Advertisement

ಸಕ್ಕರೆಯುಕ್ತ ಆಹಾರ ಮಿತವಾಗಿ ಬಳಸಿ

10:35 AM Apr 02, 2019 | pallavi |
ಸಿಹಿ ತಿಂಡಿಗಳನ್ನು ಇಷ್ಟು ಪಡದಿರುವವರು ಸಿಗುವುದು ಅತೀ ವಿರಳ. ಚಿಕ್ಕ ಮಕ್ಕಳಿನಿಂದ ಹಿಡಿದು ಇಳಿ ವಯಸ್ಸಿನವರು ಸಿಹಿ ತಿಂಡಿಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುತ್ತಾರೆ. ಆದರೆ ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ಸಕ್ಕರೆಯಾಂಶ ಎಷ್ಟಿರಬೇಕು ಎಂಬ ವಿಷಯ ಯಾರಿಗೂ ತಿಳಿದಿಲ್ಲ.  ಸಕ್ಕರೆಯುಳ್ಳ ಆಹಾರ ಹೆಚ್ಚಾದರೆ ಮಧುಮೇಹದ ಸಮಸ್ಯೆ ಉಂಟಾಗುತ್ತದೆ . ನಿತ್ಯದ ಆಹಾರದಲ್ಲಿ ಸಕ್ಕರೆಯ ಪ್ರಮಾಣ ಎಷ್ಟಿರಬೇಕು? ಸಕ್ಕರೆ ಹೆಚ್ಚಿದ್ದರೆ ಅಪಾಯವೇನು? ಎಂಬ ಕುರಿತು ಮಾಹಿತಿ ಇಲ್ಲಿದೆ ಓದಿ…
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಆರೋಗ್ಯವಿದ್ದರೆ ಎಲ್ಲ ಇದೆ ಎಂಬುದು ಈ ಮಾತಿನ ಅರ್ಥ. ಅದೆಷ್ಟು ಶ್ರೀಮಂತ, ವಿದ್ಯಾವಂತನಾದರೂ ಆರೋಗ್ಯ ಕೆಟ್ಟರೆ ಅವ ರಿಗೆ ಏನಿದ್ದರೂ ವ್ಯರ್ಥ. ಇಂದು ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆಗೆ ಗಮನಹರಿ ಸದೇ ಇರುವುದರ ಪರಿಣಾಮವನ್ನು ಕಾಲಕ್ರಮೇಣ ಅನುಭವಿಸಬೇಕಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಹಲವಾರು ವಿಷಯಗಳನ್ನು ತ್ಯಜಿಸಬೇಕಾಗುತ್ತದೆ ಎನ್ನುವುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.
ಮನೆಯಲ್ಲಿ ಬಳಸುವ ಕೆಲವೊಂದು ರಾಸಾಯನಿಕ ಮತ್ತು ನಾವು ಸುರಕ್ಷಿತವೆಂದು ಭಾವಿಸಿದ್ದರೂ ಸುರಕ್ಷಿತವಾಗಿರದ ಕೆಲವೊಂದು ವಸ್ತುಗಳನ್ನು ನಾವು ತ್ಯಜಿಸಬೇಕಾಗುತ್ತದೆ. ಅನಾರೋಗ್ಯಕರ ವಸ್ತುಗಳನ್ನು ಪದೇ ಪದೇ ಬಳಸುವುದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು. ಇದನ್ನು ಹೊರತುಪಡಿಸಿ ವಯಸ್ಕರಿಗೆ ಸುರಕ್ಷಿತವಾಗಿರುವಂತಹ ಕೆಲವೊಂದು ವಸ್ತುಗಳು ಮಕ್ಕಳಿಗೆ ಸುರಕ್ಷಿತವಾಗಿರಲ್ಲ. ಹಾಗಾಗಿ ಅವರವರ ದೇಹಸ್ಥಿತಿಗನುಗುಣವಾದ ಆಹಾರವನ್ನು ಸೇವಿಸಬೇಕು.
