Advertisement

ಪಕ್ಷ ಬದಲಿಸುತ್ತಲೇ ಇರುತ್ತಾಳೆ ಜಯಲಕ್ಷ್ಮೀ : ವಿಜಯನಗರ 5 ಕ್ಷೇತ್ರಗಳು

12:52 AM Feb 22, 2023 | Team Udayavani |

ಹೊಸಪೇಟೆ: ಬಳ್ಳಾರಿಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿರುವ ವಿಜಯನಗರದಲ್ಲಿ ಐದು ಕ್ಷೇತ್ರಗಳಿವೆ. ಅಂದರೆ ಇಲ್ಲಿ ಹೊಸಪೇಟೆ, ಹೂವಿನಹಡಗಲಿ, ಕೂಡ್ಲಿಗಿ, ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಿವೆ. ಹಿಂದಿನಿಂದಲೂ ಇದ್ದ ಕೊಟ್ಟೂರು ಕ್ಷೇತ್ರ ಈಗ ಇಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು

Advertisement

ಹೊಸಪೇಟೆಗೆ ಬಂದು, ಬಡ ಸಾಮಾನ್ಯ ಕಾರ್ಯಕರ್ತ ಕೆ.ಗೂಡುಸಾಬ್‌ ಅವರ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದರು. ವಿಶೇಷವೆಂದರೆ ಈ ಗೂಡುಸಾಬ್‌ ಅವರ ಮಕ್ಕಳು ಇಂದೂ ಕೂಲಿ ಮಾಡಿಯೇ ಬದುಕುತ್ತಿದ್ದಾರೆ. ಇವರನ್ನು ಬಿಟ್ಟರೆ ಸಜ್ಜನ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಜನತಾಪರಿವಾರದ ಎಂ.ಪಿ. ಪ್ರಕಾಶ್‌ ಇದೇ ಜಿಲ್ಲೆಯವರು. ಇವರು ಹಡಗಲಿ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆ ಯಾಗಿದ್ದವರು. ಈಗ ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಪ್ರಭಾವವಿದೆ. ಹೊಸ ಜಿಲ್ಲೆಯ ಸ್ಥಾಪನೆಯಿಂದ ಹಿಡಿದು, ಹೊಸಪೇಟೆಯನ್ನು ಜಿಲ್ಲಾ ಕೇಂದ್ರ ಸ್ಥಾನ ಮಾಡಿಸಿಕೊಳ್ಳುವವರೆಗೆ ಪರಿಶ್ರಮ ಹಾಕಿದ್ದಾರೆ. ಅಲ್ಲದೆ ಇದೇ ಹೊಸಪೇಟೆಯಿಂದ ಸತತ ಮೂರು ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಇವರು, ಬಳಿಕ ಬಿಜೆಪಿಗೆ ಹೋಗಿ ಉಪಚುನಾವಣೆಯಲ್ಲಿ ಮತ್ತೆ ಜಯಗಳಿಸಿದ್ದರು.

