Advertisement

ಭೂಲೋಕದ ವೈಕುಂಠ ವೆಲ್ಲೂರು ಸ್ವರ್ಣ ದೇಗುಲ

02:28 PM Oct 18, 2018 | |

ವೆಲ್ಲೂರಿನ ಶ್ರೀ ಮಹಾಲಕ್ಷ್ಮೀ  ದೇವಸ್ಥಾನ ನೋಡಬೇಕು ಎನ್ನುವ ಆಸೆ ಬಹುದಿನಗಳಿಂದ ಇತ್ತಾದರೂ ಇತ್ತೀಚೆಗೆ ತಿರುಪತಿಯಿಂದ ಹಿಂದಿರುಗುವಾಗ ವೆಲ್ಲೂರಿನ ಸ್ವರ್ಣದೇವಾಲಯವನ್ನು ನೋಡುವ ಅವಕಾಶ ಒದಗಿಬಂತು. ಭೂಲೋಕದ ಸ್ವರ್ಗದಂತಿರುವ ಈ ದೇವಾಲಯವನ್ನು ನೋಡಲು ಎರಡು ಕಣ್ಣುಗಳೂ ಸಾಲವು ಎಂಬ ಭಾವ ಉಂಟಾಯಿತು.

Advertisement

ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಸಹೋದ್ಯೋಗಿಗಳು, ಮಿತ್ರರು ಹಾಗೂ ಕುಟುಂಬ ಸದಸ್ಯರನ್ನೊಳಗೊಂಡ 31 ಮಂದಿಯ ನಮ್ಮ ತಂಡ ತಿರುಪತಿ- ವೆಲ್ಲೂರು ಪ್ರವಾಸಕ್ಕೆ  ಮಂಗಳೂರಿನ ರೈಲು ನಿಲ್ದಾಣದಲ್ಲಿ ಸಜ್ಜಾಗಿ ನಿಂತೆವು. ಚೆನ್ನೈ ಎಕ್ಸ್‌ ಪ್ರಸ್‌ ರೈಲಿನಲ್ಲಿ ಸಂಜೆ ಹೊರಟ ನಾವು ಮರುದಿನ ಮುಂಜಾನೆ ತಮಿಳುನಾಡಿನ ಕಾಟ್ಪಾಡಿ ಜಂಕ್ಷನ್‌ ತಲುಪಿದೆವು.

ಕಾಟ್ಪಾಡಿಯಿಂದ ತಿರುಪತಿಗೆ ರೈಲಿನಲ್ಲಿ ಸುಮಾರು 14 ಗಂಟೆ ಪ್ರಯಾಣದ ಬಳಿಕ ನಾವು ಮೊದಲೇ ಕಾದಿರಿಸಿದ ವಸತಿಗೃಹದಲ್ಲಿ ಶೌಚ ಕಾರ್ಯಗಳನ್ನು ಮುಗಿಸಿ ಶ್ರೀ ವೆಂಕಟ್ರಮಣನ ದರ್ಶನಕ್ಕೆ ತಿರುಮಲ ಬೆಟ್ಟದೆಡೆ ತೆರಳಿದೆವು. ಸಪ್ತಗಿರಿವಾಸ ಶ್ರೀ ತಿರುಮಲೇಶನ ದರ್ಶನ ಭಾಗ್ಯ ಪಡೆದು ಪುನೀತರಾದ ನಾವು ಮರುದಿನ ಪದ್ಮಾವತಿ ಹಾಗೂ ಗೋವಿಂದರಾಜ ದೇವಸ್ಥಾನ ಸಂದರ್ಶಿಸಿ, ನಿಗದಿಪಡಿಸಿದ ಬಸನ್ನೇರಿ ಸಾಗಿದ್ದು ವೆಲ್ಲೂರು ಶ್ರೀ ಮಹಾಲಕ್ಷ್ಮೀ  ದೇವಸ್ಥಾನದ ಕಡೆಗೆ. ತಮಿಳುನಾಡಿನ ವೆಲ್ಲೂರು ಬಳಿಯ ಶ್ರೀಪುರಂನಲ್ಲಿದೆ ಅತ್ಯಂತ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಶ್ರೀ ಮಹಾಲಕ್ಷ್ಮೀ ಸ್ವರ್ಣ ದೇಗುಲ.

