Advertisement

ಕಿಲ್ಲರ್‌ ಕಟ್ಟಡ ಕರಾಳ ಕಥೆಗಳ ಅನಾವರಣ

10:05 AM May 11, 2019 | Team Udayavani |

ಧಾರವಾಡ: ನನ್ನ ಗಂಡ ಕಟ್ಟಡ ಕುಸಿತದಲ್ಲಿ ತೀರಿ ಹೋದ್ರು..ಮೂರು ಮಕ್ಕಳು, ಅದರಲ್ಲಿ ಒಂದು ಮಗು ಬುದ್ಧಿಮಾಂದ್ಯವಿದೆ..ನಾನು ಹೇಗೆ ಜೀವನ ನಡೆಸಲಿ, ನನಗೆ ಹೆಚ್ಚು ಪರಿಹಾರ ಕೊಡಿ ಎಂದು ಅಂಗಲಾಚುವ ಮಹಿಳೆ, ದುರಂತದಲ್ಲಿ ನನ್ನ ಹರೆಯದ ಮಗ ಸತ್ತು ಹೋದಾಗಿನಿಂದ ನನ್ನ ಹೆಂಡ್ತಿ ಮೇಲಕ್ಕೆದ್ದಿಲ್ಲ ಅವಳನ್ನು ಉಳಿಸಿಕೊಳ್ಳುವುದಕ್ಕಾದರೂ ಒಂದು ಮಗು ದತ್ತು ಪಡೆಯಲು ಅವಕಾಶ ಮಾಡಿ ಕೊಡಿ ಎಂದು ಕೈ ಮುಗಿದು ಕೇಳುವ ತಂದೆ, ಪರಿಹಾರ ಸಿಕ್ಕರೂ ನನ್ನ ಬಾಳ ರಥದ ಗಾಲಿಯಾಗಿದ್ದ ಹೆಂಡ್ತಿಯೇ ತೀರಿ ಹೋದಳು, ನನ್ನ ನೋಡುವರ್ಯಾರು? ಎಂದು ಪ್ರಶ್ನಿಸುವವ ಇನ್ನೊಬ್ಬ, ಒಬ್ಬರೇ ಇಬ್ಬರೇ ಎಲ್ಲರದ್ದೂ ಒಂದೊಂದು ಗೋಳಿನ ಕಥೆ.

Advertisement

ಹೌದು. ಶುಕ್ರವಾರ ಧಾರವಾಡ ಕಿಲ್ಲರ್‌ ಕಟ್ಟಡ ದುರಂತದ ವಿಚಾರಣೆ ಆರಂಭಗೊಂಡಿದ್ದು, ಸಂಜೆವರೆಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ದೀಪಾ ಚೋಳನ್‌ ಅವರು ಕಟ್ಟಡ ದುರಂತದಲ್ಲಿ ಮೃತಪಟ್ಟವರ ವಾರಸುದಾರರು, ಗಾಯಗೊಂಡವರು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದ ವೇಳೆ ಕಿಲ್ಲರ್‌ ಕಟ್ಟಡ ದುರಂತದಲ್ಲಿ ಮಡಿದವರ ಮತ್ತು ಗಾಯಗೊಂಡವರ ಕುಟುಂಬಗಳ ಕರುಣಾಜನಕ ಕಥೆಗಳು ಅನಾವರಣಗೊಂಡವು. ಅಷ್ಟೇಯಲ್ಲ, ಕಟ್ಟಡ ಕುಸಿತಕ್ಕೆ ಕಾರಣವಾದ ಸಂಗತಿಗಳು ಮತ್ತು ಕಾರಣವಾದ ವ್ಯಕ್ತಿಗಳ ಕುರಿತು ಮತ್ತಷ್ಟು ಸತ್ಯಗಳು ಹೊರ ಬಿದ್ದವು.

