Advertisement

Belman: ದಾರಿ ದೀಪ, ರಸ್ತೆ, ರುದ್ರಭೂಮಿ ದುರಸ್ತಿಗೆ ಆಗ್ರಹ

04:00 PM Jul 30, 2024 | Team Udayavani |

ಬೆಳ್ಮಣ್‌: ಮುಂಡ್ಕೂರು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೋಮವಾರ ಪಂಚಾಯತ್‌ನ ಸಭಾಭವನದಲ್ಲಿ ಅಧ್ಯಕ್ಷ ದೇವಪ್ಪ ಸಪಳಿಗರ ಅಧ್ಯಕ್ಷತೆಯಲ್ಲಿ ನಡೆದು ದಾರಿ ದೀಪ ಅಳವಡಿಕೆ, ಚರಂಡಿ ಅವ್ಯವಸ್ಥೆ, ರಸ್ತೆಗಳ ದುರಸ್ತಿಯ ಬಗ್ಗೆ ಭಾರೀ ಆಗ್ರಹ ಕೇಳಿಬಂತು.

Advertisement

ಮೋಕ್ಷಧಾಮಕ್ಕೆ ಮುಕ್ತಿ ನೀಡಿ
30 ವರ್ಷಗಳ ಹಿಂದೆ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿಯ ನೇತೃತ್ವದಲ್ಲಿ ಪ್ರಾರಂಭಗೊಂಡ ಮೋಕ್ಷ ಧಾಮ ಹೆಸರಿನ ಹಿಂದೂ ರುದ್ರಭೂಮಿ ಅವ್ಯವಸ್ಥೆಗಳಿಂದ ಕೂಡಿದೆ, ಮಳೆ ನೀರು ಗಾಳಿಗೆ ಒಳ ಹರಿಯುತ್ತಿದೆ ಅದನ್ನು ದುರಸ್ತಿಪಡಿಸಿ ಎಂದು ಪಂಚಾಯತ್‌ ಮಾಜಿ ಸದಸ್ಯ ಸೋಮನಾಥ ಪೂಜಾರಿ ಆಗ್ರಹಿಸಿದಾಗ ಪ್ರತ್ಯುತ್ತರಿಸಿದ ಪಂಚಾಯತ್‌ ಅಧ್ಯಕ್ಷ ದೇವಪ್ಪ ಸಪಳಿಗ ಹಾಗೂ ಪಿಡಿಒ ಸತೀಶ್‌ ಆ ರುದ್ರಭೂಮಿ ಸಮಿತಿಯ ಅಡಿಯಲ್ಲಿದ್ದು ಇನ್ನೂ ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ ಎಂದರು. ಈ ಬಗ್ಗೆ ಸಮಿತಿಗೆ ತಿಳಿಸಿ ಕಾಯಕಲ್ಪ ನೀಡುವಂತೆ ಒತ್ತಾಯಿಸಲಾಯಿತು.

ಜಾರಿಗೆಕಟ್ಟೆ ಬಸ್‌ ನಿಲ್ದಾಣ ಬಳಿಯ ಚರಂಡಿ ಬಿಡಿಸಲು ಆಗ್ರಹ
ಜಾರಿಗೆಕಟ್ಟೆ ಬಸ್‌ ನಿಲ್ದಾಣ ಹತ್ತಲು ದೋಣಿಯೇ ಬೇಕು ಎಂಬ ಶೀರ್ಷಿಕೆಯಡಿ ಉದಯವಾಣಿ ಸುದಿನ ವರದಿ ಕಂಡಿದ್ದ ಪ್ರಕರಣವನ್ನು ಗ್ರಾಮಸ್ಥ ಅವಿಲ್‌ ಡಿ’ಸೋಜಾ ಪಂಚಾಯತ್‌ ಗಮನಕ್ಕೆ ತಂದಾಗ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಬರೆಯಲಾಗಿದ್ದು ಶೀಘ್ರ ಗಮನ ಹರಿಸಲಾಗುವುದೆಂದರು. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಕಳೆದ ಹಲವು ಗ್ರಾಮ ಸಭೆಗಳಿಗೆ ಗೈರಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

