Advertisement

ಉಪ್ಪುಂದ: ಮಣಿಪುರ ವಿದ್ಯಾರ್ಥಿ ಬಿದ್ಯಾಸುನ್‌ ಸಿಂಗ್‌ ಸಾಧನೆ

06:00 AM Jun 05, 2018 | Team Udayavani |

ಉಪ್ಪುಂದ: ದೂರದ ರಾಜ್ಯ ಮಣಿಪುರದ ಯುವಕನೊಬ್ಬ ಕನ್ನಡಲ್ಲಿ ಅದೂ ಗ್ರಾಮೀಣ ಭಾಗ ಶಾಲೆಯೊಂದರಲ್ಲಿ ಕಲಿತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನಲ್ಲಿ ತೇರ್ಗಡೆ ಹೊಂದುವ ಮೂಲಕ ಈತ ಎಲ್ಲರ ಗಮನ ಸೆಳೆದಿದ್ದಾನೆ.

Advertisement

ಕನ್ನಡ ಬಾರದ ಹುಡುಗ ಉಪ್ಪುಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.83.04 ಅಂಕ ಪಡೆದಿರುವುದಲ್ಲದೇ ಕನ್ನಡದಲ್ಲಿ 108 ಅಂಕ ಪಡೆದು ಕನ್ನಡಿಗರನ್ನೇ ಹುಬ್ಬೇರಿಸುವಂತೆ ಮಾಡಿದ್ದಾನೆ.ಮಣಿಪುರ ರಾಜ್ಯದ ಹೈರೋಕ್‌ ಎಂಬ ಪುಟ್ಟ ಹಳ್ಳಿಯಲ್ಲಿ ಬಡ ಕೃಷಿ ಕೂಲಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಕುಂದ್ರಕºಮ್‌ ಬಿದ್ಯಾಸುನ್‌ ಸಿಂಗ್‌ ಈ ಸಾಧನೆ ಮಾಡಿದ ಬಾಲಕ.

ಆಶ್ರಯ ನೀಡಿದ ಆರ್‌ಎಸ್‌ಎಸ್‌
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಈಶಾನ್ಯ  ರಾಜ್ಯಗಳಲ್ಲಿ ಹಲವಾರು ಕಾರಣಗಳಿಂದ ಶಿಕ್ಷಣ ವಂಚಿತ ಸಾವಿರಾರು ವಿದ್ಯಾರ್ಥಿಗಳನ್ನು ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳಿಗೆ ಕರೆ ತಂದು ಅವರಿಗೆ ಸೂಕ್ತ ಶಿಕ್ಷಣ ನೀಡುವ ಮೂಲಕ ಯುವಜನತೆಗೆ ಪ್ರೇರಣೆಯಾಗಿ ಗುರುತಿಸಿಕೊಂಡಿದೆ.

ಆರ್‌ಎಸ್‌ಎಸ್‌ ಮೂಲಕ 5ನೇ ವರ್ಷಕ್ಕೆ ಕರ್ನಾಟಕಕ್ಕೆ ಬಂದ ಬಿದ್ಯಾಸುನ್‌ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಗೆ ಸೇರಿದ. ಸಂಘದ ಸ್ಥಳೀಯ ಕಾರ್ಯಕರ್ತ ಗುರುರಾಜ್‌ ಗಂಟಿಹೊಳೆ ಅವರ ಮನೆಯಲ್ಲಿ ತನ್ನಂತೆಯೇ ಬಂದಿದ್ದ 17 ಮಂದಿ ಮಣಿಪುರಿ ವಿದ್ಯಾರ್ಥಿಗಳೊಂದಿಗೆಆಶ್ರಯ ಪಡೆದು ಶಿಕ್ಷಣ ಮುಂದುವರಿಸಿದ್ದಾನೆ.

