Advertisement

ರಾಮರಾಜ್ಯ ಕಲ್ಪನೆ ಸಾರಿದ ವಾಲ್ಮೀಕಿ

10:59 AM Nov 26, 2018 | |

ಯಾದಗಿರಿ: ರಾಮಾಯಣ ಗ್ರಂಥ ರಚಿಸಿ ವಿಶ್ವಕ್ಕೆ ರಾಮರಾಜ್ಯದ ಕಲ್ಪನೆ ಸಾರಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ರಾಯಚೂರು ಸಂಸದ ಬಿ.ವಿ.ನಾಯಕ ಹೇಳಿದರು.

Advertisement

ನಗರದ ಇಂಪೀರಿಯಲ್‌ ಗಾರ್ಡ್‌ನ್‌ನಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ನೌಕರರ 2ನೇ ಜಿಲ್ಲಾ ಸಮ್ಮೇಳನದಲ್ಲಿ ಎಲ್‌.ಜಿ. ಹಾವನೂರ ಭಾವಚಿತ್ರ ಅನಾವರಣ ಮಾಡಿ ಅವರು ಮಾತನಾಡಿದರು.  ಕಲಬುರಗಿ, ಬೀದರ ಜಿಲ್ಲೆಗಳಲ್ಲಿ ಸುಳ್ಳು ಜಾತಿ ನಮೂದಿಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದು ಅರ್ಹರ ಹಕ್ಕು ಕಿತ್ತುಕೊಳ್ಳುವ ಕೆಲಸವಾಗುತ್ತಿದೆ ಎಂದು ಹೇಳಿದರು. 

ಸಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿ ಹರಿಬಿಡಲಾಗುತ್ತಿದ್ದು, ಅವುಗಳಿಗೆ ಕಿವಿಗೊಡಬಾರದು. ಪರಿಶಿಷ್ಟ ಜಾತಿ ಪಂಗಡದವರಿಗೆ ಮುಂಬಡ್ತಿ ವಿಚಾರ ಕೋರ್ಟ್‌ ಆದೇಶ ನೀಡಿದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೋರ್ವ ಸಂಸದ ವಿ.ಎಸ್‌. ಉಗ್ರಪ್ಪ ಅವರು ಪೆರಿಯಾರ್‌ ರಾಮಸ್ವಾಮಿ ನಾಯ್ಕರ್‌ ಅವರ ಭಾವಚಿತ್ರ ಅನಾವರಣ
ಮಾಡಿ ಮಾತನಾಡಿ, ರಾಜಕೀಯವಾಗಿ ಕೃಷ್ಣ, ಅರ್ಜುನರಿಗೆ ಯುದ್ಧವಾಗಿದೆ. ಆದರೆ ಸಮಾಜದ ವಿಚಾರಕ್ಕೆ ಬಂದಾಗ ನಾವೆಲ್ಲ ಒಗ್ಗಟ್ಟಾಗಿ ಹೋರಾಡುತ್ತೇವೆ. ದೇಶದಲ್ಲಿ ಮೂಲ ನಿವಾಸಿಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವವರು ವಾಲ್ಮೀಕಿ ವಂಶಸ್ಥರು ಎಂದು ಹೇಳಿದರು. ವಿಶ್ವದಲ್ಲಿ ಮೊದಲು ಲೇಖನಿ ಹಿಡಿದವರು ವಾಲ್ಮೀಕಿ ಮಹರ್ಷಿಗಳು. 

ಅವರೊಬ್ಬ ಮಾನವತಾವಾದಿ, ದಾರ್ಶನಿಕರು, ಮಹರ್ಷಿ ವಾಲ್ಮೀಕಿ ಕೆಟ್ಟವರು, ದರೋಡೆ ಮಾಡುತ್ತಿದ್ದರು ಎನ್ನುವುದರ
ಕುರಿತು ಸಾಬೀತು ಪಡೆಸಿದರೆ ಆಯಸ್ಸು ಇರುವವರೆಗೆ ಅವರ ಮನೆಯಾಳಾಗಿರುತ್ತೇನೆ ಎಂದು ಸವಾಲು ಎಸೆದರು. ರಾಮನ ವಿಚಾರ ಮಾತನಾಡುವವರು ವಾಲ್ಮೀಕಿ ಬಗ್ಗೆ ಮಾತನಾಡುತ್ತಿಲ್ಲ. ಜಾತ್ಯತೀತ ಸಿದ್ಧಾಂತದವರಾಗಬೇಕು. ಮೀಸಲಾತಿ ಲಾಭ ಪಡೆದು ಮೀಸಲಾತಿಯನ್ನು ವಿರೋಧಿಸುವ ಆಧುನಿಕ ದ್ರೋಣಾಚಾರ್ಯರಿಂದ ಎಚ್ಚರವಿರಬೇಕು ಎಂದು ಹೇಳಿದರು. 

