Advertisement

Farmer: ಅನ್ನ ದೇವರ ಮುಂದೆ ಅನ್ಯ ದೇವರು ಉಂಟೇ?

03:43 PM Jul 10, 2024 | Team Udayavani |

ಹಸಿದವನಿಗೆ ಮಾತ್ರ ಅನ್ನದ ಬೆಲೆ ಗೊತ್ತು. ಹಸಿದವನಿಗೆ ಮೃಷ್ಟಾನ್ನ ಭೋಜನವೇ ಬೇಕೆಂದಿಲ್ಲ ಒಂದು ತುತ್ತು ಅನ್ನ ಸಿಕ್ಕರೂ ಸಾಕು ಅವನ ಮೊಗ ಅರಳುತ್ತದೆ, ಮನ ಕುಣಿಯುತ್ತದೆ. ಪ್ರತಿಯೊಂದು ಅನ್ನದ ಅಗುಳಿನ ಹಿಂದೆಯೂ ರೈತನ ಪರಿಶ್ರಮದ ಬೆವರ ಹನಿ ಅಡಗಿರುತ್ತದೆ.

Advertisement

ಇದನ್ನೇ ಸರ್ವಜ್ಞರು ಒಂದು ವಚನದಲ್ಲಿ ಈ ರೀತಿ ಹೇಳಿದ್ದಾರೆ,

ಅನ್ನ ದೇವರ ಮುಂದೆ ಅನ್ಯ ದೇವರು ಉಂಟೇ

ಅನ್ನ ಉಂಟಾದರುಣಲುಂಟು ಜಗಕೆಲ್ಲಾ

ಅನ್ನವೇ ಪ್ರಾಣ ಸರ್ವಜ್ಞ

Advertisement

ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ, ಭೂಮಿಯಲ್ಲಿ ರೈತರು ವ್ಯವಸಾಯ ಮಾಡಿದರೆ ಮಾತ್ರ ಎಲ್ಲರೂ ಉಣ್ಣಲು ಸಾಧ್ಯ ಹಾಗಾಗಿ ಅನ್ನವೇ ನಮ್ಮ ಪ್ರಾಣ ಎಂದು ತಿಳಿಸಿದ ಸರ್ವಜ್ಞರ ವಚನವು ಅದೆಷ್ಟು ಅರ್ಥಪೂರ್ಣ ಅಲ್ಲವೇ?! ಎಲ್ಲ  ಉದ್ಯೋಗಗಳ ಮೂಲ ಅಡಗಿರುವುದು ವ್ಯವಸಾಯದಲ್ಲಿಯೇ.

ರೈತರು ವ್ಯವಸಾಯ ಮಾಡದೇ ಹೋದರೆ ಎಲ್ಲರ ಪರಿಸ್ಥಿತಿ ಏನಾದೀತು ಎಂದು ಊಹಿಸಲೂ ಅಸಾಧ್ಯ!!, ಹಸಿವಾದಾಗ ಅನ್ನವನ್ನೇ ಉಣ್ಣಬೇಕು ಹೊರತು ಕೂಡಿಟ್ಟ ಹಣ, ಚಿನ್ನವನ್ನು ಉಣ್ಣಲಾಗದು ಅಲ್ಲವೇ?!, ಜೀವನದ ಈ ಸತ್ಯವೇ ಹೇಳುತ್ತದೆ ಅನ್ನಕ್ಕಿರುವ ಮಹತ್ವವನ್ನು!!, ಇದಕ್ಕೇ ಅಲ್ಲವೇ ಹೇಳುವುದು ಅನ್ನ ದೇವರಿಗಿಂತ ಅನ್ಯ ದೇವರು ಉಂಟೇ ಎಂದು.

ಅಕ್ಕಿಯು ಅನೇಕ ಸಂಸ್ಕಾರಗಳಿಂದ ಅನ್ನದ ರೂಪವನ್ನು ಪಡೆಯುತ್ತದೆ ಹಾಗೆಯೇ ಊಟ ಮಾಡುವಾಗಲೂ ಕೆಲವೊಂದು ಸಂಸ್ಕಾರಗಳನ್ನು ಅನುಸರಿಸಿದರೆ ಮಾತ್ರ ಉಂಡ ಅನ್ನವು ದೇಹಕ್ಕೆ ಸರಿಯಾಗಿ ದೊರಕಿ, ದೇಹಕ್ಕೆ ಶಕ್ತಿ ಹಾಗೂ ಆರೋಗ್ಯ ದೊರಕಲು ಸಾಧ್ಯ.

