Advertisement

Valmiki Nigama Scam: ಹಣ ವರ್ಗಾವಣೆಗೆ ಮಾಜಿ ಸಚಿವ ನಾಗೇಂದ್ರ ಒತ್ತಡ?

12:01 AM Jul 11, 2024 | Team Udayavani |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ತನಿಖೆಯು ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು, 187 ಕೋಟಿ ರೂ. ವರ್ಗಾವಣೆಗೆ ಮಾಜಿ ಸಚಿವ ನಾಗೇಂದ್ರ ಆಪ್ತರ ಮೂಲಕ ನಿಗಮದ ಅಧಿಕಾರಿಗಳಿಗೆ ಒತ್ತಡ ಹಾಕಿಸಿರುವುದು ತನಿಖೆಯಲ್ಲಿ ಮೆಲ್ನೋಟಕ್ಕೆ ಕಂಡು ಬಂದಿದೆ.

Advertisement

ವಸಂತನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಲ್ಲಿ ಬಳಕೆಯಾಗದೇ 187 ಕೋಟಿ ರೂ. ಉಳಿದಿತ್ತು. ತನಿಖಾ ಸಂಸ್ಥೆಗಳಿಗೆ ಸಿಕ್ಕಿರುವ ಸಾಕ್ಷ್ಯವನ್ನು ಪರಿಶೀಲಿಸಿದಾಗ ಖಾಸಗಿ ಐಷಾರಾಮಿ ಹೊಟೇಲ್‌ನಲ್ಲಿ ಮಾಜಿ ಸಚಿವ ನಾಗೇಂದ್ರ ಅವರೇ 187 ಕೋಟಿ ರೂ. ವರ್ಗಾವಣೆಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರಾ ಎಂಬ ಅನುಮಾನ ಕಾಡಲಾರಂಭಿಸಿದೆ.

2023ರ ಡಿಸೆಂಬರ್‌ನಲ್ಲಿ ದುಡ್ಡು ಲಪಟಾಯಿಸುವ ಬಗ್ಗೆ ನಡೆದ ಮಾತು ಕತೆ ವೇಳೆ ನಿಗಮದ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್‌, ಮೃತಪಟ್ಟಿರುವ ಚಂದ್ರಶೇಖರ್‌ ಇದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಆ ವೇಳೆ ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್‌ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ ಹೊಸ ಖಾತೆ ತೆರೆದು ದುಡ್ಡು ವರ್ಗಾವಣೆಗೆ ಸೂಚಿಸಿದ್ದ. ಇದಕ್ಕೆ ಅಧಿಕಾರಿಗಳು ಮತ್ತೆ ನಿರಾಕರಿಸಿದ್ದರು.

ಅನಂತರ ಮಾಜಿ ಸಚಿವರೇ ಪದ್ಮನಾಭ ಅವರಿಗೆ ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆಯಲು ಸೂಚಿಸಿರುವ ಆರೋಪ ಕೇಳಿ ಬಂದಿದೆ. ಅದರಂತೆ ಡಿಸೆಂಬರ್‌ 2023ರ ಕೊನೆ ವಾರದಲ್ಲಿ ಆ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿತ್ತು. ನಾಗೇಂದ್ರ ಆಪ್ತ ಸಹಾಯಕ ಹರೀಶ್‌ ಮೂಲಕ 187 ಕೋಟಿ ರೂ. ಅನ್ನು ಈ ಖಾತೆಗೆ ವರ್ಗಾವಣೆ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿಸಲಾಗಿತ್ತು. ಈ ಬೆಳವಣಿಗೆ ಬಳಿಕ ಯೂನಿಯನ್‌ ಬ್ಯಾಂಕ್‌ಗೆ 187 ಕೋಟಿ ಹಣ ವರ್ಗಾವಣೆಯಾಗಿತ್ತು. ಅನಂತರ ಆರೋಪಿಗಳು 94 ಕೋಟಿ ರೂ. ಅನ್ನು ಹೈದರಾಬಾದ್‌ನಲ್ಲಿರುವ ಆರ್‌ಬಿಎಲ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದರು.

