Advertisement

ದ್ರಾಕ್ಷಿ ನಾಡಿಗೆ ಹುಳಿ ಹಿಂಡಿದ ಬಜೆಟ್‌

01:29 PM Mar 06, 2020 | Naveen |

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಿದ ಏಳನೇ ಬಾರಿಯ ಬಜೆಟ್‌ನಲ್ಲಿ ಪ್ರವಾಸಿಗರ ಸ್ವರ್ಗ ಎನಿಸಿರುವ ದ್ರಾಕ್ಷಿನಾಡಿಗೆ ನಿ ರ್ದಿಷ್ಟವಾಗಿ ಏನೂ ದೊರೆಯದೇ ಬಜೆಟ್‌ ಹುಳಿ ಎನಿಸಿದೆ. ಪರಿಣಾಮ ಬಸವನಾಡು ಮತ್ತೂಮ್ಮೆ ರಾಜ್ಯ ಬಜೆಟ್‌ನ ಅವಕೃಪೆಗೆ ಪಾತ್ರವಾಗಿದೆ.

Advertisement

ರಾಜಕೀಯ ಸಂದಿಗ್ಧತೆಯ ಕಾರಣಕ್ಕೆ ವಿಜಯಪುರ ಜಿಲ್ಲೆಗೆ ಒಂದೇ ಒಂದು ಮಂತ್ರಿ ಭಾಗ್ಯ ಕಲ್ಪಿಸದ ಯಡಿಯೂರಪ್ಪ ಅವರು, ಬಜೆಟ್‌ನಲ್ಲಿ ಬಸವನಾಡಿಗೆ ವಿಶೇಷ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ನೀರಾವರಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮದಂತಹ ಪ್ರಮುಖ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡದೇ ಕಡೆಗಣಿಸಿರುವುದು ಜಿಲ್ಲೆಯ ಜನರಲ್ಲಿ ಆಕ್ರೋಶ ಹೊರ ಹಾಕುವಂತೆ ಮಾಡಿದೆ.

ಇನ್ನು ಉತ್ತರ ಕರ್ನಾಟಕ ಜೀವನಾಡಿ ಎನಿಸಿರುವ ಕೃಷ್ಣೆಯ ಮೇಲ್ದಂಡೆ ಯೋಜನೆ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ನಿ ರ್ದಿಷ್ಟ ಅನುದಾನ ಘೋಷಿಸದ ಕಾರಣ ಬಸವನಾಡಿನಲ್ಲಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪ್ರಮುಖವಾಗಿ ಚಾಲನೆ ಪಡೆದಿದ್ದ 9ಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳು ಅನುದಾನದ ಕೊರತೆ ಕಾರಣ ಅರ್ಧಕ್ಕೆ ನಿಂತಿವೆ.

ಹೀಗಾಗಿ ಸದರಿ ಯೋಜನೆ ಸಿ.ಎಂ. ಯಡಿಯೂರಪ್ಪ ಏನಾದರೂ ಕೊಡುಗೆ ನೀಡುತ್ತಾರೆ ಎಂಬ ಕನಸು ಹುಸಿಯಾಗಿಸಿದ್ದಾರೆ. ಸಿದ್ದು ಸರ್ಕಾರ ಪತನವಾಗಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂಧ ಮೈತ್ರಿ ಸರ್ಕಾರದಲ್ಲೂ ಜಿಲ್ಲೆಯ ನೀರಾವರಿಗೆ ವಿಶೇಷ ಅನುದಾನ ನೀಡದ ಕಾರಣ ಜಿಲ್ಲೆಯ ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದ ಯಡಿಯೂರಪ್ಪ ಬಜೆಟ್‌ ಕೂಡ ಕೃಷ್ಣೆಯನ್ನು ನಿರ್ಲಕ್ಷಿಸುವ ಮೂಲಕ ನಿರಾಸೆ ಮೂಡಿಸಿದೆ.

ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ನ್ಯಾಯಾಧಿಧೀಕರಣದ ಐತೀರ್ಪಿನಂತೆ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳುವುದು ಜರೂರಾಗಿದೆ. ಇದಕ್ಕಾಗಿ 519 ರಿಂದ 524 ಮೀಟರ್‌ ವರೆಗೆ ಗೇಟ್‌ ಅಳವಡಿಸುವ, ಅದರಿಂದ ಬಾಧಿತವಾಗುವ ಹಿನ್ನೀರಿನ ಮುಳುಗಡೆ ಪ್ರದೇಶ ಸಂತ್ರಸ್ತರಿಗೆ ಪರಿಹಾರ ನೀಡಿಕೆ, ಪುನರ್ವಸತಿ ಹಾಗೂ ಯೋಜನೆ ಕೈಗೆತ್ತಿಕೊಳ್ಳುವಂತಹ ಮಹತ್ವ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ ತೀವ್ರ ನಿರಾಸೆ ನೀಡಿದೆ.

Advertisement

ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಡಿಸಿದ್ದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕುರಿಗಾರರ ಅನುಕೂಲಕ್ಕೆ ಕುರಿ ರೋಗ ತಪಾಷಣಾ ಕೇಂದ್ರ ಸ್ಥಾಪನೆಯಾಗಿಲ್ಲ. ಕನಿಷ್ಟ ಹೊಸದಾಗಿ ಅಡಿಗಲ್ಲು ಹಾಕಿಸಿಕೊಂಡ ನಾಗರಬೆಟ್ಟ ಏತ ನೀರಾವರಿ ಯೋಜನೆಗೂ ಬಿಡಿಗಾಸು ನೀಡಿಲ್ಲ.

ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್‌ ದ್ರಾಕ್ಷಿ ಬೆಳಗಾರರು ಪ್ರಕೃತಿ ವಿಕೋಪ ಸೇರಿ ಹಲವು ಕಾರಣಗಳಿಂದ ನಿರಂತರ ನಷ್ಟ ಅನುಭವಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಾಡಿರುವ ಬಡ್ಡಿ ಸಹಿತ ಸಾಲಮನ್ನಾ ಮಾಡುವ ಭರವಸೆಯೂ ಕೈಗೂಡಿಲ್ಲ. ಕುಮಾರಸ್ವಾಮಿ ಅವರು ದ್ರಾಕ್ಷಿ-ದಾಳಿಂಬೆ ಬೆಳೆಗಾರರಿಗೆ ಘೋಷಿಸಿದ್ದ ಪ್ಯಾಕೇಜ್‌ ಭರವಸೆಗೂ ಕಾಸು ಕೊಡುವ ಮಾತನಾಡಿಲ್ಲ.

ಇನ್ನು ಪ್ರವಾಸಿಗರ ಸ್ವರ್ಗ ಎನಿಸಿರುವ ವಿಜಯಪುರ ಜಿಲ್ಲೆ ಪ್ರವಾಸೋದ್ಯಮ ಬಲವರ್ಧನೆಯಲ್ಲಿ ಸರ್ಕಾರದ ನಿರ್ಲಕ್ಷದ ಕಾರಣ ಹಿಂದುಳಿದ ಈ ಪ್ರದೇಶ ವಿಶ್ವದರ್ಜೆಯ ಪ್ರವಾಸಿ ತಾಣಗಳಿದ್ದರೂ ದೇಶ-ವಿದೇಶ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ವಿಶ್ವವಿಖ್ಯಾತ ಗೋಲಗುಮ್ಮಟ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದು ಸೇರಿದಂತೆ ನಮನೂರಾರು ಸ್ಮಾರಕಗಳಿರುವ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡದೇ ನಿರ್ಲಕ್ಷಿಸಿದ್ದಾರೆ ಎಂದು ಶಾಹಿ ನಾಡಿನ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಮತ್ತೂಂದೆಡೆ ರಾಜ್ಯದಲ್ಲೇ ಅತ್ಯ ಧಿಕ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ಕಾರಣಕ್ಕೆ ದ್ರಾಕ್ಷಿ ನಾಡು ಎಂದು ಹಿರಿಮೆ ತಂದುಕೊಟ್ಟಿರುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಸಂರಕ್ಷಣೆಗೆ ಶೈತ್ಯಾಗಾರಗಳು, ವೈನ್‌ ಪಾರ್ಕ್‌ ನಿರ್ಮಾಣದಂಥ ಬೇಡಿಕೆಗಳು ಈಡೇರಿಲ್ಲ. ಪ್ರಸಕ್ತ ವರ್ಷದಿಂದ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಸ್ಥಾಪನೆಯಂಥ ಬೇಡಿಕೆಗೆ ಚಕಾರ ತೆಗೆಯದೇ ದ್ರಾಕ್ಷಿ ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಪ್ರವಾಸೋದ್ಯಮ ಹಾಗೂ ರಫ್ತು  ಗುಣಮಟ್ಟದ ತೋಟಗಾರಿಕೆ ಬೆಳೆ ಬೆಳೆಯುವ ಜಿಲ್ಲೆಯಲ್ಲಿ ದಶಕದ ಹಿಂದೆ ತಾವೇ ಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ನೀಡಿಕೆಗೆ ನಿರ್ಧಿಷ್ಟವಾಗಿ ಚಕಾರ ಎತ್ತಿಲ್ಲ. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಬೇಡಿಕೆಗೆ ಸ್ಪಂದಿಸಿಲ್ಲ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎನಿಸಿರುವ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸಬಲೀಕರಣಕ್ಕೆ ಏನನ್ನೂ ನೀಡಿಲ್ಲ.

ಹೀಗೆ ನೂರಾರು ಕನಸು ಕಟ್ಟಿಕೊಂಡಿದ್ದ ವಿಜಯಪುರ ಜಿಲ್ಲೆಗೆ ಒಂದೇ ಒಂದು ನಿರ್ಧಿಷ್ಟ ಯೋಜನೆಯನ್ನು ಘೋಷಿಸದ ಹಾಗೂ ಈ ಹಿಂದೆ ಘೋಷಿತವಾಗಿ ಅನುದಾನಕ್ಕೆ ಕಾಯುತ್ತಿರುವ ಯಾವ ಯೋಜನೆಗಳಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿಲ್ಲ. ಅಷ್ಟರ ಮಟ್ಟಿಗೆ ಕುಂತಿ ಮಕ್ಕಳಿಗೆ ಪಟ್ಟವಿಲ್ಲ ಎಂಬ ಮಾತಿನಂತೆ ವಿಜಯಪುರ ಜಿಲ್ಲೆಯ ಜನರಿಗೆ ಬಜೆಟ್‌ನಲ್ಲಿ ಏನೂ ಗಿಟ್ಟದಾಗಿದೆ.

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next