Advertisement

Constitution: ವಿಶ್ವಕ್ಕೆ ಮಾದರಿ ನಮ್ಮ ಸಂವಿಧಾನ

05:24 PM Oct 04, 2024 | Team Udayavani |

ಒಂದು ರಾಷ್ಟ್ರವು ಪ್ರಗತಿಯನ್ನು ಹೊಂದಬೇಕಾದರೆ ಅಲ್ಲಿಯ ಕಾನೂನು ನಿಯಮ ವ್ಯವಸ್ಥಿತವಾಗಿರುವುದು ಅವಶ್ಯಕ ಹಾಗೂ ಆ ರಾಷ್ಟ್ರದಲ್ಲಿರುವ ಸರಕಾರವು ಸಮರ್ಥವಾದ ದಕ್ಷ ಆಡಳಿತವನ್ನು ನಡೆಸಬೇಕು. ಅನೇಕ ರಾಷ್ಟ್ರಗಳಲ್ಲಿ ಅನೇಕ ರೀತಿಯ ಅಧಿಕಾರ ಹೊಂದಿದ ಸರಕಾರಗಳಿವೆ. ಮೊದಲು ಗ್ರೀಕ್‌ನ ರಾಜ್ಯವಾದ ಅಥೆನ್ಸ್‌ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು. ಅಬ್ರಹಾಮ್‌ ಲಿಂಕನ್‌ ರವರು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾದ ಸರಕಾರವೇ ಪ್ರಜಾಪ್ರಭುತ್ವವೆಂದು ವ್ಯಾಖ್ಯಾನಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ದೇಶದ ಜನರೇ ಸರಕಾರವನ್ನು ಆಯ್ಕೆ ಮಾಡುತ್ತಾರೆ. ಭಾರತವು ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಪ್ರಜೆಗಳೇ ಪ್ರಭುಗಳು.

Advertisement

ಯಾವುದೇ ರಾಷ್ಟ್ರವು ಉತ್ತಮವಾದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಕೂಡಿದ್ದರೆ ಆ ರಾಷ್ಟ್ರ ಸದೃಢ ರಾಷ್ಟ್ರವಾಗಿ ನಿರ್ಮಾಣವಾಗುತ್ತದೆ. ಸಂವಿಧಾನವು ಪ್ರಜಾಪ್ರಭುತ್ವದ ಆತ್ಮವಿದ್ದಂತೆ. ಸಂವಿಧಾನದ ಅಡಿಯಲ್ಲಿಯೇ ಪ್ರಜಾಪ್ರಭುತ್ವದ ಕಾರ್ಯಗಳು ನಡೆಯುತ್ತದೆ. ದೇಶದ ಸಮಗ್ರ ಚಿತ್ರಣವನ್ನು ಸಂವಿಧಾನವು ನೀಡುತ್ತದೆ. ಸಂವಿಧಾನವು ಭಾರತವನ್ನು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಘೋಷಿಸಿದೆ.

ಉತ್ತಮವಾದ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದಾಗ ಮಾತ್ರ ಪ್ರಜೆಗಳು ಶಾಂತಿ ನೆಮ್ಮದಿ ಭ್ರಾತೃತ್ವ ಹಾಗೂ ಸಾಮರಸ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಉತ್ತಮವಾದ ಪ್ರಜಾಪ್ರಭುತ್ವವು ಜನರಿಗೆ ಸಮಾನವಾದ ಹಕ್ಕನ್ನು ಕಲ್ಪಿಸಿ ಕೊಡುವುದರ ಜತೆಗೆ ಕಾನೂನು ವ್ಯವಸ್ಥೆಯನ್ನು ಕಾಪಾಡುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಾಯಕವಾಗುತ್ತದೆ.

