Advertisement

Venur Mahamastakabhisheka; ಭರತನನ್ನೇ ಗೆದ್ದ ಬಾಹುಬಲಿ ವಿಶ್ವವಂದ್ಯನಾದ

01:12 AM Feb 25, 2024 | Team Udayavani |

ಬೆಳ್ತಂಗಡಿ: ಉಪಾಧಿಗಳಿಂದ ಬಾಹುಬಲಿಯ ವ್ಯಕ್ತಿತ್ವದ ಸತ್ಯ ತಿಳಿಯಬಹುದು. ಈ ಭೂಮಿಯಲ್ಲಿ ನೈತಿಕತೆ ಎಂಬುದು ಶಾಶ್ವತವಾಗಿರಬೇಕು ಎಂಬ ಸಂದೇಶ ಬಾಹುಬಲಿಯದ್ದು. ಹಾಗಾಗಿ ಈ ಭೂಮಿಯಲ್ಲಿ ಅಹಿಂಸೆಯನ್ನು ಪಾಲಿಸಿದವರು ಮಹಾವೀರನ ಸರ್ವೋದಯ ಪರಿಪಾಲಕರು ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನುಡಿದರು.

Advertisement

ವೇಣೂರು ಫಲ್ಗುಣಿ ತಟದಲ್ಲಿ ವಿರಾಜಮಾನನಾದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಸ್ತಕಾಭೀಷೇಕದ ಮೂರನೇ ದಿನವಾದ ಫೆ. 24ರಂದು ಭರತೇಶ ಸಭಾಭವನದಲ್ಲಿ ಯುಗಳ ಮುನಿಗಳ ದಿವ್ಯ ಉಪಸ್ಥಿತಿಯಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜೈನ ಧರ್ಮವನ್ನು ಉಳಿಸುವುದರ ಜತೆಗೆ ಅದರ ತತ್ವ ಸಿದ್ಧಾಂತಗಳನ್ನು ನಿತ್ಯವೂ ಪಾಲಿಸುವುದು ಮುಖ್ಯ. ಅಹಿಂಸೆ ಮತ್ತು ಅನೇಕಾಂತದಿಂದ ಇಂದಿನ ಎಲ್ಲ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಿದಲ್ಲಿ ವಿಶ್ವಕ್ಕೆ ಸುಖ-ಶಾಂತಿ-ನೆಮ್ಮದಿ ಲಭ್ಯವಾ ದೀತು. ಅಹಿಂಸೆ ಮತ್ತು ತ್ಯಾಗದ ಮಹತ್ವಕ್ಕಾಗಿ ನಾವು ಬಾಹುಬಲಿಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸುತ್ತೇವೆ. ಚಕ್ರವರ್ತಿ ಭರತನನ್ನೇ ಗೆದ್ದ ಬಾಹುಬಲಿ ಮಹಾಚಕ್ರವರ್ತಿಯಾಗಿ ವಿಶ್ವವಂದ್ಯ ಎಂದು ಅಭಿಪ್ರಾಯಪಟ್ಟರು.

ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ,ಜೈನಧರ್ಮ ಶ್ರೇಷ್ಠ ವಿಶ್ವ ಧರ್ಮವಾಗಿದ್ದುಅದರ ಎಲ್ಲ ತತ್ವಸಿದ್ಧಾಂತಗಳು ವೈಜ್ಞಾನಿಕ ವಾಗಿಯೂ ಸತ್ಯ ಮತ್ತು ಪರಿಪೂರ್ಣ ಎಂದು ಖಚಿತವಾಗಿದೆ ಎಂದರು.

ಪತ್ರಕರ್ತ ಅಜಿತ್‌ ಹನುಮಕ್ಕನವರ್‌ “ಜಿನಸಿದ್ಧಾಂತದ ಶ್ರೇಷ್ಠತೆ-ಅನೇಕಾಂತವಾದ’ ವಿಚಾರವಾಗಿ ಮಾತನಾಡಿ, ತ್ಯಾಗವನ್ನು ಮತ್ತು ತ್ಯಾಗಿಗಳನ್ನು ಸದಾಕಾಲ ಪೂಜಿಸಿದ ನಾಡುನಮ್ಮದು. ವಿಶ್ವದಲ್ಲಿ ಹುಟ್ಟಿದ ಅನೇಕ
ಭೋಗಿಗಳಿದ್ದರೂ ಪೂಜನೀಯ ರಾದದ್ದು ತ್ಯಾಗಿಗಳು ಮಾತ್ರ ಎಂದರು.

Advertisement

ಏರ್‌ಇಂಡಿಯಾದಲ್ಲಿ ಪೈಲೆಟ್‌ ಆಗಿ ನೇಮಕಗೊಂಡ ವೇಣೂರಿನ ದಿ| ಬಿ.ಪಿ. ಇಂದ್ರರ ಮೊಮ್ಮಗಳು ಅನನ್ಯಾ ಜೈನ್‌ ಅವರನ್ನು ಸಮಿತಿ ಪರವಾಗಿ ಡಿ. ಹರ್ಷೇಂದ್ರ ಕುಮಾರ್‌ ಗೌರವಿಸಿದರು.

