Advertisement

ವರಂಗ: ಈ ಕಂಬಳ ಗದ್ದೆ ನಾಟಿಗೆ ಅರ್ಧ ಶತಕ‌-ಒಂದೇ ದಿನದಲ್ಲಿ ನಾಟಿ

05:51 PM Jul 01, 2024 | Team Udayavani |

ಕಾರ್ಕಳ: ಆಧುನಿಕತೆ ಬೆಳೆದಂತೆ ಸಾಂಪ್ರಾದಾಯಿಕ ಕೃಷಿ ಚಟುವಟಿಕೆ ಮರೆಯಾಗುತ್ತಿದೆ ಎನ್ನುವ ಅಪವಾದದ ಮಧ್ಯೆಯೂ ಇಲ್ಲೊಂದು ಗದ್ದೆಯಲ್ಲಿ ನಡೆಸುವ ನಾಟಿ ಕಾರ್ಯಕ್ಕೆ ಐವತ್ತು ವರ್ಷ ತುಂಬಿದೆ. ವರಂಗ ಜೈನ ಮಠಕ್ಕೆ ಒಳಪಡುವ ವಿಟಲ ಪೂಜಾರಿಯವರ ಕಂಬಳ ಗದ್ದೆಯ 50ನೇ ವರ್ಷದ ನಾಟಿ ಕಾರ್ಯ ರವಿವಾರ ನಡೆಯಿತು. ಇದ ರೊಂದಿಗೆ ಸುದೀರ್ಘ‌ ಕಾಲದ
ಪದ್ಧತಿಯೊಂದು ಜೀವಂತಿಕೆ ಉಳಿಸಿಕೊಂಡ ಕೀರ್ತಿಯೂ ಈ ಗದ್ದೆಗೆ ಪ್ರಾಪ್ತವಾಗಿದೆ.

Advertisement

ವರಂಗ ಕಂಬಳ ಗದ್ದೆ ಸುಮಾರು ಎರಡೂವರೆ ಎಕ್ರೆ ಪ್ರದೇಶದಲ್ಲಿದೆ. ಸಹಜ ಪ್ರಕೃತಿ ಸೌಂದರ್ಯದ ನಡುವೆ ಕಾಣ ಬರುವ ಈ ಗದ್ದೆಯಲ್ಲಿ ನಾಟಿ ಮಾಡಲು ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸಾಕ್ಷಿಯಾಗುತ್ತಾರೆ. ವಿಟಲ ಪೂಜಾರಿಯವರ ಮನೆ ಮಂದಿ, ಇತರರೂ ಸೇರಿ ಉಳುಮೆ, ನಾಟಿ ಕಾರ್ಯದಲ್ಲಿ ಭಾಗವಹಿಸುತ್ತಾರೆ.

ಅವಿಭಕ್ತ ಕುಟುಂಬ
ಈ ಕಂಬಳ ಗದ್ದೆಯನ್ನು ನೋಡಿಕೊಳ್ಳುವ ವಿಟಲ ಪೂಜಾರಿಯವರದ್ದು ಅವಿಭಕ್ತ ಕುಟುಂಬ. ಅವರ ಮನೆಯಲ್ಲಿ ಸುಮಾರು 30 ಜನ ವಾಸಿಸುತ್ತಿದ್ದಾರೆ. ಕುಟುಂಬದ ಬಹುತೇಕ ಮಂದಿ ವಿವಿಧ ಉದ್ಯೋಗದಲ್ಲಿದ್ದಾರೆ.