ಹೊಸಪೇಟೆ
ದೇಶಕ್ಕೆ ಬಳ್ಳಾರಿ ಜಾಲಿಯನ್ನು ಪರಿಚಯಿಸಿದ್ದ ಆರ್‌.ನಾಗನಗೌಡ, ಮಾಜಿ ಪ್ರಧಾನಿ ದಿ| ಇಂದಿರಾಗಾಂಧಿ ಹೊಸಪೇಟೆಗೆ ಬಂದು ಪಕ್ಷದ ಸಾಮಾನ್ಯ ಬಡ ಕಾರ್ಯಕರ್ತ ಗೂಡುಸಾಬ್‌ನನ್ನು ನಿಲ್ಲಿಸಿ, ಪ್ರಚಾರ ಮಾಡಿ ಗೆಲ್ಲಿಸಿದ ಕ್ಷೇತ್ರ. ಅಲ್ಲದೇ ಜಿಲ್ಲೆಯಲ್ಲೇ ಮೊದಲ ಬಾರಿಗೆ 1994ರಲ್ಲಿ ಬಿಜೆಪಿ ಗೆದ್ದಿದ್ದ ಕ್ಷೇತ್ರವಿದು. 1957ರಲ್ಲಿ ಕಾಂಗ್ರೆಸ್‌ನಿಂದ ಆರ್‌. ನಾಗನಗೌಡ, 1962ರಲ್ಲಿ ಪಿಎಸ್‌ಪಿ ಪಕ್ಷದಿಂದ ಮುರಾರಿ ಕಮಲ ಜಯ ಗಳಿಸಿದ್ದರು. 1967ರಲ್ಲಿ ಕಾಂಗ್ರೆಸ್‌ನ ಆರ್‌. ನಾಗನಗೌಡ ಮರು ಆಯ್ಕೆಯಾದರು. 1972ರಲ್ಲಿ ಕಾಂಗ್ರೆಸ್‌ನಿಂದ ಬಿ. ಸತ್ಯನಾರಾಯಣ, 1978ರಲ್ಲಿ ಕಾಂಗ್ರೆಸ್‌ ಪಕ್ಷದ ಸಾಮಾನ್ಯ ಬಡ ಕಾರ್ಯಕರ್ತ ಕೆ.ಗೂಡುಸಾಬ್‌ (ಮಕ್ಕಳದ್ದು ಇಂದಿಗೂ ಕೂಲಿ ಕೆಲಸ)ರನ್ನು ನಿಲ್ಲಿಸಿ ಇಂದಿರಾ ಗಾಂಧಿಯವರೇ ಸ್ವತಃ ಬಂದು ಪ್ರಚಾರ ಮಾಡಿ ಗೆಲ್ಲಿಸಿದ್ದರು. 1983ಲ್ಲಿ ಕಾಂಗ್ರೆಸ್‌ನಿಂದ ಜಿ. ಶಂಕರಗೌಡ, 1985ರಲ್ಲಿ ಜೆಎನ್‌ಪಿಯಿಂದ ಭೀಮನೇನಿ ಕೊಂಡಯ್ಯ, 1989ರಲ್ಲಿ ಜನತಾದಳದಿಂದ ಗುಜ್ಜಲ ಹನುಮಂತಪ್ಪ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ. ಶಂಕರಗೌಡ, ಜಿಲ್ಲೆಯಲ್ಲೇ ಮೊದಲ ಗೆಲುವು ದಾಖಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ ಜಯಲಕ್ಷ್ಮೀ ಗುಜ್ಜಲ, 2004ರಲ್ಲಿ ಪಕ್ಷೇತರರಾಗಿ ಎಚ್‌.ಆರ್‌.ಗವಿಯಪ್ಪ ಜಯ ದಾಖಲಿಸಿದ್ದರು. ಬಳಿಕ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗಿ ಹೊಸಪೇಟೆ ವಿಜಯನಗರ ಕ್ಷೇತ್ರವಾಗಿ ಪರಿವರ್ತನೆಯಾಗಿದ್ದು, ಅಂದಿನಿಂದ ಈವರೆಗೆ (2008, 2013, 2018) ಹಾಲಿ ಶಾಸಕ ಬಿ.ಎಸ್‌.ಆನಂದ್‌ ಸಿಂಗ್‌ ಸತತವಾಗಿ ಆಯ್ಕೆಯಾಗುವ ಮೂಲ ಹ್ಯಾಟ್ರಿಕ್‌ ಗೆಲುವು (2019ರ ಉಪಚುನಾವಣೆ ಸೇರಿ) ದಾಖಲಿಸಿದ್ದಾರೆ.