ಭಾರತದ ಸಂವಿಧಾನದ ರಚನೆಗೆ ಕೆಲವು ವರ್ಷಗಳ ಹಿಡಿದವು. ಬಾಬಾ ಸಾಹೇಬ್‌ ಅಂಬೇಡ್ಕರ್‌ ರಂತಹ ಮೇಧಾವಿಗಳು ಅಧ್ಯಯನ ಕೈಗೊಂಡು ಭಾರತದ ಸಾಂಸ್ಕೃತಿಕ ಭೌಗೋಳಿಕ ಭಿನ್ನತೆಗಳನ್ನು ಗಮನದಲ್ಲಿಟ್ಟುಕೊಂಡು, ಭಾಷೆ, ಜಾತಿ, ಪಂಗಡ ಹೀಗೆ ನಾನಾ ವೈವಿಧ್ಯತೆಗಳನ್ನು ಸಮೀಕರಿಸಿ ಎಲ್ಲರಿಗೂ ಸಮಾನ ಹಕ್ಕು ಕರ್ತವ್ಯ ಸಾರುವಂತಹ ಸಂವಿಧಾನಾತ್ಮಕ ರಚನೆಯನ್ನು ಕರಡು ಸಮಿತಿಯ ವತಿಯಿಂದ 1948 ನವೆಂಬರ್‌ 26ರಂದು ಭಾರತದ ಸಂವಿಧಾನ ಪ್ರಾಧಿಕಾರಕ್ಕೆ ಅರ್ಪಿಸಿದರು. ಆ ಸಮಯದಲ್ಲಿ ಬಾಬು ರಾಜೇಂದ್ರ ಪ್ರಸಾದ್‌ ಇದರ ಅಧ್ಯಕ್ಷರಾಗಿದ್ದರು. ಅನಂತರ ಇದು 1950 ಜನವರಿ 26ರಂದು ಜಾರಿಯಾಯಿತು. ಭಾರತ ಬ್ರಿಟಿಷ್‌ ತೆಕ್ಕೆಯಿಂದ ಸ್ವತಂತ್ರವಾಗಿ ಮೂರು ವರ್ಷಗಳ ಅನಂತರ ಗಣರಾಜ್ಯವಾಗಿ ಗುರುತಿಸಿಕೊಂಡು ಪ್ರಪಂಚದ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿತು. ಡಾ| ಬಿ. ಆರ್‌. ಅಂಬೇಡ್ಕರ್‌ ರವರನ್ನು ಹೆಮ್ಮೆಯಿಂದ ಸಂವಿಧಾನದ ಶಿಲ್ಪಿ ಎಂದು ಕರೆಯುತ್ತೇವೆ.

ಸಂವಿಧಾನ

Advertisement

ಭಾರತದ ಸಂವಿಧಾನ ಮೂರು ಮುಖ್ಯ ವಿಭಾಗಗಳನ್ನು ಹೊಂದಿದೆ. ಅವು ಯಾವುದೆಂದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ.

ಶಾಸಕಾಂಗ: ಇದು ಆಡಳಿತಾತ್ಮಕ ವ್ಯವಸ್ಥೆಯ ಮೂಲಭೂತ ಅಂಗಗಳಲ್ಲೊಂದಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆ ಎಂಬ ಭಾಗಗಳಿದ್ದು ದೇಶದ ಆಡಳಿತದ ಚುಕ್ಕಾಣಿ ಹೊರುತ್ತದೆ. ಇದರ ನೇತೃತ್ವ ಖುದ್ದು ಪ್ರಧಾನಿಯ ಸುಪರ್ದಿಯಲ್ಲಿರುತ್ತದೆ. ಲೋಕಸಭೆಯಲ್ಲಿ ಜನರು ಚುನಾಯಿಸಿದ ಜನಪ್ರತಿನಿಧಿಗಳಿದ್ದರೆ, ರಾಜ್ಯಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾದ ವ್ಯಕ್ತಿಗಳನ್ನು ಆರಿಸಿ ರಾಜ್ಯಸಭೆಗೆ ಚುನಾಯಿಸಿ ಪ್ರತಿನಿಧಿಸಲಾಗುತ್ತದೆ. ಲೋಕಸಭೆಯಲ್ಲಿ ಜನ ಪ್ರತಿನಿಧಿತ ಸರಕಾರ ದೇಶದ ಆಡಳಿತ ನಡೆಸಿದರೆ, ರಾಜ್ಯಸಭೆ ಅದರ ಮೇಲ್ವಿಚಾರಣೆಯನ್ನು ವಹಿಸುತ್ತದೆ. ದೇಶದ ಅಭಿವೃದ್ಧಿಯ ಜನಹಿತ ಯೋಜನೆಗಳ ಮಸೂದೆಗಳ ಮಂಡನೆ, ಚರ್ಚೆ ಕೊನೆಗೆ ಅದನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಪ್ರಕ್ರಿಯೆ ಲೋಕಸಭೆಯಿಂದ ಮೊದಲ್ಗೊಂಡು, ರಾಜ್ಯಸಭೆಯದ್ದಾಗುತ್ತದೆ.

