Advertisement

ಪಾಕ್‌ಗೆ ಕಪಾಳಮೋಕ್ಷ , ಸಲಾವುದ್ದೀನ್‌ ಜಾಗತಿಕ ಉಗ್ರ: ಅಮೆರಿಕ ಘೋಷಣೆ

11:12 AM Jun 27, 2017 | Team Udayavani |

ವಾಷಿಂಗ್ಟನ್‌: ಉಗ್ರವಾದಕ್ಕೆ ಪೋಷಣೆ ನೀಡುತ್ತಿರುವ ಪಾಕಿಸ್ತಾನಕ್ಕೆ ಹಾಗೂ ಅದರ ಪರಮ ಮಿತ್ರ ಚೀನಾಕ್ಕೆ ಸೋಮವಾರ ಬಲವಾದ ಪ್ರಹಾರ ಸಿಕ್ಕಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರತ್ವಕ್ಕೆ ಪ್ರೋತ್ಸಾಹ ನೀಡುತ್ತಿರುವ ಉಗ್ರ
ಸಂಘಟನೆ ಹಿಜ್ಬುಲ್‌ ಮುಜಾದೀನ್‌ ಸಂಸ್ಥಾಪಕ ಸಯ್ಯದ್‌ ಸಲಾವುದ್ದೀನ್‌ನನ್ನು ಅಮೆರಿಕ “ಜಾಗತಿಕ ಭಯೋತ್ಪಾದಕ’ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ 
ತಾಂತ್ರಿಕ ಜಯ ಸಿಕ್ಕಿದೆ. ಇದರಿಂದಾಗಿ ಅದು ಉಗ್ರರಿಗೆ ನೆರವು ನೀಡುತ್ತಿದೆ ಎಂದು ಭಾರತ ಸರ್ಕಾರ ಹಲವಾರು ಅಂತಾರಾಷ್ಟ್ರೀಯ ವೇದಿಕೆಗ ಳಲ್ಲಿ ಪ್ರಸ್ತಾಪ ಮಾಡುತ್ತಿದ್ದರೂ, ನೆರೆಯ ರಾಷ್ಟ್ರ ಅದಕ್ಕೆ ಸೊಪ್ಪು ಹಾಕುತ್ತಿರಲಿಲ್ಲ. ಸೋಮವಾರದ ಘೋಷಣೆಯಿಂದಾಗಿ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತಾಗಿದೆ.

Advertisement

2003ರಲ್ಲಿ ಅಮೆರಿಕ ಸರ್ಕಾರ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ಇದೇ ವಿಭಾಗಕ್ಕೆ ಸೇರಿಸಿ ಆದೇಶ ಹೊರಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಧಿಕೃತ ಭೇಟಿಗೆ ಕೆಲವೇ ಗಂಟೆಗಳ ಮುನ್ನ ಅಮೆರಿಕದ ವಿದೇ  ಶಾಂಗ ಇಲಾಖೆ ಈ ಘೋಷಣೆ ಮಾಡಿದೆ. 

ಪ್ರಧಾನಿಯವರ ಜತೆಗೆ ವಾಷಿಂಗ್ಟನ್‌ನಲ್ಲಿರುವ ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ ಬಾಗ್ಲೆ ಇದೊಂದು ಉತ್ತಮ ಕ್ರಮ ಎಂದು ಪ್ರತಿಕ್ರಿಯೆ ನೀಡಿದ್ದಾರೆ. “ಈ ಕ್ರಮದಿಂದ ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳೂ ಉಗ್ರವಾದದಿಂದ ನಲುಗಿ ಹೋಗಿವೆ ಎಂಬುದನ್ನು ಸಾಬೀತು  ಪಡಿಸುತ್ತದೆ. ಇದೊಂದು ಶ್ಲಾಘನೀಯವಾದದ್ದು’ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಯಿಂದ ಚೀನಾಕ್ಕೂ ಪರೋಕ್ಷ ಎಚ್ಚರಿಕೆಯನ್ನು ಭಾರತ ಹಾಗೂ ಅಮೆರಿಕ ನೀಡಿದೆ. 2016ರಲ್ಲಿ ಪಂಜಾಬ್‌ನ ಪಠಾಣ್‌ ಕೋಟ್‌ ನಲ್ಲಿರುವ ಭಾರತೀಯ ವಾಯು  ಪಡೆಯ ನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಪ್ರಧಾನ ನಾಯಕ ಮಸೂದ್‌ ಅಜರ್‌ನ ನೇರ ಕೈವಾಡ ಇದೆ. 

