Advertisement

ಓಲೆಗಳೊಡಲಲ್ಲಿ ವಿದ್ಯಾಪೋಷಕ್‌

06:30 AM Aug 11, 2017 | |

ನನಗಿನ್ನೂ ನೆನಪಿದೆ. ಆಗಷ್ಟೇ ನಮಗೆ ಪೆನ್ಸಿಲ್‌ನಿಂದ ಪೆನ್ನಿನತ್ತ ಪ್ರಮೋಷನ್‌ ಸಿಕ್ಕಿತ್ತು. ಅದಾಗಲೇ ತೀರ್ಥರೂಪರಿಗೆ, ತೀರ್ಥರೂಪ ಸಮಾನರಾದ, ಮಾನ್ಯರೇ ಎಂಬಂತಹ ಗೌರವಯುತವಾದ ಶ್ರೇಷ್ಠ ಶಬ್ದಗಳ ಪರಿಚಯವೂ ಆಗಿ ಹೋಯ್ತ. ಅದು ಪತ್ರ ಬರವಣಿಗೆಯ ಕಲಿಕೆಯಲ್ಲಿ ಮೊತ್ತಮೊದಲ ಹಂತ. ಆಗಂತೂ ನಮ್ಮ ಅರ್ಥದಲ್ಲಿ ಪತ್ರ ಬರವಣಿಗೆ ಅಂದ್ರೆ ದೂರದ ಅಜ್ಜಿ ಮನೆಯಲ್ಲೋ, ನೆಂಟರ ಮನೆಯಲ್ಲೋ ಇದ್ದು ಕಲಿವ ಮಕ್ಕಳು ತಂದೆತಾಯಿಗೆ ನೆನಪಿನ ವ್ಯಕ್ತರೂಪವಾಗಿ ಪತ್ರ ಬರೆದು ಕಳುಹಿಸುವುದು ರೂಢಿ ಎನ್ನುವ ನಂಬಿಕೆ. ಟೀಚರ್‌ ಬರೆಸಿದ್ದನ್ನು ಮಾತ್ರ ಅಚ್ಚುಕಟ್ಟಾಗಿ ಬರೆಯುತ್ತಿದ್ದೆವು ನಾವು. ಪತ್ರ ಬರವಣಿಗೆ ಅನ್ನೋದು ಆತ್ಮೀಯವಾದ ಸಂಗತಿ ಎನ್ನುವುದೇ ಅಂದು ನಮ್ಮ ಮನದಲ್ಲಿ. ಮುಂದೆ ತರಗತಿ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಈ ವೈಯಕ್ತಿಕ ಪತ್ರಗಳಿಗೂ ಭಿನ್ನವಾಗಿ ವ್ಯಾವಹರಿಕ ಪತ್ರಗಳಿವೆ ಎಂಬ ವಿಚಾರ ಮನದಟ್ಟಾದದ್ದು, “ಇನ್ನು ಮುಂದೆ ನಿಮ್ಮ ಸೀನಿಯರ್ ಹಾಗೆ ರಜೆ ಅರ್ಜಿ ಬರೆದು ಕ್ಲಾಸ್‌ ಟೀಚರ್‌ಗೆ ಒಪ್ಪಿಸಬೇಕು’ ಎಂದಾಗವಷ್ಟೇ.

Advertisement

ಈಗಂತೂ ಅದ್ಯಾವುದೇ ರೀತಿಯ ಪತ್ರವಿರಲಿ, ಸರಾಗವಾಗಿ ಬರೆಯಬಲ್ಲೆ. ಎಲ್ಲವೂ ವಿದ್ಯಾಪೋಷಕ್‌ ಕುಟುಂಬ ಕಲಿಸಿಕೊಟ್ಟ ವಿದ್ಯೆ. ಮೊದಮೊದಲಂತು ಓದುವವರು ಅದೇನು ಅಂದುಕೊಳ್ತಾರೋ ಏನೋ ಎಂಬ ಭಾವನೆ. ಅದೇನು ಬರೀಬೇಕು, ಬಿಡಬೇಕು ಒಂದೂ ಅರ್ಥ ಆಗ್ತಾ ಇರ್ಲಿಲ್ಲ, ಬರೆಯುವವರ ಮನದಲ್ಲಿ ಓದುವವರು, ಓದುವವರ ಮನದಲ್ಲಿ ಬರೆಯುವವರು ಸುಪ್ತವಾಗಿ ನೆಲೆಸಿರ್ತಾರೆ ಅನ್ನೋದು ತಾನಾಗಿಯೇ ಅರಿವಿಗೆ ಬಂದ ಸತ್ಯ.