ಕಾರ್ಯಾಂಗ: ಶಾಸಕಾಂಗ ವಿಭಾಗವು ನೀಲಿನಕ್ಷೆ ಸಿದ್ಧಪಡಿಸುವ ಹೊಣೆ ವಹಿಸಿದರೆ ಕಾರ್ಯಾಂಗವನ್ನು ಕಟ್ಟಡ ಕಟ್ಟುವ ಜವಾಬ್ದಾರಿಗೆ ಹೋಲಿಸಬಹುದು. ಕಾರ್ಯಾಂಗದ ಸರ್ವೋಚ್ಚ ಅಧಿಕಾರ ರಾಷ್ಟ್ರಪತಿಗಳ ಕೈಯಲ್ಲಿರುತ್ತದೆ. ಅದರ ಅನುಷ್ಠಾನ ಪ್ರಧಾನಿ ಕಾರ್ಯಾಲಯದಿಂದ ನಡೆಯುತ್ತದೆ. ಇದರಲ್ಲಿ ಸೈನ್ಯದ ಮೂರೂ ವಿಭಾಗಗಳಲ್ಲದೆ ಸಿವಿಲ್‌ ವಿಭಾಗದ ಆಡಳಿತಾತ್ಮಕ ವ್ಯಾಪ್ತಿಯೂ ಇದರಲ್ಲೇ ಸೇರಿದೆ. ಯೋಜನೆಗಳ ಅನುಷ್ಠಾನ, ಚುನಾವಣೆಗಳ ನಡೆಸುವುದು, ಶಿಕ್ಷಣ ಬ್ಯಾಂಕ್‌, ರೈಲ್ವೇ, ಸಂಪರ್ಕ ಹೀಗೆ ಹಲವು ಕಾರ್ಯಾಲಯಗಳು ಒಂದಕ್ಕೊಂದು ಪೂರಕವಾಗಿ ದಕ್ಷವಾಗಿ ಕೆಲಸ ನಿರ್ವಹಿಸುವಂತೆ ಮಾಡುವ ಜವಾಬ್ದಾರಿ ಕಾರ್ಯಾಂಗಕ್ಕಿದೆ.

ನ್ಯಾಯಾಂಗ: ದೇಶದ ಸಂಪೂರ್ಣ ನ್ಯಾಯ ವ್ಯವಸ್ಥೆಯ ಉಸ್ತುವಾರಿಯಾಗಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತದೆ. ಇದೊಂದು ಸ್ವತಂತ್ರ ವ್ಯವಸ್ತೆ. ಪ್ರತಿಯೊಬ್ಬ ನಾಗರಿಕರಿಗೂ ಯಾವುದೇ ಪ್ರಭಾವಕ್ಕೊಳಗಾಗದೆ ಸಮರ್ಪಕವಾಗಿ ನ್ಯಾಯ ವಿತರಿಸುವುದೇ ಇದರ ಧ್ಯೇಯ. ಸರ್ವೋಚ್ಚ ನ್ಯಾಯಾಲಯವಲ್ಲದೆ ರಾಜ್ಯ ಮಟ್ಟದ ಉಚ್ಚ ನ್ಯಾಯಾಲಯಗಳನ್ನೂ ಇದು ಸಮಗ್ರ ಕಾನೂನಿನ ಅಡಿಯಲ್ಲಿ ನಿರ್ವಹಿಸುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ರಾಜ್ಯಗಳ ವಿವಾದಗಳನ್ನು ಬಗೆಹರಿಸುವಲ್ಲಿ, ಕ್ರಿಮಿನಲ್‌ ಅಲ್ಲದೆ ಸಿವಿಲ್‌ ವ್ಯಾಜ್ಯಗಳ ಪರಿಹಾರದ ಚೌಕಟ್ಟನ್ನು ಇದು ನೋಡಿಕೊಳ್ಳುತ್ತದೆ.

ಸಂವಿಧಾನವು ರಾಷ್ಟ್ರದ ಆಡಳಿತಕ್ಕೆ ಅಡಿಪಾಯದ ಚೌಕಟ್ಟನ್ನು ಹಾಕಿಕೊಟ್ಟಿದೆ. ಅಧಿಕಾರದ ರಚನೆ ಮೂಲಭೂತ ಹಕ್ಕು ತತ್ವಗಳನ್ನು ವ್ಯಾಖ್ಯಾನಿಸುತ್ತದೆ ಕಾನೂನಿನ ನಿಯಮವನ್ನು ಎತ್ತಿ ಹಿಡಿಯಲು, ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು, ಮೂಲಭೂತ ಸ್ವಾತಂತ್ರ್ಯವನ್ನು ಖಾತ್ರಿಪಡಿಸಲು ನಮಗೆ ಸಂವಿಧಾನ ಅತ್ಯಗತ್ಯ. ಸಂವಿಧಾನವು ಸರ್ವೋಚ್ಚ ಕಾನೂನಿನಂತೆ ಕಾರ್ಯನಿರ್ವಹಿಸುತ್ತದೆ ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸುತ್ತದೆ. ನ್ಯಾಯಯುತ ಮತ್ತು ಸಾಮರಸ್ಯದ ರಾಷ್ಟ್ರಕ್ಕೆ ಭದ್ರ ಬುನಾದಿಯನ್ನು ಒದಗಿಸುವ ಮೂಲಕ ಪ್ರಜಾಪ್ರಭುತ್ವ ಸಮಾಜದಲ್ಲಿ ಸಂವಿಧಾನವು ವಿಶೇಷವಾದ ಮಹತ್ವವನ್ನು ಪಡೆದುಕೊಂಡಿದೆ.

 ಚೇತನ ಭಾರ್ಗವ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next