ತಿರುಪತಿಯಿಂದ ಸುಮಾರು 120 ಕಿ.ಮೀ. ದೂರದಲ್ಲಿರುವ ಈ ದೇವಸ್ಥಾನಕ್ಕೆ ತಿರುಪತಿಯಿಂದ ಬಸ್‌ನಲ್ಲಿ ಸುಮಾರು ಮೂರು ಗಂಟೆಯ ಪ್ರಯಾಣ. ಹೊರಭಾಗಕ್ಕೆ ಸ್ವರ್ಣವನ್ನು ಬಳಸಿ ನಿರ್ಮಿಸಲಾದ ಈ ದೇವಸ್ಥಾನದ ಅನನ್ಯ ಸೌಂದರ್ಯವನ್ನು ನಿಜಕ್ಕೂ ವರ್ಣಿಸಲು ಅಸಾಧ್ಯ!.

ನಕ್ಷತ್ರಾಕಾರದ ಹಾದಿಯಲ್ಲಿ ಪ್ರದಕ್ಷಿಣೆ ಬಂದು ಈ ದೇವಸ್ಥಾನದ ಚೆಲುವನ್ನು ಕಂಡಾಗ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ಸುಮಾರು 100 ಎಕರೆ ವ್ಯಾಪಿಸಿರುವ ಈ ಪ್ರದೇಶ ಪ್ರಕೃತಿ ಸೌಂದರ್ಯ ನಡುವೆ ಕಂಗೊಳಿಸುತ್ತಿದೆ. ಹಚ್ಚ ಹಸುರಿನ ಸುಂದರ ಉದ್ಯಾನದ ನಡುವಿನಲ್ಲಿ ಎತ್ತರದಿಂದ ಧುಮುಕುವ ಕೃತಕ ಜಲಧಾರೆ, ಅಲ್ಲಲ್ಲಿ ಶಿಲಾಬಾಲಿಕೆಯರು, ಮಂಗಳ ವಸ್ತುಗಳನ್ನು ಹಿಡಿದು ನಿಂತ ಚೆಲುವು, ವಿವಿಧ ತೀರ್ಥ ಕುಂಡಗಳು, ಶಿಲಾ ಮಂಟಪಗಳು, ಎಲ್ಲಿ ನೋಡಿದರಲ್ಲಿ ಶಂಖ-ಚಕ್ರಗಳ ಕಲಾಕೃತಿಗಳು- ಇವೆಲ್ಲವನ್ನೂ ನೋಡಿ ಕಣ್ತುಂಬಿಕೊಳ್ಳುವಾಗ ಈ ಧಾರ್ಮಿಕ ಕ್ಷೇತ್ರ ಭೂಲೋಕದ ವೈಕುಂಠ ಎಂದು ಕರೆಯುತ್ತಿರುವುದು ಅತಿಶಯೋಕ್ತಿಯಾಗದು. ಪ್ರಧಾನ ಗರ್ಭಗುಡಿಯ ಮುಂಭಾಗದಲ್ಲಿರುವ ಮಹಾಲಕ್ಷ್ಮೀಯ ಮತ್ತೂಂದು ಚಿನ್ನದ ಮೂರ್ತಿಗೆ ಸ್ವಯಂ ಅಭಿಷೇಕ ಮಾಡುವ ಸೌಭಾಗ್ಯವೂ ನಮ್ಮೆಲ್ಲರಿಗೆ ದೊರೆಯಿತು.

