Advertisement

ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

09:03 AM Feb 21, 2019 | Team Udayavani |

ದೇವನಹಳ್ಳಿ: ನಗರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಅಪಾರ ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು. ನಗರದ ಕೋಟೆ ವೇಣುಗೋಪಾಲಸ್ವಾಮಿಗೆ ಮೊದಲು ತಾಲೂಕು ಕಚೇರಿಯ ಖಜಾನೆಯಲ್ಲಿರುವ ರಾಜಮಹಾರಾಜರ ಕಾಲದ ಚಿನ್ನದ ಆಭರಣಗಳನ್ನು ತಂದು ಅಲಂಕಾರ ಮಾಡಲಾಯಿತು.  ನವರತ್ನಖಚಿತ ಆಭರಣಗಳ ವಿನ್ಯಾಸ ಪೂರ್ವಕ ನೂತನ ವಸ್ತ್ರಾಲಂಕಾರ, ವಿಶೇಷ ಹೂವಿನ ಅಲಂಕಾರ, ಸುಮಂಗಲಿಯರ ಭಕ್ತಿ ಗೀತಾ ಗಾಯನ, ಭಕ್ತ ಸಮೂಹ ಜಯಘೋಷದೊಂದಿಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರಿಂದ ರಾಧ ಕೃಷ್ಣ, ಗೋಪಾಲ ಕೃಷ್ಣ, ಗೋವಿಂದಾ, ಗೋವಿಂದಾ ಎಂದು ನಾಮಸ್ಮರಣೆ ಮಾಡಿದರು.

Advertisement

ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ತಹಸೀಲ್ದಾರ್‌ ಕೇಶವ ಮೂರ್ತಿ ಹಾಗೂ ಶಾಸಕ ನಿಸರ್ಗ ಎಲ್‌ ಎನ್‌ ನಾರಾಯಣಸ್ವಾಮಿ ದಂಪತಿಗಳು ವಿಶೇಷ ಪೂಜೆ ನೆರವೇರಿಸಿದರು. ಬಾನಿನಲ್ಲಿ ಗರುಡ ಕಾಣಿಸಿಕೊಂಡು ದೇವಾಲಯ ಮತ್ತು ರಥದ ಸುತ್ತ ಪ್ರದಕ್ಷಿಣೆಯ ನಂತರ ದಾರಿಯುದ್ದಕ್ಕೂ ನೆರದಿದ್ದ ಭಕ್ತರು ರಥದ ಕಲಶಕ್ಕೆ ಬಾಳೆಹಣ್ಣು ಮತ್ತು ದವನ ಎಸೆದು ಭಕ್ತಿ ಸಮರ್ಪಿಸಿದರು.

ತಹಶೀಲ್ದಾರ್‌ ಕೇಶವ ಮೂರ್ತಿ ಮಾತನಾಡಿ, ಪ್ರತಿವರ್ಷದಂತೆ ಶ್ರೀವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಅಪಾರ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆದಾಗ ಮಾತ್ರ, ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯವಾಗುತ್ತದೆ. 

ತಾಲೂಕು ಈ ಬಾರಿ ಬರಗಾಲಕ್ಕೆ ತುತ್ತಾಗಿದ್ದು ವೇಣುಗೋಪಾಲಸ್ವಾಮಿ ಯು ಮುಂದಿನ ದಿನಗಳಲ್ಲಿ ಉತ್ತಮ ಮಳೆಯನ್ನು ಕರುಣಿಸಿ ರೈತರು ಜೀವನವನ್ನು ಅಸುನು ಮಾಡಲಿ ಎಂದು ಪ್ರಾರ್ಥಿಸಿದರು.

ಶಾಸಕ ನಿಸರ್ಗ ಎಲ್‌ ಎನ್‌ ನಾರಾಯಣಸ್ವಾಮಿ ಮಾತನಾಡಿ, ವೇಣುಗೋಪಾಲಸ್ವಾಮಿ ದೇಗುಲ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ರಾಜ ಮಹಾರಾಜರ ಕಾಲದಿಂದಲೂ ದೇಗುಲದಲ್ಲಿ ರಥೋತ್ಸವ ಆಚರಣೆ ನಿರಂತರವಾಗಿ ನಡೆದುಕೊಂಡು ಬಂದಿದ್ದು, ಅಪಾರ ಭಕ್ತರನ್ನು ದೇಗುಲ ಹೊಂದಿದೆ. ದೇವರ ಕೃಪೆಯಿಂದ ಮಳೆ,ಬೆಳೆ ಸಮಯಕ್ಕೆ ಸರಿಯಾಗಿ ಆಗಿ ದೇಶ ಸುಭಿಕ್ಷವಾಗಬೇಕಿದೆ ಎಂದು ಹೇಳಿದರು.

