Advertisement

ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಕ್ಕೆ ಸಿದ್ಧತೆ

12:46 PM Sep 23, 2019 | Naveen |

„ಜಿ.ಎಸ್‌. ಕಮತರ
ವಿಜಯಪುರ:
ಪಾರಂಪರಿಕ ನಗರಿ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ ಘೋಷಿಸಿರುವ ಪ್ರವಾಸಿ ವ್ಯಾಖ್ಯಾನ ಆರಂಭಕ್ಕೆ ಸಿದ್ಧತೆ ನಡೆದಿದೆ. ಗುಮ್ಮಟನಗರಿ ವಿಜಯಪುರ ನಗರದಲ್ಲಿರುವ ಐತಿಹಾಸಿಕ ಸ್ಮಾರಕ ಆನಂದ ಮಹಲ್‌ನಲ್ಲಿ ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಕ್ಕೆ ಈಗಾಗಲೇ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂದುಕೊಂಡಂತೆ ಎಲ್ಲವೂ ನಡೆದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು ನಿರ್ಮಾಣವಾಗಲಿದೆ.

Advertisement

ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ 2019ರ ಬಜೆಟ್‌ನಲ್ಲಿ ಘೋಷಿಸಿದ ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಕ್ಕೆ ಚಾಲನೆ ದೊರೆತಿದೆ. ಕರ್ನಾಟಕ ರಾಜ್ಯದ ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ತಜ್ಞರ ತಂಡ ಉದ್ದೇಶಿತ ಪ್ರವಾಸಿ ವ್ಯಾಖ್ಯಾನ ಕೇಂದ್ರ ಸ್ಥಳದಲ್ಲಿ ಸಮೀಕ್ಷೆ ನಡೆಸಿದೆ. ಉದ್ದೇಶಿತ ಯೋಜನೆ ಆರಂಭಿಸಲು ಜಿಲ್ಲಾಡಳಿತ ಆನಂದ ಮಹಲ್‌ ಸ್ಥಳ ಆಯ್ಕೆ ಮಾಡಿದ್ದು, ಮೈಸೂರಿನಲ್ಲಿರುವ ಕರ್ನಾಟಕ ಪ್ರಾಚ್ಯವಸ್ತು-ಸಂಗ್ರಹಾಲಯ ಪರಂಪರೆ ಇಲಾಖೆ ಆಯುಕ್ತ ಟಿ.ವೆಂಕಟೇಶ, ಪ್ರಭಾರಿ ಉಪ ನಿರ್ದೇಶಕ ವಾಸುದೇವ, ಸುವರ್ಣ ಸೇರಿದಂತೆ ಇತರೆ ತಜ್ಞರನ್ನು ಒಳಗೊಂಡ ತಂಡ ಆಗಸ್ಟ್‌ 27ರಂದು ವಿಜಯಪುರ ನಗರಕ್ಕೆ ಆಗಮಿಸಿ ಸ್ಥಳ ಸಮೀಕ್ಷೆ
ಮುಗಿಸಿದೆ.