Advertisement

ಆತನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಬೇಕೆಂದು ಹಲವಾರು ಬಾರಿ ವಿಶ್ವಸಂಸ್ಥೆಯ ಸಮಿತಿಗೆ
ದಾಖಲೆಗಳನ್ನು ನೀಡಿದರೂ, ಅದನ್ನು ಸರಾಸಗಟಾಗಿ ತಿರಸ್ಕರಿಸಿತ್ತು. ಕೆಲ ದಿನಗಳ ಹಿಂದಷ್ಟೇ ಚೀನಾ ಮತ್ತೂಮ್ಮೆ ಮಸೂದ್‌ ಪರವಾಗಿಯೇ ವಾದಿಸಿ, ಆತನನ್ನು ನಿಷೇಧಿತ ಪಟ್ಟಿಗೆ ಸೇರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಇನ್ನು ಅಮೆರಿಕದ ದೃಷ್ಟಿಯಿಂದ ನೋಡುವುದಾದರೆ ಭಾರತದ ಮೂಲಕ ಚೀನಾವನ್ನು ನಿಯಂತ್ರಿಸುವುದು ಟ್ರಂಪ್‌ ಆಡಳಿತಕ್ಕೆ ಬೇಕಾಗಿದೆ. ಏಕೆಂದರೆ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿರುವ ವಿಯೆಟ್ನಾಂ ಸಮೀಪ ಇರುವ ದ್ವೀಪಗಳಲ್ಲಿ ಚೀನಾ ವಿಮಾನ ನಿಲ್ದಾಣ, ಸೇನಾ ನೆಲೆಗಳನ್ನು ಸ್ಥಾಪಿಸಿದೆ. ಇದು ಅಮೆರಿಕದ ಪಾರುಪತ್ಯ ಪ್ರಶ್ನೆ ಮಾಡುವ ವಿಚಾರವೇ ಆದ್ದರಿಂದ ಸಲಾವುದ್ದೀನ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡುವ ಮೂಲಕ ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಮಸೂದ್‌ ಅಜರ್‌ನನ್ನು ಸೇರಿಸದೆ ಇದ್ದರೆ, ಆತನ ವಿರುದ್ಧವೂ ಇಂಥದ್ದೇ ಕ್ರಮವೆಂದು  ಸಾರುತ್ತೇವೆಂದು ಪರೋಕ್ಷ ಎಚ್ಚರಿಕೆಯನ್ನೂ ಟ್ರಂಪ್‌ ಸರ್ಕಾರ ನೀಡಿದೆ.

ರಕ್ಷಣಾ, ವಿದೇಶಾಂಗ ಸಚಿವರ ಜತೆ ಭೇಟಿ:
ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ರಕ್ಷಣಾ ಸಚಿವ ಜೇಮ್ಸ್‌ ಮಟ್ಟಿಸ್‌ ಮತ್ತು ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್ಸನ್‌ ಜತೆಗೆ ಭೇಟಿಯಾಗಿ ಮಾತುಕತೆ ನಡೆಸಿದರು. ಟ್ರಂಪ್‌ ಸರ್ಕಾರದ ಇಬ್ಬರು ಪ್ರಮುಖ ಸಚಿವರ ಜತೆ ಪ್ರಧಾನಮಂತ್ರಿ
ನರೇಂದ್ರ ಮೋದಿ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿದಂತೆ ಬಾರತ ಸರ್ಕಾರದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು. ಈ ಸಂದರ್ಭದಲ್ಲಿ
ಭಯೋತ್ಪಾದನೆ ವಿರುದ್ಧ ಸಂಘಟನೆ ನಡೆಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತ ಪರಸ್ಪರ ಸಹಕಾರ ನೀಡುವ ಬಗ್ಗೆ ಮಟ್ಟಿಸ್‌, ಟಿಲ್ಲರ್ಸನ್‌ ಜತೆಗೆ ಪ್ರಧಾನಿ ಮೋದಿ ಚರ್ಚಿಸಿದರು.

ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್ಸನ್‌ ಜತೆಗಿನ ಭೇಟಿ ವೇಳೆ ಎರಡೂ ದೇಶಗಳ ನಡುವೆ ವ್ಯೂಹಾತ್ಮಕ ಮತ್ತು ಆರ್ಥಿಕ ಸಹಕಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲ ರಾಷ್ಟ್ರಗ ಳ ಜತೆ ಭಾರತ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ ಎಂದು ಪ್ರಧಾನಿ ಅಮೆರಿಕದ ವಿದೇಶಾಂಗ ಸಚಿವರಿಗೆ ವಿವರಿಸಿದರೆಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ
ಗೋಪಾಲ ಬಾಗ್ಲೆ ಹೇಳಿದರು. ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬ ಮಾತನ್ನು ದೇಶದೊಳಗೆ ಮಾತ್ರವಲ್ಲದೆ, ವಿದೇಶಗಳು, ನೆರೆಹೊರೆಯ ದೇಶಗಳೊಂದಿಗೂ ವಿಸ್ತರಿಸಲು ಭಾರತ ಉತ್ಸುಕವಾಗಿದೆ ಎಂಬ ಅಂಶವನ್ನು ಪ್ರಧಾನಿ ಮೋದಿ ಟ್ರಂಪ್‌ ಸರ್ಕಾರದ ಪ್ರಮುಖ ಸಚಿವರಿಗೆ ಪ್ರಧಾನಿ ವಿವರಿಸಿದ್ದಾರೆ ಎಂದು ಬಾಗ್ಲೆ ಹೇಳಿದ್ದಾರೆ.