ಪತ್ರ ರವಾನೆಯಲ್ಲಿ ಪೋಸ್ಟ್‌ಮ್ಯಾನ್‌ಗೆ ಎಂತಹ ಅನುಭವ ಸಿಗುತ್ತೋ ಗೊತ್ತಿಲ್ಲ. ಅಂತೂ ಇತ್ತ ಬರೆಯುವಾಗ ಓದುವವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಯೋಚನೆ, ಅತ್ತ ಓದುವಾಗ ಏನೆಂದು ಬರೆದಿರಬಹುದು ಎಂಬ ಯೋಚನೆ ಕುತೂಹಲಕಾರಿ ಎಂಬುದು ಸುಳ್ಳಲ್ಲ.

ಪರೀಕ್ಷೆಗಳಲ್ಲಿ ಕೇವಲ ಐದು ಮಾರ್ಕ್ಸ್ಗಳಿಗಾಗಿ ಪತ್ರ ಬರವಣೆಗೆ ಅಭ್ಯಸಿಸುತ್ತಿದ್ದ ನನಗೆ, ಅದು ನನ್ನ ಇಡೀ ವಿದ್ಯಾಭ್ಯಾಸ ಜೀವನದಲ್ಲಿ ಒಂದು ಪರಿಪಾಠವಾಗಿ, ನನ್ನನ್ನು ಭಾವನಾತ್ಮಕವಾಗಿ ಆವರಿಸಿ ಕೊಳ್ಳುತ್ತದೆ ಅನ್ನುವ ಪರಿಕಲ್ಪನೆಯೇ ಇರಲಿಲ್ಲ. ಇದು ಉಡುಪಿಯ ಯಕ್ಷಗಾನ ಕಲಾರಂಗ-ವಿದ್ಯಾಪೋಷಕ್‌ ಕುಟುಂಬ ಕಲಿಸಿಕೊಟ್ಟ ಕೃತಜ್ಞತಾ ಪ್ರಜ್ಞೆ.

2016ರ ಕಲಾಂತರಂಗ ಪುಸ್ತಕ ನನಗೆ ಓದಲು ಸಿಕ್ಕಿದ್ದು  ಆಕಸ್ಮಿಕ. ಸಂಸ್ಥೆಯ ನಲ್ವತ್ತೆರಡರ ಹರೆಯದ ಪುಸ್ತಕ ಓದಿ ಸಂಸ್ಥೆಯ ಕಾರ್ಯ ಚಟುವಟಿಕೆಯ ಬೆಳವಣಿಗೆ ನೋಡಿ ಮೂಕವಿಸ್ಮಿತಳಾದೆ. ನನ್ನ ಮಗಳು ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಎನ್ನುವುದಕ್ಕಿಂತ  ವಿದ್ಯಾಪೋಷಕ್‌ ವಿದ್ಯಾರ್ಥಿನಿ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ.
– ಜಿ. ಶಾರದಾ ಲಕ್ಷ್ಮಣ ದೇವಾಡಿಗ,
  ವಿದ್ಯಾಪೋಷಕ್‌ ವಿದ್ಯಾರ್ಥಿನಿ ಧರಣಿ (51/12)ಯ ತಾಯಿ

