Advertisement

ಕಾಲೇಜು ವಿದ್ಯಾರ್ಥಿಗಳಿಗೆ ಕೂಡಲೇ ಲಸಿಕೆ ನೀಡಿ: ಉದಯವಾಣಿ ವೆಬಿನಾರ್ ನಲ್ಲಿ ತಜ್ಞರ ಅಭಿಮತ

04:09 PM Jun 24, 2021 | Team Udayavani |

ಉಡುಪಿ/ಮಣಿಪಾಲ:ರಾಜ್ಯದಲ್ಲಿ ಶಾಲಾ, ಕಾಲೇಜು ಪ್ರಾರಂಭದ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿವೆ. ಆದರೆ ಕೋವಿಡ್ ಸೋಂಕು ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸಿದರೆ ಅದನ್ನು ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳಲ್ಲಿ ಕೂಡಲೇ ಲಸಿಕೆ ಕಾರ್ಯಕ್ರಮ ಆರಂಭಿಸಬೇಕು. ಲಸಿಕೆ ಪಡೆದ ನಂತರ ವಿದ್ಯಾರ್ಥಿಗಳಲ್ಲಿಯೂ ಧೈರ್ಯ ಬರಲಿದ್ದು, ನಂತರ ಕಾಲೇಜುಗಳನ್ನು ಆರಂಭಿಸಬಹುದಾಗಿದೆ ಎಂದು ಶಿಕ್ಷಣ ತಜ್ಞ ದೊರೆಸ್ವಾಮಿ ನಾಯ್ಡು ಸಲಹೆ ನೀಡಿದ್ದಾರೆ.

Advertisement

ಇದನ್ನೂ ಓದಿ:ಈ ವೀಕೆಂಡ್‌ಗೆ ಆನ್‌ ಲೈನ್‌ನಲ್ಲಿ ʼಕಲಾನಿಧಿʼ ಸಂಗೀತ ಸುಧೆ : ನಾಳೆಯಿಂದ 3 ದಿನ ಪ್ರಸಾರ

ಗುರುವಾರ(ಜೂನ್ 24) ಉದಯವಾಣಿ  ಆಯೋಜಿಸಿದ್ದ ಶಿಕ್ಷಣದ ಭವಿಷ್ಯ ಎಂಬ ವಿಷಯದ ವೆಬಿನಾರ್ ನಲ್ಲಿ ಭಾಗವಹಿಸಿದ್ದ ಪಿಇಎಸ್ ವಿಶ್ವವಿದ್ಯಾಯಲದ ಕುಲಾಧಿಪತಿ, ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾದ ಪ್ರೊ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ಶಿಕ್ಷಣ ಸಲಹೆಗಾರನಾಗಿ ಶಾಲಾ, ಕಾಲೇಜು ಆರಂಭದ ಬಗ್ಗೆ 18 ಶಿಫಾರಸ್ಸನ್ನು ಸರ್ಕಾರಕ್ಕೆ ಕೊಟ್ಟಿದ್ದು, ಇದನ್ನು ಜಾಗತಿಕವಾಗಿಯೂ ಒಪ್ಪಿಕೊಂಡಿರುವುದಾಗಿ ಹೇಳಿದರು.

ಕಾಲೇಜುಗಳ ಸಂಖ್ಯೆ, ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಲಸಿಕೆ ನೀಡಿದ ನಂತರ ಕಾಲೇಜು ಆರಂಭಿಸುವುದು ಸೂಕ್ತ. ಅದಕ್ಕೂ ಮುನ್ನ ಆನ್ ಲೈನ್ ತರಗತಿ ನಡೆಸಿ,ಆಫ್ ಲೈನ್ (ಖುದ್ದು)ನಲ್ಲಿ ಪರೀಕ್ಷೆ ನಡೆಸಬೇಕು ಎಂದು ಸಲಹೆ ನೀಡಿದರು. ಈವರೆಗೂ ಪ್ರಾಕ್ಟಿಕಲ್ ತರಗತಿಗಳು ನಡೆದಿಲ್ಲ. ಕಾಲೇಜು ಆರಂಭದ ನಂತರ ಪ್ರಾಕ್ಟಿಕಲ್ ನಡೆಸುವುದು ಉತ್ತಮ ಎಂದು ತಿಳಿಸಿದರು.ಆನ್ ಲೈನ್ ತರಗತಿ ನಡೆಸಿ, ಆಫ್ ಲೈನ್ ಪರೀಕ್ಷೆ ನಡೆಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.