ಚೀನಾ ವಿಚಾರ ಪ್ರಸ್ತಾಪ: ರಕ್ಷಣಾ ಸಚಿವ ಜೇಮ್ಸ್‌ ಮಟ್ಟಿಸ್‌ ಜತೆಗಿನ ಭೇಟಿ ವೇಳೆ ಚೀನಾ ವಿಚಾರ ಪರೋಕ್ಷವಾಗಿ ಪ್ರಸ್ತಾಪಾಯಿತು. ವಿಯೆಟ್ನಾಂ ಗುಂಟ ಇರುವ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿನ ದ್ವೀಪಗಳಲ್ಲಿ ನೆಲೆ ಸ್ಥಾಪನೆ
ಮಾಡಿರುವ ಬಗ್ಗೆ ಪ್ರಧಾನಿ ಚರ್ಚಿಸಿದರು. 

ಈ ಸಂದರ್ಭದಲ್ಲಿ ಎಲ್ಲ ದೇಶಗಳೂ ಅಂತಾರಾಷ್ಟ್ರೀಯಾಗಿರುವ ಕಾನೂನುಗಳನ್ನು  ಗೌರವಿಸಬೇಕೆಂದು ಅಮೆರಿಕ ರಕ್ಷಣಾ ಸಚಿವ ಹೇಳಿದರು ಎಂದು ಬಾಗ್ಲೆ ಪತ್ರಕರ್ತರಿಗೆ ವಿವರಿಸಿದರು.

ವಿಶ್ವಸಂಸ್ಥೆಯ ಪಟ್ಟಿಯೂ ಇದೆ: ವಿಶ್ವಸಂಸ್ಥೆ ಕೂಡಾ
ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಕ್ರಮವೂ ಇದೆ. ಉಗ್ರ ಸಂಘಟನೆ ಜಮಾತ್‌ ಉದ್‌ ದಾವಾದ ಹಫೀಜ್‌ ಸಯೀದ್‌ನನ್ನು ವಿಶ್ವಸಂಸ್ಥೆ ಈಗಾಗಲೇ ಈ ಪಟ್ಟಿಗೆ ಸೇರಿಸಿದೆ. ಇದರಿಂದ ಸದಸ್ಯ ರಾಷ್ಟ್ರಗಳಲ್ಲಿ ಆತನ ಚಟುವಟಿಕೆಗಳಿಗೆ ತಡೆ, ಹಣಕಾಸು ವ್ಯವಹಾರಕ್ಕೆ ತಡೆ, ಆತನ ವಿರುದ್ಧ ಕ್ರಮ ಕೈಗೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಆತನ ಕಾರ್ಯಾಚರಣೆಗೆ ತಡೆ ನೀಡಲು ಹೀಗೆ ಮಾಡಲಾಗುತ್ತದೆ. ಅಲ್ಲದೇ ಕಾನೂನಾತ್ಮಕ ಕ್ರಮಕ್ಕೆ ಇದು ಬೆಂಬಲ ನೀಡುತ್ತದೆ.

ಜಾಗತಿಕ ಉಗ್ರನೆಂದು ಘೋಷಿಸಿದ್ದೇಕೆ?
ಅಮೆರಿಕದ ಕಾರ್ಯಕಾರಿ ಆದೇಶ 13224ರ ಅನ್ವಯ, ಉಗ್ರ ಸಲಾಹುದ್ದೀನ್‌ ತನ್ನ ಭಯೋತ್ಪಾ ದನಾ ಕೃತ್ಯಗಳ ಮೂಲಕ ಅಮೆರಿಕದ ನಾಗರಿಕರ ಭದ್ರತೆಗೆ ಅಪಾಯ ಉಂಟುಮಾಡಿದ್ದು, ಅಮೆ ರಿಕದ ರಾಷ್ಟ್ರೀಯ ಭದ್ರತೆಗೆ, ವಿದೇಶಿ ನೀತಿಗೆ ಹಾಗೂ ದೇಶದ ಆರ್ಥಿಕತೆಗೆ ಧಕ್ಕೆ ಉಂಟುಮಾಡಿ ದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಗಿದೆ.