ವಿವಿಧ ಬೇಡಿಕೆಗಳೊಂದಿಗೆ ರಾಜಮುಗುಳಿ
ವಾರ್ಡ್‌ ಜನ ಮುಂಡ್ಕೂರಿನ ಅತೀ ಎತ್ತರದ ಪ್ರದೇಶವಾಗಿರುವ ರಾಜಮುಗುಳಿಯಲ್ಲಿ ಮಳೆಗಾಲದಲ್ಲೂ ನೀರಿನ ಸಮಸ್ಯೆ ಇರುವ ಬಗ್ಗೆ ದೂರು ಕೇಳಿ ಬಂತು.ಇಲ್ಲಿ ದಾರಿ ದೀಪ ಸಮಸ್ಯೆ, ಮಂಜುರಾದ ಸೈಟುಗಳಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟದಿರುವುದು ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಯಿತು.

ಗ್ರಾಮೀಣ ರಸ್ತೆ ದುರಸ್ತಿಪಡಿಸಿ
ಇಳಿಜಾರು ಭಾಗಗಳ ರಸ್ತೆಗಳು ಅಪಾಯಕಾರಿಯಾಗಿವೆ. 15ನೇ ಹಣಕಾಸು ಯೋಜನೆಯಡಿ ಸಮರ್ಪಕ ಆನುದಾನ ನೀಡಿ ಈ ರಸ್ತೆ ದುರಸ್ತಿಪಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

Advertisement

ಜೆಜೆಎಂ ಪೈಪ್‌ ಲೈನ್‌ನಿಂದ ರಸ್ತೆ ಬದಿ ಹಾಳು
ಪಂಚಾಯತ್‌ನ ಎಲ್ಲೆಡೆ ರಸ್ತೆ ಬದಿಗಳಲ್ಲಿ ಜೆಜೆಎಂ ಪೈಪ್‌ ಲೈನ್‌ ಅಳವಡಿಕೆ ನಡೆದಿದ್ದು ರಸ್ತೆಯ ಪಕ್ಕ ವಾಹನಗಳು ಹೂತು ಹೋಗಿ ಅಪಾಯ ಎದುರಾಗಿದೆ ಎಂದೂ ದೂರು ಕೇಳಿ ಬಂದು ಈ ಬಗ್ಗೆ ಎಂಜಿನಿಯರ್‌ ರಂಜಿತ್‌ ತಂದರೆಗಳಾಗಿದ್ದಲ್ಲಿ ಕೂಡಲೇ ತಿಳಿಸಿ ಎಂದರು.

ಅಂಗನವಾಡಿ ಸ್ಥಳಾಂತರಕ್ಕೆ ಬೇಡಿಕೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಮಾಹಿತಿ ನೀಡಿದಾಗ ಈಗಿರುವ ಆಂಗನವಾಡಿಗೆ ಆವರಣ ಗೋಡೆ ಇಲ್ಲ , ಮಕ್ಕಳಿಗೆ ಭದ್ರತೆ ಇಲ್ಲ ಎಂದು ಉದಯವಾಣಿ ವರದಿ ಮಾಡಿದ್ದು ಈ ಬಗ್ಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲ ವ್ಯವಸ್ಥೆಗಳಿದ್ದು ಅಲ್ಲಿ ಅಂಗನವಾಡಿ ನಡೆಸಿ ಎಂದು ಪಂಚಾಯತ್‌ ಅಧ್ಯಕ್ಷ ದೇವಪ್ಪ ಸಪಳಿಗ ಮನವಿ ಮಾಡಿದರು. ಈ ಬಗ್ಗೆ ಇಲಾಖೆಗೆ ತಿಳಿಸುವುದಾಗಿ ಶ್ರೀಮತಿ ತಿಳಿಸಿದರು

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ| ಸತೀಶ್‌, ಮೆಸ್ಕಾಂನ ಸೋಮಯ್ಯ, ಕೃಷಿ ಇಲಾಖೆಯ ರಮೇಶ್‌ ಉಳ್ಳಾಗಡ್ಡಿ, ಕಂದಾಯ ಇಲಾಖೆಯ ಹಣಮಂತ, ತೋಟಗಾರಿಕಾ ಇಲಾಖೆಯ ಶ್ರೀನಿವಾಸ ರಾವ್‌, ಪೊಲೀಸ್‌ ಇಲಾಖೆಯ ಪ್ರಕಾಶ್‌ ಮತ್ತಿತರರು ಮಾಹಿತಿ ನೀಡಿದರು.

