Advertisement

ವಸಾಯಿರೋಡ್‌ ಜಿಎಸ್‌ಬಿ ಶಾಂತಿಧಾಮ: ಶ್ರೀ ವೆಂಕಟೇಶ್ವರ ವ್ರತಾಚರಣೆ

11:54 AM Jan 01, 2019 | |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಶ್ರೀ ವೆಂಕಟೇಶ್ವರ ವ್ರತಾಚರಣೆಯು ಡಿ. 29ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಪ್ರಾತಃಕಾಲದಿಂದ ಶ್ರೀ ವೆಂಕಟೇಶ ದೇವರಿಗೆ ಭೂದೇವಿ, ಶ್ರೀದೇವಿ ಸಹಿತ ಸುಪ್ರಭಾತ ಸೇವೆ, ಚೆಂಡೆ ಸೇವೆ, ವಾದ್ಯ ಸೇವೆ, ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ತುಳಸಿ ಅರ್ಚನೆ ಹಾಗೂ ಇಪ್ಪತ್ತೂಂದು ಬಗೆಯ ಮಹಾನೈವೇದ್ಯ ಅರ್ಪಿಸಲಾಯಿತು. ವೇದಮೂರ್ತಿ ಗಿರಿಧರ ಭಟ್‌ ಅವರ ಮಾರ್ಗದರ್ಶನದಲ್ಲಿ ಸಮಿತಿಯ ವಿಶ್ವಸ್ಥರಾದ ಶ್ರೀಮತಿ ಲಕ್ಷ್ಮೀ  ನರಸಿಂಹ ಪ್ರಭು, ನರಸಿಂಹ ಅನಂತ ಪ್ರಭು ಮತ್ತು ಅಭಿಜಿತ್‌ ನರಸಿಂಹ ಪ್ರಭು ಅವರ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ಭಜನಾ ಮಂಡಳಿ ಮೂಡಬಿದ್ರೆ ಇದರ ಸಕ್ರಿಯ ಸದಸ್ಯರಾದ ಮನೋಹರ ಮಲ್ಯ, ತುಕಾರಾಮ ಮಲ್ಯ, ಸುಧೀರ್‌ ಮಲ್ಯ ಮತ್ತು ಅವರ ಮಕ್ಕಳಾದ ರಾಮ್‌ಪ್ರಸಾದ್‌ ಮಲ್ಯ, ವೆಂಕಟೇಶ್‌ ಮಲ್ಯ ಇವರಿಂದ ಭಜನಾ ಸೇವೆಯನ್ನು ಆಯೋಜಿಸಲಾಗಿತ್ತು. ಇವರು ಕೊಂಕಣಿ, ಕನ್ನಡ, ಹಿಂದಿ, ಮರಾಠಿ ಭಜನೆಗಳನ್ನು ಹಾಡಿ ಭಕ್ತಾದಿಗಳನ್ನು ರಂಜಿಸಿದರು.

ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ವಿನಯ ದಳ್ವಿ, ತಬಲಾದಲ್ಲಿ ಶಂತನು ಶುಕ್ಲ, ಪಖ್ವಾಜ್‌ನಲ್ಲಿ ರಾಘವೇಂದ್ರ ಮಲ್ಯ ಇವರು ಸಹಕರಿಸಿದರು. ಲಕ್ಷ್ಮೀ ನರಸಿಂಹ ಪ್ರಭು ಅವರು ವೆಂಕಟೇಶ್ವರ ವ್ರತದ ಮಹತ್ವ ಮತ್ತು ಇದರ ಆಚರಣೆಯ ಉದ್ದೇಶವನ್ನು ವಿವರಿಸಿದರು. ಕೊನೆಯಲ್ಲಿ ಶ್ರೀ ವೆಂಕಟೇಶ ಮತ್ತು ಪರಿವಾರ ದೇವರಿಗೆ ಮಹಾಮಂಗಳಾರತಿ ನಡೆಯಿತು. ಭಜನಾ ಮಂಡಳಿಯವರಿಂದ ಪ್ರಸಾದ ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತೂಂದು ದಂಪತಿಗಳಿಗೆ ಪೂಜೆಗೈದು ಭಕ್ತರಿಗೆ ಸಮವಸ್ತ್ರ ವಿತರಿಸಲಾಯಿತು. ಸಮಿತಿಯ ವತಿಯಿಂದ ಬೆಳಗ್ಗೆ ಫಲಾಹಾರ ಮತ್ತು ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಅಭಿಜಿತ್‌ ಪ್ರಭು ಅವರ ನೇತೃತ್ವದಲ್ಲಿ ಅಲಂಕರಿಸಲಾಗಿದ್ದ ದೇವರ ಮಂಟಪ ಭಕ್ತರ ಗಮನ ಸೆಳೆಯಿತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next