Advertisement

ನಗರಗೆರೆ ಹೋಬಳಿಯನ್ನು ಗುಡಿಬಂಡೆಗೆ ಸೇರಿಸಲು ಒತ್ತಾಯ

09:41 PM Apr 07, 2022 | Team Udayavani |

ಗುಡಿಬಂಡೆ: ನಗರಗೆರೆ ಹೋಬಳಿಯ ಎಲ್ಲಾ ಗ್ರಾಮಗಳನ್ನು ಗುಡಿಬಂಡೆ ತಾಲೂಕಿಗೆ ಸೇರಿಸಿ ಸಾರ್ವಜನಿಕರ ಒಕ್ಕೊರಲಿನ ಕೂಗು ಕೇಳಿ ಬರುತ್ತಿದೆ.

Advertisement

ಗುಡಿಬಂಡೆ ತಾಲೂಕು ಮಜರಾ ಗ್ರಾಮಗಳು ಸೇರಿ 145 ಹಳ್ಳಿಗಳು, 8 ಗ್ರಾಮ ಪಂಚಾಯಿತಿ ಕೇಂದ್ರಗಳು, 2 ಹೋಬಳಿ ಕೇಂದ್ರಗಳು ಸೇರಿಸಿ 2001 ರ ಜನಗಣತಿಯ ಅಧಾರದ ಮೇಲೆ 65000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುತ್ತದೆ, ಆದರೂ ಸಹ ಭೌಗೋಳಿಕವಾಗಿ ತಾಲೂಕು ಮಾತ್ರ ವಿಸ್ತೀರ್ಣದಲ್ಲಿ ಬಹಳ ಚಿಕ್ಕ ತಾಲೂಕು ಆಗಿದೆ.

ಗೌರೀಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಗ್ರಾಮಗಳು ಗುಡಿಬಂಡೆ ತಾಲೂಕು ಕೇಂದ್ರಕ್ಕೆ ಕೇವಲ 13 ಕಿ.ಮೀ ಯಿಂದ 10 ಕಿ.ಮೀ ದೂರದಲ್ಲಿದ್ದು, ಅದೇ ನಗರಗೆರೆ ಹೋಬಳಿಯ ಗ್ರಾಮಗಳು ಗೌರೀಬಿದನೂರು ತಾಲೂಕು ಕೇಂದ್ರಕ್ಕೆ 30ರಿಂದ 25 ಕಿ.ಮೀ ದೂರದಲ್ಲಿರುತ್ತವೆ,

ನಗರಗೆರೆ ಹೋಬಳಿಯ ಗ್ರಾಮಗಳು ಹತ್ತಿರದ ತಾಲೂಕಿನ ನ್ಯಾಯಾಲಯವಾದ ಗುಡಿಬಂಡೆ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಬರುತ್ತಿರುತ್ತಾರೆ, ಆದರೆ ಕೇವಲ ಕಂದಾಯ ಇಲಾಖೆಯ ವ್ಯವಹಾರಗಳಿಗೆ ಹಾಗೂ ತಾಲೂಕು ಪಂಚಾಯಿತಿ ಇತರೆ ಸಣ್ಣ ಪುಟ್ಟ ವ್ಯವಹಾರಗಳಿಗೆ ಮಾತ್ರ ಗೌರೀಬಿದನೂರು ತಾಲೂಕಿಗೆ ಹೋಗಿ ಬರಬೇಕಾಗಿರುತ್ತದೆ ಹೊರತು ನ್ಯಾಯಾಲಯದ ಕೆಲಸಗಳಿಗೆ ಹಾಗೂ ವಾಣಿಜ್ಯ ವ್ಯವಹಾರಿಗಳಿಗಾಗಿ ಗುಡಿಬಂಡೆ ತಾಲೂಕು ಕೇಂದ್ರಕ್ಕೆ ಬರಬೇಕಾಗಿರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಕೇವಲ ಕಂದಾಯ ಹಾಗೂ ತಾಲೂಕು ಪಂಚಾಯಿತಿಯ, ಇತರೆ ಇಲಾಖೆಯ ಕೆಲಸಗಳಿಗೆ ಮಾತ್ರ ಗೌರೀಬಿದನೂರಿಗೆ ಓಡಾಡುವ ನಗರಗೆರೆ ಹೋಬಳಿಯ ವ್ಯಾಪ್ತಿಯ ಸಾರ್ವಜನಿಕರು, ನಗರಗೆರೆ ಹೋಬಳಿಯ ಎಲ್ಲಾ ಗ್ರಾಮಗಳನ್ನು ಎಲ್ಲಾ ಇಲಾಖೆಗಳಿಗೆ ವ್ಯವಹರಿಸಲು ಗುಡಿಬಂಡೆ ತಾಲೂಕಿಗೆ ಸೇರಿಸಿದ ಪಕ್ಷದಲ್ಲಿ, ಆ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗಿ, ಗುಡಿಬಂಡೆ ತಾಲೂಕಿನ ಭೌಗೋಳಿಕ ಪ್ರದೇಶವು ಸಹ ಹೆಚ್ಚಾಗಲಿದ್ದು, ಕೂಡಲೇ ರಾಜ್ಯ ಸರ್ಕಾರ ನಗರಗೆರೆ ಹೋಬಳಿಯನ್ನು ಗುಡಿಬಂಡೆ ತಾಲೂಕಿಗೆ ಸೇರಿಸಬೇಕೆಂಬುದು ಜನರ ಒಕ್ಕೊರಲಿನ ಒತ್ತಾಯವಾಗಿದೆ.