ವಿದೇಶದಿಂದ ಬಂದು ಭಾಗಿ
ಕುಟುಂಬದ ಸದಸ್ಯ ದಿವಾಕರ ಎಂಬವರು ಕತಾರ್‌, ಸುಧೀರ್‌ ಎಂಬವರು ಬಹ್ರೈನ್‌ನಲ್ಲಿ ಇದ್ದಾರೆ. ಇನ್ನುಳಿದಂತೆ ಕುಟುಂಬದ ಹೆಚ್ಚಿನವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಈ ಕಂಬಳ ಗದ್ದೆಯ ನಾಟಿ ಸಮಯದಲ್ಲಿ ಅವರೆಲ್ಲರೂ ಪ್ರತೀ ವರ್ಷ ಬಂದು ಉಳುಮೆ, ನಾಟಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ಬಾರಿ ವಿದೇಶದಲ್ಲಿದ್ದವರು ಕಾರಣಾಂತರಗಳಿಂದ
ಬಂದಿರಲಿಲ್ಲ. ಕಿರಿಯ ಪುತ್ರ ಪ್ರಮೋದ್‌ ಕಂಬಳ ಕೋಣಗಳ ಮೂಲಕ ಉರಲ್‌ ಹಾಡುತ್ತಾ ಗದ್ದೆ ಉಳುಮೆ ಮಾಡುತ್ತಾರೆ,
ಮಹಿಳೆಯರು ಎದುರುಗತೆ, ಹಾಡು ಹರಟೆ, ಒಗಟುಗಳು ಬಿಡಿಸಿಕೊಂಡು ನಾಟಿ ನಡೆಸುತ್ತ ಮನೆಮಂದಿ, ನಾಟಿ ನಡೆಸುವ
ಮಹಿಳೆಯರು ನಾಟಿ ಮಾಡುವ ದಿನವನ್ನು ಹಬ್ಬದಂತೆ ಆಚರಿಸಿ ಖುಷಿ ಪಡುತ್ತಾರೆ.

ಪಸರಿಸುವ ಪಾಡ್ದನದ ಕಂಪು
ನಾಟಿಯ ಸಂದರ್ಭದಲ್ಲಿ ಕಂಬಳಮನೆಯ ಸುನಂದ ಪೂಜಾರ್ತಿ, ರತ್ನಾ, ಜಲಜಾ, ಆಶಾ, ಸರಸ್ವತಿ, ಸೇರಿದಂತೆ ಹರಿಖಂಡಿಗೆ ಸಮೀಪದ ಮಹಿಳೆಯರು ಪಾಡ್ದನಗಳನ್ನು ಹಾಡಿಕೊಂಡು ನಾಟಿ ಮಾಡುತ್ತಾರೆ. ಜತೆಗೆ ಓಬೇಲೆ, ಹೊಯ್ನಾ, ಕೋಟಿ ಚೆನ್ನಯ್ಯರ ಪಾರ್ದನಗಳು, ರಾಜ ಮಹರಾಜರ ಕಥೆಗಳು, ಗುಮ್ಮನ ಕಥೆಗಳು, ಗುಡುಗುಂಟಪ್ಪನ ಕಥೆಗಳು, ಗರ್ಭಿಣಿ ಸ್ತ್ರೀಯ ತುಮುಲಗಳು, ಸೀಮಂತದ ಹಾಡುಗಳು, ಪ್ರಾಣಿ ಪಕ್ಷಿಗಳ ಹಾಡುಗಳು ಜನಪದೀಯವಾಗಿ ಸುಂದರ ಸ್ವರದಲ್ಲಿ ಮೂಡಿ ಬರುತ್ತವೆ.