ಇಬ್ರಾಹಿಂ ಆದಿಲ್‌ ಶಹಾನಿಂದ ನಿರ್ಮಾಣಗೊಂಡಿರುವ ಆನಂದ ಮಹಲ್‌ ಎರಡು ಮಹಡಿಯ ವಿಸ್ತಾರದ ಹಾಗೂ ಅತಿ ಉದ್ದ-ಅಗಲದ ಮೆಟ್ಟಿಲುಗಳ ಹಾಗೂ ಕಟ್ಟಡದ ಮೇಲ್ಭಾಗದಲ್ಲಿ ಶತಮಾನಗಳು ಉರುಳಿದರೂ ವಿರೂಪ ಮನಸ್ಥಿತಿ ಜನರ ವಿಕೃತಿ ಮಧ್ಯೆಯೂ ಅಲ್ಲಲ್ಲಿ ಅಚ್ಚಳಿಯದೇ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿರುವ ಅಪರೂಪದ ಹಾಗೂ ವಿಶಿಷ್ಟ ವಾಸ್ತು ಶೈಲಿಯ ಸ್ಮಾರಕ. ಆನಂದ ಮಹಲ್‌ ಸ್ಮಾರಕದಲ್ಲೇ ಉದ್ದೇಶಿತ ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಕ್ಕೆ ಸ್ಥಳ ಗುರುತಿಸಲಾಗಿದೆ. ಇಬ್ರಾಹೀಂ ಆದಿಲ್‌ ಶಾಹಿ ನಿರ್ಮಿತ ಈ ಐತಿಹಾಸಿಕ ಆನಂದ ಮಹಲ್‌ ಕಟ್ಟಡ ಸರ್ಕಾರಿ ಕಚೇರಿಗಳಿಂದ ಆತಿಕ್ರಮಣಕ್ಕೆ ಒಳಗಾಗಿ, ಹಾನಿಗೀಡಾಗಿದ್ದು, ನವೀಕರಣ ಅಗತ್ಯವಿದೆ. ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆಯಾಗಿರುವ ರಮೇಶ ಜಿಗಜಿಣಗಿ ಸಚಿವರಾಗಿದ್ದಾಗ ಈ ಕಟ್ಟಡದಲ್ಲೇ ತಮ್ಮ ಅಧಿಕೃತ ಸರ್ಕಾರಿ ಕಚೇರಿ ತೆರೆದಿದ್ದರು. ಕಳೆದ ಕೆಲವೇ ತಿಂಗಳ ಹಿಂದೆ ಆತನಂದ ಮಹಲ್‌ ಸ್ಮಾರಕದಿಂದ ಸರ್ಕಾರಿ ಪ್ರವಾಸಿ ಬಂಗಲೆಗೆ
ಸ್ಥಳಾಂತರಿಸಿದ್ದಾರೆ.

ಇದಷ್ಟೇ ಅಲ್ಲದೇ ಕೃಷಿ ಇಲಾಖೆಯೊಂದಿಗೆ ವಿಲೀನಗೊಳ್ಳುವ ಮುನ್ನ ಜಲಾನಯನ ಇಲಾಖೆ ಕಚೇರಿ ಇದೇ ಸ್ಮಾರಕದಲ್ಲಿತ್ತು. ಇದೇ ರೀತಿ ಇನ್ನೂ
ಹಲವು ಕಚೇರಿಗಳು ಆನಂದ ಮಹಲ್‌ ಸ್ಮಾರಕದಲ್ಲೇ ಇದ್ದು, ಈಚೆಗೆ ಅಲ್ಲಿಂದ ತೆರವಾಗಿದೆ. ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ
ಕಚೇರಿ ಕೂಡ ಈ ಸ್ಮಾರಕದಲ್ಲೇ ಇತ್ತು. ಅದು ಕೂಡ ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆಯ ನೂತನ ಪ್ಲಾಜಾ ಯೋಜನೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಆದರೆ ತೋಟಗಾರಿಕೆ ಇಲಾಖೆ ಕಚೇರಿ ಮಾತ್ರ ಇನ್ನೂ ಈ
ಸ್ಮಾರಕ ಆವರಣದಲ್ಲೇ ಇದೆ. ಹೀಗೆ ಸರ್ಕಾರಿ ಕಚೇರಿ ಸ್ಥಾಪನೆ ನೆಪದಲ್ಲಿ ಸರ್ಕಾರದಿಂದಲೇ ಈ ಸ್ಮಾರಕ ಒತ್ತುವರಿ ಪರಿಣಾಮ ನೈಜತೆ ಕಳೆದುಕೊಂಡಿದೆ. ಅದ್ಭುತ ಅನುಭವ ನೀಡುವ ವಾಸ್ತು ಶೈಲಿಯ ಈ ಕಟ್ಟಡದ ಬಣ್ಣ, ಗೋಡೆಗಳು
ಹಾಗೂ ಮೇಲ್ಭಾಗದ ಚಿತ್ತಾರಗಳು, ವಿಶಿಷ್ಟ ವಿನ್ಯಾಸದ ವಾಸ್ತು ವೈವಿಧ್ಯತೆಗಳು ಹಾಳಾಗಿವೆ.

