Advertisement

ವಿಜಯಪುರ: ಹಳ್ಳಿಗಳಲ್ಲಿ ಶೇ.75 ಸೋಂಕಿತರು ಪತ್ತೆ

08:46 PM May 21, 2021 | Nagendra Trasi |

ವಿಜಯಪುರ: ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್‌-19 ಪ್ರಕರಣಗಳನ್ನು ತಗ್ಗಿಸಲು ಅನುಕೂಲವಾಗುವಂತೆ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ, ಪ್ರತಿ ಕುಟುಂಬ ಸದಸ್ಯರಲ್ಲಿ ಕೋವಿಡ್‌ ಲಕ್ಷಣ ಇರುವುದನ್ನು ಪತ್ತೆ ಹೆಚ್ಚಬೇಕು ಎಂದು ಜಿಲ್ಲಾ ಧಿಕಾರಿ ಪಿ.ಸುನೀಲಕುಮಾರ ಗ್ರಾಪಂ ವ್ಯಾಪ್ತಿಯ ಆರೋಗ್ಯ ಕಾರ್ಯಪಡೆ ಸಮಿತಿಗೆ ಸೂಚಿಸಿದರು.

Advertisement

ಗುರುವಾರ ವಿಜಯಪುರ ತಾಲೂಕಿನ ಗುಣಕಿ ಗ್ರಾಪಂ ಆವರಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಶೇ. 75 ಪ್ರಕರಣಗಳು ಹಳ್ಳಿಗಳಿಗರಲ್ಲೇ ಕಂಡು ಬರುತ್ತಿರುವ ಕಾರಣ ಗ್ರಾಮಾಂತರ ಪ್ರದೇಶದ ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಪ್ರತಿ ಗ್ರಾಪಂ ವ್ಯಾಪ್ತಿಯ ಮನೆ ಮನೆಗೆ ತೆರಳಿ ಪ್ರತಿ ಕುಟುಂಬದಲ್ಲಿ ಪ್ರತಿಯೊಬ್ಬರಲ್ಲೂ ಯಾವುದೇ ರೀತಿಯ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ ಹಾಗೂ ಕೋ ಮಾರಬೀಡ್‌ ಸೇರಿದಂತೆ ಬೇರೆ ಬೇರೆ ಅಪಾಯಕಾರಿ ಕಾಯಿಲೆ ಇದ್ದವರನ್ನು ಗುರುತಿಸಬೇಕು. ಅಲ್ಲದೇ ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಆದ್ಯತೆ ಮೇಲೆ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.

ಜನರ ಜೀವ ರಕ್ಷಣೆಯಲ್ಲಿ ತೊಡಗಿರುವ ತಾವು ಪ್ರತಿ ನಿತ್ಯ ಪ್ರತಿ ಕುಟುಂಬಗಳಲ್ಲಿ ಕೋವಿಡ್‌-19 ರೋಗ ಲಕ್ಷಣ ಉಳ್ಳವರ ಬಗ್ಗೆ ನಿಗಾ ಇಡಬೇಕು. ರೋಗ ಲಕ್ಷಣ ಕಂಡು ಬಂದ ತಕ್ಷಣ 7 ದಿನಗಳ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಉಸಿರಾಟ ತೊಂದರೆ ಹಾಗೂ ಕೋವಿಡ್‌ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಜನರು ಕೂಡ ಸ್ವಯಂಪ್ರೇರಿತವಾಗಿ ಚಿಕಿತ್ಸೆಗೆ ಒಳಪಡುವಂತೆ ಕರೆ ನೀಡಿದರು.