Advertisement

ಇತಿಹಾಸದಲ್ಲೇನಿದೆ?
ಶ್ರೀಪುರಂನ ನಾರಾಯಣೀ ಪೀಠದ ಶ್ರೀ ಶಕ್ತಿ ಅಮ್ಮನವರೇ ಈ ಅಪೂರ್ವ ಸ್ವರ್ಣ ದೇಗುಲದ ನಿರ್ಮಾತೃ. ಹಾಗಾಗಿಯೇ ಇಲ್ಲಿ ಅಂಬಿಕೆ ನಾರಾಯಣೀ ದೇವಿ ಶ್ರೀಶಕ್ತಿ ಅಮ್ಮನಾಗಿ ಭೂಲೋಕದಲ್ಲಿ ಅವತಾರ ತಾಳಿದರು ಎಂದು ಸ್ಥಳೀಯರು ನಂಬುತ್ತಾರೆ. ಅಪ್ರತಿಮ ಆಧ್ಯಾತ್ಮಿಕ ಸಾಧಕರಾಗಿರುವ ಶ್ರೀ ಶಕ್ತಿ ಅಮ್ಮನವರ ಅಸಾಧಾರಣ ಕಲ್ಪನಾ ಶಕ್ತಿಯಿಂದ ಮೂಡಿ ಬಂದಿರುವ ಈ ದೇವಸ್ಥಾನವನ್ನು ಇಷ್ಟೊಂದು ಆಕರ್ಷಕವಾಗಿ ನಿರ್ಮಿಸಲು 1500 ಕಿಲೋ ಶುದ್ಧ ಚಿನ್ನ ಬಳಸಲಾಗಿದೆಯಂತೆ. ಶ್ರೀ ಮಹಾಲಕ್ಷ್ಮೀಯ ದಿವ್ಯ ದರ್ಶನ ಭಾಗ್ಯ ಪಡೆಯಲು ನಕ್ಷತ್ರಾಕಾರದ ಉದ್ದನೆಯ ಮಂಟಪದಲ್ಲಿ ಸಾಗುವಾಗ ಕನ್ನಡ ಭಾಷೆ ಸಹಿತ ವಿವಿಧ ಭಾಷೆಗಳಲ್ಲಿ ಶ್ರೀ ಶಕ್ತಿ ಅಮ್ಮನ ಸ್ವರ್ಣ ವಾಕ್ಯಗಳಿರುವ ಫ‌ಲಕಗಳನ್ನು ಅಲ್ಲಲ್ಲಿ ನಾವು ಗಮನಿಸಬಹುದು.

ಶ್ರೀ ಮಹಾಲಕ್ಷ್ಮೀ ಯ ದರ್ಶನ ಪಡೆದು ಹೊರ ಬಂದಾಗ ನಮ್ಮೆಲ್ಲರಲ್ಲೂ ವಿಶಿಷ್ಟ ಆಧ್ಯಾತ್ಮಿಕ ಅನುಭೂತಿ. ದೇಗುಲದ ಒಳಾಂಗಣದಲ್ಲಿ ಮೊಬೈಲ್‌ ಫೋನ್‌ ನಿಷೇಧವಾದ್ದರಿಂದ ಹೊರಭಾಗದಲ್ಲಿ ನಾವೆಲ್ಲ ಫೋಟೋ ಕ್ಲಿಕ್ಕಿಸಿ ಸಂತೃಪ್ತರಾ ದೆವು. ಬಳಿಕ ಬಸ್‌ನಲ್ಲಿ ಕಾಟ್ಪಡಿ ರೈಲು ನಿಲ್ದಾಣಕ್ಕೆ ಬಂದು ಸೇರಿದೆವು. ಹೊಟೇಲ್‌ ನಲ್ಲಿ ಪ್ಯಾಕ್‌ ಮಾಡಿ ತಂದಿದ್ದ ಊಟವನ್ನು ರೈಲಿನಲ್ಲೇ ಸವಿದು, ಪ್ರವಾಸವನ್ನು ಮೆಲುಕು ಹಾಕುತ್ತಾ ಸುಮಧುರ ನೆನಪಿನೊಂದಿಗೆ ಮರುದಿನ ಬೆಳಗ್ಗೆ 9 ಗಂಟೆಗೆ ಮಂಗಳೂರಿಗೆ ತಲುಪಿದೆವು.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಚೆನ್ನೈಗೆ ತೆರಳುವ ರೈಲಿನಲ್ಲಿ ಕಾಟ್ಪಾಡಿಗೆ ಸುಮಾರು 14 ಗಂಟೆಗಳ ಪ್ರಯಾಣ.
· ಕಾಟ್ಪಾಡಿ ಜಂಕ್ಷನ್‌ ನಿಂದ 10 ಕಿ.ಮೀ. ದೂರದಲ್ಲಿದೆ ವೆಲ್ಲೂರು ದೇವಸ್ಥಾನ.
· ಸಾಕಷ್ಟು ಬಸ್‌, ಖಾಸಗಿ ವಾಹನ ಸೌಲಭ್ಯಗಳಿವೆ.
· ಮೊದಲೇ ವಸತಿ ಗೃಹ ಕಾಯ್ದಿರಿಸಿದರೆ ಸಮಸ್ಯೆಯಿಲ್ಲ.

 ಸತೀಶ್‌ ಶೆಟ್ಟಿ,
ಕೊಡಿಯಾಲ್‌ಬೈಲ್‌

Advertisement

Udayavani is now on Telegram. Click here to join our channel and stay updated with the latest news.

Next