ಹವಾಲಾ ಮೂಲಕ ದುಡ್ಡು ಪಡೆದು ಹಂಚಿಕೆ?
ಬಂಧಿತ ಸತ್ಯನಾರಾಯಣ ವರ್ಮಾ ಹವಾಲಾ ಮೂಲಕ ಹಾಗೂ ಕಪ್ಪು ಹಣವಾಗಿ ಪರಿವರ್ತಿಸಿ ಬೇರೆಡೆ ವರ್ಗಾಯಿಸಿದ್ದ. ಅನಂತರ ಬೆಂಗಳೂರಿನಲ್ಲಿ ಕಪ್ಪು ಹಣ ದಂಧೆ ನಡೆಸುವ ಕೆಲವು ವ್ಯಕ್ತಿಗಳ ಸಹಾಯದಿಂದ ಹಂತ-ಹಂತವಾಗಿ ಪದ್ಮನಾಭ ನಿಗಮದ ದುಡ್ಡನ್ನು ಪಡೆದು ಇತರ ಆರೋಪಿಗಳಿಗೆ ಹಂಚಿಕೆ ಮಾಡಿದ್ದ. ಈ ದುಡ್ಡು ಮಾಜಿ ಸಚಿವ, ನಿಗಮದ ಅಧ್ಯಕ್ಷ, ಬಂಧಿತ ಹರೀಶ್‌, ನೆಕ್ಕುಂಟಿ ನಾಗರಾಜ್‌ ಸೇರಿ ಹಲವರಿಗೆ ಹಂಚಿಕೆಯಾಗಿರುವ ಆರೋಪ ಕೇಳಿ ಬಂದಿದೆ. ದದ್ದಲ್‌ ಆಪ್ತ ಸಹಾಯಕ ಎನ್ನಲಾದ ಪಂಪಣ್ಣ ಸ್ವತಃ ಪದ್ಮನಾಭ ಅವರಿಂದ ಶೇಷಾದ್ರಿಪುರ ಸ್ಲಂಬೋರ್ಡ್‌ ಬಳಿ 50 ಲಕ್ಷ ರೂ. ಪಡೆದಿದ್ದ. ಕಳೆದ 3 ತಿಂಗಳಿಂದ ಈ ಹಣ ಹಂಚಿಕೆಯಾಗಿತ್ತು ಎನ್ನಲಾಗಿದೆ.

Advertisement

ಜಾರಿ ನಿರ್ದೇಶನಾಲಯಕ್ಕೆ ಸುಳಿವು ಸಿಕ್ಕಿದ್ದು ಹೇಗೆ?
ಇಡಿ ಅಧಿಕಾರಿಗಳು ಎಸ್‌ಐಟಿಯಿಂದ ಕೆಲವು ಮಾಹಿತಿ, ದಾಖಲೆ ಪಡೆದಿದ್ದಾರೆ. ಕೋರ್ಟ್‌ಗೆ ಎಸ್‌ಐಟಿ ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆ ಪಡೆದು ಪರಿಶೀಲಿಸಿದ್ದರು. ಪ್ರಕರಣದಲ್ಲಿ ಹವಾಲಾ ದುಡ್ಡಿನ ವ್ಯವಹಾರ ನಡೆದಿರುವ ಸುಳಿವು ಸಿಕ್ಕಿದ್ದು, ಇದರ ವಿಚಾರಣೆಗೆ ಅವಕಾಶ ಕೊಡುವಂತೆ ಕೋರ್ಟ್‌ಗೆ ಇಡಿ ಅರ್ಜಿ ಸಲ್ಲಿಸಿತ್ತು. ಕೋರ್ಟ್‌ನಿಂದ ಗ್ರೀನ್‌ ಸಿಗ್ನಲ್‌ ಸಿಗುತ್ತಿದ್ದಂತೆ ಜೈಲಿನಲ್ಲಿದ್ದ ಸತ್ಯನಾರಾಯಣ ವರ್ಮಾ, ಪದ್ಮನಾಬ್‌, ಪರಶುರಾಮ್‌ರನ್ನು ಜುಲೈ 1 ಹಾಗೂ 2ರಂದು ವಿಚಾರಣೆ ನಡೆಸಿದ್ದರು. ಆ ವೇಳೆ ಸತ್ಯನಾರಾಯಣ ವರ್ಮಾ ಹಗರಣದ ಬಗ್ಗೆ ಎಳೆ-ಎಳೆಯಾಗಿ ಇಡಿಗೆ ಮಾಹಿತಿ ಕೊಟ್ಟಿದ್ದ. ಈ ಅಂಶಗಳ ಆಧಾರದ ಮೇಲೆ ಇಡಿ ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಇಸಿಐಆರ್‌ (ಪ್ರಕರಣ) ದಾಖಲಿಸಿಕೊಂಡು ಇನ್ನಷ್ಟು ಆಳಕ್ಕೆ ಹೋಗಿ ತನಿಖೆ ನಡೆಸಿತ್ತು. ಮತ್ತಷ್ಟು ಸಾಕ್ಷ್ಯ ಸಿಗುತ್ತಿದ್ದಂತೆ ಹಗರಣದಲ್ಲಿ ಶಾಮೀಲಾಗಿರುವವರಿಗೆ ಸಂಬಂಧಿಸಿದ ಮನೆ, ಕಚೇರಿಗಳಿಗೆ ಇಡಿ ಅಧಿಕಾರಿಗಳು ಬುಧವಾರ ಬೆಳಗ್ಗೆ ಸರಣಿ ದಾಳಿ ನಡೆಸಿದ್ದಾರೆ.