Advertisement

ಇಂಥ ಬರಹ ರೂಪದ ಮಾತುಗಳು ಉಡುಪಿಯ ವಿದ್ಯಾಪೋಷಕ್‌ನ ಕಚೇರಿಯಲ್ಲಿ ನನ್ನ ಓದಿಗೆ ಸಿಕ್ಕಾಗ ಅಶ್ಚರ್ಯ , ಸಂತೋಷ ಯಾವುದನ್ನು ವ್ಯಕ್ತಪಡಿಸಬೇಕೋ ತಿಳಿಯದೇ ಮೂಕವಿಸ್ಮಿ¾ತಳಾದೆ. ಪ್ರಥಮ ಪಿಯುಸಿಯ ನಂತರ ವಿದ್ಯಾಪೋಷಕ್‌ ವಿದ್ಯಾರ್ಥಿಯಾಗಿ ಆಯ್ಕೆಯಾದ ಮೇಲೆ ನಮ್ಮ ದಾನಿಗಳಿಗೆ ವರ್ಷಕ್ಕೆ ನಾಲ್ಕು ಪತ್ರ ಬರೆಯುವುದು  ಜವಾಬ್ದಾರಿಯಾಗಿರುತ್ತದೆ. ಅದು ಸಂಸ್ಥೆ ವಿಧಿಸುವ ನಿಯಮವೂ ಹೌದು. ವಿದ್ಯಾಪೋಷಕ್‌ ವಿದ್ಯಾರ್ಥಿಯಾಗಿ ನಮ್ಮ ಕಲಿಕೆಗೆ ಆಧಾರವಾಗಿ ನಿಲ್ಲುವ ಸಂಸ್ಥೆಯ ದಾನಿಗಳ ಮನವರಿತು, ಅವರ ಹಾಗೂ ಸಂಸ್ಥೆಯ ನಿಸ್ವಾರ್ಥ ನೆರವಿನ ಕುರಿತು ಪತ್ರದ ಮೂಲಕ ಧನ್ಯವಾದ ಸಲ್ಲಿಸುವುದು, ವಿದ್ಯಾಪೋಷಕ್‌ ಸಂಸ್ಥೆ ನಮ್ಮ ಏಳಿಗೆಯ ಕುರಿತು ಪ್ರತೀ ಹಂತದಲ್ಲೂ ತೆಗೆದುಕೊಳ್ಳುವ ಕಾಳಜಿ ಹೊತ್ತ ಕಾರ್ಯಕ್ರಮಗಳ ಬಗ್ಗೆ ದಾನಿಗಳಿಗೆ ವಿವರವಾದ ಮಾಹಿತಿ ತುಂಬಿರುವ, ಏಕಕಾಲದಲ್ಲಿಯೇ ಆ ಸೇವಾಭಾವದ ಮನಸ್ಸಿಗೆ ಸ್ಪಂದಿಸುವಂಥ ಹೃದಯ ಭಾಗವುಳ್ಳ ಪತ್ರ ಬರೆದು ಕಳುಹಿಸುವುದು ವಿದ್ಯಾರ್ಥಿವೇತನ ಪಡೆಯುವಲ್ಲಿ ಅತಿಮುಖ್ಯವಾದ ಹೊಣೆಗಾರಿಕೆ. ಹೀಗೆ ವಿದ್ಯಾಪೋಷಕ್‌ ವಿದ್ಯಾರ್ಥಿಗಳು ದಾನಿಗಳಗೆ ಬರೆದ  ಪತ್ರದ ಛಾಯಾಪ್ರತಿಯನ್ನು ಕಚೇರಿಗೆ ತಲುಪಿಸುವುದು ಸಾಮಾನ್ಯ. ಆದರೆ ಈ ಪತ್ರ ವಿದ್ಯಾರ್ಥಿನಿಯದ್ದಾಗಿರದೆ ಆಕೆಯ ತಾಯಿ ಸಂಸ್ಥೆಯ ಕಾರ್ಯಚಟುವಟಿಕೆಯ ವಿವರ ಹೊತ್ತ ಹೊತ್ತಗೆ ವಾರ್ಷಿಕ ಸಂಚಿಕೆ “ಕಲಾಂತರಂಗ’ ವನ್ನು ಓದಿ ಬರೆದ ಪತ್ರ. ಆ ಪತ್ರದ ಸಂಪೂರ್ಣ ಓದು ಯಾರಲ್ಲಿಯೂ ಕಲಾರಂಗದ ಮೇಲೆ ಅಭಿಮಾನವನ್ನು ಹೆಚ್ಚಿಸುತ್ತದೆ. 
.
ವಿದ್ಯಾಪೋಷಕ್‌ ಆಯೋಜಿಸಿದ ಶಿಬಿರದಲ್ಲಿ  ಸ್ವಲ್ಪ ಜನ ಮಾತ್ರ ಪಾಲ್ಗೊಳ್ಳಬಹುದು ಎಂದು ನಾನು ಅಂದುಕೊಂಡಿದ್ದೆ. ಆದರೆ ಅಲ್ಲಿ ಮುನ್ನೂರರವತ್ತು ವಿದ್ಯಾರ್ಥಿಗಳು  ನೆರೆದಿದ್ದರು. ಅಲ್ಲಿ ಕಳೆದ ಐದು ದಿನವೂ ನಾನು ನನ್ನ ಮನೆಯಲ್ಲಿಯೇ ಕುಟುಂಬದವರೊಂದಿಗೆ ಇದ್ದೇನೇನೋ ಎನ್ನುವಷ್ಟರ ಮಟ್ಟಿಗೆ ಚೆನ್ನಾಗಿ ನೋಡಿಕೊಂಡಿದ್ದಾರೆ.
– ಶ್ರೀಲಕ್ಷ್ಮೀ

