Advertisement

ಸಸ್ಯಾಹಾರ ಸ್ವಸ್ಥಾಹಾರ

02:43 PM Oct 10, 2020 | Lakshmi GovindaRaju |

ದೇಹದಲ್ಲಿ ಕೊಬ್ಬಿನ ಪ್ರಮಾಣ ಜಾಸ್ತಿ ಆಗ್ತಿದೆ ಅನ್ನಿಸಿದ ತಕ್ಷಣ, ಎಲ್ಲರೂ ಹಣ್ಣು-ತರಕಾರಿಯ ಹಿಂದೆ ಬೀಳುತ್ತಾರೆ. ಉತ್ತಮ ಆರೋಗ್ಯಕ್ಕೆ ಸಸ್ಯಾಹಾರವೇ ಬೆಸ್ಟೂ…ಅನ್ನುತ್ತಾರೆ. ಸಸ್ಯಾಹಾರದ ಮಹತ್ವ ಏನು ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ…

Advertisement

ಅಕ್ಟೋಬರ್‌ ಒಂದರಿಂದ (ಸಸ್ಯಾಹಾರ ದಿನ) ನವೆಂಬರ್‌ ಒಂದನೇ ತಾರೀಖೀನವರೆಗೆ ಸಸ್ಯಾಹಾರದ ತಿಂಗಳೆಂದು, ನಾರ್ತ್‌ ಅಮೆರಿಕನ್‌ ವೆಜಿಟೇರಿಯನ್‌ ಸೊಸೈಟಿ (ಎನ್‌.ಎ. ವಿ.ಎಸ್‌) 1977 ರಲ್ಲಿ ಘೋಷಿಸಿತು. ಈ ಘೋಷಣೆಯ ಮುಖ್ಯ ಉದ್ದೇಶವೆಂದರೆ, ಪ್ರಾಣಿಗಳನ್ನು ಕೊಲ್ಲುವ ಕಾಯಕಕ್ಕೆ ಕಡಿವಾಣ ಹಾಕುವುದು ಮತ್ತು ಸಸ್ಯಾಹಾರದ ಬಗ್ಗೆ ಹೆಚ್ಚು ಮಹತ್ವ ಕೊಡಬೇಕು ಎಂಬುದು.

ಜಗತ್ತಿನ ಎಲ್ಲ ಜೀವಿಗಳಿಗೂ ಅತ್ಯವಶ್ಯಕವಾದದ್ದು ಆಹಾರ. ಅನ್ನಾದ್‌ ಭವಂತಿ ಭೂತಾನಿ. ಅನ್ನ (ಆಹಾರ) ದಿಂದಲೇ ಸಕಲ ಜೀವಿಗಳ ಸೃಷ್ಟಿ ಅನ್ನುವುದು ಸುಳ್ಳಲ್ಲ. ದೇಹ ಮತ್ತು ಮನಸ್ಸಿನ ಆಂತರಿಕ ಹಾಗೂ ಬಾಹ್ಯ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸೂಕ್ತವಾದ ಆಹಾರ ಕ್ರಮವೆಂದರೆ ಸಸ್ಯಾಹಾರ ಕ್ರಮ. ಮೇಲೆ ಹೇಳಿದಂತೆ, ಸಸ್ಯಾಹಾರ ದಿನಾಚರಣೆ ಶುರುವಾಗಿದ್ದು ಅಮೆರಿಕದಲ್ಲಿ. ಯಾರದೋ ಮಾತು ಕೇಳಿ ಪಾಶ್ಚಾತ್ಯರು ಏನನ್ನೂ ಅನುಸರಿಸುವುದಿಲ್ಲ.

ಯಾವುದನ್ನೇ ಆಗಲಿ, ಅಗತ್ಯ ಸಂಶೋಧನೆಗಳನ್ನು ನಡೆಸಿ, ನಂತರವೇ ಒಪ್ಪಿಕೊಳ್ಳುವ ಪ್ರವೃತ್ತಿ ಅವರದ್ದು. ಅವರು ನಡೆಸಿದ ಸಂಶೋಧನೆಗಳಿಂದ, ಮಾಂಸಾಹಾರ ಸೇವನೆಯಿಂದ ಜನ ಬಹಳಷ್ಟು ರೋಗಕ್ಕೆ ಬಲಿಯಾಗುತ್ತಿರುವುದು ಸಾಬೀತಾಯ್ತು. ಇದನ್ನು ತಿಳಿದ ನಂತರ, ಸಸ್ಯಾಹಾರ ಪದ್ಧತಿಯನ್ನು ಕೆಲವಷ್ಟು ಪಾಶ್ಚಾತ್ಯರು ತಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಆದರೆ ಇಂದು ನಮ್ಮಲ್ಲಿ ಸಸ್ಯಾಹಾರಿ ಅಂದರೆ ಮೂಗು ಮುರಿಯುವ ಜನರಿದ್ದಾರೆ. ದಿನಾ ತರಕಾರಿ ತಿಂದು ಬೇಜಾರು ಬರುವುದಿಲ್ಲವಾ? ಸೊಪ್ಪು-ತರಕಾರಿಯಿಂದ ರುಚಿಕರವಾದ, ಬಗೆಬಗೆಯ ಅಡುಗೆ ಹೇಗೆ ಸಾಧ್ಯ ಅಂತ ಕೇಳುವವರಿದ್ದಾರೆ. ಸಮಸ್ಯೆಯೇನೆಂದರೆ, ಜನರಿಗೆ ಯಾವ ಆಹಾರದಲ್ಲಿ, ಎಷ್ಟು ಪೌಷ್ಟಿಕಾಂಶ ಇದೆ ಮತ್ತು ಅದನ್ನು ಹೇಗೆ ತಿನ್ನಬೇಕು ಎಂಬ ಅರಿವಿಲ್ಲದಿರುವುದು.