Advertisement

ಒಂದೇ ದಿನದಲ್ಲಿ ನಾಟಿ
ದೈವತ್ವದ ಮಹತ್ವ ಹೊಂದಿರುವ ಈ ಗದ್ದೆಯಲ್ಲಿ ಕೇವಲ ಒಂದೇ ದಿನದಲ್ಲಿ ನಾಟಿಯಾಗಬೇಕು ಎಂಬುದು ಮನೆಯ ಹಿರಿಯರ ನಂಬಿಕೆ. ನಾಟಿಯಾದ ಬಳಿಕ ಈ ಗದ್ದೆಯಲ್ಲಿ ಎಲ್ಲ ಮಹಿಳೆಯರು ಒಂದೆಡೆ ಸೇರಿಕೊಂಡು ದೈವದಲ್ಲಿ ಪಾಡ್ದನ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿಕ ಗದ್ದೆ ಮಧ್ಯಭಾಗದಲ್ಲಿ ವಿವಿಧ ಪೂಜನೀಯ ಮರದ ಎಲೆಗಳನ್ನು ಸಂಗ್ರಹಿಸಿ ಹೂವುಗಳಿಂದ ಸಿಂಗರಿಸಿ ಉದ್ದ ಕೋಲಿನ ಸಹಾಯದಿಂದ ಬೊಲ್ಚಿಯನ್ನು ನಿಲ್ಲಿಸಲಾಗುತ್ತದೆ. ಪಕ್ಷಿಗಳು ಬಂದು ಇದರಲ್ಲಿ ಕುಳಿತು ಕೀಟಗಳನ್ನು ನಾಶ ಪಡಿಸುವುದಕ್ಕೆಂದೆ ಇದನ್ನು ನಿಲ್ಲಿಸಲಾಗುತ್ತಿದೆ.

ವರಂಗ ಕಂಬಳ ನಡೆಯುವ ಗದ್ದೆ
ಪ್ರತೀ ವರ್ಷ ಕೊಯ್ಲು ಮುಗಿದ ಬಳಿಕ ವರಂಗ ಕಂಬಳ ನಡೆಯುವುದು ಇದೇ ಗದ್ದೆಯಲ್ಲಿ. ಕೋಣಗಳನ್ನು ಉಳುಮೆಗೆ ಬಳಸುವುದಲ್ಲದೆ ಕಂಬಳಕ್ಕೂ ಬಳಸುತ್ತಾರೆ. ಈ ಗದ್ದೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಕಂಬಳ ಕೂಟದಲ್ಲಿ ಬೈಂದೂರು, ಕುಂದಾಪುರ, ಹಾಲಾಡಿ, ಕಾರ್ಕಳ, ಕೆರ್ವಾಶೆ ಸೇರಿದಂತೆ ವಿವಿಧ ಕಡೆಯ ಸುಮಾರು ಐವತ್ತಕ್ಕೂ ಹೆಚ್ಚು ಕಂಬಳ ಕೋಣಗಳು ಭಾಗವಹಿಸುತ್ತವೆ. ವಿಶೇಷ ಹಳ್ಳಿಯ ಸೊಗಡನ್ನು ಹೊಂದಿರುವ ಈ ಕಂಬಳವನ್ನು ನೋಡಲು ಸಹಸ್ರಾರು ಮಂದಿ ಆಗಮಿಸುತ್ತಾರೆ.

ನಾಟಿ ಕಾರ್ಯ ಹಬ್ಬದಂತೆ
ತುಳುನಾಡಿನ ಸಾಂಪ್ರಾದಾಯಿಕ ಆಚರಣೆ ಉಳಿಸಿ ಮುಂದಿನ ತಲೆಮಾರಿಗೆ ದಾಟಿಸಬೇಕಿದೆ. ಕಂಬಳ ಗದ್ದೆಯ ನಾಟಿ ನಮ್ಮ ಕುಟುಂಬದ ಮಂದಿಗಲ್ಲದೆ ನಾಟಿ ಕಾರ್ಯಕ್ಕೆ ಬರುವ ಎಲ್ಲರಿಗೂ ಒಂದು ಹಬ್ಬದಂತೆ. ಸುಧೀರ್ಘ‌ ಅವಧಿಯಿಂದ ನಡೆಸಿಕೊಂಡು ಬಂದ ನಾಟಿ ಕಾರ್ಯ ಈ ಬಾರಿ ಅದು 50 ವರ್ಷ ಪೂರೈಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇದು ಮುಂದುವರಿಯಲಿದೆ.
-ವಿಟಲ ಪೂಜಾರಿ ವರಂಗ

Advertisement

Udayavani is now on Telegram. Click here to join our channel and stay updated with the latest news.

Next