Advertisement

Mangaluru: ಒಮ್ಮೆ ಪೌರ ಕಾರ್ಮಿಕರ ಜಾಗದಲ್ಲಿ ನಿಂತು ನೋಡಿ!

01:41 PM Oct 21, 2024 | Team Udayavani |

ಮಹಾನಗರ: ನಗರ ಪ್ರದೇಶವಿರಲಿ – ಗ್ರಾಮಾಂತರ ಪ್ರದೇಶವಿರಲಿ ಯಾವುದಾದರೂ ರಸ್ತೆಯಲ್ಲಿ ಒಂದು ಸುತ್ತು ಹಾಕಿಕೊಂಡು ಬಂದರೆ ‘ಪ್ಲಾಸ್ಟಿಕ್‌’ ಕವರ್‌ನಲ್ಲಿ ಕಟ್ಟಿ ಬಿಸಾಡಿದ ತ್ಯಾಜ್ಯದ ರಾಶಿ ಅಲ್ಲಲ್ಲಿ ನಮಗೆ ಕಾಣಲು ಸಿಗುತ್ತದೆ. ಬಹುತೇಕ ಮಂದಿ ಕಸ ಸಾಗಾಟದ ವಾಹನಗಳಿಗೆ ತಾಜ್ಯವನ್ನು ನೀಡುವಾಗಲೂ ಪ್ಲಾಸ್ಟಿಕ್‌ ಕವರಿನಲ್ಲಿಯೇ ಕಟ್ಟಿ ಕೊಡುತ್ತಾರೆ. ‘ಪ್ಲಾಸ್ಟಿಕ್‌’ ಇಲ್ಲದೆ ಮನೆಯ ತ್ಯಾಜ್ಯದ ವಿಲೇವಾರಿಯೂ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಸದ್ಯದ ಪರಿಸ್ಥಿತಿ ಇದೆ.

Advertisement

ಘನತ್ಯಾಜ್ಯ ಸುಲಭವಾಗಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟನಲ್ಲಿ ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಣೆ ಮಾಡುವ ಪ್ರಕ್ರಿಯೆ ಜಾಗತಿಕವಾಗಿ ವಿವಿಧ ದೇಶಗಳಲ್ಲಿ ಅನುಸರಿಸಲಾಗುತ್ತಿದೆ. ನಮ್ಮಲ್ಲಿಯೂ ದಶಕಗಳ ಹಿಂದಿನಿಂದಲೇ ಈ ಮಾದರಿಯನ್ನು ಅನುಷ್ಠಾನ ಮಾಡಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಮನೆ ಮನೆಗೆ ಹಸಿರು – ಕೆಂಪು ಬಣ್ಣದ ಬಕೆಟ್‌ಗಳನ್ನು ನೀಡಿ ಹಸಿ – ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಹಾಕಿ ತ್ಯಾಜ್ಯ ಸಾಗಾಟದ ವಾಹನಗಳಿಗೆ ನೀಡಬೇಕು ಎಂದು ಸೂಚನೆಗಳನ್ನು ನೀಡಿತ್ತು.