ಕೂಡ್ಲಿಗಿ
1962ರಲ್ಲಿ ನಡೆದ ರಾಜ್ಯದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸದಾಗಿ ರಚನೆಯಾದ ಕೂಡ್ಲಿಗಿ ಕ್ಷೇತ್ರ ಎಸ್‌ಸಿಗೆ ಮೀಸಲಾಗಿದ್ದು, ವಿ.ನಾಗಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ್ದರು. ಅನಂತರ 2004ರವರೆಗೆ ಸಾಮಾನ್ಯಕ್ಕೆ ಮೀಸಲಾಯಿತು. 1967ರಲ್ಲಿ ಕಾಂಗ್ರೆಸ್‌ನ ಎಂ.ಎಂ.ಸದ್ಯೋಜಾತಪ್ಪ, 1972ರಲ್ಲಿ ಎನ್‌ಸಿಒ ಪಕ್ಷದ ಬಿ.ಎಸ್‌.ವೀರಭದ್ರಪ್ಪ, 1978ರಲ್ಲಿ ಕಾಂಗ್ರೆಸ್‌ನಿಂದ ಟಿ.ಸೋಮಪ್ಪ, 1983ರಲ್ಲಿ ಜನತಾಪರಿವಾರದಿಂದ ಕೆ.ಚನ್ನಬಸವನಗೌಡ ಗೆದ್ದಿದ್ದಾರೆ. ಅನಂತರ 1985, 1989ರಲ್ಲಿ ನಡೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಎನ್‌.ಟಿ.ಬೊಮ್ಮಣ್ಣ ಸತತವಾಗಿ ಕಾಂಗ್ರೆಸ್‌ನಿಂದ ಗೆಲುವು ದಾಖಲಿಸಿದ್ದಾರೆ. ಬಳಿಕ 1994ರಲ್ಲಿ ಜೆಡಿಎಸ್‌ನಿಂದ ಎನ್‌.ಎಂ.ನಬಿ, 1999ರಲ್ಲಿ ಶಿರಾಜ್‌ಶೇಖ್‌, 2004ರಲ್ಲಿ ಬಿಜೆಪಿಯಿಂದ ಅನಿಲ್‌ ಲಾಡ್‌ ಭರ್ಜರಿ ಜಯಗಳಿಸಿದ್ದರು. ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಎಸ್‌ಟಿಗೆ ಮೀಸಲಾದ ಕೂಡ್ಲಿಗಿ ಕ್ಷೇತ್ರದಿಂದ 2008ರಲ್ಲಿ ಬಿಜೆಪಿಯಿಂದ, 2013ರಲ್ಲಿ ಪಕ್ಷೇತರರಾಗಿ ಶಾಸಕ ನಾಗೇಂದ್ರ ಸತತ ಎರಡು ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2018ರಲ್ಲಿ ಎನ್‌.ವೈ.ಗೋಪಾಲಕೃಷ್ಣ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದಾರೆ.

ಹರಪನಹಳ್ಳಿ (ಎಸ್‌ಸಿ ಮೀಸಲು)
ಮೊದಲ ಚುನಾವಣೆಯಿಂದಲೇ 2004ರ ವರೆಗೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹರಪನಹಳ್ಳಿ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. 14 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್‌ ಗೆದ್ದರೆ, ಒಮ್ಮೆ ಪಿಎಸ್‌ಪಿ, ಒಮ್ಮೆ ಪಕ್ಷೇತರ, ಎರಡು ಬಾರಿ ಬಿಜೆಪಿ ಗೆಲುವು ದಾಖಲಿಸಿರುವುದು ಗಮನಾರ್ಹ. ಮೊದಲ ಚುನಾವಣೆ 1957ರಲ್ಲಿ ಪಿಎಸ್‌ಪಿ ಪಕ್ಷದ ಎಂ.ದಾನಪ್ಪ ಗೆದ್ದರೆ, ಕಾಂಗ್ರೆಸ್‌ ಪಕ್ಷದಿಂದ 1962ರಲ್ಲಿ ಸಿರಸಪ್ಪ ಇಜಾರಿ, 1967ರಲ್ಲಿ ವೈ.ನಾಯ್ಕ, 1972, 1978 ಎರಡು ಅವಧಿಗೆ ಡಿ.ನಾರಾಯಣದಾಸ್‌, ಅನಂತರದ 1983, 1985, 1989 ಸತತ ಮೂರು ಅವಗೆ ಬಿ.ಎಚ್‌.ಯಂಕನಾಯ್ಕ ಅವರು ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್‌ನ ಡಿ. ನಾರಾಯಣದಾಸ್‌ 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಅನಂತರ ಕ್ಷೇತ್ರದಲ್ಲಿ ಪಿಟಿಪಿ ಪರ್ವ ಶುರುವಾಗಿದ್ದು, 1999, 2004ರಲ್ಲಿ ಎರಡು ಬಾರಿ ಪಿ.ಟಿ.ಪರಮೇಶ್ವರ ನಾಯ್ಕ ಗೆದ್ದಿದ್ದಾರೆ. ಬಳಿಕ ಕ್ಷೇತ್ರ ಮರು ವಿಂಗಡಣೆಯಿಂದಾಗಿ ಹರಪನಹಳ್ಳಿ ಸಾಮಾನ್ಯಕ್ಕೆ ಮೀಸಲಾಗಿ, 2008ರಲ್ಲಿ ಬಿಜೆಪಿಯಿಂದ ಜಿ. ಕರುಣಾಕರ ರೆಡ್ಡಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದರು. 2013ರಲ್ಲಿ ಎಂ.ಪಿ.ಪ್ರಕಾಶ್‌ ಪುತ್ರ ಎಂ.ಪಿ.ರವೀಂದ್ರ ಕಾಂಗ್ರೆಸ್‌ನಿಂದ ಗೆದ್ದರೆ, 2018ರಲ್ಲಿ ಬಿಜೆಪಿಯ ಜಿ.ಕರುಣಾಕರ ರೆಡ್ಡಿ ಮರು ಆಯ್ಕೆಯಾಗಿದ್ದಾರೆ.