ದಾಖಲೆಗಾಗಿ ಸುದೀರ್ಘ‌ ತಡಕಾಟ
ಡಾಲರ್ಸ್‌ ಕಾಲನಿಯಲ್ಲಿರುವ ಮಾಜಿ ಸಚಿವ ನಾಗೇಂದ್ರ ಅವರ ನಿವಾಸದ ಮೇಲೆ ಬೆಳಗ್ಗೆ ದಾಳಿ ನಡೆಸಿದ್ದ ಇಡೀ ರಾತ್ರಿ 7 ಗಂಟೆಯವರೆಗೂ ಹಗರಣದ ದಾಖಲೆಗಳಿಗಾಗಿ ತಡಕಾಡಿದೆ. ಅನಂತರ ನಾಗೇಂದ್ರ ಅವರಿಂದ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪ್ರಾಥಮಿಕ ಹಂತದ ಮಾಹಿತಿ ಪಡೆದಿದ್ದಾರೆ. ಅನಂತರ ಮನೆಯಿಂದ ತೆರಳಿದ್ದಾರೆ.

ಹಗರಣದಲ್ಲಿ ಬಂಧಿತರ ಸಂಖ್ಯೆ 11
ವಾಲ್ಮೀಕಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜೆ.ಪದ್ಮನಾಭ್‌, ನಿಗಮದ ಹಿಂದಿನ ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣವರ, ಮಾಜಿ ಸಚಿವ ಬಿ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್‌, ಮಾಜಿ ಸಚಿವ ನಾಗೇಂದ್ರ ಸಂಬಂಧಿ ನಾಗೇಶ್ವರ ರಾವ್‌, ಸತ್ಯನಾರಾಯಣ ವರ್ಮಾ ಸಹಚರ ಸಾಯಿ ತೇಜ, ಶಾಸಕ ದದ್ದಲ್‌ ಪಿಎ ತೇಜ ತಮ್ಮಯ್ಯ, ಎಫ್ಎಫ್ಸಿಸಿಎಸ್‌ಎಲ್‌ ಅಧ್ಯಕ್ಷ ಸತ್ಯನಾರಾಯಣ, ಮಧ್ಯವರ್ತಿಗಳಾದ ಸತ್ಯನಾರಾಯಣ ವರ್ಮಾ, ಚಂದ್ರಮೋಹನ್‌, ಶ್ರೀನಿವಾಸ್‌, ಜಗದೀಶ್‌ ಎಸ್‌ಐಟಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ.

ಡೆಪ್ಯೂಟಿ ಮ್ಯಾನೇಜರ್‌ ಮನೆ ಸೀಲ್‌
ಬೆಂಗಳೂರು ಎಂ.ಜಿ ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಶಾಖೆಯ ಡೆಪ್ಯೂಟಿ ಮ್ಯಾನೇಜರ್‌ ದೀಪಾ ಡಿ ಅವರ ಮನೆಯನ್ನು ಸಿಬಿಐ ಅಧಿಕಾರಿಗಳು ಸೀಲ್‌ ಮಾಡಿ¨ªಾರೆ. ಹಣದ ವಹಿವಾಟಿನ ಬಗ್ಗೆ ಇ.ಡಿ. ಅಧಿಕಾರಿಗಳು ಎಂ.ಜಿ. ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಶಾಖೆಗೆ ಬಂದು ಪರಿಶೀಲಿಸಿದ್ದರು. ಹಗರಣದಲ್ಲಿ ಬ್ಯಾಂಕ್‌ ಶಾಖೆ ಡೆಪ್ಯೂಟಿ ಮ್ಯಾನೇಜರ್‌ ದೀಪಾ ಅವರ ಕೈವಾಡವಿರುವ ಆರೋಪ ಕೇಳಿಬಂದ ಬೆನ್ನಲ್ಲೇ ವಿಜಯನಗರದಲ್ಲಿರುವ ಅವರ ಮನೆಗೆ ತೆರಳಿದ್ದರು. ಆ ವೇಳೆ ದೀಪಾ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಮನೆಯನ್ನು ಸಿಬಿಐ ಅಧಿಕಾರಿಗಳು ಸೀಲ್‌ ಮಾಡಿದ್ದಾರೆ. ವಂಚನೆ ಪ್ರಕರಣ ತನಿಖಾ ಹಂತದಲ್ಲಿದೆ. ಅನುಮತಿ ಇಲ್ಲದೇ ಈ ಮನೆಯೊಳಗೆ ಪ್ರವೇಶಿಸುವಂತಿಲ್ಲ ಎಂದು ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next