ಶೇ.50ರಷ್ಟು ಮಾತ್ರ ವಿಂಗಡನೆ
ಪ್ರಸ್ತುತ ಇಂತಹ ಬಕೆಟ್‌ಗಳು ಯಾವುದೇ ಮನೆಗಳಲ್ಲಿ ಕಾಣಿಸುವುದಿಲ್ಲ. ಅವುಗಳ ಸ್ಥಾನವನ್ನು ಪ್ಲಾಸ್ಟಿಕ್‌ ಕವರ್‌ಗಳು ಆಕ್ರಮಿಸಿದ್ದು, ಪ್ಲಾಸ್ಟಿಕ್‌ನಲ್ಲಿಯೇ ಕಟ್ಟಿ ಕಂಪೌಂಡ್‌ ಮೇಲೆ ಇಟ್ಟಿರುವ ದೃಶ್ಯಗಳು ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿದೆ. ಶೇ. 50ರಷ್ಟು ಮಂದಿ ಮಾತ್ರ ಪ್ರತ್ಯೇಕಿಸಿ ತ್ಯಾಜ್ಯ ನೀಡುತ್ತಾರೆ. ಉಳಿದವರು ಎಲ್ಲವನ್ನೂ ಒಟ್ಟು ಮಾಡಿ ನೀಡುತ್ತಾರೆ. ಕೆಲವು ಅಂಗಡಿಗಳು, ಹೊಟೇಲ್‌ಗ‌ಳು, ಸಭಾಂಗಣಗಳ ತ್ಯಾಜ್ಯದಲ್ಲಿ ಹಸಿ ಒಣ ಕಸ ಮಿಶ್ರವಾಗಿರುತ್ತದೆ. ಪ್ಲಾಸ್ಟಿಕ್‌ ಬಾಟಲಿಗಳು, ಲೋಟಗಳು, ಐಸ್‌ಕ್ರೀಂ ತಟ್ಟೆಗಳು ಮೊದಲಾದ ಪ್ಲಾಸ್ಟಿಕ್‌ ವಸ್ತುಗಳು ಹಸಿ ಕಸದೊಂದಿಗೆ ಮಿಶ್ರವಾಗಿರುತ್ತದೆ. ತ್ಯಾಜ್ಯ ಸಂಸ್ಕರಣ ಘಟಕ್ಕೆ ತೆಗೆದುಕೊಂಡು ಹೋದ ಬಳಿಕ ಅಲ್ಲಿ ಅವುಗಳನ್ನು ಪ್ರತ್ಯೇಕಿಸಬೇಕಾದ ಅನಿವಾರ್ಯವಿದೆ.

ಆರೋಗ್ಯದ ಮೇಲೆ ಪರಿಣಾಮ
ಸರಿಯಾಗಿ ವಿಂಗಡಿಸಿ ನೀಡಿದರೆ ಅದನ್ನು ಸುಲಭವಾಗಿ ಸಂಸ್ಕರಣೆ ಅಥವಾ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಆದರೆ ಎಲ್ಲವನ್ನೂ ಒಟ್ಟು ಕಟ್ಟಿ ನೀಡುವುದರಿಂದ ಅದನ್ನು ಪ್ರತ್ಯೇಕಿಸುವ ಪೌರ ಕಾರ್ಮಿಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಬರಿಕೈಯಲ್ಲೇ ಅದನ್ನು ಮುಟ್ಟಬೇಕಾದ ಪರಿಸ್ಥಿತಿಯೂ ಇದೆ. ಕೊಳೆತ ತ್ಯಾಜ್ಯಗಳು, ಅವುಗಳ ವಾಸನೆ, ಅವುಗಳಿಂದ ಹೊರಕ್ಕೆ ಹರಿಯುವ ನೀರು ಇತ್ಯಾದಿಗಳಲ್ಲಿ ರೋಗಗಳನ್ನು ಹರಡುವ ಬ್ಯಾಕ್ಟೀರಿಯಾ, ವೈರಸ್‌ಗಳು ಇರುವುದರಿಂದ ಅತೀ ಹೆಚ್ಚು ಅಪಾಯಕಾರಿಯಾಗಿವೆ.

ಗ್ರಾಮಾಂತರದಲ್ಲಿ ವಿಂಗಡಣೆಯೇ ಇಲ್ಲ
ಗ್ರಾಮಾಂತರ ಭಾಗದಲ್ಲಿಯೂ ಹೆಚ್ಚಿನ ಪಂಚಾಯತ್‌ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಇದೆ. ಆದರೂ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ನಲ್ಲಿ ಕಟ್ಟಿದ ತ್ಯಾಜ್ಯಗಳು ಬೀಳುವುದು ನಿಂತಿಲ್ಲ. ಗ್ರಾಮಾಂತರ ಭಾಗದಲ್ಲಿ ಹಸಿ ತ್ಯಾಜ್ಯವನ್ನು ತೆಂಗಿನಬುಡ, ತೋಟಗಳು, ಹೂದೋಟ ಹೀಗೆ ವಿವಿಧೆಡೆ ಮನೆಯಲ್ಲೇ ವಿಲೇವಾರಿ ಮಾಡಲು ಅವಕಾಶವಿದ್ದರೂ ವಿಲೇವಾರಿ ಮಾಡದೆ ಪ್ಲಾಸ್ಟಿಕ್‌ಗಳಲ್ಲಿ ಕಟ್ಟಿ ರಸ್ತೆ ಬದಿಯಲ್ಲಿ ಎಸೆದಿರುವುದು ಕಂಡು ಬರುತ್ತದೆ. ಮಂಗಳೂರು ನಗರ ಹೊರವಲಯದ ವಿವಿಧ ಗ್ರಾ.ಪಂ., ನಗರಾಡಳಿತ ಸಂಸ್ಥೆಗಳ ತ್ಯಾಜ್ಯಗಳು ಕೂಡಾ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಬರುತ್ತವೆ. ನಗರದಲ್ಲಿ ಕಸ ವಿಂಗಡನೆ ತಕ್ಕಮಟ್ಟಿಗೆ ಇದ್ದರೂ, ಹೊರಗಿನಿಂದ ಬರುವ ತ್ಯಾಜ್ಯಗಳು ಪ್ಲಾಸ್ಟಿಕ್‌ ಸಹಿತ ಮಿಶ್ರಣವಾಗಿ ಬರುವುದರಿಂದ ಘಟಕದಲ್ಲಿರುವ ಕಾರ್ಮಿಕರಿಗೆ ಅವುಗಳನ್ನು ಪ್ರತ್ಯೇಕಿಸುವುದೇ ದೊಡ್ಡ ಸಮಸ್ಯೆಯಾಗಿದೆ.