ಸಿಹಿ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರೆಗೂ ಎಲ್ಲ ವಯೋಮಾನದ ಜನರಿಗೂ ಸಿಹಿ ಮೇಲೆ ವ್ಯಾಮೋಹವಿರುತ್ತದೆ. ಆದರೆ ಅತಿಯಾದ ಸಿಹಿತಿಂಡಿಗಳ ಬಳಕೆಯೂ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಹಾಗಾಗಿ ನಾವು ಸೇವಿಸುವ ಆಹಾರದ ಒಳಿತು ಹಾಗೂ ಕೆಡುಕಿನ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು.
ನಾವು ಸೇವಿಸುವ ದೈನಂದಿನ ಆಹಾರಗಳಲ್ಲಿ ಇಂತಿಷ್ಟು ಪ್ರಮಾಣ ಸಕ್ಕರೆ ಅಂಶ ಇದ್ದೇ ಇರುತ್ತದೆ. ಆದರೆ ಅತಿಯಾದ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಎಲ್ಲರೂ ಯೋಚಿಸಬೇಕಾಗುತ್ತದೆ. ನಾವು ಸೇವಿಸುವ ಅನ್ನ , ತಿಂಡಿ ತಿನಿಸು, ಹಣ್ಣುಗಳಲ್ಲೂ ಸಕ್ಕರೆ ಅಂಶ ಇರುತ್ತದೆ. ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಅಧಿಕ ಸಕ್ಕರೆಯಂಶ ಇರುವಂತಹ ಆಹಾರಗಳಲ್ಲಿ ಅನಾರೋಗ್ಯಕರ ಕಾರ್ಬೋಹೈಡ್ರೇಟ್ಸ್‌, ಕೊಬ್ಬು ಮತ್ತು ಸಕ್ಕರೆಯು ಹೆಚ್ಚಿರುವುದು. ಇದು ದೇಹದ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಬಹುದು.
ಆರೋಗ್ಯದ  ಬಗ್ಗೆ ಇರಲಿ ಕಾಳಜಿ
ಮಧುಮೇಹ ಎಂಬುದು ಜೀವನವಿಡೀ ವ್ಯಕ್ತಿಯನ್ನು ಕಾಡುವ ರೋಗ. ಒಮ್ಮೆ ಮಧುಮೇಹ ಆವರಿಸಿಕೊಂಡರೆ ಮತ್ತೆ ಅದನ್ನು ದೂರ ಮಾಡಲು ಸಾಧ್ಯವಿಲ್ಲ .ಆದರೆ ನಿಯಂತ್ರಿಸ ಬಹುದು. ಅತಿಯಾದ ಸಕ್ಕರೆಯುಳ್ಳ ಆಹಾರ‌ ಮಧುಮೇಹಕ್ಕೆ ದಾರಿಯಾಗಬಹುದು. ಆ ಕಾರಣಕ್ಕಾಗಿ ಸಕ್ಕರೆ ಅಂಶ ಕಡಿಮೆ ಇರುವ ಆಹಾರ ಸೇವಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊದಲು ಸಕ್ಕರೆ ಅಂಶವಿರುವ ಆಹಾರಗಳು ಯಾವುದು ಎಂದು ಪಟ್ಟಿ ಮಾಡಿ ಮುಂದುವರಿಯಬೇಕು. ಅನ್ನದಲ್ಲಿ ಅತಿ ಹೆಚ್ಚು ಸಕ್ಕರೆ ಅಂಶ ಇರುವ ಕಾರಣದಿಂದ ಸ್ವಲ್ಪ ಅನ್ನ ಸೇವಿಸಿ ಇತರ ಆಹಾರವನ್ನು ಸೇವಿಸಬೇಕು. ಬೇಕರಿ ತಿಂಡಿಗಳನ್ನು ಆದಷ್ಟು ಕಡಿಮೆ ಮಾಡಿ, ತಂಪು ಪಾನೀಯಗಳ ಬದಲು ಎಳನೀರು ಮೊದಲಾದ ಪಾನೀಯಗಳ ಸೇವನೆ ಮಾಡಬಹುದು. ಸಿಹಿ ತಿಂಡಿಗಳನ್ನು ತಿನ್ನದಿದ್ದರೇ ಸಾಧ್ಯವೇ ಇಲ್ಲ ಎನ್ನುವವರು ಬೆಲ್ಲದಿಂದ ಮಾಡಲ್ಪಡುವ ತಿಂಡಿಗಳಿಗೆ ಮೊರೆ ಹೋಗಬಹುದು. ಆದರೆ ಬೆಲ್ಲದ ಸೇವನೆ ಕೂಡ ಮಿತವಾಗಿರಲಿ.