ಮೊದಲಂತೂ ಮುಜುಗರದಲ್ಲಿ ನನ್ನ ಪತ್ರಗಳ ಸಂಖ್ಯೆಯೂ ವಿಷಯ ಭಾಗವೂ ಅತೀ ಅನ್ನುವಂತೆ ಮಿತಿಯÇÉೇ ಇರುತ್ತಿತ್ತು. ಆದರೆ ಈಗ ನಮ್ಮಲ್ಲಿ ಕೃತಜ್ಞತಾ ಭಾವವನ್ನು ಬೆಳೆಸಿ ಉಳಿಸುವ ಸಂಸ್ಥೆಯ ಧ್ಯೇಯ ಹಾಗೂ ಸಂಸ್ಥೆಯ ಕಾರ್ಯಕರ್ತರು ಬಿಡುವಿಲ್ಲದಂತೆ ವಹಿಸಿಕೊಳ್ಳುವ ಕೆಲಸವು ಅರಿವಿಲ್ಲದಂತೆ ನನ್ನಲ್ಲಿ ಪರಿಣಾಮ ಬೀರಿದೆ. ಪತ್ರದ ಮೂಲಕ ಇವೆಲ್ಲವನ್ನು ವ್ಯಕ್ತಪಡಿಸುವ ಪ್ರಾಮಾಣಿಕ ಪ್ರಯತ್ನವೀಗ ನನ್ನದು. ಸಂಸ್ಥೆಯನ್ನು ಪೂರ್ತಿಯಾಗಿ ಅರಿಯುವುದಕ್ಕೆ ಅತಿ ಮುತುವರ್ಜಿಯಿಂದ ಆಯೋಜಿಸುವ ಶಿಬಿರಗಳು ಕೈಗನ್ನಡಿಯಂತೆ. ಸಾಮಾನ್ಯವಾಗಿ ಯಾವುದೇ ಶಿಬಿರದ ಆಯೋಜನೆಯಲ್ಲಿ ಮೊದಲಾಗಿ ಗಣನೆಗೆ ತೆಗೆದುಕೊಳ್ಳುವ ಅಂಶ ಶಿಬಿರಾರ್ಥಿಗಳ ಒಟ್ಟು ಸಂಖ್ಯೆ. ಇದು ಪೂರ್ತಿ ಶಿಬಿರದ ವ್ಯವಸ್ಥೆ ಹಾಗೂ ನಿರ್ವಹಣೆಗೆ ಮುಖ್ಯವಾದ ಮಾನದಂಡ. ನಿಜವಾಗಿ ಹೇಳ್ತಾ ಇದ್ದೇನೆ-ನೀವು ನಂಬ್ಲಿಕ್ಕೆ ಇಲ್ಲ , ವಿದ್ಯಾಪೋಷಕ್‌ಗೆ ಆಯ್ಕೆಗೊಂಡ ಪ್ರಥಮ ವರ್ಷದ ಅಷ್ಟೂ ವಿದ್ಯಾರ್ಥಿಗಳಿಗೆ ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆಯುವ ಶಿಬಿರದಲ್ಲಿ ಏಕಕಾಲದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಇಷ್ಟಲ್ಲದೆ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸುವ ಒಂದು ವಾರದ ಇ.ಆರ್‌.ಪಿ. ಕ್ಯಾಂಪ್‌ನಲ್ಲಿ ಭಾಗವಹಿಸಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ದೊರೆತವರಿದ್ದಾರೆ. ಆಯ್ಕೆಯ ರೂಪದಲ್ಲಿ ಯಾರನ್ನೂ ನಿರ್ಲಕ್ಷಿಸದೇ, ಬ್ಯಾಚ್‌ಗಳ ಹೆಸರಲ್ಲಿ ಶಿಬಿರವನ್ನು ಪುನರಾವರ್ತಿಸಿ ಸಮಯವನ್ನು ವ್ಯಯಿಸದೇ ನಡೆಸುವ ಶಿಬಿರದಲ್ಲಿ ವಿದ್ಯಾರ್ಥಿಗಳ ಮೆಚ್ಚುಗೆಯಲ್ಲದೇ ಯಾವುದೇ ದೂರುಗಳಿಲ್ಲ. ಅದಕ್ಕೆ  ಪತ್ರ ರೂಪದಲ್ಲಿ ಬಂದ ಮೇಲಿನ  ಮಾತುಗಳೇ ಸಾಕ್ಷಿ.