Advertisement

ಓದುಗರ ಅಭಿಪ್ರಾಯ
ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿ
ಎಲ್ಲ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಾರಕೊಮ್ಮೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಇದು ಒಂದಲ್ಲ ಒಂದು ದಿನ ಫಲಪ್ರದವಾಗಬಹುದು. ಮಕ್ಕಳು ಶಾಲೆಯಲ್ಲಿ ಕಲಿತ ವಿಚಾರಗಳನ್ನು ಮನೆಯಲ್ಲಿ ಹೇಳುವ ಮೂಲಕ ಹೆತ್ತವರಲ್ಲೂ ಜಾಗೃತಿ ಮೂಡುಸುವಂತಾಗಬೇಕು.
-ಯಶೋದಾ ಪಿ. ನಾಯ್ಕ, ಸುರತ್ಕಲ್‌

ಪ್ಲಾಸ್ಟಿಕ್‌ ಬಳಕೆ ಹೆಚ್ಚಳ ದುಃಖದ ಸಂಗತಿ
ಜಿಲ್ಲೆಯ ಎಲ್ಲೆಡೆ ವ್ಯಾಪಕವಾಗಿ ಪ್ಲಾಸ್ಟಿಕ್‌ ಕವರ್‌ಗಳನ್ನು ಬಳಸುತ್ತಿರುವುದು ದುಃಖದ ಸಂಗತಿ. ಕ್ಯಾಂಟೀನ್‌ಗಳಲ್ಲಿ ಬಿಸಿ ಚಹಾ ಪಾರ್ಸೆಲ್‌, ಹೊಟೇಲ್‌ಗ‌ಳಲ್ಲಿ ಅದರಲ್ಲೂ ಪ್ರತಿಷ್ಠಿತ ಆಸ್ಪತ್ರೆಗಳ ಕ್ಯಾಂಟಿನ್‌ಗಳಲ್ಲೂ ಪ್ಲಾಸ್ಟಿಕ್‌ ಬಳಸುತ್ತಿರುವುದು ಆಘಾತಕಾರಿ. ಪ್ಲಾಸ್ಟಿಕ್‌ ಉತ್ಪಾದನೆ ನಿಷೇಧವೊಂದೇ ಬಳಕೆ ನಿಯಂತ್ರಿಸಲು ಇರುವ ಪರಿಹಾರ.
-ರೇಖಾ ಎಂ., ಮೂಡುಬಿದಿರೆ