ಕಳೆದ ಕೆಲವು ತಿಂಗಳಿಗೆ ಮೊದಲು ವಿವಿಧ ಗ್ರಾಮೀಣ ಭಾಗದ ಟಂಟಂ ಹಾಗೂ ಇತರೆ ಸಾರಿಗೆ ವ್ಯವಸ್ಥೆ ಆನಂದ ಮಹಲ್‌ ಸ್ಮಾರಕವೇ ಅನಧಿಕೃತ ನಿಲ್ದಾಣವೂ ಆಗಿತ್ತು. ಈ ಆವರಣದಲ್ಲೇ ಹಲವು ಕಡೆಗಳಲ್ಲಿ ನಧಿಕೃತವಾಗಿ ಟೆಂಟ್‌ ಹಾಕಿಕೊಂಡು ಹೊಟೇಲ್‌ಗ‌ಳೂ ನಡೆಯುತ್ತಿದ್ದವು. ಸರ್ಕಾರಿ ಕಚೇರಿಗಳು, ಅನಧಿಕೃತ ಹೊಟೇಲ್‌-ವಾಹನ ನಿಲ್ದಾಣ ಪರಿಣಾಮ ಸಾರ್ವಜನಿಕರ ಬೇಜವಬ್ದಾರಿ ವರ್ತನೆ ಫ‌ಲವಾಗಿ ಆನಂದ ಮಹಲ್‌ ಎಂಬ ಐತಿಹಾಸಿಕ ಅಪರೂಪದ ಪಾರಂಪರಿಕ ಸ್ಮಾರಕ ಅವಸಾನದ ಸ್ಥಿತಿಗೆ ತಲುಪಿತ್ತು. ಈ ಹಂತದಲ್ಲೇ ಇದರ ನವೀಕರಿಸಿ ಪ್ರವಾಸಿ ವ್ಯಾಖ್ಯಾನ ಕೇಂದ್ರ ತೆರೆಯುವ ಪ್ರಕ್ರಿಯೆ ಆರಂಭಗೊಂಡಿದೆ.

Advertisement

ಸರ್ಕಾರಕ್ಕೆ ಡಿಪಿಆರ್‌ ಸಲ್ಲಿಕೆ: ಸಮೀಕ್ಷೆ ನಡೆಸಿರುವ ಕರ್ನಾಟಕ ಪ್ರಾಚ್ಯವಸ್ತು-ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಅಧಿಕಾರಿಗಳು ಸ್ಮಾರಕಕ್ಕೆ ಐತಿಹಾಸಿಕ ಸ್ಮರ್ಶ ನೀಡಲು ಹಾಗೂ ಇಡಿ ಕಟ್ಟಡವನ್ನು ಮೂಲ ಸ್ವರೂಪಕ್ಕೆ ತರಲು 3.8 ಕೋಟಿ ರೂ. ಸಮಗ್ರ ಯೋಜನಾ ವರದಿಯನ್ನು ಹಾಗೂ ವ್ಯಾಖ್ಯಾನ ಕೇಂದ್ರ ಆರಂಭ ಸುತ್ತಲೂ ಸೂಕ್ತ ಭದ್ರತೆಗಾಗಿ ಕಾಂಪೌಂಡ್‌, ಸುಂದರ ಗಾರ್ಡನಿಂಗ್‌ ಮಾಡಲು ಸುಮಾರು 1.20 ಕೋಟಿ ರೂ. ಸಮಗ್ರ ವರದಿಯೂ ಸಿದ್ಧವಾಗಿದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇಲಾಖೆ ನಿರ್ದೇಶಕರಿಗೆ ಸಲ್ಲಿಕೆ ಆಗಿದೆ. ಸದರಿ ನವೀಕರಣ ಬಳಿಕ ಆನಂದ ಮಹಲ್‌ ಸ್ಮಾರಕ ಐತಿಹಾಸಿಕ ಮೂಲ ಸ್ವರೂಪ ಪಡೆಯಲಿದೆ.