Vidyaposhak irrespective of caste and creed they help everyone.
 -ಅಕ್ಷತಾ ಪ್ರಭು

ವಿದ್ಯಾರ್ಥಿವೇತನ ನೀಡುವ ಅದೆಷ್ಟೋ ಸಂಘ-ಸಂಸ್ಥೆಗಳು ಈ ಸಮಾಜದಲ್ಲಿದೆ. ಆದರೆ ಯಾವೊಂದೂ ಸಂಸ್ಥೆಯನ್ನು ಕುಟುಂಬ ಎಂದು ತುಂಬು ಮನಸ್ಸಿನಿಂದ ವಿದ್ಯಾರ್ಥಿಗಳೇ ಹಾಡಿ ಹೊಗಳುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಇದು ನಮ್ಮ ವಿದ್ಯಾಪೋಷಕ್‌ ವಹಿಸಿಕೊಳ್ಳುವ ಕಾಳಜಿಗೆ ತಾನಾಗಿಯೆ ಮೂಡಿದ ಮುದ. ವಿದ್ಯಾರ್ಥಿಗಳ ಆವಶ್ಯಕತೆಯನ್ನರಿವ ಹಿರಿಯರು, ಅಂತೆಯೇ ಹಿರಿಯರ ಕಾಳಜಿಯ ಕಾರ್‍ಯಾಂತರಂಗವನ್ನರಿವ ವಿದ್ಯಾರ್ಥಿಗಳ ಮನಸ್ಸೇ ಈ ಬಂಧನಕ್ಕೆ ಕಾರಣ. ಮನೆ ನಿರ್ಮಾಣ, ಸೋಲಾರ್‌ ದೀಪದ ಸೌಲಭ್ಯ, ಸನಿವಾಸ ಶಿಬಿರಗಳು, ಏಕದಿನದ ಶೈಕ್ಷಣಿಕ ಮಾರ್ಗದರ್ಶನ, ಉಚಿತ ಟ್ಯೂಷನ್‌, ಪ್ರತಿ ತಿಂಗಳಿಗೊಮ್ಮೆ  ವಿದ್ಯಾರ್ಥಿಯೋ ಅಥವಾ ಕುಟುಂಬದ ಸದಸ್ಯರಿರಲಿ ಆಸ್ಪತ್ರೆಗೆ ದಾಖಲಾದರೆ ಇಡೀ ವೆಚ್ಚ ಭರಿಸುವ ಈ ವಿದ್ಯಾಪೋಷಕ್‌ ಕುಟುಂಬದ ಹಿರಿಯರ ಬಗ್ಗೆ ನಾನು ಎಷ್ಟು ಬರೆದರೂ ಕಡಿಮೆಯೇ.  ಪ್ರತಿ ವಿದ್ಯಾರ್ಥಿಯ ಪತ್ರವನ್ನು ಸಂಸ್ಥೆ  ಜೋಪಾನವಾಗಿ ಕಾಪಿಡುವ ಕಡತಗಳ ಸಂಗ್ರಹವೇ ವಿದ್ಯಾಪೋಷಕ್‌ ಕಚೇರಿಯಲ್ಲಿ ಇದೆ. 

– ಪಲ್ಲವಿ ಶೇಟ್‌
ವಿದ್ಯಾಪೋಷಕ್‌ ವಿದ್ಯಾರ್ಥಿನಿ
ಯಕ್ಷಗಾನ ಕಲಾರಂಗ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next