Advertisement

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಸ್ವಾಗತಾರ್ಹ ನಡೆ

12:06 AM Mar 24, 2021 | Team Udayavani |

ದೇಶಾದ್ಯಂತ ಲಸಿಕೆಯ ಲಕ್ಷಾಂತರ ಡೋಸ್‌ಗಳು ಬಳಕೆಯಾಗದೇ ವ್ಯರ್ಥವಾಗುತ್ತಿರುವ ಸುದ್ದಿ ಹೊರಬೀಳಲಾರಂಭಿಸುತ್ತಿದ್ದಂತೆಯೇ ಫ‌ಲಾನುಭವಿಗಳು ಬರಲಿಲ್ಲವೆಂದು ಪೋಲು ಮಾಡುವ ಬದಲು 45 ವರ್ಷಕ್ಕೂ ಮೇಲ್ಪಟ್ಟವರಿಗೆಲ್ಲ ಲಸಿಕೆ ನೀಡಬೇಕೆಂಬ ಸಲಹೆ ಕೇಳಿಬಂದಿತ್ತು. ಇದಷ್ಟೇ ಅಲ್ಲದೇ ದೇಶದಲ್ಲಿ ಏಕಾಏಕಿ ಮತ್ತೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಪ್ರಿಲ್‌ 1 ರಿಂದ 45 ವರ್ಷಕ್ಕೆ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡುವ ಮಹತ್ತರ ಘೋಷಣೆ ಮಾಡಿರುವುದು ಸ್ವಾಗತಾರ್ಹ ಹೆಜ್ಜೆ. ಇದುವರೆಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ 45ರಿಂದ 59 ವರ್ಷ ವಯಸ್ಸಿನವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು.

Advertisement

ಇದುವರೆಗೂ ದೇಶದಲ್ಲಿ 25-45 ವರ್ಷ ವಯಸ್ಸಿನವರಲ್ಲೇ ಅತೀಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಇವರು ಸೂಪರ್‌ಸ್ಪ್ರೆಡರ್‌ಗಳಾಗಿ ಬದಲಾಗಿರುವುದನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ವರದಿ ಹೇಳುತ್ತಲೇ ಬಂದಿದೆ. ಅಂದರೆ ಕೋವಿಡ್‌ ಪ್ರಕರಣಗಳು ವೇಗವಾಗಿ ಹಬ್ಬುವುದರಲ್ಲಿ ಈ ವಯೋಮಾನದವರ ಸಂಖ್ಯೆಯೂ ಅಧಿಕವಿದೆ. ಹೀಗಾಗಿ ಲಸಿಕೆಯನ್ನು 45ವರ್ಷ ಮೇಲ್ಪಟ್ಟ ವರಿಗೆಲ್ಲ ನೀಡುವ ನಿರ್ಧಾರ ಸ್ವಾಗತಾರ್ಹ.

ಆತಂಕದ ಸಂಗತಿಯೆಂದರೆ ಅಕ್ಟೋಬರ್‌ನಿಂದ-ಫೆಬ್ರವರಿ ಎರಡನೇ ವಾರದವರೆಗೂ ಗಮನಾರ್ಹವಾಗಿ ಇಳಿಮುಖವಾಗಿದ್ದ ಕೋವಿಡ್‌ ಪ್ರಕರಣಗಳು ಈಗ ಕೆಲವು ದಿನಗಳಿಂದ ನಿತ್ಯ 40 ಸಾವಿರಷ್ಟು ವರದಿ ಯಾಗುತ್ತಿವೆ. ರಾಜ್ಯದಲ್ಲೇ ಮಂಗಳವಾರ ಕೋವಿಡ್‌ ಪ್ರಕರಣಗಳ ಸಂಖ್ಯೆ 2,000 ದಾಟಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಪ್ರಕರಣಗಳು ನಮ್ಮಲ್ಲಿ ಕಳೆದ ನವೆಂಬರ್‌ನಲ್ಲಿ ವರದಿಯಾಗಿತ್ತು! ಹೀಗಾಗಿ ಹೆಚ್ಚುತ್ತಿರುವ ಸಾಂಕ್ರಾಮಿಕದ ರೋಗವನ್ನು ತಡೆಗಟ್ಟಲು ಲಸಿಕೆ ವಿತರಣೆಯನ್ನು ವೇಗಗೊಳಿಸುವ ಜತೆಯಲ್ಲೇ ಫ‌ಲಾನುಭವಿಗಳ ವಯೋಮಿತಿಯನ್ನು ಬದಲಿಸುವ ಅಗತ್ಯವೂ ಇತ್ತು.

ಈ ನಿಟ್ಟಿನಲ್ಲಿ ಎಪ್ರಿಲ್‌1 ರಿಂದ ಎಪ್ರಿಲ್‌ 30ರ ವರೆಗೆ ಅನ್ವಯ ವಾಗುವಂತೆ ಹೊಸ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಲಸಿಕೆ ಪ್ರಕ್ರಿಯೆಗೆ ವೇಗ ನೀಡುವಂತೆಯೂ ರಾಜ್ಯ ಸರಕಾರಗಳಿಗೆ ಸಲಹೆ ನೀಡಿದೆ. ಅಲ್ಲದೇ ಆರ್‌ಟಿ-ಪಿಸಿಆರ್‌ ಪರೀಕ್ಷೆ ಗಳನ್ನು ಹೆಚ್ಚಿಸಬೇಕು ಹಾಗೂ ಸೋಂಕಿತರನ್ನು ಕ್ವಾರಂಟೈನ್‌ ಮಾಡಿ, ಅವರ ಸಂಪರ್ಕಕ್ಕೆ ಬಂದವರನ್ನು ಶೀಘ್ರದಲ್ಲೇ ಪತ್ತೆಹಚ್ಚಬೇಕೆಂದೂ ಹೇಳಿದೆ.

ಆರಂಭಿಕ ಸಮಯದಲ್ಲಿ ಭಾರತ ಕೋವಿಡ್‌ ತಡೆಯಲ್ಲಿ ತುಸು ಯಶಸ್ಸು ಸಾಧಿಸಿತ್ತು ಎಂದರೆ ಅದಕ್ಕೆ ವ್ಯಾಪಕವಾಗಿ ನಡೆದ ಟೆಸ್ಟಿಂಗ್‌ ಮತ್ತು ಟ್ರೇಸಿಂಗ್‌ ಕಾರಣ. ಆದರೆ ಈಗ ಲಸಿಕೆ ಬಂದಿದೆಯಾದರೂ ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ ಅಜಮಾಸು ಕಡಿಮೆಯಾಗಿದೆ. ಈ ವಿಚಾರದಲ್ಲೂ ಸರಕಾರ, ಸ್ಥಳೀಯಾಡಳಿತಗಳು ಮತ್ತಷ್ಟು ಸಕ್ರಿಯವಾಗುವ ಅಗತ್ಯವಿದೆ. ಒಟ್ಟಲ್ಲಿ ಲಸಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಈಗ ಲಸಿಕೆಯ ಫ‌ಲಾನುಭವಿಗಳ ವಯೋಮಿತಿಯನ್ನು ಇಳಿಕೆ ಮಾಡಿರುವುದರಿಂದ ಈ ವಿಚಾರದಲ್ಲಿ ಜನರೂ ಅಸಡ್ಡೆ ಮಾಡದೇ ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿ ಲಸಿಕೆ ಪಡೆಯುವಂತಾಗಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next