Advertisement

ಉಪ್ಪಿನಂಗಡಿ: ನೇತ್ರಾವತಿ-ಕುಮಾರಧಾರಾ ಸಂಗಮ

12:49 PM Aug 10, 2019 | Naveen |

ಉಪ್ಪಿನಂಗಡಿ:ನೇತ್ರಾವತಿ- ಕುಮಾರಧಾರಾ ನದಿಗಳು ಉಕ್ಕೇರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶ ಗಳು ಜಲಾವೃತಗೊಂಡಿವೆ. ನೇತ್ರಾವತಿ ನದಿಯು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿಕೊಂಡು ಮುಂದಕ್ಕೆ ಹೋದರೆ, ದೇವಾಲಯದ ಇನ್ನೊಂದು ಪಾರ್ಶ್ವದಿಂದ ಹರಿದು ಬರುವ ಕುಮಾರಧಾರಾ ನದಿ ನೀರು ಮಾತ್ರ ಈ ಕಡೆ ಬಂದು ನೇತ್ರಾವತಿ ನದಿ ನೀರನ್ನು ಸಂಜೆಯವರೆಗೆ ಕೂಡಿಕೊಳ್ಳಲಿಲ್ಲ.

Advertisement

ಸಂಜೆಯ ಅನಂತರ ನೇತ್ರಾವತಿ -ಕುಮಾರಧಾರ ನದಿಗಳ ಉಭಯ ಸಂಗಮವಾಯಿತು.

ತಗ್ಗಿದ್ದ ಉಭಯ ನದಿಗಳ ನೀರು ಗುರುವಾರ ರಾತ್ರಿಯಾಗುತ್ತಲೇ ಮತ್ತೆ ಏರಿಕೆಯಾಗತೊಡಗಿತು. ಬೆಳಗ್ಗೆ ಮತ್ತಷ್ಟು ನೀರಿನ ಪ್ರಮಾಣ ಏರಿಕೆ ಯಾಗಿದ್ದು, ನೇತ್ರಾವತಿ ನದಿ ನೀರು ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಆವರಣವನ್ನು ಪ್ರವೇಶಿಸಿತು. ನೇತ್ರಾವತಿ ನದಿ ನೀರಿನಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದು, ರಭಸದಿಂದ ಕೂಡಿತ್ತು. ಕುಮಾರಧಾರಾ ನದಿಯಲ್ಲಿ ನೀರಿನ ಪ್ರಮಾಣ ನಿನ್ನೆಗಿಂತ ಕಡಿಮೆಯಾಗಿತ್ತು. ಆದ್ದರಿಂದ ಕುಮಾರಧಾರ ನದಿಯ ನೀರಿಗೆ ಮಧ್ಯಾಹ್ನದ ತನಕ ದೇವಾಲಯದ ಮುಂಭಾಗಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ನೇತ್ರಾವತಿ ನದಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಹೋಗಿ ಶ್ರೀ ಮಹಾಕಾಳಿ ದೇವಾಲಯದ ಒಳಗೆ ಪ್ರವೇಶಿಸಿದ ನೀರು ಬಳಿಕವೂ ಏರಿಕೆಯಾಗಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಅಲ್ಲೇ ಇರುವ ನೇತ್ರಾವತಿ ಸಮುದಾಯ ಭವನದ ಸನಿಹವನ್ನು ತಲುಪಿತ್ತು. ನೆರೆ ನೀರಿನಿಂದಾಗಿ ಶ್ರೀ ಮಹಾಕಾಳಿ ದೇವಾಲಯ, ನಾಗನ ಕಟ್ಟೆ, ದೈವದ ಕಟ್ಟೆ, ದೇವಾಲಯದ ಮುಂಭಾಗವೆಲ್ಲ ಜಲಾವೃತಗೊಂಡಿತ್ತು. ದೇವಾಲಯದ ಆವರಣದಲ್ಲಿ ಮೊಣಕಾಲಿಗಿಂತಲೂ ಜಾಸ್ತಿ ನೀರಿತ್ತು.