ವಿವೇಕ್‌ ಪವಾರ ಅವರೇ ತಗ್ಗು ತೆಗೆಯಲು ಹೇಳಿದ್ದು : ಕಿಲ್ಲರ್‌ ಕಟ್ಟಡಕ್ಕೆ 20ಕ್ಕೂ ಹೆಚ್ಚು ಕಾಲಂಗಳಿದ್ದು ಅವುಗಳನ್ನು ಇನ್ನಷ್ಟು ಗಟ್ಟಿ ಮಾಡಲು ಕಾಲಂ ಅಡಿಯಲ್ಲಿ ಗುಂಡಿ ತೋಡಲಾಗುತ್ತಿತ್ತು. ಇದನ್ನು ತೆಗೆಯುವಂತೆ ಕಟ್ಟಡದ ಇಂಜಿನಿಯರ್‌ ವಿವೇಕ್‌ ಪವಾರ ಅವರೇ ಹೇಳಿದ್ದರು ಎಂದು ಸಂಗ್ರಾಮ ಶಿವಾಜಿ ಆರೋಢ ಜಿಲ್ಲಾ ದಂಡಾಧಿಕಾರಿಗಳಿಗೆ ವಿಚಾರಣೆ ವೇಳೆ ಮಾಹಿತಿ ನೀಡಿದರು. ಈ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿ ಸಂಗ್ರಹಿಸಿದರು.

ಕಟ್ಟಡ ದುರಂತದಲ್ಲಿ ಬೆರಳುಗಳನ್ನು ಕಳೆದುಕೊಂಡ ಕಾರ್ಮಿಕ ಮಲ್ಲನಗೌಡ ಪಾಟೀಲ ಅವರು ಕೂಡ ಕಟ್ಟಡ ದುರಂತಕ್ಕೆ ಕಾಲಂಗಳ ತಗ್ಗು ತೆಗೆದಿರುವುದೇ ಕಾರಣ ಎಂದು ಹೇಳಿದರಲ್ಲದೇ, ಒಟ್ಟು ಆರು ಕಾಲಂಗಳಿಗೆ ಗುಂಡಿ ತೋಡಲಾಗಿತ್ತು. ಈ ಪೈಕಿ 5 ಕಾಲಂಗಳಿಗೆ ಒಟ್ಟಿಗೇ ತೆಗೆಯಲಾಗಿತ್ತು ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದರು.

ಬುದ್ಧಿಮಾಂಧ್ಯ ಮಗು ನೋಡಿ ಮರುಗಿದ ಡಿಸಿ: ಇನ್ನು ಕಟ್ಟಡ ದುರಂತದಲ್ಲಿ ಮಡಿದ ಜಹಂಗೀರ ಹರಿಹರ ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಎದುರು ತಮ್ಮ ಮನೆಯ ಸ್ಥಿತಿ ವಿವರಿಸುವಾಗ ಎಲ್ಲರೂ ಒಂದು ಕ್ಷಣ ಭಾವುಕರಾದರು. ಜಹಂಗೀರ ತಾಯಿ, ತಮ್ಮ ಕುಟುಂಬ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಕೊನೆಗೆ ಒಂದೂವರೆ ವರ್ಷದ ಬುದ್ಧಿಮಾಂಧ್ಯ ಮಗುವನ್ನು ಜಿಲ್ಲಾಧಿಕಾರಿಗಳಿಗೆ ತೋರಿಸಿ ಈ ಮಗುವಿಗೆ ತಿಂಗಳಿಗೆ 3 ಸಾವಿರ ರೂ. ಔಷಧಿ ಬೇಕು. ಅವನ ತಂದೆ ತೀರಿ ಹೋದ ನಾವು ಹೇಗೆ ಜೀವನ ಮಾಡುವುದು? ಎಂದು ಪ್ರಶ್ನಿಸಿದಾಗ ಜಿಲ್ಲಾಧಿಕಾರಿಗಳ ಕಣ್ಣುಗಳು ಒದ್ದೆಯಾದವು. ಜಿಲ್ಲಾಧಿಕಾರಿಗಳು ಮಗುವಿನ ಚಿಕಿತ್ಸೆ ಮತ್ತು ಕುಟುಂಬಕ್ಕೆ ಹೆಚ್ಚು ಪರಿಹಾರ ಭರವಸೆ ನೀಡಿದರು.