ಕನ್ನಡ ಬಾರದವ ಕನ್ನಡ ಕಲಿಸಿದ
ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಬಿದ್ಯಾಸುನ್‌ ಮೊದ ಮೊದಲು ಕನ್ನಡ ಭಾಷೇ ಬಾರದೇ ಸಾಕಷ್ಟು ಕಷ್ಟಪಟ್ಟಿದ್ದ ಆದರೆ ಬಹುಬೇಗ ಕನ್ನಡ ಕಲಿತ. ತನ್ನ ಸಹಪಾಠಿಯ ಮಣಿಪುರಿ ವಿದ್ಯಾರ್ಥಿಗಳಿಗೂ ಹಿಂದಿ ಕಲಿಸಿಕೊಟ್ಟ. ಈತನ ಚುರುಕತನ ಗಮನಿಸಿದ ಶಾಲಾ ಶಿಕ್ಷಕರು ಮಣಿಪುರಿ ವಿದ್ಯಾರ್ಥಿಗಳೊಂದಿಗೆ ಕನ್ನಡದಲ್ಲಿ ಮಾತನಾಡಲು ತಿಳಿಸಿದರು.  ಇತರ ಮಣಿಪುರ ವಿದ್ಯಾರ್ಥಿಗಳಿಗೂ ಕನ್ನಡ ಕಲಿಸುವ ಮಟ್ಟಿಗೆ ಕನ್ನಡ ಜ್ಞಾನ ಪಡೆದ.

Advertisement

ಈತ ಕೇವಲ ಶಿಕ್ಷಣಕ್ಕೆ ಮಾತ್ರವಲ್ಲ ಇಲ್ಲಿನ ಆಹಾರ, ಜೀವನ ಪದ್ಧತಿ, ಸಂಸ್ಕೃತಿಗಳಿಗೆ ಹೊಂದಿಕೊಂಡ. ಹೆತ್ತವರಿಂದ ದೂರವಿರುವ ನೋವು ಇದ್ದರು ಬಿದ್ಯಾಸುನ್‌ ಊರಿನ ನಾಟಕ, ಯಕ್ಷಗಾನ, ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತನ್ನನ್ನು ತೊಡಗಿಸಿಕೊಂಡ. ಶಬರಿಮಲೆಗೂ ಹೋಗಿ ಬಂದ ಬಿದ್ಯಾಸುನ್‌ 10ವರ್ಷ ಕರ್ನಾಟಕದಲ್ಲೇ ಕಳೆದ್ದಾನೆ.

ಸೌಲಭ್ಯವಿಲ್ಲ
ನಮ್ಮ ಊರು ಗುಡ್ಡಗಾಡು ಪ್ರದೇಶ, ಕೃಷಿ ಅಲ್ಲಿನ ಜೀವನ. ಶಾಲೆಗಳಿಗಾಗಿ ದೂರದ ನಗರಗಳನ್ನು ಅವಲಂಬಿಸಬೇಕು. ಇಲ್ಲಿನ ಗುಣಮಟ್ಟದ ಶಿಕ್ಷಣ ಅಲ್ಲಿ ಸಿಗುವುದಿಲ್ಲ. ಆದರಿಂದ ಆರ್‌ಎಸ್‌ಎಸ್‌ ಮೂಲಕ ಇಲ್ಲಿಗೆ ಬಂದೆ. ಅನೇಕ ಯುವಕರು ಇಲ್ಲಿ ಒಳ್ಳೆಯ ಶಿಕ್ಷಣ ಪಡೆದು ಊರಿಗೆ ಹೋಗಿ ಉತ್ತಮ ಉದ್ಯೋಗ ಪಡೆದುಕೊಂಡಿದ್ದಾರೆ.
– ಬಿದ್ಯಾಸುನ್‌,ವಿದ್ಯಾರ್ಥಿ

ಶಿಕ್ಷಣ ವಂಚಿತರಾಬಾರದು 
ಈಶಾನ್ಯ ರಾಜ್ಯಗಳಲ್ಲಿ  ಮತಾಂತರ ಪಿಡುಗಿನ ಜತೆ ಪ್ರತ್ಯೇಕವಾದವೂ ಬೆಳೆಯುತ್ತಿರುವ ಕಾರಣ ಅಲ್ಲಿನ ಯುವ ಜನತೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಆರ್‌ಎಸ್‌ಎಸ್‌ ಯುವಕರನ್ನು ಕರೆದುಕೊಂಡು ಬಂದು ಶಿಕ್ಷಣ ನೀಡಿ ಒಳ್ಳಯ ಭವಿಷ್ಯ ರೂಪಿಸುವ ಕಾರ್ಯ ಮಾಡುತ್ತಿದೆ.
– ಗುರುರಾಜ್‌ ಗಂಟಿಹೊಳೆ 
ಆರ್‌ಎಸ್‌ಎಸ್‌ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next