Advertisement

ಸಕಲ ಪೋಷಕಾಂಶಗಳೂ ಇವೆ: ದೇಹಕ್ಕೆ ಅತ್ಯಗತ್ಯವಾದ ಪ್ರೋಟೀನ್‌, ಕಾಬೋಹೈಡ್ರೇಟ್‌, ಕ್ಯಾಲ್ಸಿಯಂ, ವಿಟಮಿನ್‌, ಕಬ್ಬಿಣದ ಅಂಶ, ಒಮೆಗಾ ಫ್ಯಾಟ್‌ ಇವೆಲ್ಲವೂ ಬೇರೆ ಬೇರೆ ತರಕಾರಿಯಲ್ಲಿ ಸಿಗುತ್ತದೆ. ನಾವು ದಿನನಿತ್ಯ ಉಪಯೋಗಿಸುವ ರಾಗಿ, ಅಕ್ಕಿ, ಗೋಧಿ, ಜೋಳ, ನವಣೆ, ಮೊಳಕೆ ಕಾಳುಗಳು, ಸೊಪ್ಪು, ತೊಗರಿಬೇಳೆ, ಕಡಲೆಬೇಳೆ, ಸೋಯಾ ಮತ್ತು ವಿವಿಧ ದ್ವಿದಳ ಧಾನ್ಯಗಳಲ್ಲಿ ಪೌಷ್ಟಿಕಾಂಶ ಯಥೇತ್ಛವಾಗಿ ಅಡಕವಾಗಿದೆ.

ಈ ಎಲ್ಲ ಪದಾರ್ಥಗಳು ಸುಲಭವಾಗಿ ದೊರಕುವ ಸಾಮಗ್ರಿಗಳೇ. ಇವೆಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ನಮ್ಮ ಆಹಾರದಲ್ಲಿ ಅಳವಡಿಸಿಕೊಂಡರೆ, ಆರೋಗ್ಯಕರ ಬದುಕು ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಈ ಮಾತು ಸುಳ್ಳಾಗಿದ್ದರೆ, ಇಂದು ನೂರಾರು ಪ್ರಕೃತಿ ಚಿಕಿತ್ಸಾ ಕೇಂದ್ರಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ಪ್ರಕೃತಿ ಚಿಕಿತ್ಸಾ ವಿಧಾನದ ಮೂಲಕ ಬಿಪಿ, ಮಧುಮೇಹ, ಕೊಲೆಸ್ಟ್ರಾಲ್‌, ಬೊಜ್ಜಿನ ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಪಡೆಯಲು ಸಾಧ್ಯವಿದೆ.

ಅಲ್ಲಿ ನೀಡುವ ಆಹಾರದಲ್ಲಿ ಶೇ.20-30ರಷ್ಟು ಹಸಿ ತರಕಾರಿ, ಹಣ್ಣು, ಕಾಳು, ಅನ್ನ, ಗೋಧಿ ಇರುತ್ತದೆ. ಇದರ ಜೊತೆಗೆ ಸಾಕಷ್ಟು ನೀರು, ವ್ಯಾಯಾಮದಿಂದ ಆರೋಗ್ಯ ಸುಧಾರಿಸುವುದರಲ್ಲಿ ಸಂಶಯವೇ ಇಲ್ಲ. ಆದರೆ, ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು- ಖಾಯಿಲೆಯಿಂದ ಬಳಲುವಾಗ ಅಥವಾ ದೇಹಸ್ಥಿತಿ ಸರಿಯಿಲ್ಲದಿದ್ದಾಗ ಅದಕ್ಕೆ ಸಹಕಾರಿಯಾಗುವ ಹಣ್ಣು, ತರಕಾರಿಗಳನ್ನು ವೈದ್ಯರ ಸಲಹೆ ಮೇರೆಗೆ ತಿನ್ನಬೇಕೆ ಹೊರತು, ಎಲ್ಲವನ್ನು ಉಪಯೋಗಿಸಲಾಗುವುದಿಲ್ಲ. ಇದರಿಂದ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು.

