Advertisement

ನಗರ ಸ್ವಚ್ಛತಾ ಕಾರ್ಯ ಜನರ ಸಹಕಾರವಿಲ್ಲದೇ ಅಸಾಧ್ಯ

08:56 AM Jul 29, 2017 | Team Udayavani |

ದಾವಣಗೆರೆ: ಸಿಂಗಾಪೂರ ಅಷ್ಟೊಂದು ಸ್ವಚ್ಛತೆಯಿಂದಿರಲು ಪ್ರಮುಖ ಕಾರಣ ಆ ನಗರದ ಪೌರ ಕಾರ್ಮಿಕರು ಮಾತ್ರವಲ್ಲ,
ಜತೆಗೆ ಅಲ್ಲಿನ ಜನರ ಮನೋಭಾವ. ತಮ್ಮ ನಗರವನ್ನು ಬಹುವಾಗಿ ಪ್ರೀತಿಸಿ, ತಾವಿರುವ ಮನೆಯಂತೆಯೇ ನಗರ ಇರಬೇಕು ಎಂಬುದಾಗಿ ಬಯಸುತ್ತಾರೆ…

Advertisement

ಇದು, ಸಿಂಗಾಪೂರನಲ್ಲಿನ ಸ್ವಚ್ಛತೆಗೆ ಅನುಸರಿಸುವ ವಿಧಾನ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಪ್ರವಾಸಕ್ಕೆ ಕಳುಹಿಸಿದ್ದ ಮೊದಲ ತಂಡದಲ್ಲಿದ್ದ ದಾವಣಗೆರೆ ಪಾಲಿಕೆಯ 6 ಮಂದಿ ಪೌರ ಕಾರ್ಮಿಕರ ಅಭಿಪ್ರಾಯ. ದಾವಣಗೆರೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರಾದ ಎಸ್‌. ಮಲ್ಲಿಕಾರ್ಜುನ್‌. ಪಿ. ಹನುಮಂತಪ್ಪ, ಬಿ. ಪ್ರಕಾಶ್‌, ಡಿ. ಹನುಮಂತಪ್ಪ, ಎಚ್‌. ವಸಂತಪ್ಪ ಹಾಗೂ ಕೆ. ಕರಿಬಸಪ್ಪ ತಮ್ಮ 6 ದಿನಗಳ ಸಿಂಗಾಪೂರ ಪ್ರವಾಸದ ಅನುಭವವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದು, ಈ ಪ್ರವಾಸ ಅವರಲ್ಲಿ ಒಂದಿಷ್ಟು ಚೈತನ್ಯ ತಂದಿದೆ. ಅಲ್ಲಿನ ಪೌರ ಕಾರ್ಮಿಕರಿಗಿಂತ 2 ಪಟ್ಟು ಕೆಲಸ ನಾವು ಮಾಡುತ್ತೇವೆ. ಆದರೆ, ನಮ್ಮ ನಗರವನ್ನು ಅಷ್ಟು ಸ್ವತ್ಛವಾಗಿಟ್ಟುಕೊಳ್ಳುವುದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ 55 ಲಕ್ಷ ಜನಸಂಖ್ಯೆ ಇರುವ ಆ ದೇಶದ ಜನರಲ್ಲಿರುವ ಜಾಗೃತಿಯ ಶೇ.10ರಷ್ಟು ಸಹ ನಮ್ಮ ಜನರಲ್ಲಿ ಇಲ್ಲ.

ಅಲ್ಲಿನ ಜನ ಕಸ ನೀಡುವಾಗಲೇ ಪ್ರತ್ಯೇಕಿಸಿರುತ್ತಾರೆ. ಹಸಿ ಕಸ, ಒಣ ಕಸ, ತೀರಾ ಘನ, ಬಾಟಲ್‌ ಹೀಗೆ ನಾಲ್ಕು ಭಾಗ ಮಾಡಿ ಕೊಡುತ್ತಾರೆ. ಬೀದಿಯಲ್ಲೂ ಅಷ್ಟೇ. ಯಾರೂ ಸಹ ಎಲ್ಲೆಂದರಲ್ಲಿ ಕಸ ಬೀಸಾಡುವುದಿಲ್ಲ ಎಂದು ಬಿ. ಹನುಮಂತಪ್ಪ, ಕೆ. ಕರಿಸಬಪ್ಪ ಹೇಳುತ್ತಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲಾ ಕಡೆ ನಾಲ್ಕು ಬಣ್ಣದ ಡಬ್ಬಿ ಇಡಲಾಗಿರುತ್ತದೆ. ನೀಲಿ, ಕೆಂಪು, ಹಳದಿ, ಬಿಳಿ ಬಣ್ಣದ ಡಬ್ಬಿಗಳಿರಲಿವೆ. ಬಿಳಿ ಬಣ್ಣದ ಡಬ್ಬದಲ್ಲಿ ಹಸಿ ಕಸ, ನೀಲಿ ಬಣ್ಣದ ಡಬ್ಬದಲ್ಲಿ ಪೇಪರ್‌, ಕೆಂಪು ಬಣ್ಣದ್ದರಲ್ಲಿ ಬಾಟಲ್‌, ಹಳದಿ ಡಬ್ಬಿಯಲ್ಲಿ ಮೆಟಲ್‌ ತ್ಯಾಜ್ಯ ಹಾಕಬೇಕು. ಕಾರ್ಮಿಕರೂ ಸಹ ಸಂಗ್ರಹಿಸುವಾಗ ಇದೇ ರೀತಿಯ ನಾಲ್ಕು ದೊಡ್ಡ ದೊಡ್ಡ  ಕಂಟೇನರ್‌ ಬಳಸುತ್ತಾರೆ ಎಂದು ಹೇಳುತ್ತಾರೆ ಈ ಇಬ್ಬರು ಪೌರ ಕಾರ್ಮಿಕರು.