ಅಂದೆÇÉಾ ಅಡುಗೆ ಮಾಡುವ ಒಲೆಯನ್ನು ಚೆನ್ನಾಗಿ ಶುಭ್ರಗೊಳಿಸಿ, ಒಲೆಯ ಸುತ್ತಲೂ ರಂಗೋಲಿ ಬಿಡಿಸಿ, ಕಟ್ಟಿಗೆ ಉರಿಸಿ ಅನ್ನವನ್ನು ಮಾಡುತ್ತಿದ್ದರು ಹಾಗೂ ಮಾಡಿದ ಮೊದಲನೇ ತುತ್ತು ಅನ್ನವನ್ನು ಗೋ ಮಾತೆಗೆ ಕೊಡುವ ಪದ್ಧತಿಯಿತ್ತು ಈಗ ಆ ಪದ್ಧತಿಗಳೆಲ್ಲಾ ಕಣ್ಮರೆಯಾಗಿ ಹೋಗಿವೆ. ಅನ್ನವನ್ನು ಪರಬ್ರಹ್ಮ ಸ್ವರೂಪಿ ಎನ್ನುತ್ತಾರೆ ಹಾಗಾಗಿ ಜ್ಞಾನಿಗಳು ಅನ್ನವನ್ನು ಯಜ್ಞದಂತೆ ಸ್ವೀಕರಿಸಬೇಕು ಎನ್ನುತ್ತಾರೆ. ಅನ್ನವನ್ನು ಯಜ್ಞದಂತೆ ಸ್ವೀಕರಿಸಿದರೆ ದೇಹ ಹಾಗೂ ಮನಸ್ಸಿನ ಆರೋಗ್ಯ ಭಾಗ್ಯ ರೂಪದಲ್ಲಿ ನಮ್ಮನ್ನು ಕಾಪಾಡುತ್ತದೆ ಎಂಬ ಮಾತಿದೆ. ಯಜ್ಞವೆಂದರೆ ಕೇವಲ ಅಗ್ನಿಕುಂಡದಲ್ಲಿ ಮಾಡುವ ಕಾರ್ಯಕ್ಕೆ ಮಾತ್ರ ಸೀಮಿತವಲ್ಲ ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚ ಪ್ರಾಣಗಳಿಗೆ ಶಕ್ತಿಯನ್ನು ತುಂಬಲು ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ ಎಂದು ತಿಳಿದವರು ಹೇಳುವುದುಂಟು.

ಸಣ್ಣ ವಯಸ್ಸಿನಲ್ಲಿಯೇ ಶಾಲೆಯಲ್ಲಿ ಮಕ್ಕಳಿಗೆ ಶಾಂತಿ ಮಂತ್ರದ ಪಠಣೆಯೊಂದಿಗೆ ಸಹ ಪಂಕ್ತಿ ಭೋಜನ ಮಾಡಬೇಕೆಂಬ ಸಂಸ್ಕಾರವನ್ನು ಹೇಳಿ ಕೊಡುತ್ತಾರೆ. ಯಾವುದೇ ಬೇಧ ಭಾವವಿಲ್ಲದೇ ಎಲ್ಲರೂ ಒಟ್ಟಿಗೆ ಕುಳಿತು, ಸಮಾಧಾನದಿಂದ ಊಟ ಮಾಡಬೇಕು ಎಂಬ ನೀತಿಯು ಈ ಸಂಸ್ಕಾರದಲ್ಲಿ ಅಡಗಿರುತ್ತದೆ.

ಅನ್ನ ಎಂದರೆ ದೇವರು ಹಾಗಾಗಿ ಅನ್ನ ದೇವರ ಮುಂದೆ ಯಾವುದೇ ಕೋಪ, ದ್ವೇಷ, ಅಸೂಯೆ ಸಲ್ಲ ಎಂಬುದೇ ಶಾಂತಿ ಮಂತ್ರದ ಹಿಂದಿರುವ ಅರ್ಥ. ಒಟ್ಟಾಗಿ ಕುಳಿತು ಹಂಚಿ ತಿನ್ನುವ ಖುಷಿಯೇ ಬೇರೆ ಅಲ್ಲವೇ?! ಹಂಚಿ ತಿಂದ ಊಟಕ್ಕೆ ರುಚಿಯೂ ಜಾಸ್ತಿ ಇರುತ್ತದೆ ಎಂದೇ ಹೇಳಬಹುದು ಇದಕ್ಕೇ ಅಲ್ಲವೇ ಹಂಚಿ ತಿಂದರೆ ಸ್ವರ್ಗ ಸುಖ ಅನ್ನುವುದು?!

