಮ್ಮ ಚಿತ್ರಕಲೆಯ ಪ್ರತಿಭೆ ಮೆರೆಯಲು ಮುಂದಾಗಿದ್ದಾರೆ.

ಈ ಕಲಾ ಪ್ರದರ್ಶನದಲ್ಲಿ ಡಾ| ಶಶಿಕಲಾ ಹೂಗಾರ ಅವರು ಕ್ಯಾನ್ವಸ್‌ ಮೇಲೆ ಅಕ್ರ್ಯಾಲಿಕ್‌ ಮಾಧ್ಯಮದಲ್ಲಿ ರಚಿಸಿರುವ ಅಮೂರ್ತ ಶೈಲಿಯ ಕಲಾಕೃತಿಗಳಲ್ಲಿ ಆಕಾಶದಲ್ಲಿನ ಮೋಡಗಳ ಚಲನ ವಲನಗಳ ತುಂಬಾ ವೈವಿದ್ಯಮಯ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

Advertisement

ಇನ್ನೋರ್ವ ಕಲಾವಿದೆ ಡಾ| ಸುಚಿತ್ರಾ ಲಿಂಗ್ದಳ್ಳಿ ಅವರು, ಅಕ್ರ್ಯಾಲಿಕ್‌ ಮಾಧ್ಯಮದಲ್ಲಿ ಆಧುನಿಕ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಕಡಿಮೆಯಾಗಿ, ಅಂತರ್ಜಾಲ ಪ್ರಭಾವ-ಪರಿಣಾಮದ ಹಾವಳಿಗೆ ಸಿಕ್ಕಿಕೊಂಡು ಯಾಂತ್ರೀಕರಣಗೊಳ್ಳುತ್ತಿರುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಿಂದ ದೃಶ್ಯಕಲಾ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಲಾವಿದೆ ರಾಜೇಶ್ವರಿ ಆಲಕುಂಟೆ ಹೆಣ್ಣಿನ ಸಕಾರಾತ್ಮಕ ಹಾಗೂ ನಕಾರಾತ್ಮಕ ಭಾವನೆಗಳನ್ನು ಅಕ್ರ್ಯಾಲಿಕ್‌ ಮಾಧ್ಯಮ ಬಳಸಿಕೊಂಡು, ಗರ್ಭ ಧರಿಸಿದ ಮಹಿಳೆ ತನ್ನ ಮಗುವಿನ ಭವಿಷ್ಯದ ಕುರಿತು ಕಾಣುವ ಕನಸುಗಳು, ಕಟ್ಟಿಕೊಳ್ಳುವ ಯೋಜನೆ, ಬಾಡಿಗೆ ತಾಯಿ, ಹೆಣ್ಣು ಮಗುವಿನ ಮಾರಾಟದಂತಹ ವಿಷಯಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಚಿತ್ರಕಲೆಯಲ್ಲಿ ಸ್ನಾತಕೋತರ ಪದವಿ ಪಡೆದಿರುವ ದ್ರಾಕ್ಷಾಯಣಿ ಇಮ್ನದ ಎಂಬ ಕಲಾವಿದೆ ಕೂಡ ಅಕ್ರ್ಯಾಲಿಕ್‌ ಮಾಧ್ಯಮದ ಮೂಲಕ ಹೆಣ್ಣು-ಗಂಡು ಪರಸ್ಪರ ಸಹಕಾರ ಮನೋಭಾದ ಮೂಲಕ ಬದುಕಿನ ಗುರಿ ಮುಟ್ಟುವ‌ ಸುಲಭ ಸಾಧ್ಯತೆಯನ್ನು ಕುದುರೆಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ರಚಿಸಿರುವ ಕಲಾಕೃತಿ ಆಕರ್ಷಣೆ ಹೊಂದಿದೆ.

ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳ ರಚನೆಯಲ್ಲಿ ಸೈ ಎನಿಸಿಕೊಂಡಿರುವ ಕಾವೇರಿ ಪೂಜಾರಿ ಕೂಡ ಅಕ್ರ್ಯಾಲಿಕ್‌ ಮಾಧ್ಯಮದಲ್ಲಿ ಸಾಧನೆ ಮಾಡಿದ ಕಲಾವಿದೆ. ಸ್ವಾರ್ಥಿ ಮನುಷ್ಯ ಗಗನಚುಂಬಿ ಮರಗಳನ್ನು ನಾಶ ಮಾಡಿ, ಆಕಾಶದ ಎತ್ತರಕ್ಕೆ ಕಾಂಕ್ರೀಟ್ ಕಾಡು ನಿರ್ಮಿಸಿಕೊಂಡು ತನ್ನ ಅವಸಾನವನ್ನು ತಾನೇ ತಂದುಕೊಂಡಿರುವ ಪ್ರಕೃತಿ-ಮನುಷ್ಯನ ಮಧ್ಯದ ಸಂಘರ್ಷವನ್ನು ಚಿತ್ರಿಸಿರುವ ಕೃತಿ ಪ್ರಸ್ತುತ ನಮ್ಮ ವ್ಯವಸ್ಥೆಗೆ ಕೈಗನ್ನಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next