Advertisement

ಯುವಶಕ್ತಿಯಿಂದ ಜಲಸಾಕ್ಷರತೆ ಪಾಠ: ಅಂತರ್ಜಲ ವೃದ್ಧಿ

04:58 AM Jan 10, 2019 | Team Udayavani |

ವೇಣೂರು : ನದಿ, ಹೊಳೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ನೀರಿಗಾಗಿ ಹಾಹಾಕಾರ ಸಮೀಪಿಸುತ್ತಿದ್ದಂತೆ ಹೊಸಂಗಡಿ ಗ್ರಾ.ಪಂ.ನ ತೊರ್ಪುವಿನಲ್ಲಿ ಯುವಶಕ್ತಿ ಜಲಸಾಕ್ಷರತೆಯ ಸಂದೇಶ ರವಾನಿಸಿದೆ.

Advertisement

ತೊರ್ಪು ಬಳಿ ಫಲ್ಗುಣಿ ನದಿಗೆ ಸುಮಾರು 350 ಮೀ. ಉದ್ದದಲ್ಲಿ ಮರಳು ಚೀಲಗಳಿಂದ ವ್ಯವಸ್ಥಿತ ಕಟ್ಟ ಕಟ್ಟ ಲಾಗಿದ್ದು, ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಬೆಳ್ತಂಗಡಿ ತಾಲೂಕಿನ ಕಟ್ಟಕಡೆಯ ಗ್ರಾಮದ ಹೊಸಂಗಡಿ ಹಾಗೂ ಮೂಡುಬಿದಿರೆಯ ಮಾರೂರನ್ನು ಸಂಪರ್ಕಿಸುವ ತೊರ್ಪು ಫಲ್ಗುಣಿ ನದಿಗೆ ಈ ಕಟ್ಟ ಕಟ್ಟಲಾಗಿದೆ.

ಜನವರಿ ಬಳಿಕ ತೋಡು, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ. ಎಪ್ರಿಲ್‌ ಬಳಿಕ ಎಲ್ಲೆಡೆ ನೀರಿಗೆ ಹಾಹಾ ಕಾರ ಪ್ರಾರಂಭವಾಗುತ್ತದೆ. ಇವೆಲ್ಲವನ್ನು ಮನಗಂಡಿರುವ ಊರ ಪ್ರಮುಖರು ಹಾಗೂ ಮೂಡುಬಿದಿರೆ ಎಸ್‌.ಎನ್‌.ಎಂ. ಪಾಲಿ ಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆಯ 105 ಮಂದಿ ವಿದ್ಯಾ ರ್ಥಿಗಳು ಹಾಗೂ ಮೂಡಬಿದಿರೆ ರೋಟರಿ ಕ್ಲಬ್‌ ಸದಸ್ಯರು ಈ ಬೃಹತ್‌ ಕಟ್ಟ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಳೆದ ವರ್ಷವೂ ನಿರ್ಮಿಸಿದ್ದರು
ಹೊಸಂಗಡಿ ಗ್ರಾ.ಪಂ. ಸದಸ್ಯ ಪಿ. ಹರಿ ಪ್ರಸಾದ್‌ ಅವರ ಚಿಂತನೆಯಂತೆ ಕಳೆದ ಬಾರಿಯೂ ಇಲ್ಲಿ ಕಟ್ಟ ನಿರ್ಮಿಸಲಾಗಿದೆ. ಕಟ್ಟ ನಿರ್ಮಾಣದಿಂದ ಸುಮಾರು 6 ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ಇವರ ಈ ಕಾರ್ಯಕ್ಕೆ ಗ್ರಾಮಸ್ಥರು ಬೇಷ್‌ ಎನ್ನುತ್ತಿದ್ದಾರೆ.