ಹಿರ್ಗಾನ ಪಶು ವೈದ್ಯಾಧಿಕಾರಿ ಸುನಿಲ್‌ ಕುಮಾರ್‌ ನೋಡೆಲ್‌ ಆಧಿಕಾರಿಯಾಗಿದ್ದು ಪಂಚಾಯತ್‌ ಉಪಾಧ್ಯಕ್ಷೆ ಸುಶೀಲಾ ಬಾಬು, ಕಾರ್ಯದರ್ಶಿ ಸಾಧು, ಪಂಚಾಯತ್‌ ಸದಸ್ಯರಿದ್ದರು. ಪಿಡಿಒ ಸತೀಶ್‌ ನಿರೂಪಿಸಿದರು.

ರಸ್ತೆ ಬದಿ ಮರ ತೆರವು ಮಾಡಿ
ಪೇರೂರು ಸಹಿತ ಗ್ರಾಮದ ವಿವಿಧ ಭಾಗಗಳಲ್ಲಿ ಬೃಹತ್‌ ಮರಗಳು ರಸ್ತೆಗೆ ಬಾಗಿದ್ದು ಬೀಳುವ ಸ್ಥಿತಿಯಲ್ಲಿದೆ ಅದನ್ನು ಕೂಡಲೇ ತೆರವು ಮಾಡಿ ಎಂದು ಅರಣ್ಯ ಇಲಾಖೆಗೆ ಸಾಯಿನಾಥ
ಶೆಟ್ಟಿ ವಿನಂತಿಸಿದರೆ ಅರಣ್ಯ ಇಲಾಖೆಯ ಆಧಿಕಾರಿ ಮನೀಶ್‌ ಲಕ್ಷ್ಮಣ್‌ ಖಾಸಗಿ ಜಮೀನಿನ ಮರಗಳನ್ನು ತೆರವುಗೊಳಿಸಲು ಜಮೀನು ಮಾಲಕರು ದಾನಿಗಳ ನೆರವು ಪಡೆಯಬೇಕಾಗಿದೆ ಎಂದರು.

ಅನುದಾನ ಸಾಲುತ್ತಿಲ್ಲ
ಅನುದಾನ ಸಾಲುತ್ತಿಲ್ಲ ಎಂದು ಪಂಚಾಯತ್‌ ಸದಸ್ಯ ಲೋಕೇಶ್‌, ಸಚ್ಚೇರಿಪೇಟೆ, ಮುಂಡ್ಕೂರಿನಲ್ಲಿ ಮಟ್ಕಾ ಹಾವಳಿ ಜೋರಿದೆ ಎಂದು ಇನ್ನೋರ್ವ ಸದಸ್ಯ ಸಂದೀಪ್‌ ಶೆಟ್ಟಿ ಸಚ್ಚರಪರಾರಿ, ಅಂಚೆ ಇಲಾಖೆಯ ರಸ್ತೆ ಕೆಟ್ಟು ಹೋಗಿದೆ ಎಂದು ಹಿರಿಯ ಸದಸ್ಯ ಕರಿಯ ಪೂಜಾರಿ, ಗ್ರಾಮಸ್ಥರು ಯಾವುದೇ ದೂರುಗಳು ಫಾಲೋಅಪ್‌ ಆಗುತ್ತಿಲ್ಲ ಎಂದು ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಭಾಸ್ಕರ ಶೆಟ್ಟಿ ಆರೋಪಿಸಿದರು. ಗ್ರಾಮಸ್ಥರ ಪರವಾಗಿ ಜೋಸೆಫ್‌, ಡೆಂಜಿಲ್‌, ಅವಿಲ್‌ ಡಿಸೋಜಾ, ಪ್ರಭಾಕರ ಶೆಟ್ಟಿ , ಸೋಮನಾಥ ಪೂಜಾರಿ, ಅನಿಲ್‌ ಜೋಗಿ ಮತ್ತಿರರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next