ಎಚ್‌. ವಸಂತಪ್ಪ, ಪಿ. ಹನುಂತಪ್ಪ ಗಮನಿಸಿದಂತೆ, ಅಲ್ಲಿನ ಸರ್ಕಾರ ಬೀದಿಯಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ. ಕನಿಷ್ಠ 25 ಸಾವಿರ ರೂ. ದಂಡ ವಿಧಿಸುತ್ತದೆ. ಇದರಿಂದಲೂ ಸಹ ಜನ ಬೀದಿಯಲ್ಲಿ ಕಸ ಹಾಕಲು ಹೆದರುತ್ತಾರೆ. ಇನ್ನು ಬೀದಿಯಲ್ಲಿ ಕಾಣ ಸಿಗುವುದು ಮರದ ಉದುರಿದ ಎಲೆಗಳು ಮಾತ್ರ. ಇದನ್ನು ಸಂಗ್ರಹಿಸಲು ಪೌರ ಕಾರ್ಮಿಕರು ಬರುತ್ತಾರೆ. ಸಂಗ್ರಹಿದ ಪ್ರಾಕೃತಿಕ ತ್ಯಾಜ್ಯದಿಂದ ಗೊಬ್ಬರ ಮಾಡಲಾಗುತ್ತದೆ. ಇನ್ನು ಘನ ತ್ಯಾಜ್ಯದಲ್ಲಿ ಶೇ.50ರಷ್ಟನ್ನು ಪುನರ್‌ ಬಳಕೆ ಮಾಡಿಕೊಳ್ಳುತ್ತಾರೆ. ಉಳಿದಿದ್ದನ್ನು ಸುಡುತ್ತಾರೆ. ತ್ಯಾಜ್ಯ ಸುಡುವ ಶಾಖವನ್ನು ಇಂಧನವನ್ನಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಇದು ನಮಗೆ ಅಚ್ಚರಿಮೂಡಿಸಿತು ಎನ್ನುತ್ತಾರೆ.  ಆ ದೇಶದ ಜನರಿಗೆ ಕುಡಿಯುವ ನೀರು ಸ್ಥಳೀಯವಾಗಿ ಸಿಗುವುದಿಲ್ಲ. ಪಕ್ಕದ ದೇಶ ಮಲೇಶಿಯಾದಿಂದ ಖರೀದಿಸುತ್ತಾರೆ. ಮಳೆ ಮೂಲಕ ಬಂದ ನೀರಿನ ಹನಿ ಹನಿಯನ್ನೂ ಕೆರೆಯಲ್ಲಿ ಸಂಗ್ರಹಿಸುತ್ತಾರೆ. ನೀರು ವ್ಯಯ ಆಗುವುದೇ ಇಲ್ಲ. ಚರಂಡಿ ನೀರಿನ ಜಿಡ್ಡು ತೆಗೆದು ಮತ್ತೆ ಕುಡಿಯಲು ಬಳಸುತ್ತಾರೆ. ಕುಡಿಯಲು ಯೋಗ್ಯವಿಲ್ಲದೇ ಹೋದಾಗ ಅದನ್ನೇ ಕಾರ್ಖಾನೆಗಳಿಗೆ ಬಳಸುತ್ತಾರೆ. ಇದಲ್ಲದೆ,  ವಾರಕ್ಕೊಮ್ಮೆ ರಸ್ತೆಗಳನ್ನು ತೊಳೆಯಲು ಈ ನೀರು ಬಳಕೆಮಾಡಲಾಗುತ್ತದೆ ಎಂದು ಎಸ್‌. ಮಲ್ಲಿಕಾರ್ಜುನ್‌, ಬಿ. ಪ್ರಕಾಶ್‌ರು ಹೇಳ್ತಾರೆ.