ಏನಾಗುತ್ತದೆ?
*ಅಮೆರಿಕದಲ್ಲಿ ಆ ವ್ಯಕ್ತಿಯ ಹೆಸರಲ್ಲಿರುವ ಎಲ್ಲ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ
ಅಧಿಕಾರ ಸರ್ಕಾರಕ್ಕಿರುತ್ತದೆ.

*ಆತನ ಜತೆ ಅಮೆರಿಕನ್ನರಾರೂ ಯಾವುದೇ ರೀತಿಯ ವ್ಯಾಪಾರ, ವಹಿವಾಟು, ಸಂಬಂಧ ಹೊಂದುವಂತಿಲ್ಲ.

2003ರಲ್ಲಿ ಈ ಪಟ್ಟಿಗೆ ಸೇರಿದ್ದ ದಾವೂದ್‌
ಭಾರತದ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದ್ದ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ಅಮೆರಿಕವು 2003ರ ಅಕ್ಟೋಬರ್‌ನಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಭಾರತಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬನನ್ನು ಜಾಗತಿಕ ಉಗ್ರನೆಂದು ಅಮೆರಿಕ ಘೋಷಿಸಿದ್ದು ಅದೇ ಮೊದಲು. ಉಗ್ರ ಸಂಘಟನೆಗಳಾದ ಅಲ್‌ ಖೈದಾ ಜತೆಗಿನ ನಂಟು ಹಾಗೂ ಲಷ್ಕರ್‌ ಮತ್ತಿತರ ಸಂಘಟನೆಗಳಿಗೆ ಹಣಕಾಸು ಪೂರೈಕೆ ಚಟುವಟಿಕೆಗಳಿಗೆ ಸಂಬಂಧಿಸಿ ದಾವೂದ್‌ನನ್ನು ಈ ಪಟ್ಟಿಗೆ ಸೇರಿಸಲಾಗಿತ್ತು. ಅಷ್ಟೇ ಅಲ್ಲದೆ,ಅಮೆರಿಕದಲ್ಲಿದ್ದ ಆತನ ಎಲ್ಲ ಆಸ್ತಿಗಳನ್ನೂ ಮುಟ್ಟುಗೋಲು ಹಾಕಲಾಗಿತ್ತು.

ಇತ್ತೀಚೆಗೆ ಸೇರಲ್ಪಟ್ಟ ಉಗ್ರರು
ಜೂನ್‌ 15, 2017: ಮೊಹಮ್ಮದ್‌ ಶಫಿ ಅರ್ಮರ್‌, ಭಟ್ಕಳ- ಐಸಿಸ್‌ ಉಗ್ರ, ಒಸಾಮಾ ಅಹ್ಮದ್‌ ಅತ್ತಾರ್‌- ಐಸಿಸ್‌ ಉಗ್ರ, ಮೊಹಮ್ಮದ್‌ ಈಸಾ ಯೂಸುಫ್ ಸಖರ್‌ ಅಲ್‌ ಬಿನಾಲಿ- ಐಸಿಸ್‌ ಉಗ್ರ

28 ವರ್ಷದಿಂದ ಠಿಕಾಣಿ
ಇಪ್ಪತ್ತೆಂಟು ವರ್ಷಗಳಿಂದ ಪಾಕ್‌ನಲ್ಲಿ ಠಿಕಾಣಿ ಹೂಡಿರುವ 71 ವರ್ಷದ ಉಗ್ರ 1987ರಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ. ಆದರೆ ದಯನೀಯವಾಗಿ  ಸೋಲನುಭವಿಸಿದ್ದ.  ವ್ಯಾಪಕ ಪ್ರಮಾಣದಲ್ಲಿ ವಂಚನೆ ನಡೆದಿದ್ದೇ ತಾನು ಸೋಲಲು ಕಾರಣವೆಂದು ಆತ ಆರೋಪಿಸುತ್ತಿದ್ದ. ಜು.8ರಂದು ಉಗ್ರ ಬುರ್ಹಾನ್‌ ವಾನಿ ಯೋಧರಿಂದ ಕೊಲ್ಲಲ್ಪಟ್ಟು ವರ್ಷ ಪೂರ್ತಿಯಾಗಲಿರುವಂತೆಯೇ ಭದ್ರತಾ ಪಡೆಗಳ ವಿರುದ್ಧ ವಾರ ಕಾಲ ಪ್ರತಿಭಟನೆ ನಡೆಸಿ ಎಂದು ವಿಡಿಯೋ ಸಂದೇಶ ನೀಡಿದ ದಿನವೇ ಆತ ವಿರುದ್ಧ ಗದಾ ಪ್ರಹಾರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next