Advertisement

ಹೂವಿನಹಡಗಲಿ
ಜಿಲ್ಲೆಯ ಮಲ್ಲಿಗೆ ನಾಡು ಖ್ಯಾತಿಯ ಹೂವಿನಹಡಗಲಿ ಬುದ್ಧಿವಂತ ಮತದಾರರ ಕ್ಷೇತ್ರ ಎಂದೂ ಪ್ರಸಿದ್ಧವಾಗಿದೆ. ಕಾರಣ, 1983, 1985ರಲ್ಲಿ ಸತತ ಎರಡು ಬಾರಿ ಸಜ್ಜನ ರಾಜಕಾರಣಿ ದಿ| ಎಂ.ಪಿ.ಪ್ರಕಾಶ್‌, 2013, 2018ರಲ್ಲಿ ಹಾಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ಹೊರತುಪಡಿಸಿದರೆ ಯಾರೊಬ್ಬರನ್ನೂ ಎರಡನೇ ಬಾರಿಗೆ ಗೆಲ್ಲಿಸಿಲ್ಲ. ಅಷ್ಟರ ಮಟ್ಟಿಗೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಾರೆ. ಮೊದಲ ಚುನಾವಣೆ 1957ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ಪಿ.ಮರಿಸ್ವಾಮಯ್ಯ, ಪಿಎಸ್‌ಪಿ ಪಕ್ಷದ ಅಂಗಡಿ ಚನ್ನಬಸಪ್ಪ ವಿರುದ್ಧ ಗೆದ್ದಿದ್ದರು. 1962ರಲ್ಲಿ ಇದೇ ಅಂಗಡಿ ಚನ್ನಪ್ಪ ಪಿಎಸ್‌ಪಿ ಪಕ್ಷದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ 1967ರಲ್ಲಿ ಎಸ್‌.ಎಂ.ಕೊಟ್ರಬಸಯ್ಯ, 1972ರಲ್ಲಿ ಸಿ.ಅಂದಾನಪ್ಪ, 1978ರಲ್ಲಿ ಕರಿಬಸನಗೌಡ ಕೋಗಳಿ (ಜೆಎನ್‌ಪಿ ಪಕ್ಷದ ಎಂ.ಪಿ.ಪ್ರಕಾಶ್‌ ವಿರುದ್ಧ) ಜಯ ಗಳಿಸಿದ್ದರು. 1978ರಲ್ಲಿ ಸೋತರೂ 1983ರಲ್ಲಿ ಜೆಎನ್‌ಪಿ ಪಕ್ಷದಿಂದ ಪುನಃ ಸ್ಪರ್ಧಿಸಿದ ಎಂ.ಪಿ.ಪ್ರಕಾಶ್‌ ಗೆಲ್ಲುವ ಮೂಲಕ ಕಾಂಗ್ರೆಸ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ್ದರು. 1985ರಲ್ಲಿ ಮರು ಆಯ್ಕೆಯಾಗಿದ್ದರು. 1989ರಲ್ಲಿ ಕಾಂಗ್ರೆಸ್‌ನ ಈ.ಟಿ.ಶಂಭುನಾಥ್‌, 1994ರಲ್ಲಿ ಜನತಾದಳ ಪಕ್ಷದಿಂದ ಎಂ.ಪಿ.ಪ್ರಕಾಶ್‌, 1999ರಲ್ಲಿ ಕಾಂಗ್ರೆಸ್‌ನಿಂದ ವಿ.ಬಿ.ಹಾಲಪ್ಪ, 2004ರಲ್ಲಿ ಪುನಃ ಜನತಾಳದಿಂದ ಎಂ.ಪಿ.ಪ್ರಕಾಶ್‌ ಆಯ್ಕೆಯಾಗಿದ್ದರು. ಹಡಗಲಿ ಕ್ಷೇತ್ರದಿಂದ ಎಂ.ಪಿ.ಪ್ರಕಾಶ್‌ ಅವರು ನಾಲ್ಕು ಬಾರಿ ಶಾಸಕರಾದ ಏಕೈಕ ವ್ಯಕ್ತಿಯಾಗಿದ್ದಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಹಡಗಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಯಿತು. 2008ರಲ್ಲಿ ಬಿಜೆಪಿಯ ಚಂದ್ರಾನಾಯ್ಕ, 2013, 2018ರಲ್ಲಿ ಸತತವಾಗಿ ಪಿ.ಟಿ.ಪರಮೇಶ್ವರ್‌ ನಾಯ್ಕ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹಗರಿಬೊಮ್ಮನಹಳ್ಳಿ (ಎಸ್‌ಸಿ ಮೀಸಲು)
ಕ್ಷೇತ್ರ ಮರುವಿಂಗಡಣೆಯಿಂದಾಗಿ 2008ರಿಂದ ಹೊಸದಾಗಿ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದು ಹಗರಿಬೊಮ್ಮನಹಳ್ಳಿ ಕ್ಷೇತ್ರ ಸದ್ಯ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲೇ ಬಿಜೆಪಿಯ ನೇಮಿರಾಜ್‌ ನಾಯ್ಕ ಗೆಲ್ಲುವ ಮೂಲಕ ಕಮಲವನ್ನು ಅರಳಿಸುತ್ತಾರಾದರೂ 2013, 2018ರಲ್ಲಿ ಎರಡು ಅವಧಿಗೆ ಹಾಲಿ ಶಾಸಕ ಭೀಮಾನಾಯ್ಕ ಅವರು ಒಮ್ಮೆ ಜೆಡಿಎಸ್‌, ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷದಿಂದ ಗೆಲುವು ದಾಖಲಿಸಿದ್ದಾರೆ.