ಕಟ್ಟ ಕಟ್ಟುವ ಚಿಂತನೆ
ಮೊದಲಾಗಿ ಕಟ್ಟ ಕಟ್ಟುವ ಚಿಂತನೆಯನ್ನು ಮಾಡಿದ ಗ್ರಾ.ಪಂ. ಸದಸ್ಯ ಹರಿಪ್ರಸಾದ್‌, ಈ ನಿಟ್ಟಿನಲ್ಲಿ ಅವರು ತಮ್ಮ ತಂಡದೊಂದಿಗೆ ಮೂಡುಬಿದಿರೆ ಎಸ್‌.ಎನ್‌.ಎಂ. ಪಾಲಿ ಟೆಕ್ನಿಕ್‌ ಕಾಲೇಜನ್ನು ಸಂಪರ್ಕಿಸಿದರು. ಅಲ್ಲಿನ ಪ್ರಾಚಾರ್ಯ ಜೆ.ಜೆ. ಪಿಂಟೋ ಅವರೊಂದಿಗೆ ವಿಷಯ ಹಂಚಿಕೊಂಡು ಅವರ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಕಾರ ಪಡೆದು ಕೊಂಡರು. ಮೂಡುಬಿದಿರೆ ರೋಟರಿ ಸಂಸ್ಥೆ ಇವರ ಸಾಹಸಕ್ಕೆ ಬೆನ್ನೆಲುಬು ಆಗಿ ನಿಂತಿತು. ಈ ಸಂಸ್ಥೆಯ ಸದಸ್ಯರು ಖುದ್ದು ಕೈಜೋಡಿಸಿದ್ದು ನಿಜಕ್ಕೂ ಶ್ಲಾಘನೀಯ. ಊರ ವಿವಿಧ ಸಂಘಟನೆ ಸದಸ್ಯರು ಹಾಗೂ ಹೊಸಂಗಡಿ ಗ್ರಾ.ಪಂ. ಕೂಡಾ ಈ ಕಾರ್ಯಕ್ಕೆ ಕೈಜೋಡಿಸಿತು.

Advertisement

ಹೊಸಂಗಡಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಗಣೇಶ್‌ ಶೆಟ್ಟಿ, ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಡಾ| ರಮೇಶ್‌, ಡಾ| ಮುರಳಿಕೃಷ್ಣ, ಶ್ರೀಕಾಂತ್‌ ಕಾಮತ್‌, ನಾರಾಯಣ ಪಿ.ಎಂ., ಸಿ.ಎಚ್. ಗಫ‌ೂರ್‌, ಜಯರಾಮ ಕೋಟ್ಯಾನ್‌, ದಯಾನಂದ ಮಲ್ಯ, ಅರವಿಂದ ಕಿಣಿ, ಜೆ.ಜೆ. ಪಿಂಟೋ, ಡಾ| ಹರೀಶ್‌ ನಾಯಕ್‌, ನಾಗರಾಜ್‌, ಅಬ್ದುಲ್‌ ರವೂಫ್‌, ಉದಯ ಕುಮಾರ್‌, ಮಹಮ್ಮದ್‌ ಆರಿಫ್‌, ಪಿ.ಕೆ. ತೋಮಸ್‌, ತರೀನಾ ಪಿಂಟೋ, ಸಹನಾ ನಾಗರಾಜ್‌ ಸಹಿತ ಹಲವು ಪ್ರಮುಖರು ಸಾಥ್‌ ನೀಡಿದರು.

ಕೈಯಿಂದ ಕೈಗೆ..
ನದಿಯ ದೂರದ ಭಾಗದಿಂದ ಗೋಣಿಚೀಲಕ್ಕೆ ಮರಳನ್ನು ತುಂಬಿಸಿ ಸಾಲಾಗಿ ನಿಂತು ಕೈಯಿಂದ ಕೈಗೆ ಹಸ್ತಾಂ ತರಿಸಿ ಸಾಗಿಸಲಾಯಿತು. ನೂರಾರು ಮಂದಿ ಸೇರಿದ್ದ ಈ ಕಾರ್ಯದಲ್ಲಿ ಕಟ್ಟ ನಿರ್ಮಾಣಕ್ಕೆ ಸುಲಭ ವಿಧಾನಗಳನ್ನು ಅನುಸರಿಸಲಾಯಿತು. ಕ್ಷಣ ಮಾತ್ರದಲ್ಲಿ ಕಟ್ಟ ನಿರ್ಮಾಣದ ಬೆಳವಣಿಗೆ ಕಾಣುತ್ತಿತ್ತು. ಬೆಳಗ್ಗೆಯಿಂದ ಮಧ್ಯಾಹ್ನ ತಲುಪುವ ಹೊತ್ತಿಗೆ ನೀರನ್ನು ತಡೆದು ಕಟ್ಟ ನಿರ್ಮಿಸುವಲ್ಲಿ ಯಶಸ್ವಿಯಾದರು.

ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹ
ಜಲಸಾಕ್ಷರತೆ ಜಾಗೃತಿ ಮೂಡಿಸಲು ನದಿಗೆ ಕಟ್ಟ ಕಟ್ಟುವ ಯೋಜನೆ ನಿರ್ಮಿಸಿದೆವು. ಕೆಲಸ ನಮಗೆ ಸವಾಲಾಗಿತ್ತು. ಎಲ್ಲರ ಸಹಕಾರದಿಂದ ಯೋಜನೆಯಂತೆ ಕಾರ್ಯಗತವಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
– ಹರಿಪ್ರಸಾದ್‌ ಪಿ., ಸದಸ್ಯರು,
  ಹೊಸಂಗಡಿ ಗ್ರಾ.ಪಂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next