ಒಳಚರಂಡಿ ವ್ಯವಸ್ಥೆ ಸಹ ಅತೀ ಉತ್ತಮವಾಗಿದೆ. ಕೆಲಹೊತ್ತು ಸಹ ಒಳಚರಂಡಿ ಕಟ್ಟಿಕೊಳ್ಳುವುದಿಲ್ಲ. ತಕ್ಷಣ ಅದನ್ನು ಸರಿಪಡಿಸಲಾಗುತ್ತದೆ. ಜನರು ಯಾವುದೇ ಕಾರಣಕ್ಕೂ ಮಾಹಿತಿ ನೀಡದೆ ರಸ್ತೆಗೆ ನೀರು ಹರಿಯಬಿಡುವಂತಿಲ್ಲ. ಬಿಟ್ಟರೆ ದಂಡ ಖಚಿತ. ಅಲ್ಲಿನ ಪೌರ ಕಾರ್ಮಿಕರ ಆರೋಗ್ಯ
ಸಹ ಚೆನ್ನಾಗಿದೆ. ನಾವು ಭೇಟಿಮಾಡಿದ ಕೆಲ ಪೌರ ಕಾರ್ಮಿಕರಲ್ಲಿ ಓರ್ವ 75 ವರ್ಷದ ವ್ಯಕ್ತಿ ನಮ್ಮ ಗಮನ ಸೆಳೆದರು. 75 ವರ್ಷ ತುಂಬಿದರೂ ನಮ್ಮಲ್ಲಿ 30-40 ವರ್ಷದ ಯುವಕರಂತೆ ಚಟುವಟಿಕೆಯಿಂದ ಇದ್ದರು. 

Advertisement

ಬೆಳಗ್ಗೆ 5 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೆಲಸಮಾಡುವ ಅವರಿಗೆ ಮಾಸಿಕ 1 ಲಕ್ಷ ರೂ. ಸಂಬಳ ನೀಡಲಾಗುತ್ತದೆ. ಕೈಗವಚ, ಶಿರಸ್ತಾಣ, ಮೂಗಿನ ಪರದೆ, ಜಾಕೇಟ್‌ ಹೀಗೆ ಎಲ್ಲವನ್ನೂ ಇವರಿಗೆ ನೀಡಲಾಗಿದೆ ಎಂದು ಅವರು ಆಶ್ಚರ್ಯಚಕಿತರಾಗಿ ಹೇಳುತ್ತಾರೆ.

ಇಡೀ ಪ್ರವಾಸ ಈ ಆರು ಜನಕ್ಕೆ ವೈಯುಕ್ತಿಕವಾಗಿ ಸಾಕಷ್ಟು ಖುಷಿ ತಂದುಕೊಟ್ಟಿದೆ. ದಿನ ಬೆಳೆಗಾದರೆ ಪೊರಕೆ, ಸಲಿಕೆ,
ಬುಟ್ಟಿಗಳೊಂದಿಗೆ ದುರ್ವಾಸನೆಯಲ್ಲೇ ಕೆಲಸ ಮಾಡುತ್ತಿದ್ದ ಈ ಮಂದಿಗೆ ಮತ್ತೂಂದು ದೇಶಕ್ಕೆ ಹೋಗಿ ಬಂದದ್ದು ನಿಜಕ್ಕೂ ಯೋಗ. ಜತೆಗೆ ಸಿಂಗಾಪೂರನ ಅಲ್ಲಿನ ಸ್ವತ್ಛತೆ ಇವರಲ್ಲಿ ಉತ್ಸಾಹ ತುಂಬಿದೆ. ನಮ್ಮ ನಗರವನ್ನೂ ಅದೇ ರೀತಿ ಸ್ವತ್ಛತೆಯಿಂದ ಕಾಣುವಂತೆ ಮಾಡಬೇಕೆಂಬ ಆಲೋಚನೆ ಬಂದಿದೆ. ಆದರೆ, ಇದಕ್ಕೆ ಜನರ ಸಹಕಾರ ತುಂಬಾ ಮುಖ್ಯ. ಜನ ತಮ್ಮ ಮನೆಯಂತೆಯೇ ನಗರವನ್ನು ನೋಡಿದರೆ
ಈ ಕೆಲಸ ಸುಲಭ ಎಂಬುದು ಇವರ ಒಟ್ಟಾರೆ ಅಭಿಪ್ರಾಯ.

ಪಾಟೀಲ ವೀರನಗೌಡ
 

Advertisement

Udayavani is now on Telegram. Click here to join our channel and stay updated with the latest news.

Next