Advertisement

ಕಿಲ್ಲರ್‌ ಮಲೇರಿಯಾ ತಡೆಗೆ ಲಸಿಕೆ ಸಿದ್ಧ!

10:05 AM Apr 26, 2019 | Team Udayavani |

ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಹಾಗೂ ವಯಸ್ಕರು ಕಿಲ್ಲರ್‌ ಮಲೇರಿಯಾಗೆ ತುತ್ತಾಗುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ. ಮಲೇರಿಯಾ ತಡೆಗೆ ಇದೇ ಮೊದಲ ಬಾರಿಗೆ ಆಫ್ರಿಕಾದ ಮಲಾವಿ ದೇಶದಲ್ಲಿ ಲಸಿಕೆಯನ್ನು ಪರಿಚಯಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಲಸಿಕೆ ಘಾನಾ ಹಾಗೂ ಕೀನ್ಯಾದಲ್ಲೂ ಅದನ್ನು ಪರಿಚಯಿಸಲಾಗುತ್ತಿದೆ.

Advertisement

ಆರ್‌ಟಿಎಸ್‌, ಎಸ್‌ (RTS,S) ಎಂದು ಕರೆಯಲಾಗಿರುವ ಈ ಲಸಿಕೆಯನ್ನು 2ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. ವಿಶ್ವಸಂಸ್ಥೆ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೊಂದು ಪ್ರಾಯೋಗಿಕ ಯೋಜನೆಯಾಗಿದೆ. ಸುಮಾರು 30 ವರ್ಷಗಳವರೆಗೆ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ.

ಲಸಿಕೆಯೊಂದೇ ಸಾಲದು!: ಈ ಲಸಿಕೆ ಶೇ. 100ರಷ್ಟು ರಕ್ಷಣೆ ನೀಡುವುದಿಲ್ಲ. ಹೀಗಾಗಿ ಈಗಾಗಲೇ ನಾವು ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಲಸಿಕೆ ಹಾಕಿದರೂ ಕೈಗೊಳ್ಳಲೇಬೇಕು. ಯಾಕೆಂದರೆ, ಈಗಾಗಲೇ ನಡೆಸಲಾಗಿರುವ ಅಧ್ಯಯನಗಳ ಪೈಕಿ 10 ಪ್ರಕರಣಗಳಲ್ಲಿ ನಾಲ್ವರಿಗೆ ಮಾತ್ರ ರೋಗ ಬರದಂತೆ ಈ ಆರ್‌ಟಿಎಸ್‌,ಎಸ್‌ ಲಸಿಕೆ ತಡೆದಿದ್ದರೆ, 10 ಗಂಭೀರ ಪ್ರಕರಣಗಳ ಪೈಕಿ 3 ಮಕ್ಕಳಲ್ಲಿ ರೋಗವನ್ನು ತಡೆದಿದೆ.

ವಿಶ್ವಸಂಸ್ಥೆಯ ನೆರವು: ಈ ಯೋಜನೆಯನ್ನು ವಿಶ್ವಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಘಾನಾ, ಕೀನ್ಯಾ ಹಾಗೂ ಮಾಲಾವಿಯಲ್ಲಿ ಈ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ಸರ್ಕಾರೇತರ ಸಂಸ್ಥೆ ಪಾಥ್‌, ಲಸಿಕೆ ತಯಾರಿಸಿದ ಸಂಸ್ಥೆ ಜಿಎಸ್‌ಕೆ ಹಾಗೂ ಇತರ ಸಂಘ ಸಂಸ್ಥೆಗಳೂ ಕೈಜೋಡಿಸಿವೆ. ಜಿಎಸ್‌ಕೆ ಸಂಸ್ಥೆಯು ಈ ಯೋಜನೆಗಾಗಿ 1 ಕೋಟಿ ಲಸಿಕೆಯನ್ನು ಒದಗಿಸಿದೆ.

4 ಡೋಸ್‌ನಲ್ಲಿ ಪರಿಹಾರ: ಮೂರೂ ದೇಶಗಳಲ್ಲಿ ಒಟ್ಟು 3.60 ಲಕ್ಷ ಮಕ್ಕಳಿಗೆ ಲಸಿಕೆಯನ್ನು ಒದಗಿಸಲು ನಿರ್ಧರಿಸಲಾಗಿದೆ.ಮಕ್ಕಳಿಗೆ ನಾಲ್ಕು ಡೋಸ್‌ಗಳನ್ನು ಸದ್ಯಕ್ಕೆ ನೀಡಲಾಗುತ್ತದೆ. 5 ರಿಂದ 9 ತಿಂಗಳಿಗೆ ಮೊದಲನೇ ಡೋಸ್‌ ನೀಡಿದರೆ ಕೊನೆಯ ಡೋಸ್‌ ಅನ್ನು ಎರಡನೇ ವರ್ಷ ಪೂರೈಸುವ ವೇಳೆಗೆ ನೀಡಲಾಗುತ್ತದೆ.

Advertisement

ಭಾರತಕ್ಕೂ ಬರುತ್ತಾ?: ಮಲೇರಿಯಾ ಲಸಿಕೆಯನ್ನು ಭಾರತದಲ್ಲಿ ಪರಿಚಯಿಸುವ ಸಾಧ್ಯತೆ ಸದ್ಯಕ್ಕಿಲ್ಲ. ಮೂರು ದೇಶಗಳಲ್ಲೂ ಈ ಪ್ರಯೋಗ ಯಶಸ್ವಿಯಾದರೆ ಹಾಗೂ ಇದರಿಂದಾಗಿ ಮಲೇರಿಯಾ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾದರೆ ವಿಶ್ವಸಂಸ್ಥೆಯು ಇದನ್ನು ಇತರ ದೇಶಗಳಿಗೂ ಶಿಫಾರಸು ಮಾಡಬಹುದು. ಅಲ್ಲಿಯವರೆಗೆ ಇದರ ಪ್ರಯೋಗ ಭಾರತದಲ್ಲಿ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಮಲೇರಿಯಾ

3,99,134
10.90ಲಕ್ಷ
2018ರಲ್ಲಿ ಪತ್ತೆಯಾದ ಪ್ರಕರಣಗಳು
85-ಅಸುನೀಗಿದವರು
2016ರಲ್ಲಿ ಪತ್ತೆಯಾದ ಪ್ರಕರಣಗಳು
331-ಅಸುನೀಗಿದವರು

Advertisement

Udayavani is now on Telegram. Click here to join our channel and stay updated with the latest news.

Next