Advertisement

ಅಂಗಡಿ ಹಣ ಕೊಡಿಸಿ : ಇದೇ ವೇಳೆ ಕಿಲ್ಲರ್‌ ಕಟ್ಟಡದಲ್ಲಿ ಅಂಗಡಿ ಖರೀದಿಸಿದ ಕುಟುಂಬಗಳು ತಮ್ಮ ದುರಂತ ಕಥೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಈ ಪೈಕಿ ಸಂಗಮೇಶ ಮನಮಿ ಎನ್ನುವವರ ಕುಟುಂಬ ಸದಸ್ಯರು 32 ಲಕ್ಷ ರೂ.ಗಳನ್ನು ಕೊಟ್ಟು ಅಲ್ಲಿ ಮಳಿಗೆ ಖರೀದಿಸಿದ್ದೆವು. ಆದರೆ ಇದೀಗ ಹಣವೂ ಹೋಯ್ತು, ಅಂಗಡಿಯೂ ಹೋಯ್ತು. ಪ್ರತಿ ತಿಂಗಳು ಪೈನಾನ್ಸ್‌ದವರು ನೋಟಿಸ್‌ ನೀಡುತ್ತಿದ್ದಾರೆ. ನಾವು ದುಡ್ಡನ್ನು ಹೇಗೆ ಕಟ್ಟುವುದು? ದಯಮಾಡಿ ನಮಗೆ ನಮ್ಮ ಹಣ ಕೊಡಿಸಿ ಎಂದು ಮನವಿ ಮಾಡಿದರು. ಅದೇ ರೀತಿ ಬಸವರಾಜ ನಿಗದಿ ಅವರಿಂದ 30 ಲಕ್ಷ ರೂ. ನೀಡಿ ಇದೇ ಕಟ್ಟಡದಲ್ಲಿ ಮಳಿಗೆ ಖರೀದಿಸಿ ಕಂಪ್ಯೂಟರ್‌ ಅಂಗಡಿ ಇಟ್ಟಿದ್ದ ಕುಟುಂಬಸ್ಥರು ಕೂಡ ಜಿಲ್ಲಾಧಿಕಾರಿಗಳಿಗೆ ಪರಿಹಾರಕ್ಕೆ ಮೊರೆ ಇಟ್ಟರು. ಈ ಕುರಿತು ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಭರವಸೆ ನೀಡಿದರು.

15ರೊಳಗೆ ಪರಿಹಾರ: ಜಿಲ್ಲಾಧಿಕಾರಿ

ಕಿಲ್ಲರ್‌ ಕಟ್ಟಡ ದುರಂತದಲ್ಲಿ ಮೃತಪಟ್ಟವರು, ತೀವ್ರ ಗಾಯಗೊಂಡವರಿಗೆ ಈಗಾಗಲೇ ಅರ್ಧದಷ್ಟು ಪರಿಹಾರ ನೀಡಲಾಗಿದೆ. ಆದರೆ ಇದೀಗ ಪ್ರಧಾನಮಂತ್ರಿ ಪರಿಹಾರ ಧನ ಯೋಜನೆಯಡಿಯಲ್ಲಿ ಮತ್ತೆ ಹಣ ಬಂದಿದ್ದು ಅದನ್ನು ಮೇ 15ರೊಳಗೆ ಅವರ ಖಾತೆಗಳಿಗೆ ಬಿಡುಗಡೆ ಮಾಡುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಟ್ಟಡ ದುರಂತದಲ್ಲಿ ಮೃತಪಟ್ಟಿರುವ 19 ಜನರಿಗೆ ತಲಾ 7ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ಪೈಕಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ, ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ , ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇನ್ನು ತೀವ್ರ ಗಾಯಗೊಂಡವರಿಗೆ ಈಗಾಗಲೇ ಮಹಾನಗರ ಪಾಲಿಕೆಯಿಂದ ತಲಾ 1ಲಕ್ಷ ರೂ. ನೀಡಲಾಗಿದ್ದು, ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದರು. ಇನ್ನು ಗಾಯಗೊಂಡವರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ಪಡೆಯಲಾಗುತ್ತಿದೆ ಎನ್ನುವ ದೂರಿದೆ. ಈ ಕುರಿತು ತಕ್ಷಣವೇ ಎಸ್‌ಡಿಎಂ ಮತ್ತು ಕಿಮ್ಸ್‌ಗೆ, ಕಟ್ಟಡ ದುರಂತದಲ್ಲಿ ಗಾಯಗೊಂಡ ಯಾರಿಂದಲೂ ಚಿಕಿತ್ಸಾ ವೆಚ್ಚ ಪಡೆಯದಂತೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next