ತುತ್ತು ಅನ್ನವನ್ನು ಉಣ್ಣುವ ಮುನ್ನ ಭೂಮಿ ತಾಯಿಯನ್ನು, ರೈತರನ್ನು, ಅನ್ನ ಮಾಡಿ ಬಡಿಸಿದವರನ್ನು ಹಾಗೂ ದೇವರನ್ನು ಸ್ಮರಿಸಿ ಉಣ್ಣಬೇಕು. ಯಾವುದೇ ಹರಟೆಯಿಲ್ಲದೇ ನೆಲದಲ್ಲಿ ಕುಳಿತು ಭೋಜನವನ್ನು ಸ್ವೀಕರಿಸಬೇಕು. ಶುಚಿಯಾಗಿ ಊಟ ಮಾಡಿ ಬಡಿಸುವ ಗೃಹಿಣಿಯರ ಮನಸ್ಸೂ ಶಾಂತಿಯಿಂದ ತುಂಬಿರಬೇಕು. ಶಾಂತ ಮನಸ್ಸಿನಿಂದ ಪ್ರೀತಿಯನ್ನು ಬೆರೆಸಿ ಭೋಜನವನ್ನು ತಯಾರಿಸಬೇಕು.

ಹಲವು ಕಾರಣಗಳಿಂದ ಮನಸ್ಸು ತನ್ನ ಸ್ಥಿಮಿತವನ್ನು ಕಳೆದುಕೊಂಡು ಉದ್ವೇಗಕ್ಕೊಳಗಾಗಿ ಆಹಾರವನ್ನು ತಯಾರಿಸಿದರೆ ಆ ಭೋಜನವನ್ನು ಉಂಡವರಿಗೂ ಉದ್ವೇಗದ ಭಾವನೆ ದೇಹದೊಳಗೆ ಪ್ರವೇಶವಾದೀತು, ಉಂಡ ಆಹಾರ ಸರಿಯಾಗಿ ಜೀರ್ಣವಾಗದೇ ಅನೇಕ ಖಾಯಿಲೆಗಳ ಉತ್ಪತ್ತಿಗೆ ಕಾರಣವಾದೀತು.

ಊಟ ಮಾಡುವವರನ್ನು ಯಮ ದೇವರು ಕೂಡ ಕಾಯುತ್ತಿರುತ್ತಾನೆ ಎಂಬ ಮಾತಿದೆ ಅಂಥದರಲ್ಲಿ ಮನುಷ್ಯರಾದ ನಾವು ಯಾರೇ ಊಟ ಮಾಡುವಾಗಲೂ ಜಗಳವನ್ನಾಡಬಾರದು ಏಕೆಂದರೆ ನಮ್ಮ ಮನಸ್ಸಿನೊಳಗಿನ ಅರಿಷಡ್ವರ್ಗಗಳೆಂಬ ಋಣಾತ್ಮಕ ಅಂಶಗಳು ನಾವು ಊಟ ಮಾಡುವ ಅನ್ನದೊಂದಿಗೆ ಬೆರೆತು ಹಾನಿಯುಂಟು ಮಾಡಬಾರದು ಅಲ್ಲವೇ? ಊಟಕ್ಕೆ ಕುಳಿತವರನ್ನು ನೆಮ್ಮದಿಯಿಂದ ಉಣ್ಣಲು ಅನುವು ಮಾಡಿಕೊಡಬೇಕು.ಆದಷ್ಟು ಮೌನವಾಗಿ, ಶಾಂತಿಯಿಂದ ಊಟ ಮಾಡುವುದರಿಂದ ಅನೇಕ ಲಾಭಗಳಿವೆ. ಹಸಿವು ಎಂಬುದು ಇರುವುದರಿಂದಲೇ ನಾವು ನಮ್ಮ ಪಾಲಿನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದು. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ಲವೇ? ಭೂಮಿಯಲ್ಲಿ ಉತ್ತು, ಬಿತ್ತು ಮಾಡಿ ತನ್ನ ಪರಿಶ್ರಮದಿಂದ ರೈತ ತಯಾರಿಸಿದ ಅನ್ನಬಿಸಾಕಿ ಹಾಳು ಮಾಡದಿರಿ. ಅದೆಷ್ಟೋ ಜನರು ಇಂದು ಒಂದು ತುತ್ತಿನ ಊಟಕ್ಕೂ ಕಷ್ಟಪಡುವಂತಾಗಿ, ಉಪವಾಸದಿಂದ ನರಳುತ್ತಿದ್ದಾರೆ ಎಂಬುದನ್ನು ಮರೆಯದಿರೋಣ.

 -ಪ್ರಜ್ಞಾ ರವೀಶ್‌

ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next