ಭಾರತ ದೇಶವು ಜಗತ್ತಿನ ಭೂಪಟದಲ್ಲಿ ಇಷ್ಟೊಂದು ವಿರಾಜಮಾನವಾಗಿರಲು ನಮ್ಮ ದೇಶದ ಅತ್ಯದ್ಭುತವಾದ ಕಲೆ, ಸಾಹಿತ್ಯ, ಸಂಸ್ಕೃತಿ, ನಾಗರಿಕತೆ, ಸಹಬಾಳ್ವೆ, ಸಹಮತ, ಸಿರಿ ಸಂಪತ್ತು, ವಾಯುಗುಣ ಹಾಗೂ ಇನ್ನೂ ಅನೇಕಾನೇಕ ಸಂಪನ್ಮೂಲಗಳ ಆಗರವೇ ಕಾರಣ. ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿರುವ ಶ್ರೇಷ್ಠ ಪ್ರತಿಭೆಗಳಿಂದ ಈ ದೇಶವು ಅನಾದಿಕಾಲದಿಂದಲೂ ಜಗದ್ವಿಖ್ಯಾತಿ ಪಡೆಯುತ್ತಾ ಬಂದಿದೆ.
ಆರ್ಯಭಟ, ಶ್ರೀನಿವಾಸ ರಾಮಾನುಜನ್, ಸಿ.ವಿ. ರಾಮನ್, ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ರಂತಹ ಅನೇಕಾನೇಕ ಅಪ್ರತಿಮ ಪ್ರತಿಭೆಗಳು ಈ ದೇಶದ ಮಣ್ಣಿನ ಹೆಮ್ಮೆಯ ಕಲಿಗಳು.ಇವರಂತಹ ಲಕ್ಷಾಂತರ ಪ್ರತಿಭೆಗಳಿಗೆ ಭಾರತಮಾತೆ ದಿನೇ ದಿನೇ ಜನ್ಮಕೊಡುತ್ತಿದ್ದಾಳೆ. ಆದರೆ ಆ ಪ್ರತಿಭೆಗಳ ಸೇವೆ ನಮ್ಮ ರಾಷ್ಟಕ್ಕೆ ಅರ್ಪಿತವಾಗುತ್ತಿಲ್ಲ, ಸಿಗುತ್ತಿಲ್ಲ ಎನ್ನುವುದೊಂದು ದೊಡ್ಡ ದುರಂತವೇ ಸರಿ.
ನಮ್ಮ ತಾಯ್ನಾಡಿನಲ್ಲಿ ಜನಿಸಿ ಇಲ್ಲಿಯೇ ಅತ್ಯಮೂಲ್ಯವಾದ ವಿದ್ಯಾಭ್ಯಾಸ, ಅಪಾರವಾದ ಜ್ಞಾನ, ತಿಳುವಳಿಕೆ ಮತ್ತು ಕೌಶಲ ಪಡೆದುಕೊಂಡು ಪ್ರಬುದ್ಧ ಪ್ರತಿಭೆಗಳಾಗಿ ಹೊರಹೊಮ್ಮಿ, ವಿಶೇಷವಾದ ಕ್ಷೇತ್ರದಲ್ಲಿ ಪರಿಣಿತರಾಗಿ ಹೆಚ್ಚಿನ ಹಣ ಮತ್ತು ಸೂಕ್ತವಾದ ಸೌಲಭ್ಯ, ಉದ್ಯೋಗ, ಪ್ರತಿಷ್ಠೆಗಾಗಿ ಹಾಗೂ ಲಾಭದಾಯಕವಾದ ಸ್ಥಾನಮಾನಗಳಿಗಾಗಿ ವಿದೇಶಗಳಿಗೆ ವಲಸೆ ಹೋಗುವ ಸನ್ನಿವೇಷಗಳು ಇಂದು ಹೆಚ್ಚಾಗುತ್ತಿದೆ.
ಅಧಿಕೃತ ಸಮೀಕ್ಷೆಯೊಂದರ ಪ್ರಕಾರ ಅಮೆರಿಕದ ಶೇ. 37ರಷ್ಟು ವೈದ್ಯರು, ಶೇ. 33ರಷ್ಟು ನಾಸಾ ವಿಜ್ಞಾನಿಗಳು, ಶೇ. 39ರಷ್ಟು ಸಾಫ್ಟ್ವೇರ್ ತಂತ್ರಜ್ಞರು ಭಾರತೀಯ ಸಂಜಾತರಾಗಿದ್ದಾರೆ ಎಂಬ ಆಶ್ಚರ್ಯಕರ ವಿಷಯವು ದಿಗ್ರ್ಭಮೆಯನ್ನುಂಟು ಮಾಡುತ್ತದೆ. ನಮ್ಮ ದೇಶದ ಈ ಪ್ರತಿಭೆಗಳು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದಲೇ ಅಮೆರಿಕದಂತಹ ರಾಷ್ಟ್ರಗಳು ಬಲಾಡ್ಯ ರಾಷ್ಟ್ರಗಳಾಗಿ ಪರಿವರ್ತನೆಯಾಗುತ್ತಿವೆ. ಅಮೇರಿಕಾ ಮಾತ್ರವಲ್ಲ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಭಾರತೀಯ ಸಂಜಾತರು ತಮ್ಮ ಸೇವೆ ಸಲ್ಲಿಸುತ್ತಲಿದ್ದಾರೆ. ಮಹತ್ವದ ಈ ಸೇವೆ ನಮ್ಮ ದೇಶಕ್ಕೆ ಯಾಕಿಲ್ಲ ಎಂಬ ಪ್ರಶ್ನೆ ನಮ್ಮನ್ನೆಲ್ಲ ಸಹಜವಾಗಿ ಕಾಡುತ್ತಿದೆಯಲ್ಲವೇ?
ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಒಂದು ಕಾರಣವಿರಬಹುದು. ಹಣದಾಸೆಗಾಗಿಯೋ ಅಥವಾ ಈ ದೇಶದಲ್ಲಿ ಪ್ರತಿಭೆಗಳಿಗೆ ಅವಕಾಶ ಇಲ್ಲವೆಂಬುದಕ್ಕಾಗಿಯೋ ಏನೋ ಪ್ರತಿಭೆಗಳ ಪಲಾಯನವಾಗುತ್ತಲೇ ಇದೆ. ವಿದೇಶಗಳಲ್ಲಿರುವ ಭಾರತೀಯ ಸಂಜಾತರು ಸ್ವದೇಶದಲ್ಲಿರುವ ತಮ್ಮ ಕುಟುಂಬಕ್ಕೆ ಹಣ ರವಾನೆ ಮಾಡುವುದರಲ್ಲಿ ವಿಶ್ವದಲ್ಲಿಯೇ ನಂ.1 ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಇತ್ತೀಚೆಗೆ ಸಾಕ್ಷಿಸಮೇತ ದೃಢೀಕರಿಸಿದೆ.
ಈ ವರ್ಷವೊಂದರಲ್ಲಿಯೇ 4,225 ಶತಕೋಟಿ ರೂ. ಗಳು ವಿದೇಶದಿಂದ ನಮ್ಮ ದೇಶಕ್ಕೆ ಬಂದಿದೆ ಎಂಬ ಅಂಶವನ್ನು ನೋಡಿದಾಗ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತಿಯ ದ್ಯೆತ್ಯ ಪ್ರತಿಭೆಗಳ ಪಲಾಯನ ಎಷ್ಟಿದೆ ಎಂಬುದು ಗೊತ್ತಾಗುತ್ತದೆಯಲ್ಲವೇ? ಈ ದೇಶದ ಪ್ರತಿಭೆಗಳು ಇಲ್ಲಿಯೇ ಸೇವೆ ಸಲ್ಲಿಸಿದರೆ ಭಾರತ ಶ್ರೀಮಂತ, ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಿದೆ. ಅಷ್ಟೇ ಅಲ್ಲ ಈ ದೇಶದ ಏಳ್ಗೆಗೆ ಸಹಕಾರ ಕೂಡ ಸಿಕ್ಕಂತಾಗುತ್ತದೆ.
ಈ ನೆಲದ ಪ್ರತಿಭೆಗಳು ಜಗತ್ತಿನಲ್ಲಿಯೇ ಶ್ರೇಷ್ಠರು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ. ಆದ್ದರಿಂದ ಸರಕಾರಗಳು ಕೂಡ ಪ್ರತಿಭೆಗಳತ್ತ ಗಮನ ಹರಿಸಿ, ಇಲ್ಲಿಯೇ ಯೋಗ್ಯ ನೆಲೆಯನ್ನು ಕಂಡುಕೊಳ್ಳುವಂತೆ ಪ್ರೋತ್ಸಾಹಿಸಬೇಕಾಗಿದೆ.
ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಹುಡುಕಿ, ಆರ್ಥಿಕವಾಗಿ ಹೆಚ್ಚಿನ ಸಹಾಯ, ಸಹಕಾರ ಕೊಟ್ಟು ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ಪ್ರತಿಭಾ ಪಲಾಯನ ನಿಲ್ಲುತ್ತದೆ. ಅಂದಾಗ ಮಾತ್ರ ದೇಶದ ಆರ್ಥಿಕತೆ ಸದೃಢವಾಗಿ ಭಾರತವು ಬಲಾಡ್ಯ ರಾಷ್ಟವಾಗಿ ಹೊರಹೊಮ್ಮುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇಂತಹ ಒಂದು ಪರಿಣಾಮಕಾರಿ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಕಾರ್ಯಕ್ಕೆ ಕೈ ಜೋಡಿಸೋಣ ಬನ್ನಿ….! ಎಲ್ಲರೂ ಒಗ್ಗಟ್ಟಾಗಿ ದೇಶದ ಹಿತ ಕಾಪಾಡೋಣ ಬನ್ನಿ….!
ಶ್ರೀನಿವಾಸ ಎನ್. ದೇಸಾಯಿ
ಶಿಕ್ಷಕರು, ತಲ್ಲೂರು