ಪ್ಯಾಕೇಜ್‌ನಲ್ಲೇ ಆಹಾರ ಬಿಡಬೇಡಿ
ಈಗ ಆಹಾರಗಳನ್ನು ಮನೆಗೆ ತರಿಸಿಕೊಳ್ಳುವ ಪರಿಪಾಠ ಹೆಚ್ಚಾಗಿದೆ. ಹೆಚ್ಚಿನ ಆಹಾರ ವಸ್ತುಗಳು ಡೆಲಿವರಿ ಆಗುವುದು ಪ್ಲಾಸ್ಟಿಕ್‌ ಪ್ಯಾಕೇಜ್‌ಗಳಲ್ಲಿ. ಜನರು ಅದೇ ಪ್ಲಾಸ್ಟಿಕ್‌ ತಟ್ಟೆಗಳಲ್ಲಿ ಅದನ್ನು ಸೇವಿಸುತ್ತಾರೆ. ಅವರಲ್ಲಿ ಕೆಲವರು ಅರೆಬರೆ ತಿಂದು ಉಳಿದುದನ್ನು ಅದೇ ಪ್ಯಾಕ್‌ನಲ್ಲಿ ಉಳಿಸಿ ಎಸೆಯುತ್ತಾರೆ. ಕಸ ವಿಲೇವಾರಿ ಮಾಡುವವರು ಅದರಲ್ಲಿರುವ ಆಹಾರವನ್ನು ಪ್ರತ್ಯೇಕಿಸಿ ಪ್ಲಾಸ್ಟಿಕನ್ನು ಬೇರೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಇದೆಂಥಾ ಕ್ರೌರ್ಯ ಅಲ್ಲವೇ? ಪಾರ್ಸೆಲ್‌ ತರಿಸಿಕೊಂಡವರು ಒಂದೋ ಅದನ್ನು ಪೂರ್ತಿಯಾಗಿ ತಿನ್ನಬೇಕು, ಇಲ್ಲವೇ ಉಳಿದ ಆಹಾರವನ್ನಾದರೂ ಬೇರೆ ಪಾತ್ರೆಗೆ ಹಾಕಿ, ಬರೀ ಪ್ಲಾಸ್ಟಿಕ್‌ ತಟ್ಟೆಯನ್ನು ಪ್ರತ್ಯೇಕವಾಗಿ ಇಡಬೇಕು. ಅಷ್ಟೂ ಮಾಡದಿದ್ದರೆ ನಾವು ಮನುಷ್ಯರು ಹೇಗಾಗುತ್ತೇವೆ?

ಪ್ಲಾಸ್ಟಿಕ್‌ನಲ್ಲೇ ಕಟ್ಟಿ ಕೊಡುತ್ತಾರೆ
ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕ ಲಿಂಗಪ್ಪ ಅವರು ‘ಸುದಿನ’ ಜತೆ ಮಾತನಾಡಿ, ಹಸಿ ಕಸ- ಒಣ ಕಸವನ್ನು ವಿಂಗಡಿಸಿ ನೀಡುವಂತೆ ಜನರಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದರೂ ಹೆಚ್ಚಿನ ಮನೆಗಳಲ್ಲಿ ಎಲ್ಲವನ್ನೂ ಒಟ್ಟಿಗೆ ಮಾಡಿ ‘ಪ್ಲಾಸ್ಟಿಕ್‌’ನಲ್ಲೇ ಕಟ್ಟಿ ಕೊಡುತ್ತಾರೆ. ಇದರಿಂದ ಸಾಗಾಟಕ್ಕೂ ಸಮಸ್ಯೆಯಾಗುತ್ತದೆ. ಪಚ್ಚನಾಡಿಯಲ್ಲಿ ವಿಲೇವಾರಿ ಮಾಡುವ ಸಂದರ್ಭದಲ್ಲೂ ಸಮಸ್ಯೆಯಾಗುತ್ತದೆ. ಪ್ಲಾಸ್ಟಿಕ್‌ ಒಣ ತ್ಯಾಜ್ಯ ಪಟ್ಟಿಯಲ್ಲಿ ಬರುತ್ತದೆ. ಹಸಿ ತ್ಯಾಜ್ಯವನ್ನು ಅದರಲ್ಲಿ ಕಟ್ಟಿ ಕೊಡುವುದರಿಂದ ಅಥವಾ ಮಿಶ್ರಮಾಡಿ ಕೊಡುವುದರಿಂದ ವಿಲೇವಾರಿಯಲ್ಲಿ ತೊಡಕಾಗುತ್ತದೆ. ನಾವೇ ಪ್ಲಾಸ್ಟಿಕ್‌ ಸಹಿತ ವಿವಿಧ ವಸ್ತುಗಳನ್ನು ವಿಂಗಡಿಸಿ ಪಚ್ಚನಾಡಿಗೆ ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್‌ ನಿಯಂತ್ರಣ ನಿಮ್ಮ ತಂತ್ರ ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಹಂಚಿಕೊಳ್ಳಬಹುದು.
ವಾಟ್ಸಪ್‌: 9900567000

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next