ಸೆಲೆಬ್ರಿಟಿಗಳ ಸಸ್ಯಾಹಾರ: ಆಟಗಾರರು, ರೂಪದರ್ಶಿಗಳು, ಕುಸ್ತಿಪಟುಗಳು ಹೀಗೆ, ಯಾರು ಫಿಟ್‌ ಆಗಿರಲು ಬಯಸುತ್ತಾರೋ, ಅವರಲ್ಲಿ ಹೆಚ್ಚಿನವರು ಸಸ್ಯಾಹಾರದ ಮಹತ್ವವನ್ನು ಅರಿತವರಾಗಿದ್ದಾರೆ. ಬ್ರೂಸ್ಲಿ ಹೆಸರು ಕೇಳಿದ್ದೀರಲ್ಲ; ಆತನೂ ಕೂಡ ಸಸ್ಯಾಹಾರಿಯಂತೆ! ಇಷ್ಟು ಮಾತ್ರವಲ್ಲದೆ, ಜೀರ್ಣ ಕ್ರಿಯೆಯ ವಿಷಯಕ್ಕೆ ಬಂದಾಗ, ಸುಲಭವಾಗಿ ಮತ್ತು ವೇಗವಾಗಿ ಪಚನವಾಗುವುದು ಸಸ್ಯಾಹಾರವೇ.

ಸಸ್ಯಾಹಾರ ಸೇವಿಸಿದ ಕೆಲವೇ ನಿಮಿಷಗಳಲ್ಲಿ ನಮ್ಮ ಶಕ್ತಿ (ಎನರ್ಜಿ ಲೆವೆಲ್‌) ಹೆಚ್ಚಾಗುವುದು ಅನುಭವಕ್ಕೆ ಬಂದಿರಬಹುದು. ಸಸ್ಯಗಳು ಮತ್ತು ವನಸ್ಪತಿ ಗಿಡಗಳ ಸೇವನೆಯಿಂದ ದೊರೆಯುವ ಶಕ್ತಿ ನಮ್ಮ ಪ್ರತಿಯೊಂದು ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಪ್ರಾಣಶಕ್ತಿ, ಉಸಿರಾಟ, ಬುದ್ಧಿಶಕ್ತಿ, ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳ ಸಕ್ರಿಯ ಪೋಷಣೆ ಸಸ್ಯಾಹಾರದಿಂದ ಮಾತ್ರವೇ ಸಾಧ್ಯ. ಇದರರ್ಥ, ಬದುಕುವು­ದಕ್ಕಾಗಿ ತಿನ್ನಬೇಕೇ ಹೊರತು, ತಿನ್ನುವುದಕ್ಕಾಗಿ ಬದುಕಬಾರದು.

ಸಸ್ಯಾಹಾರ ಹೊಸದೇನಲ್ಲ: ಮನುಷ್ಯ ಯಾವ ರೀತಿಯ ಆಹಾರವನ್ನು ಸೇವಿಸುತ್ತಾನೋ, ಆ ಗುಣಗಳು ಅವನಲ್ಲಿ ಹೆಚ್ಚಾಗುತ್ತದೆ ಎಂದು ಸಾವಿರಾರು ವರ್ಷಗಳ ಹಿಂದೆಯೇ, ಉಪನಿಷತ್ತು ಮತ್ತು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಸತ್ವ, ರಜ ಮತ್ತು ತಮೋಗುಣಗಳಲ್ಲಿ ಸಸ್ಯಾಹಾರವು ಸಾತ್ವಿಕ ಗುಣವನ್ನು ಸೂಚಿಸುತ್ತದೆ.

ಯಾವುದೇ ಪ್ರಾಣಿಯನ್ನು ಕೊಂದಾಗ ಅದರ ಆರ್ತನಾದ, ಸಂಕಟ, ಭಯ ಅದರ ದೇಹದಲ್ಲಿ ಉಳಿದು, ಮಾಂಸವನ್ನು ಸೇವಿಸಿದವರಲ್ಲಿ ರಜೋ ಮತ್ತು ತಮೋ ಗುಣವನ್ನುಂಟು ಮಾಡುತ್ತದೆ. ನಾವು ತಿನ್ನುವ ಆಹಾರ ನಮ್ಮ ಗುಣ, ನಾವು ಮಾಡುವ ಕೆಲಸಗಳ, ನಿರ್ಧಾರಗಳ ಮತ್ತು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ನಾವು ಸೇವಿಸುವ ಆಹಾರದಿಂದ ಜೀವನ ರೂಪುಗೊಳ್ಳುತ್ತದೆ ಎಂದಮೇಲೆ, ಸ್ವಸ್ಥ ಶರೀರ ಮತ್ತು ಸ್ವಸ್ಥ ಸಮಾಜದ ನಿರ್ಮಾಣದತ್ತ ಒಂದು ಪುಟ್ಟ ಮತ್ತು ದಿಟ್ಟ ಹೆಜ್ಜೆ ಇಡೋಣವೇ?

* ಪೂರ್ಣಿಮಾ ಗಿರೀಶ್‌

Advertisement

Udayavani is now on Telegram. Click here to join our channel and stay updated with the latest news.

Next