Advertisement

ನಗರಗೆರೆ ಸ್ಥಳೀಯರ ಬೇಡಿಕೆ: ನಗರಗೆರೆ ಹೋಬಳಿಯು ಗೌರೀಬಿದನೂರು ತಾಲೂಕು ಕೇಂದ್ರದಿಂದ ದೂರದಲ್ಲಿದ್ದು, ಈಗಾಗಲೇ ಗೌರೀಬಿದನೂರು ತಾಲೂಕಿನಲ್ಲಿ ಆರು ಹೋಬಳಿಗಳು ಇದ್ದು, ಬಂದ ಅನುಧಾನವನ್ನೆಲ್ಲಾ ಹತ್ತಿರದ ಹೋಬಳಿಗಳಿಗೆ ಬಹು ಪಾಲು ಹಂಚಿಕೊಂಡು, ಕಡಿಮೆ ಅನುದಾನ ನೀಡುತ್ತಿದ್ದು, ಅದೇ ಅಲ್ಲದೇ ನಗರಗೆರೆ ಹೋಬಳಿ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗದ ಪ್ರದೇಶವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಸಹ ಸ್ಥಳಕ್ಕೆ ಬಂದು ಕ್ರಮ ವಹಿಸಲು ತಡವಾಗುತ್ತಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಹತ್ತಿರದ ಗುಡಿಬಂಡೆಗೆ ಹೋಗತ್ತಿರುವುದರಿಂದ, ಶೈಕ್ಷಣಿಕ ಸೇರಿದಂತೆ ಎಲ್ಲಾ ಇಲಾಖೆಗಳು ಸಹ ಗುಡಿಬಂಡೆ ತಾಲೂಕಿಗೆ ವರ್ಗಾವಣೆಗೊಂಡರೆ ವಿದ್ಯಾರ್ಥಿಗಳಿಗೂ, ಸಾರ್ವಜನಿಕರಿಗೂ ಹಾಗೂ ರೈತರಿಗೆ ಸಹ ಅನುಕೂಲವಾಗಿದೆ.

ಮಲ್ಲಪ್ಪ, ರೈತ ಮುಖಂಡ, ವಾಟದಹೊಸಹಳ್ಳಿ ಹೇಳಿಕೆ: ಗುಡಿಬಂಡೆ ತಾಲೂಕು ಕೇಂದ್ರ ನಗರಗೆರೆ ಹೋಬಳಿಯ ಎಲ್ಲಾ ಹಳ್ಳಿಗಳಿಂದ 8 ಕಿ.ಮೀ ವಿಸ್ತೀರ್ಣದ ಹತ್ತಿರದಲ್ಲಿದ್ದು, ನ್ಯಾಯಾಲಯ ಹೊರತು ಪಡಿಸಿ ಉಳಿದ ಎಲ್ಲಾ ಕೆಲಸ ಕಾರ್ಯಗಳಿಗೆ ಗೌರೀಬಿದನೂರಿಗೆ ಹೋಗಿ ಬರಲು ತೊಂದರೆಯಾಗುತ್ತಿದ್ದು, ನ್ಯಾಯಾಲಯದಂತೆ ಗುಡಿಬಂಡೆಗೆ ಎಲ್ಲಾ ಇಲಾಖೆಗಳು ಸೇರ್ಪಡೆಯಾದರೆ ಈ ಭಾಗದ ಜನರಿಗೆ ತುಂಬ ಅನುಕೂಲವಾಗಲಿದೆ.

ಲಕ್ಷ್ಮೀನಾರಾಯಣ, ಸಿ.ಪಿ.ಐ.ಎಂ. ಮುಖಂಡ, ಹಳೇ ಗುಡಿಬಂಡೆ ಹೇಳಿಕೆ: ನಗರಗೆರೆ ಹೋಬಳಿಯ ಎಲ್ಲಾ ಹಳ್ಳಿಗಳು ಗುಡಿಬಂಡೆ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿದ್ದು, ಸುಮಾರು ವರ್ಷಗಳಿಂದಲೂ ಸಹ ಆ ಭಾಗದ ಜನರಿಗೆ ಗೌರೀಬಿದನೂರು ನಿಂದ ಗುಡಿಬಂಡೆ ತಾಲೂಕಿಗೆ ಸೇರಿಸಿಕೊಳ್ಳಲು ಒಕ್ಕೊರಲ ಬೇಡಿಕೆಗಳು ಬರುತ್ತಿದ್ದು, ಗುಡಿಬಂಡೆ ತಾಲೂಕಿಗೆ ಸೇರ್ಪಡೆಯಾದಲ್ಲಿ ಆ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next