Advertisement

ಶಿಕ್ಷಕರು, ಉಪನ್ಯಾಸಕರು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು: ಡಾ.ಪಿ.ಸುಬ್ರಹ್ಮಣ್ಯ ಯಡಿಪಡಿತ್ತಾಯ
ಕೋವಿಡ್ ಒಂದನೇ ಮತ್ತು ಎರಡನೇ ಅಲೆಯಿಂದಾಗಿ ಶಿಕ್ಷಣರಂಗಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲವು ಸಮಸ್ಯೆಗಳಿಗೆ ಸದ್ಯಕ್ಕೆ ಪರಿಹಾರ ಇಲ್ಲ. ಕೋವಿಡ್ ನಿಂದಾಗಿ ಭಯ, ಅನಿಶ್ಚಿತತೆ ಆವರಿಸಿಕೊಂಡಿದೆ. ಅಲ್ಲದೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಲ್ಲಿ 2020ರ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮಂಗಳೂರು ವಿವಿ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಿಪಡಿತ್ತಾಯ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಕೌಶಲಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಅವಕಾಶದ ಸದ್ಭಳಕೆ ಮಾಡಿಕೊಳ್ಳುವ ಚಾಕಚಕ್ಯತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿಯಾಗಿ ನಡೆಯಬೇಕಾದರೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ. ಅಷ್ಟೇ ಅಲ್ಲ ಇದಕ್ಕಾಗಿ ಸಂಯೋಜನಾ ಶುಲ್ಕ(ಜಿಎಸ್ ಟಿ)ಗೆ ವಿನಾಯ್ತಿ ಕೊಡಬೇಕೆಂಬ ಆಗ್ರಹವಿದೆ. ಖಾಲಿ ಇರುವ ಉಪನ್ಯಾಸಕರ ಹುದ್ದೆ, ಅತಿಥಿ ಉಪನ್ಯಾಸಕರ ನೇಮಕಾತಿ, ಕುಲಸಚಿವರ ನೇಮಕಾತಿಯನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬೇಕು, ಬೇಡ ಎಂಬ ಗೊಂದಲ ಇದೆ. ಆದರೆ ಆನ್ ಲೈನ್ ಬೇಡ, ಭೌತಿಕ ಪರೀಕ್ಷೆ ಬೇಡ ಎಂದು ಮನೆಯಲ್ಲಿ ಕುಳಿತರೇ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಏನಾಗುತ್ತದೆ ಅಂದರೆ ಕೆಲವು ಸಮಸ್ಯೆಗಳಿಗೆ ಪೂರ್ಣ ಪ್ರಮಾಣದ ಪರಿಹಾರ, ಅಲ್ಪ ಪ್ರಮಾಣದ ಪರಿಹಾರ ಹಾಗೂ ಕೆಲವು ಸಮಸ್ಯೆಗೆ ಪರಿಹಾರವೇ ಇಲ್ಲದಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಆನ್ ಲೈನ್ ಮೂಲಕವಾದರೂ ಉಪನ್ಯಾಸಕರು ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುತ್ತಿರಬೇಕು, ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಸಂವಹನ ನಡೆಸಿದರೆ ತುಂಬಾ ಅನುಕೂಲವಾಗಲಿದೆ ಎಂದು ಯಡಪಡಿತ್ತಾಯ ಮಹತ್ವದ ಸಲಹೆಯನ್ನು ನೀಡಿದರು.

ಉದಯವಾಣಿಗೆ ಅಭಿನಂದನೆ: ಡಿಸಿಎಂ ಅಶ್ವತ್ಥನಾರಾಯಣ
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಉದಯವಾಣಿ ಶಿಕ್ಷಣದ ಭವಿಷ್ಯದ ಬಗ್ಗೆ ವೆಬಿನಾರ್ ನಡೆಸಿದ್ದಕ್ಕೆ ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್.ಅಶ್ವತ್ಥನಾರಾಯಣ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದರು. ಕೋವಿಡ್ ಸೋಂಕು ಸಮಾಜಕ್ಕೆ ಸವಾಲು ಮತ್ತು ಸಮಸ್ಯೆಯನ್ನು ತಂದೊಡ್ಡಿದೆ. ಆದರೂ ನಾವು ಸವಾಲಿನ ಮಧ್ಯೆ ಕೈಕಟ್ಟಿ ಕೂರದೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಂದುವರಿಯಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 34ವರ್ಷಗಳ ನಂತರ ಪರಿವರ್ತನೆಯ ಹಾದಿಯತ್ತ ಮುನ್ನುಗ್ಗಿದ್ದು, ಗುಣಮಟ್ಟದ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮನಗಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿಯೂ ಅದರ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹತ್ತು ವರ್ಷಗಳಲ್ಲಿ ಗುರಿ ತಲುಪುವ ನಿರೀಕ್ಷೆ ಹೊಂದಿರುವುದಾಗಿ ಶಿಕ್ಷಣ ಭವಿಷ್ಯ ವೆಬಿನಾರ್ ಅಧ್ಯಕ್ಷತೆ ವಹಿಸಿದ್ದ ಡಾ.ಅಶ್ವತ್ಥನಾರಾಯಣ ಅವರು ಹೇಳಿದರು.

ಶಾಲಾ, ಕಾಲೇಜು ಆರಂಭದ ಬಗ್ಗೆ ಜುಲೈ 5ರಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಅಲ್ಲದೇ ಖಾಸಗಿ ಸಂಸ್ಥೆಗಳು ಕೂಡಾ ಲಸಿಕೆ ಕಾರ್ಯಕ್ರಮ ಆರಂಭ ಮಾಡುವುದರಿಂದ ಸರ್ಕಾರದ ಅಭಿಯಾನಕ್ಕೆ ಕೈಜೋಡಿಸಿದಂತಾಗುತ್ತದೆ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next