Advertisement

ನಟ ವಜ್ರಮುನಿಯ ಬೆಚ್ಚಿಬೀಳಿಸೋ “ವಿಲನ್” ಪಾತ್ರದ ಹಿಂದೆ ಅದೆಷ್ಟು ನೋವು!

01:57 PM Oct 18, 2018 | Sharanya Alva |

ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯ, ಗಡಸು ಕಂಠದಿಂದಲೇ ಖಳನಟನ ಪಾತ್ರಕ್ಕೆ ಜೀವ ತುಂಬುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು ಈ ನಟ. ಸ್ಯಾಂಡಲ್ ವುಡ್ ನಲ್ಲಿ ಕೆಡಿ ನಾಗಪ್ಪ ಹಾಗೂ ರಂಗಾ ಅವರು ವಿಲನ್ ಪಾತ್ರದಲ್ಲಿ ಮಿಂಚಿದ್ದು, ಬಳಿಕ ಆ ಸ್ಥಾನವನ್ನು ಆಕ್ರಮಿಸಿಕೊಂಡವರು ಇವರೇ..ತಮ್ಮ ಖಳನಾಯಕನ ಪಾತ್ರದಿಂದಲೇ ನಟ ಭಯಂಕರ ಎಂದು ಖ್ಯಾತಿ ಪಡೆದಿದ್ದರು..ಹೌದು ಇವರು ಬೇರಾರು ಅಲ್ಲ..ವಜ್ರಮುನಿ!

Advertisement

ಕಾಲೇಜು ಶಿಕ್ಷಣದಿಂದ ಡ್ರಾಪ್ ಔಟ್ ಆಗಿದ್ದ ವಜ್ರಮುನಿಯವರು ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು. ಪ್ರಚಂಡ ರಾವಣ, ಕುರುಕ್ಷೇತ್ರದಂತಹ ನಾಟಕಗಳಲ್ಲಿ ವಜ್ರಮುನಿ ಮಿಂಚುವ ಮೂಲಕ ಜನಪ್ರಿಯತೆ ಪಡೆದಿದ್ದರು. ತಮ್ಮ ಅಪರಿಚಿತ ಗೆಳೆಯನೊಂದಿಗೆ ಅದೃಷ್ಟ ಪರೀಕ್ಷೆಗಾಗಿ ಮಹಾನಗರಿ ಮುಂಬೈಯತ್ತ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಆಡಿಷನ್ ನೀಡಿದ್ದರೂ, ಅದರಲ್ಲಿ ಆಯ್ಕೆಯಾಗಿದ್ದು ಮಾತ್ರ ವಜ್ರಮುನಿ. ಯಾಕೆಂದರೆ ವಜ್ರಮುನಿ ನೀನಾಸಂ ಹಿನ್ನೆಲೆಯಿಂದ ಬಂದಿರುವುದು ಕಾರಣವಾಗಿತ್ತು. ಆದರೆ ಮುಂಬೈಗೆ ಗುಡ್ ಬೈ ಹೇಳಿ ಅವರು ವಾಪಸ್ ಆಗಿದ್ದರು.

ಕಣಗಲ್ ಪ್ರಭಾಕರ್ ಶಾಸ್ತ್ರಿ ಅವರ ಪ್ರಚಂಡ ರಾವಣ ನಾಟಕದಲ್ಲಿ ವಜ್ರಮುನಿ ಅವರ ನಟನೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ತುಂಬಾ ಇಷ್ಟವಾಗಿತ್ತು..ಹೀಗೆ ತಮ್ಮ ಸಾವಿರ ಮೆಟ್ಟಿಲು ಸಿನಿಮಾದಲ್ಲಿ ವಜ್ರಮುನಿಗೆ ಅವಕಾಶ ಕೊಟ್ಟರು. ವಿಪರ್ಯಾಸ ಎಂಬಂತೆ ಆ ಸಿನಿಮಾ ತೆರೆಕಾಣಲಿಲ್ಲವಾಗಿತ್ತು. ತದನಂತರ ಪುಟ್ಟಣ್ಣ ಅವರು ಮಲ್ಲಮ್ಮನ ಪವಾಡ ಸಿನಿಮಾ ಆರಂಭಿಸಲು ನಿರ್ಧರಿಸಿದ್ದರಂತೆ. ಇದು ಕಾದಂಬರಿ ಆಧಾರಿತ ಸಿನಿಮಾವಾಗಿತ್ತು. ಇದಕ್ಕೂ ಮೊದಲು 1955ರಲ್ಲಿ ತೆಲುಗಿನಲ್ಲಿ ಅರ್ಧಾಂಗಿ ಸಿನಿಮಾ ಬಿಡುಗಡೆಯಾಗಿತ್ತು. ಮಲ್ಲಮ್ಮನ ಪವಾಡದ ರೀತಿಯೇ ಕಾದಂಬರಿ ಆಧರಿತ ಚಿತ್ರವಾಗಿತ್ತು. 1975ರಲ್ಲಿ ಅರ್ಧಾಂಗಿ ಸಿನಿಮಾ ತಮಿಳಿಗೆ ರಿಮೇಕ್ ಆಗಿತ್ತು. ಪೆಣ್ಣಿನ್ ಪೆರುಮಾಯಿ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು.

ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಮಲ್ಲಮ್ಮನ ಪವಾಡ ಸಿನಿಮಾದ ನಿರ್ಮಾಪಕರು ನಾಯಕ ನಟನಾಗಿ ಉದಯ್ ಕುಮಾರ್ ಅವರನ್ನು ಆಯ್ಕೆ ಮಾಡುವುದು ಒಳ್ಳೆಯದು ಎಂದು ಹೇಳಿದ್ದರಂತೆ. ತಮಿಳಿನಲ್ಲಿ ಶಿವಾಜಿ ಗಣೇಶನ್ ಮಾಡಿದ್ದ ಪಾತ್ರ ಕನ್ನಡದಲ್ಲಿ ಉದಯ್ ಕುಮಾರ್ ಮಾಡಲಿ ಎಂಬ ಆಶಯ ನಿರ್ಮಾಪಕರದ್ದಾಗಿತ್ತಂತೆ. ಇದಕ್ಕೆ ಪುಟ್ಟಣ್ಣ ಕಣಗಾಲ್ ಅವರು ಸಹಮತ ನೀಡದೆ ವಜ್ರಮುನಿಯನ್ನೇ ಆಯ್ಕೆ ಮಾಡಿದ್ದರು. ಆ ಬಳಿಕ ಕನ್ನಡ ಚಿತ್ರರಂಗದಲ್ಲಿ ವಜ್ರಮುನಿ ಹಿಂದಿರುಗಿ ನೋಡಲೇ ಇಲ್ಲ.

Advertisement

ಅವೆಲ್ಲಕ್ಕಿಂತ ಹೆಚ್ಚಾಗಿ ವಜ್ರಮುನಿ ಅವರು ಖಳನಟನಾಗಬೇಕೆಂದು ಸಿನಿಮಾರಂಗಕ್ಕೆ ಬಂದಿರಲಿಲ್ಲವಾಗಿತ್ತು. ನಾಯಕನಟನಾಗಲು ಬಯಸಿದ್ದ ಅವರನ್ನು ಪ್ರೇಕ್ಷಕ ಇಷ್ಟಪಟ್ಟಿದ್ದು ಮಾತ್ರ ಖಳನಟನಾಗಿ..ಕೊನೆಗೆ ಖಳನಟನ ಪಾತ್ರದಿಂದಲೇ ಜನಾನುರಾಗಿಯಾದರು.  ವಜ್ರಮುನಿ ನಟನೆಯ ಬೆಂಕಿ ಉಂಡೆ ಉಗುಳುವ ಕೆಂಪು ಕಣ್ಣು..ಆಕ್ರೋಶ..ಜೊತೆ, ಜೊತೆಗೆ ಕಂಚಿನ ಕಂಠದ ನಗು ಯಾರು ತಾನೇ ಮರೆಯಲು ಸಾಧ್ಯ.

ಗೆಜ್ಜೆ ಪೂಜೆ, ಸಿಪಾಯಿ ರಾಮು, ನ್ಯಾಯವೇ ದೇವರು, ಬಂಗಾರದ ಮನುಷ್ಯ, ಕುಳ್ಳ ಏಜೆಂಟ್ 000, ಭಲೇ ಹುಚ್ಚ, ಮೂರುವರೆ ವಜ್ರಗಳು, ಮಯೂರ, ಸಂಪತ್ತಿಗೆ ಸವಾಲ್, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಗಿರಿ ಕನ್ಯೆ, ಶಂಕರ್ ಗುರು ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಗಳಿಸಿದ್ದರು ವಜ್ರಮುನಿ.

ಡೈನಾಮಿಕ್ ವಜ್ರಮುನಿ ಅವರ ಗಡಸು ಕಂಠ ಸಿನಿಮಾ ಥಿಯೇಟರ್ ನೊಳಗೆ ಎಂತಹ ಗುಂಡಿಗೆಯನ್ನೂ ಒಮ್ಮೆ ಬೆಚ್ಚಿ ಬೀಳಿಸಬೇಕು. ಅಂತಹ ಅದ್ಭುತ ನಟರಾಗಿದ್ದವರು ವಜ್ರಮುನಿ. ಸಾಲು, ಸಾಲು ಚಿತ್ರಗಳಲ್ಲಿ ಖಳನಟನಾಗಿ ನಟಿಸಿ ಕನ್ನಡ ಚಿತ್ರಪ್ರೇಮಿಗಳ ಮನಗೆದ್ದಿದ್ದರು. ವಜ್ರಮುನಿ ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಅತೀ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು.