ಬೆಳಗಾವಿಯ ಪೊಲೀಸ್‌ ವರಿಷ್ಠಾ ಧಿಕಾರಿ ಜಿನೇಂದ್ರ ಕಣಗಾವಿ, ಹಿರಿಯ ವಕೀಲ ಪಿ.ಪಿ.ಹೆಗ್ಡೆ, ಎಚ್‌.ಪಿ.ಸಿ.ಎಲ್‌.ನ ನವೀನ್‌ ಕುಮಾರ್‌, ಶಾಸಕ ಹರೀಶ ಪೂಂಜ ಶುಭಾಶಂಸನೆ ಮಾಡಿದರು. ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಮತ್ತು ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣಕುಮಾರ್‌ಇಂದ್ರ, ಕೋಶಾಧಿಕಾರಿ ಜಯರಾಜ್‌ ಕಂಬಳಿ, ಸೇವಾಕರ್ತರಾದ ಸುನಂದಾ ಬಿ.ಪಿ. ಉಪಸ್ಥಿತರಿದ್ದರು. ಡಾ| ಶಾಂತಿಪ್ರಸಾದ್‌ ಸ್ವಾಗತಿಸಿದರು. ಶಾಲಿನಿ ನಿರಂಜನ್‌ ವಂದಿಸಿದರು. ನವಿತಾ ಜೈನ್‌ ನಿರ್ವಹಿಸಿದರು.

ಅಭಿಷೇಕ ಸೇವೆ:
ಮುಖ್ಯವೇದಿಕೆಯಲ್ಲಿ ಬೆಳಗ್ಗೆ ಪುರುಷಶ್ರೀ ಜಿನಭಜನ ತಂಡ, ಪುರುಷಗುಡ್ಡೆ, ಕುಪ್ಪೆಪದವು, ರೆಂಜಾಳ ಜೈನ್‌ ಮಿಲನ್‌ ಸದಸ್ಯರಿಂದ ಜಿನಭಜನೆ ನಡೆಯಿತು. ಸಂಜೆ ಮುಖ್ಯವೇದಿಕೆಯಲ್ಲಿ ಅಜಯ್‌ ವಾರಿಯರ್‌ ಅವರಿಂದ ಸಂಗೀತಯಾನ, ವಸ್ತುಪ್ರದರ್ಶನ ವೇದಿಕೆಯಲ್ಲಿ ಭರತನಾಟ್ಯ, ನೃತ್ಯಸಂಗಮ ಪ್ರದರ್ಶನಗೊಂಡಿತು. ದಿನದ ಸೇವಾಕರ್ತರಾದ ಸುನಂದಾದೇವಿ ಬಿ.ಪಿ., ಡಾ| ಶಾಂತಿಪ್ರಸಾದ್‌, ಸುನಿತಾ, ಮಕ್ಕಳು ಕುಟುಂಬಸ್ಥರಿಂದ ಬಾಹುಬಲಿ ಸ್ವಾಮಿಗೆ ಸಂಜೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ನೆರವೇರಿತು. ಇದಕ್ಕೂ ಮುನ್ನ ಪೂಜಾವಿಧಾನ ನಡೆದು ಅಗ್ರೋದಕ ಮೆರವಣಿಗೆ ಭವ್ಯವಾಗಿ ನೆರವೇರಿತು.

ಆಹಾರ ವ್ಯರ್ಥವಾಗಲು ಅವಕಾಶವಿಲ್ಲ
ಮಹಾಮಸ್ತಕಾಭಿಷೇಕದ ಪರ್ವಕಾಲದಲ್ಲಿ ಅನ್ನದ ಮಹತ್ವವನ್ನು ಸಾರಲಾಗಿದೆ. ಅಂದರೆ ಭಕ್ತರಿಗೆ ಅನ್ನ, ಉಪಾಹಾರ ಹೊಟ್ಟೆತುಂಬ ಉಣಬಡಿಸುತ್ತಾರೆ. ಆದರೆ ಆಹಾರವನ್ನು ಯಾವುದೇ ಕಾರಣಕ್ಕೂ ಎಸೆಯುವಂತಿಲ್ಲ. ತಟ್ಟೆಯಲ್ಲಿಟ್ಟು ಚೆಲ್ಲಲು ಬಂದವರನ್ನು ವಾಪಸು ಕಳುಹಿಸಲಾಗುತ್ತದೆ. ಎಲ್ಲವನ್ನೂ ಸ್ವೀಕರಿಸಿ ಬಂದರಷ್ಟೇ ಕೈ ತೊಳೆಯಲು ಅವಕಾಶ. ಈ ಮೂಲಕ ಅಗಳು ಅನ್ನದ ಮಹತ್ವವನ್ನು ತ್ಯಾಗಿ ವಿರಾಗಿಯ ಮಜ್ಜನದ ಹೊತ್ತಿನಲ್ಲಿ ಸಾರಲಾಗಿದೆ.