ರಕ್ತದಲ್ಲಿ ಆಮ್ಲಜನಕ ಕೊರತೆಯಿಂದ ಉಸಿರಾಟದ ತೊಂದರೆಯಾಗಲಿದೆ. ಇಂತಹ ಸಮಸ್ಯೆ ಇದ್ದವರು ತಕ್ಷಣ ಚಿಕಿತ್ಸೆಗೆ ಒಳಪಡುವ ಬಗ್ಗೆ ಕಾರ್ಯಪಡೆ ಸದಸ್ಯರು ಮನವರಿಕೆ ಮಾಡಬೇಕು. ಕೋವಿಡ್‌ ನಿಯಂತ್ರಣಕ್ಕಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ಕೂಡ ಇದರಲ್ಲಿ ಸೇರ್ಪಡೆ ಮಾಡಲಾಗಿದ್ದು. ಸಾರ್ವಜನಿಕರಲ್ಲಿ ಪರಿಣಾಮಕಾರಿ ಅರಿವು ಮೂಡಿಸುವಂತೆ ಸೂಚಿಸಿದರು.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ರೋಗಿಗಳ ಪ್ರಮಾಣ ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು.ಕೋವಿಡ್‌ ಮುಕ್ತಗೊಳಿಸಿದ ಗ್ರಾಪಂಗಳನ್ನು ಗುರುತಿಸಿ ಅವರಿಗೆ ಬಹುಮಾನ ನೀಡುವ ಸದುದ್ದೇಶ ಹೊಂದಲಾಗಿದ್ದು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್‌ ಮುಕ್ತ ಹಳ್ಳಿಗಳನ್ನಾಗಿ ಮಾಡಲು ಪ್ರಯತ್ನಿಸಬೇಕು. ಇತ್ತೀಚಿಗೆ ಗ್ರಾಮಗಳ ವ್ಯಾಪ್ತಿಯಲ್ಲಿ ಈ ರೋಗ ತೀವ್ರವಾಗಿ ಹರಡುತ್ತಿದ್ದು ಕಾರ್ಯ ಪಡೆಗಳು ಗಂಭೀರವಾಗಿ ಪರಿಗಣಿಸಿ ರೋಗ ಲಕ್ಷಣ ಉಳ್ಳವರನ್ನು ತಕ್ಷಣ ಪತ್ತೆ ಹಚ್ಚುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.

ಗುಣಕಿ ಗ್ರಾಪಂ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ ಆರ್‌ಎಂಪಿ ವೈದ್ಯರ ಪಟ್ಟಿ ಪಡೆದು ಡಿಎಚ್‌ಒಗೆ ಸಲ್ಲಿಸಬೇಕು. ನೋಂದಾಯಿತವಲ್ಲದ ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆ ನೀಡುತ್ತಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ 15 ದಿನಗಳಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆಗೆ ಒಳಪಡಿಸಿದ ರೋಗಿಗಳ ಹೆಸರು,ಮೊಬೈಲ್‌ ನಂಬರ್‌ ಮತ್ತು ವಿಳಾಸ ಸಂಗ್ರಹಕ್ಕೂ ಕಾರ್ಯಪಡೆ ಸದಸ್ಯರಿಗೆ ಸೂಚಿಸಿದರು.

ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಕೋವಿಡ್‌ ರೋಗಿಗಳ ಪರಿಣಾಮಕಾರಿ ಪತ್ತೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜೊತೆಯಲ್ಲಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರನ್ನು ಕಾರ್ಯಪಡೆಯಲ್ಲಿ ಸೇರಿಸಲಾಗಿದೆ ಎಂದರು. ಪ್ರತಿ ಹಳ್ಳಿಗಳಲ್ಲಿ ಕಳೆದ ಏಪ್ರಿಲ್‌ 1ರಿಂದ ಕೋವಿಡ್‌ ಸೋಂಕು ದೃಢಪಟ್ಟ ಹಾಗೂ ಮರಣಗಳ ಕುರಿತು ಕಾರ್ಯಪಡೆ ಸದಸ್ಯರು ಸಭೆಯ ಗಮನಕ್ಕೆ ತಂದರು. ತಾಪಂ ಇಒ ಬಿ.ಎಸ್‌. ರಾಠೊಡ, ಗ್ರಾಪಂ ಅಧ್ಯಕ್ಷೆ ಭಾಗ್ಯಶ್ರೀ ರಾಠೊಡ, ಪಿಡಿಒ ಎಸ್‌.ಐ. ಗದಗಿಮಠ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next