Advertisement

Vijayapura; ಭ್ರೂಣಹತ್ಯೆ ಬಯಲಿಗೆ: ಇಬ್ಬರು ನರ್ಸ್ ಗಳ ಬಂಧನ

05:45 PM Feb 14, 2024 | Team Udayavani |

ವಿಜಯಪುರ : ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಭ್ರೂಣಹತ್ಯೆ ಕೃತ್ಯ ಬಯಲಾಗಿದ್ದು, ತೋಟದ ಮನೆಯಲ್ಲಿ ನರ್ಸ್ ಕಾನೂನು ಬಾಹಿರ ಈ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

Advertisement

ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಜಿಲ್ಲೆಗೆ ದಿಢೀರ್ ಪ್ರವಾಸ ಆರಂಭಿಸಿ, ಅನಿರೀಕ್ಷಿತ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದಾಗ ದುಷ್ಕೃತ್ಯ ಬಯಲಾಗಿದೆ.

ಜಿಲ್ಲೆಯ ಹುಲ್ಲುರು ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ನಡೆಯುವ ಕುರಿತು ಮಾಹಿತಿ ಬಂದಿದೆ. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಅನಿರೀಕ್ಷಿತ ದಾಳಿ ನಡೆಸಿದಾಗ ಭ್ರೂಣಹತ್ಯೆಯ ಕರಾಳ ಕೃತ್ಯ ಬಯಲಾಗಿದೆ.

ಸಿನಿಯರ್ ನರ್ಸ್ ಆಫೀಸರ್ ಸುಭದ್ರಾ ಎಂಬವರ ಹುಲ್ಲೂರು ಗ್ರಾಮದ ತೋಟದ ಮನೆಯಲ್ಲೇ ಗರ್ಭಪಾತ ದಂಧೆಯ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಭ್ರೂಣಹತ್ಯೆ ಕೃತ್ಯ ನಡೆಯತ್ತಿತ್ತು. ಈ ಕೃತ್ಯದಲ್ಲಿ ಸಾವಿತ್ರಿ ಎಂಬ ಇನ್ನೋರ್ವ ನರ್ಸ್ ಕೂಡ ಭಾಗಿಯಾಗಿರುವ ಅಂಶವೂ ಬಯಲಾಗಿದೆ.

ದಾಳಿಯ ವೇಳೆ ನರ್ಸ್ ಗೆ ಸೇರಿದ ತೋಟ ಮನೆಯನ್ನೆಲ್ಲ ಪರಿಶೀಲನೆ ನಡೆಸಿದ್ದು, ಮನೆ ಮಹಡಿ, ಮನೆ ಹಿತ್ತಲಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಸೇರಿದ ಔಷಧಿ, ಸಿರೆಂಜ್, ಸಲೈನ್ ಬಾಟಲ್ ಕಂಡು ಬಂದಿದ್ದು, ಕೃತ್ಯದ ಪರಿಸರದಲ್ಲಿನ ಪರಿಸ್ಥಿತಿ ಕಂಡು ಅಧಿಕಾರಿಗಳು ದಂಗಾಗಿದ್ದಾರೆ.

Advertisement

ಅಕ್ರಮವಾಗಿ ಭ್ರೂಣಹತ್ಯೆಯ ಕೃತ್ಯ ಬಯಲಾಗುತ್ತಲೇ ಜಿಲ್ಲೆಯ ಎಲ್ಲ ತಾಲೂಕಾಧಿಕಾರಿಗಳು, ಪಿಸಿಪಿಎನ್‌ಡಿಟಿ ಅಧಿಕಾಗಳ ತುರ್ತು ಸಭೆ ಕರೆಯುವಂತೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಭೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಭ್ರೂಣಹತ್ಯೆ ಕೃತ್ಯದ ಸ್ಥಳಕ್ಕೆ ದಾಳಿ ನಡೆಸುವ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಂಬಾರ, ತಾಲೂಕು ಆರೋಗ್ಯ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಘಟನೆಗೆ ಸಂಬಂಧಿಸಿದಂತೆ ಈಗಾಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನರ್ಸ್ ಗಳನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಭೆ ಉದಯವಾಣಿ ಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next