ಇಂದು (ಫೆ. 25) ದಿನವಿಡೀ ಮಜ್ಜನ
ಬೆಳಗ್ಗೆಯಿಂದಲೇ ಮಜ್ಜನ. ಮಧ್ಯಾಹ್ನ 1ರಿಂದ 2.30ರ ವರೆಗೆ ಪೂಜ್ಯ108 ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ 108 ಶ್ರೀ ಅಮರಕೀರ್ತಿ ಮಹಾರಾಜರ ದೀಕ್ಷಾ ಮಹೋತ್ಸವ ರಜತ ಸಂಭ್ರಮ ನೆರವೇರಲಿದೆ. ಈ ಪ್ರಯುಕ್ತ ಮುನಿವರ್ಯರು ಮುಂಜಾನೆಯಿಂದಲೇ ಮಜ್ಜನ ನೆರವೇರಿಸುವರು.
ಜೀವಂಧರ್‌ಕುಮಾರ್‌ ಮಕ್ಕಳಿಂದ ದಿನದ ಸೇವೆ
ಈದಿನದ ಸೇವಾಕರ್ತರು ಪೆರಿಂಜೆ ಗುತ್ತು ಜೀವಂಧರ ಕುಮಾರ್‌ ಮತ್ತು ಕುಟುಂಬ. ಬೆಳಗ್ಗೆ 8ರಿಂದ ಪಂಚಕುಂಭ ವಿನ್ಯಾಸಯುಕ್ತ ಗ್ರಹಯಜ್ಞ ವಿಧಾನ, ಜಲಾಗ್ನಿ ಹೋಮ, ಅಪರಾಹ್ನ 2ರಿಂದ ಬೃಹತ್‌ ಶಾಂತಿ ಯಂತ್ರಾರಾಧನಾ ವಿಧಾನ, ಅಗ್ರೋದಕ ಮೆರವಣಿಗೆ, ಸಂಜೆ 6ರಿಂದ ಶ್ರೀ ಬಾಹುಬಲಿ ಸ್ವಾಮಿಗೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಹಾಪೂಜೆ, ನೆರವೇರಲಿದೆ. ಬೆಳಗ್ಗೆ 11ರಿಂದ ಮೂಡುಬಿದ್ರೆ, ಕಾರ್ಕಳ, ಕೆರ್ವಾಶೆ ಜೈನ್‌ ಮಿಲನ್‌ ಸದಸ್ಯರಿಂದ ಜಿನಭಜನೆ ನಡೆಯುವುದು.
ಧಾರ್ಮಿಕ ಸಭೆ
ಮೂಡುಬಿದಿರೆ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಸ್ವಸ್ತಿಶ್ರೀ ತಮಿಳುನಾಡು ತಿರುಮಲೈ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನಮಠ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರ ಪಾವನ ಸಾನ್ನಿಧ್ಯ, ಅಧ್ಯಕ್ಷತೆ : ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ, ಎನ್‌.ಎಸ್‌. ಬೋಸರಾಜ್‌, ಸಚಿವರು, ವಿ. ಸುನಿಲ್‌ ಕುಮಾರ್‌, ಶಾಸಕರು, ಡಾ| ರಾಜೇಂದ್ರ ಕುಮಾರ್‌, ಅಧ್ಯಕ್ಷರು, ಎಸ್‌. ಸಿ.ಡಿ.ಸಿ.ಸಿ. ಬ್ಯಾಂಕ್‌, ಮಂಗಳೂರು, ಡಾ| ಆನಂದ್‌ ಕೆ., ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಿನದ ಸೇವಾಕರ್ತರಾದ ಜೀವಂಧರ್‌ಕುಮಾರ್‌ಉಪಸ್ಥಿತರಿರುವರು. ಡಾ| ಎಸ್‌.ಪಿ. ಪದ್ಮಪ್ರಸಾದ್‌ ಅವರಿಂದ ವಿಶೇಷ ಉಪನ್ಯಾಸ.
ಸಾಂಸ್ಕೃತಿಕ ಕಾರ್ಯಕ್ರಮ
ಮುಖ್ಯ ವೇದಿಕೆ : ರಾತ್ರಿ 7.30ಕ್ಕೆ ಶಂಕರ್‌ ಶಾನಭೋಗ್‌ ಮತ್ತು ಬಳಗದಿಂದ ಭಕ್ತಿರಸಾಮೃತ. ವಸ್ತುಪ್ರದರ್ಶನ ವೇದಿಕೆ: ರಾತ್ರಿ 7ರಿಂದ 7.30ರ ವರೆಗೆ ಅನನ್ಯಾ ರಂಜನಿ, ಮೂಡುಬಿದಿರೆ ಅವರಿಂದ ಭರತನಾಟ್ಯ, 7.30ರಿಂದ 11ರ ವರೆಗೆ ಬಾಹುಬಲಿ ಕಲಾ ತಂಡ ವೇಣೂರು ಅವರಿಂದ ನೃತ್ಯ ವೈವಿಧ್ಯ ಹಾಗೂ ತ್ಯಾಗವೀರ ಬಾಹುಬಲಿ ಎಂಬ ಯಕ್ಷಗಾನ.

Advertisement

Udayavani is now on Telegram. Click here to join our channel and stay updated with the latest news.

Next