Advertisement

ಸಾಂಗ್‌ ರಿಲೀಸ್‌ ಮಾಡಿದ ‘ವಿಜಯಾನಂದ’ ಚಿತ್ರತಂಡ

03:24 PM Nov 08, 2022 | Team Udayavani |

ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ “ವಿಜಯಾನಂದ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರತಂಡ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ.

Advertisement

ಧನಂಜಯ್‌ ರಂಜನ್‌ ಸಾಹಿತ್ಯ, ಸಂಗೀತ ನಿರ್ದೇಶಕ ಗೋಪಿ ಸುಂದರ್‌ ಸಂಗೀತ ಸಂಯೋಜನೆ, ವಿಜಯ್‌ ಪ್ರಕಾಶ್‌ ಹಾಗೂ ಕೀರ್ತನಾ ವೈದ್ಯನಾಥನ್‌ ಕಂಠ ಸಿರಿಯಲ್ಲಿ ಮೂಡಿಬಂದಿರುವ “ಹಾಗೆ ಆದ ಆಲಿಂಗನ’ ಎಂಬ ಹಾಡು ಬಿಡುಗಡೆಯಾಗಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡನ್ನು ಹೊರತರಲಾಗಿದೆ. ಇಮ್ರಾನ್‌ ಸರ್ದಾರಿಯಾ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಸಂಕೇಶ್ವರ, “ನನ್ನ ಜೀವನಾಧಾರಿತ ಸಿನಿಮಾ ಮಾಡುವುದಾಗಿ ನಿರ್ದೇಶಕಿ ರಿಶಿಕಾ ಶರ್ಮಾ ಕೇಳಿದಾಗ, ಈ ಚಿಕ್ಕ ಹುಡಗಿ ಏನು ಮಾಡುತ್ತಾಳೆ ಅನಿಸಿತು. ಆದರೆ ಈಗ, ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಶಿಕಾ ಬಹಳ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನನ್ನ ಮಗ ಆನಂದ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾನು ಹದಿನೈದನೇ ವಯಸ್ಸಿಗೆ ಕೆಲಸ ಶುರು ಮಾಡಿದೆ. ಅಂದು ಒಂದು ಲಾರಿಯಿಂದ ಆರಂಭವಾದ ನನ್ನ ಉದ್ಯಮ, ಇಂದು ಬೃಹತ್ತಾಗಿ ಬೆಳೆದಿದೆ. ನನ್ನ ಹಿಂದಿನ ಶಕ್ತಿ ನನ್ನ ಪತ್ನಿ ಲಲಿತಾ ಎಂದರೆ ತಪ್ಪಾಗಲಾರದು. ಈ ಚಿತ್ರ ಮಾಡಬೇಕಾದರೆ ನಾನು ನಿರ್ದೇಶಕರಿಗೆ ಹೇಳಿದ್ದೆ, ನನ್ನ ಜೀವನ ಹೇಗಿತ್ತೂ ಹಾಗೆ ತೋರಿಸಬೇಕು. ಬೇರೆ ಏನು ಸೇರಿಸಬಾರದು ಅಂತ. ನಾನು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದೆನೋ, ನಾಯಕ ನಿಹಾಲ್‌ ಹಾಗೆ ಕಾಣುತ್ತಾರೆ. ನಾಯಕಿ ಸಿರಿ ಪ್ರಹ್ಲಾದ್‌ ಕೂಡ ನನ್ನ ಹೆಂಡತಿಯನ್ನೇ ಹೋಲುತ್ತಾರೆ. ಈ ಚಿತ್ರ ಯುವಕರಿಗೆ ಸ್ಫೂರ್ತಿಯಾಗಲಿ. ಡಿಸೆಂಬರ್‌ ಒಂಭತ್ತರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದರು ವಿಜಯ ಸಂಕೇಶ್ವರ.

ಕಾರ್ಯಕ್ರಮಕ್ಕೆ ನಟ ಶರಣ್‌, ನಟಿ ಹರ್ಷಿಕಾ ಪೂಣತ್ಛ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರ ಸಾಗಿ ಬಂದ ಬಗ್ಗೆ ನಿರ್ದೇಶಕಿ ರಿಶಿಕಾ ಶರ್ಮ ಮಾಹಿತಿ ನೀಡಿದರು. ಹಾಡುಗಳ ಬಗ್ಗೆ ಗೋಪಿ ಸುಂದರ್‌ ಮಾಹಿತಿ ನೀಡಿದರು. ಚಿತ್ರದ ಅನುಭವದ ಕುರಿತು ಕಲಾವಿದರಾದ, ನಾಯಕ ನಿಹಾಲ್‌, ನಾಯಕಿ ಸಿರಿ ಪ್ರಹ್ಲಾದ್‌, ಭರತ್‌ ಬೋಪ್ಪಣ್ಣ, ಅರ್ಚನಾ ಕೊಟ್ಟಿಗೆ, ರಾಜೇಶ್‌ ನಟರಂಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅನಂತನಾಗ್‌, ರವಿಚಂದ್ರನ್‌, ವಿನಯಾ ಪ್ರಸಾದ್‌, ಪ್ರಕಾಶ್‌ ಬೆಳವಾಡಿ, ರಮೇಶ್‌ ಭಟ್‌, ಶೈನ್‌ ಶೆಟ್ಟಿ, ದಯಾಳ್‌ ಪದ್ಮನಾಭನ್‌ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next