ಕೊನೆಗೂ ಸಂಗಮವಾಯ್ತು
ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳು ನದಿಯ ಒಳಹರಿನ ಮೂಲಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಸಂಗಮ ವಾಗುವುದು ಮಾಮೂಲಿಯಾದರೆ, ಮಳೆಗಾಲದಲ್ಲಿ ದೇವಾಲಯದ ಎಡಭಾಗದಿಂದ ನೇತ್ರಾವತಿ ನದಿ, ಬಲಭಾಗದಿಂದ ಕುಮಾರಧಾರಾ ನದಿ ಉಕ್ಕೇರಿ ಬಂದು ಸಹಸ್ರಲಿಂಗೇಶ್ವರ ದೇವಾಲಯದ ಪ್ರವೇಶ ದ್ವಾರದವರೆಗೆ ಬಂದರೆ ಸಂಗಮವಾಯಿತೆಂದು ಲೆಕ್ಕ. ಆದರೆ ಶುಕ್ರವಾರ ಮಧ್ಯಾಹ್ನದವರೆಗೆ ನೇತ್ರಾವತಿ ನದಿ ನೀರು ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಮುಂದಕ್ಕೆ ಸಾಗಿತ್ತು. ಆದರೂ ಅದು ಕುಮಾರಧಾರಾ ನದಿಯನ್ನು ಸೇರದೆ ಅಲ್ಲಿಯೇ ತಿರುವು ಪಡೆದುಕೊಂಡು ರಸ್ತೆಯ ಮೂಲಕ ಹೋಗಿ ನಾಜೂಕು ಸೆಲೂನ್‌ ತನಕ ತಲುಪಿತ್ತು. ಇನ್ನೊಂದೆಡೆ ಕುಮಾರಧಾರಾ ನದಿಯ ನೀರು ಮತ್ತೂಂದು ದಿಕ್ಕಿನಿಂದ ದೇವಾಲಯದ ಆವರಣವನ್ನು ಪ್ರವೇಶಿಸಲೇ ಇಲ್ಲ. ಸಂಗಮವಾಗುವ ಕ್ಷಣವನ್ನು ಎದುರು ನೋಡುತ್ತಿದ್ದ ನೂರಾರು ಜನರು ನಿರಾಶರಾದರು. ಸಂಜೆಯಾದೊಡನೆ ಸಂಗಮವಾಯಿತು. ನೆರೆ ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದೊಂದಿಗೆ ಅಗ್ನಿಶಾಮಕ ದಳದವರು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಅಡ್ಡವಾದ ಅಭಿವೃದ್ಧಿ ಕಾಮಗಾರಿ!
ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ರಭಸವಾಗಿದ್ದು ಈ ಬಾರಿ ಸಂಗಮವಾಗದಿರಲು ಒಂದು ಕಾರಣ ವಾದರೆ, ದೇವಾಲಯದ ಬಳಿ ನಡೆದ ಹಲವು ಅಭಿವೃದ್ಧಿ ಕಾಮಗಾರಿಗಳು ಇನ್ನೊಂದು ಪ್ರಮುಖ ಕಾರಣವಾಗಿವೆ. ಕುಮಾರಧಾರಾ ನದಿ ನೀರು ದೇವಸ್ಥಾನ ಪ್ರವೇಶಿಸುವ ಕಡೆಯ ಪ್ರದೇಶ ಈಗ ಮೊದಲಿನಂತಿರದೆ, ಹಲವು ಅಭಿವೃದ್ಧಿ ಕಾಮಗಾರಿ, ಕಟ್ಟಡ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣವಾಗಿರುವುದರಿಂದಾಗಿ ನೀರು ಸರಾಗವಾಗಿ ಮುನ್ನುಗ್ಗಿ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಾಗಿ ಬಲ ಬದಿಯಿಂದ ಕುಮಾರಧಾರಾ ನದಿ ನೀರು ದೇವಾಲಯದ ಆವರಣದೊಳಗೆ ಬಂದಿಲ್ಲ. ಕುಮಾರಧಾರಾ ನದಿ ಬದಿಯ ಪ್ರದೇಶ ದೇವಾಲಯದ ಆವರಣದಿಂದ ಈಗ ಎತ್ತರಿಸಲ್ಪಟ್ಟಿರುವುದರಿಂದ ದೇವಾಲಯದ ಆವರಣದಲ್ಲಿದ್ದ ನೇತ್ರಾವತಿ ನದಿ ನೀರು ಕೂಡಾ ದೇವಾಲಯದ ಬಲ ಬದಿಗೆ ಹೋಗಿ ಕುಮಾರಧಾರಾ ನದಿಯನ್ನು ಸೇರಿಕೊಳ್ಳಲಾಗದೇ, ತಿರುವು ಪಡೆದು ರಸ್ತೆಯತ್ತ ಸಾಗುವಂತಾಯಿತು. ಆದರೂ ಉಭಯ ನದಿಗಳ ಸಂಗಮವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next