Advertisement

ಸುರಪುರ ಶಾಸಕ ರಾಜುಗೌಡ ಮಾತನಾಡಿ, ರಾಜ್ಯದ ಜನರು ಶ್ರೀರಾಮುಲು ಅಥವಾ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಬಯಕೆ ಹೊಂದಿದ್ದಾರೆ. ಇದನ್ನು ನೆರವೇರಿಸಲು ಸಮುದಾಯದ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು. 

ನೌಕರರಿಗೆ ಮುಂಬಡ್ತಿ ಮೀಸಲಾತಿ ವಿಚಾರವಾಗಿ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ
ಅಧಿವೇಶನದಲ್ಲಿ ಪಕ್ಷಭೇದ ಮರೆತು ಹೋರಾಡುತ್ತೇವೆ ಎಂದು ಹೇಳಿದರು. ಶಾಸಕ ಬಿ. ಶ್ರೀರಾಮುಲು ಮಾತನಾಡಿ, ಸಮಾಜ ಒಗ್ಗಟ್ಟಾಗಿರಬೇಕು. ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ನಾವು ಸಮಾಜದ ಸೇವಕರು ಎಂದು ಹೇಳಿದರು. ಮೈಸೂರಿನ ಉರಿಲಿಂಗ ಪೆದ್ದಿಮಠದ ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಸಮಾಜವನ್ನು ಸದೃಢವಾಗಿಸಲು ಶಿಕ್ಷಣವೊಂದೇ ಅಸ್ತ್ರ. ದೇಶದಲ್ಲಿ ಪ್ರತಿಮೆಗಳನಲ್ಲ, ಪ್ರತಿಭೆಗಳನ್ನು ನಿರ್ಮಿಸಬೇಕು. ರಾಮನನ್ನು ಪರಿಚಯಿಸಿದ ವಾಲ್ಮೀಕಿಗೆ ಗೌರವ ಸಿಗದಿರುವುದು ಬೇಸರದ ವಿಚಾರ ಎಂದು ಹೇಳಿದರು. 

ಪೂಜ್ಯ ವರದಾನೇಶ್ವರ ಶ್ರೀಗಳು, ರಾಜಾ ಕೃಷ್ಣಪ್ಪ ನಾಯಕ, ಚನ್ನಬಸ್ಸಪ್ಪ ಮೆಕಾಲೆ, ಎ.ಸಿ. ತಿಪ್ಪೇಸ್ವಾಮಿ, ಹಣಮೇಗೌಡ ಬೀರನಕಲ್‌, ದೇವಿಂದ್ರಪ್ಪಗೌಡ ಗೌಡಗೇರಿ, ಡಾ| ರಾಜಾ ವೆಂಕಟಪ್ಪ ನಾಯಕ, ಸುದರ್ಶನ ನಾಯಕ, ಜಿಪಂ ಸದಸ್ಯರಾದ ಶರಣಮ್ಮ ಹೊಸಕೇರಿ, ಮರಿಲಿಂಗಪ್ಪ ಕಾರ್ನಾಳ, ಲಕ್ಷ್ಮೀ ದೊಡ್ಡ ದೇಸಾಯಿ,ಅಮರದೀಪ ನಾಯಕ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗ್ಧಂಪುರ ಇದ್ದರು.

ನೌಕರ ಸಂಘದ ಜಿಲ್ಲಾಧ್ಯಕ್ಷ ಯಮನಪ್ಪ ನಾಯಕ ತನಿಕೆದಾರ ಅಧ್ಯಕ್ಷತೆ ವಹಿಸಿದ್ದರು. ಡಾ| ಅಮರೇಶ ಯಾತಗಲ್‌ ವಿಶೇಷ
ಉಪನ್ಯಾಸ ನೀಡಿದರು. ಡಾ| ಎಸ್‌.ಎಸ್‌. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಮ್ಮಣ್ಣ ನಾಯಕ ಸ್ವಾಗತಿಸಿದರು. ಎಚ್‌.ಬಿ. ಬಂಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next