ಕೊಟ್ಟೂರು(ಈಗ ಇಲ್ಲ)
1978ರಲ್ಲಿ ಮತ್ತೂಂದು ಹೊಸದಾಗಿ ರಚನೆಯಾಗಿದ್ದ ಕ್ಷೇತ್ರ ಕೊಟ್ಟೂರು. 2004ರವರೆಗೆ ಅಸ್ತಿತ್ವದಲ್ಲಿದ್ದ ಈ ಕ್ಷೇತ್ರ ಒಂದು ಉಪಚುನಾವಣೆ, 6 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿದ್ದು, ಮೊದಲೆರಡು ಅವಧಿಗಳನ್ನು ಬಿಟ್ಟರೆ, ಉಳಿದ ಐದು ಅವಧಿಯಲ್ಲಿ ಕೆ.ವಿ.ರವೀಂದ್ರನಾಥ ಬಾಬು, ಮರುಸಿದ್ದನಗೌಡರ ಕುಟುಂಬದವರೇ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. 1978ರಲ್ಲಿ ಎಂ.ಎಂ.ಜೆ.ಸದ್ಯೋಜಾತ ಕೊಟ್ಟೂರು ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಜನತಾ ಪರಿವಾರದ ಬಿ.ಎಸ್‌.ವೀರಭದ್ರಪ್ಪ ಗೆದ್ದಿದ್ದರು. 1985, 1989 ಎರಡು ಅವಧಿಗೆ ಸತತವಾಗಿ ಕೆ.ವಿ.ರವೀಂದ್ರನಾಥ ಬಾಬು ಕಾಂಗ್ರೆಸ್‌ನಿಂದ ಗೆಲುವು ದಾಖಲಿಸಿದ್ದಾರೆ. 1994ರಲ್ಲಿ ಟಿ.ಮರುಳಸಿದ್ದನಗೌಡ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದರಾದರೂ, ಇವರು ನಿಧನ ಹೊಂದಿದ ಹಿನ್ನೆಲೆಯಲ್ಲಿ 1998ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಭಾಗೀರಥಿ ಮರುಳಸಿದ್ದನಗೌಡ ಶಾಸಕರಾಗಿ ಆಯ್ಕೆಯಾಗಿದ್ದರು. 1999, 2004 ಎರಡು ಚುನಾವಣೆಗಳಲ್ಲೂ ಭಾಗೀರಥಿ ಮರು ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಿಂದಾಗಿ ಕ್ಷೇತ್ರವೇ ಹೋಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರವಾಗಿ ಪರಿವರ್ತನೆಯಾಗಿದೆ.

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next