ನಿಯಂತ್ರಣವಿರಲಿ
ಸದ್ಯ ನಾನು ಆರೋಗ್ಯವಾಗಿದ್ದೇನೆ. ಯಾವುದೇ ರೀತಿಯ ಆರೋಗ್ಯ ಸಂಬಂಧಿ ಕಾಯಿಲೆ ಇಲ್ಲ ಎಂದು ಬೇಕಾಬಿಟ್ಟಿ ಆಹಾರ ಸೇವನೆ ಮಾಡಿದ್ದಲ್ಲಿ ಮುಂದೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ.  ದೈನಂದಿನ ಜೀವನದಲ್ಲಿ ನಾವು ಸೇವಿಸುವ ಭಾಗಶಃ ಆಹಾರದಲ್ಲಿ ಸಕ್ಕರೆ ಅಂಶ ಇರುತ್ತದೆ. ಅನ್ನ, ಹಣ್ಣುಗಳು, ಸಿಹಿತಿಂಡಿಗಳು ಎಲ್ಲ ವಸ್ತುಗಳಲ್ಲೂ ಸಕ್ಕರೆ ಅಂಶ ಇರುತ್ತದೆ. ಇದರಿಂದ ದೂರವಿರಲು ಸಾಧ್ಯವಿಲ್ಲ. ಆದರೆ ಅದನ್ನು ಮಿತವಾಗಿ ಬಳಸಬಹುದು. ಇದರಿಂದ ಮುಂದೆ ಬರುವ ರೋಗಗಳನ್ನು ಈಗಲೇ ನಿಯಂತ್ರಣದಲ್ಲಿಡಲು ಸಾಧ್ಯವಿದೆ. ಅದರಲ್ಲೂ ಬೇಕರಿ ವಸ್ತುಗಳು, ಕೆಲ ವು ತಂಪು ಪಾನೀಯಗಳಲ್ಲಿ ಅತೀ ಹೆಚ್ಚು ಸಕ್ಕರೆ ಅಂಶ ಇರುತ್ತದೆ. ಇದನ್ನು ನಿತ್ಯ ಜೀವನದಲ್ಲಿ ಅತಿಯಾಗಿ ಬಳಕೆ ಮಾಡುವುದರಿಂದ ಮಧುಮೇಹದಂತಹ ಕಾಯಿಲೆಗಳು ಬಾಧಿಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ನಾವು ಸೇವಿಸುವ ಆಹಾರಗಳ ಒಳಿತು ಹಾಗೂ ಕೆಡುಕುಗಳ ಬಗ್ಗೆ ತಿಳಿದಿರುವುದು ಅವಶ್ಯ.
ಆರಂಭದಲ್ಲೇ ಕಡಿವಾಣ ಹಾಕಿ 
ಆರಂಭದಿಂದಲೂ ಸಕ್ಕರೆಯುಕ್ತ ಆಹಾರಗಳನ್ನು ಕಡಿಮೆ ಸೇವನೆ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಆಹಾರವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಿದೆ. ಆರೋಗ್ಯದ ಸ್ಥಿತಿಗತಿಗಳನ್ನು ವೈದ್ಯರಲ್ಲಿ ಪರಿಶೀಲಿಸಿ ಅದಕ್ಕೆ ಅನುಗುಣವಾದ ಆಹಾರಗಳನ್ನು ಸೇವಿಸಿ.
– ಡಾ| ಸುಮೇಧ್‌ ವೈದ್ಯರು
ಪ್ರಜ್ಞಾ  ಶೆಟ್ಟಿ
Advertisement

Udayavani is now on Telegram. Click here to join our channel and stay updated with the latest news.

Next