ಐಎಚ್‌ಸಿಎನ್‌ನಿಂದ ಕೇಂದ್ರ ಸ್ವರೂಪ ನಿರ್ಧಾರ: ಆನಂದ ಮಹಲ್‌ ಪಾರಂಪರಿಕ ಮೂಲ ಸ್ವರೂಪ ಪಡೆದ ಬಳಿಕ ಈ ಸ್ಮಾರಕದಲ್ಲಿ ತಲೆ ಎತ್ತಲಿರುವ ಪ್ರವಾಸಿ ವ್ಯಾಖ್ಯಾನ ಕೇಂದ್ರದ ಸ್ವರೂಪ ಹಾಗೂ ಇತರೆ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಇಂಡಿಯನ್‌ ಹೆರಿಟೇಜ್‌ ಸಿಟಿ ನೆಟವರ್ಕ್‌ (ಐಎಚ್‌ಸಿಎನ್‌) ಸಂಸ್ಥೆಯ ತಜ್ಞರು ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಿದ್ದಾರೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನಾ ವರದಿ ರೂಪಿಸಲಿದ್ದಾರೆ. ಈ ಕುರಿತು ಪ್ರಕ್ರಿಯೆ ಕೂಡ ಆರಂಭಗೊಳ್ಳುವ ಸಾಧ್ಯತೆ ಇದ್ದು, ಈ ಕೆಲಸಕ್ಕೆ ಆಗತ್ಯವಾದ ಪ್ರತ್ಯೇಕ ಅಂದಾಜು ವೆಚ್ಚದ ಸಮಗ್ರ ಯೋಜನಾ ವರದಿಯನ್ನು ಈ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಲಿದೆ.

ಪ್ರವಾಸಿಗರಿಗೆ ಮಾಹಿತಿ ಕೇಂದ್ರ: ಉದ್ದೇಶಿತ ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಗೊಂಡರೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಮಾಹಿತಿ ಕೊರತೆಯಿಂದ ಬಳಲುವ ದುಸ್ಥಿತಿಗೆ ತೆರೆ ಬೀಳಲಿದೆ. ಆನಂದ ಮಹಲ್‌ನಲ್ಲಿ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಮಹತ್ವದ ಕುರಿತು ಸೂಕ್ತ ಮಾಹಿತಿ ದೊರೆಯಲಿದೆ. ರಸ್ತೆ, ರೈಲು ಹಾಗೂ ವಿಮಾನ ಯಾನ ಪ್ರಯಾಣಿಕರಿಗೆ ಟಿಕೇಟ್‌ ಕೌಂಟರ್‌ ಇರಲಿದೆ. ಸ್ಥಾನಿಕ ಆಹಾರ ಬೆಳೆಗಳು, ಬಳಕೆ ಕುರಿತು ಇಲ್ಲಿನ ಕೇಂದ್ರಗಳಲ್ಲಿ ಮಾಹಿತಿ ನೀಡುವ ಹಾಗೂ ಪ್ರವಾಸಿಗರಿಗೆ ಅದರ ರುಚಿ ಉಣಬಡಿಸುವ ಕೆಲಸವೂ ನಡೆಯಲಿದೆ.

ಇದಲ್ಲದೇ ವಿದೇಶಕ್ಕೆ ರಫ್ತು ಗುಣಮಟ್ಟದ ದ್ರಾಕ್ಷಿ, ದಾಳಿಂಬೆ, ಲಿಂಬೆ ಬೆಳೆಗಳಂಥ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ನೀಡುವ ವ್ಯವಸ್ಥೆಯೂ ಅಗಲಿದೆ.

ಇದರಿಂದ ಕೇವಲ ಪ್ರವಾಸಿ ಕೇಂದ್ರದ ಒಂದೇ ಸೂರಿನಲ್ಲಿ ಸಮಗ್ರ ವಿಜಯಪುರ ದರ್ಶನ ಹಾಗೂ ಪರಿಚಯ ಕಾರ್ಯವಾಗಲಿದೆ. ಇದರೊಂದಿಗೆ ಸೌಲಭ್ಯಗಳಿಲ್ಲದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕು ನರಳುತ್ತಿರುವ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಚೈತನ್ಯ ಬರುವ ನಿರೀಕ್ಷೆ ಇದೆ. ಸದರಿ ಯೋಜನೆ ಸಂರ್ಪೂ ಕಾರ್ಯಗತವಾಗಬೇಕು. ಈಗಾಲೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಆನಂದ ಮಹಲ್‌ ನವೀಕರಣ ಸಮಗ್ರ ಯೋಜನಾ ವರದಿಗೆ ಸರ್ಕಾರ ಸಮ್ಮತಿ ನೀಡಿ, ಅಗತ್ಯ ಪ್ರಮಾಣದ ಅನುದಾನ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next