ತೆರೆಮೇಲೆ ಕ್ರೂರಿಯಾಗಿ ಕಾಣುವ, ರೇಪ್ ದೃಶ್ಯಗಳಲ್ಲಿ ಅಟ್ಟಹಾಸ ಮೆರೆಯುವ ವಜ್ರಮುನಿಯವರ ನಟನೆ ಎಂತಹವರಲ್ಲೂ ಕೋಪ ತರಿಸುತ್ತೆ. ಕಠೋರ ಪಾತ್ರಗಳಿಗೆ ಜೀವ ತುಂಬುತ್ತಿದ್ದ ವಜ್ರಮುನಿಯವರು ನಿಜಜೀವನದಲ್ಲಿ ತುಂಬಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದರಂತೆ. ಅದಕ್ಕೊಂದು ಉದಾಹರಣೆ..ಚಿತ್ರೀಕರಣದ ವೇಳೆ ರೇಪ್ ದೃಶ್ಯಗಳಿದ್ದರೆ ವಜ್ರಮುನಿಯವರು ಮೊದಲು ಆ ಪಾತ್ರ ಮಾಡುವ ನಟಿಯ ಬಳಿ ಕ್ಷಮೆಯಾಚಿಸುತ್ತಿದ್ದರಂತೆ. ನೋಡಮ್ಮ ಇದು ನನ್ನ ವೃತ್ತಿ..ಕರ್ಮ ಏನ್ ಮಾಡೋದು. ದಯವಿಟ್ಟು ತಪ್ಪು ಭಾವಿಸಬೇಡ ಎಂದು ಹೇಳುತ್ತಿದ್ದರಂತೆ.

ತನಗೆ ಕೊಟ್ಟ ಪಾತ್ರವನ್ನು ತಾನೇ ಆವಾಹಿಸಿಕೊಂಡು ನಟಿಸುವುದು ವಜ್ರಮುನಿಯವರ ಗುಣವಾಗಿತ್ತು. ಅದಕ್ಕಾಗಿಯೇ ಮೃದು ಸ್ವಭಾವದ ವಜ್ರಮುನಿಯವರು ಖಳನಟನ ಪಾತ್ರಕ್ಕೆ ನ್ಯಾಯ ಒದಗಿಸಲು ಅವರು ಕಠಿಣ ಪರಿಶ್ರಮ ಪಡುತ್ತಿದ್ದರಂತೆ. ಹೀಗೆ ಪಾತ್ರಕ್ಕೆ ಜೀವತುಂಬುತ್ತಲೇ ತಮ್ಮ ಆರೋಗ್ಯ ನಿರ್ಲಕ್ಷಿಸಿಬಿಟ್ಟಿದ್ದರಂತೆ. ಅದರ ಪರಿಣಾಮ 1999ರ ಹೊತ್ತಿಗೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದರು. ದೈಹಿಕವಾಗಿ ನಿತ್ರಾಣಕ್ಕೊಳಗಾದ ವಜ್ರಮುನಿಯವರು 2000ನೇ ಇಸವಿ ಹೊತ್ತಿಗೆ ಹಲವು ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು. 2006ರ ಜನವರಿ 5ರಂದು ನಟಭಯಂಕರ ಎನ್ನಿಸಿಕೊಂಡಿದ್ದ ವಜ್ರಮುನಿ ಇಹಲೋಕ ತ್ಯಜಿಸಿದ್ದರು. ಅದ್ಭುತ ನಟ ಕನ್ನಡ ಚಿತ್ರರಂಗಕ್ಕೆ ನೀಡಿದ್ದ ಕೊಡುಗೆಯನ್ನು ಪರಿಗಣಿಸಿ 2006ರಲ್ಲಿ ಜೀವಮಾನದ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಕಂಚಿನ ಕಂಠ, ನಗುವಿನ ಮೂಲಕ ಇಂದಿಗೂ ವಜ್ರಮುನಿ ಕನ್ನಡ ಚಿತ್ರಪ್ರೇಮಿಗಳ ಮನದಲ್ಲಿ ಅಜರಾಮರಾಗಿದ್ದಾರೆ…

Advertisement

Udayavani is now on Telegram. Click here to join our channel and stay updated with the latest news.

Next