Advertisement

ಈ ವೇಳೆಯಲ್ಲಿ ಮಾಜಿ ಶಾಸಕ ಜಿ.ಚಂದ್ರಣ್ಣ, ಮಾಜಿ ಪುರಸಭಾಧ್ಯಕ್ಷ ಸಿ.ಜಗನ್ನಾಥ್‌, ನರಸಿಂಹಮೂರ್ತಿ, ಎ.ಎನ್‌.ವಂಸತ್‌ ಬಾಬು, ಹಾಪ್‌ ಕಾಮ್ಸ್‌ ಉಪಾಧ್ಯಕ್ಷ ಮುನೇಗೌಡ, ಪುರಸಭಾಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಆಶಾರಾಣಿ, ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಗೋಪಾಲಕೃಷ್ಣ , ಸದಸ್ಯರಾದ ವೈಸಿ ಸತೀಶ್‌ ಕುಮಾರ್‌, ಎನ್‌.ರಘು, ಜಿ.ಎ.ರವೀಂದ್ರ, ವಿ.ಗೋಪಾಲ್‌, ಜಿ.ಎನ್‌.ವೇಣುಗೋಪಾಲ್‌, ಎಂ.ಕುಮಾರ್‌, ನಾರಾಯಣಸ್ವಾಮಿ, ಪದ್ಮಾವತಿ, ಶಾರದಮ್ಮ, ರತ್ನಮ್ಮ, ಬೇಕರಿ ಮಂಜುನಾಥ್‌ ಮತ್ತಿತರರು ಇದ್ದರು.

ಊರ ಹಬ್ಬದಂತೆ ಅನ್ನಸಂತರ್ಪಣೆ ರಥೋತ್ಸವ ಅಂಗವಾಗಿ ವೇಣುಗೋಪಾಲಸ್ವಾಮಿ ಅನ್ನದಾನ ಸಮಿತಿ ವತಿಯಿಂದ ನಗರದ ಪಾರ್ಕ್‌ ರಸ್ತೆಯಲ್ಲಿರುವ ಅಣ್ಣಯ್ಯಪ್ಪ ಛತ್ರದಲ್ಲಿ ಪ್ರತಿ ವರ್ಷದಂತೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವೇಣುಗೋಪಾಲಸ್ವಾಮಿ ಅನ್ನದಾನ ಸಮಿತಿ ವತಿಯಿಂದ 1993-94ನೇ ಸಾಲಿನಲ್ಲಿ ದಾನಿಗಳ ನೆರವಿನಿಂದ ಅನ್ನಸಂತರ್ಪಣೆ ಪ್ರಾರಂಭವಾಗಿ 2018ನೇ ಸಾಲಿಗೆ 26 ವರ್ಷಗಳನ್ನು ಪೂರೈಸಿದೆ. ಸದಸ್ಯರು ಹಾಗೂ ಹಿರಿಯರ ಅಪೇಕ್ಷೆಯಂತೆ ಈ ವರ್ಷ ಸಮಿತಿ ಬಡ್ಡಿ ಹಣವನ್ನು ತೆಗೆಯದೆ ಧನ, ದಾನ್ಯಗಳನ್ನು ಸಂಗ್ರಹಿಸಿ ಊರಿನ ಹಬ್ಬದಂತೆ ಅನ್ನಸಂತರ್ಪಣೆಯನ್ನು ನಡೆಸಲಾಯಿತು ಎಂದು ಬ್ರಹ್ಮ ರಥೋತ್ಸವ ಅನ್ನದಾನ ಸಮಿತಿ ತಿಳಿಸಿದೆ.

ವೇಣುಗೋಪಾಲಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಆಗಮಿಸಿದ್ದ 8 ಸಾವಿರ ಜನರಿಗೆ ಅನ್ನಸಂತರ್ಪಣೆಯನ್ನು ಮಾಡಿದರು. 25ನೇ ವರ್ಷದ ಅಂಗವಾಗಿ ಭಕ್ತರಿಗೆ ಅವರೇ ಕಾಳು ಸಾರು, ಮುದ್ದೆ, ಹೋಳಿಗೆ, ಪಕೋಡ, ಅನ್ನರಸ, ಎರಡು ತರದ ಪಲ್ಯ, ಪಾಯಿಸ, ಬೂಂದಿಯನ್ನು ಭಕ್ತರು ಸವಿದರು. ಈ ವೇಳೆಯಲ್ಲಿ ಶಾಸಕ ನಿಸರ್ಗ ಎಲ್‌ ಎನ್‌ ನಾರಾಯಣಸ್ವಾಮಿ , ಮಾಜಿ ಶಾಸಕ ಜಿ.ಚಂದ್ರಣ್ಣ, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್‌, ತಹಶೀಲ್ದಾರ್‌ ಕೇಶವ ಮೂರ್ತಿ, ಹಾಪ್‌ ಕಾಮ್ಸ್‌ ಉಪಾಧ್ಯಕ್ಷ ಮುನೇಗೌಡ, ಉಪತಹಸೀಲ್ದಾರ್‌ ಪಿ.ಗಂಗಾಧರ್‌, ಪುರಸಭಾ ಅಧ್ಯಕ್ಷ
ಎಂ.ಮೂರ್ತಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next