Advertisement

ಅಕಾಲಿಕ ಮಳೆ: ದೊರೆಯದ ಹಳ್ಳಿ ಹಳದ ಮರಳು!

10:35 AM Oct 20, 2022 | Team Udayavani |

ಕುಂದಾಪುರ: ಎಲ್ಲ ಸರಿ ಹೋಗಿದ್ದರೆ ಇಷ್ಟರ ವೇಳೆಗೆ ವಿವಿಧ ಕಾಮಗಾರಿಗಳಿಗೆ, ನರೇಗಾ ಕೆಲಸಗಳಿಗೆ, ಗೃಹ ನಿರ್ಮಾಣಕ್ಕೆ ಹಳ್ಳಿ ಹಳ್ಳದ ಮರಳು ದೊರೆಯಬೇಕಿತ್ತು. ಅದಕ್ಕಾಗಿ ಅ.5 ಎಂಬ ದಿನವನ್ನೂ ಜಿಲ್ಲಾಡಳಿತದಿಂದ ನಿಗದಿ ಮಾಡಲಾಗಿತ್ತು. ಆದರೆ ಅಕಾಲಿಕ ಮಳೆಯ ಪರಿಣಾಮದಿಂದ, ಭತ್ತದ ಕೆಲಸ ಕಾರ್ಯಗಳು ಇನ್ನೂ ಮುಗಿಯದ ಕಾರಣದಿಂದ ಮರಳು ಮತ್ತೂ ತಡವಾಗಲಿದೆ.

Advertisement

ಎಷ್ಟು ಮರಳು

ಹೊಸ ಮರಳು ನೀತಿ 2020-21ರಂತೆ ಮೊದಲನೇ, ಎರಡನೇ, ಮೂರನೇ ಶ್ರೇಣಿಯ ಹಳ್ಳ ಮತ್ತು ತೊರೆಗಳಲ್ಲಿರುವ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳು ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾರ್ಕಳ, ಹೆಬ್ರಿ, ಕಾಪು, ಕುಂದಾಪುರ, ಬೈಂದೂರು ತಾ.ಪಂ. ವ್ಯಾಪ್ತಿಯ 35 ಮರಳು ನಿಕ್ಷೇಪಗಳಲ್ಲಿ ಒಟ್ಟು 49,903 ಮೆ. ಟನ್‌ ಪ್ರಮಾಣದ ಮರಳನ್ನು ಗುರುತಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಕಾಳಾವರದ ವಕ್ವಾಡಿಯ ತೆಂಕಬೆಟ್ಟು ಹಳ್ಳದಲ್ಲಿ 400 ಟನ್‌, ಆಲೂರು ಗ್ರಾ.ಪಂ.ನ ಹಕೂìರಿನಲ್ಲಿ 500 ಟನ್‌ ಮರಳು ನಿಕ್ಷೇಪ ಗುರುತಿಸಲಾಗಿದೆ.

ಶರತ್ತು

ಮರಳು ನಿಕ್ಷೇಪಗಳನ್ನು ತೆರವುಗೊಳಿಸಲು ಈಗಾಗಲೇ ಗ್ರಾಮ ಪಂಚಾಯತ್‌ಗಳಿಗೆ ಆಶಯ ಪತ್ರ ನೀಡಲಾಗಿದ್ದು, ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗ್ರಾಹಕರು, ಸರಕಾರಿ ಸ್ಥಳೀಯ ಕಾಮಗಾರಿಗಳ ಗುತ್ತಿಗೆದಾರರು, ಸರಕಾರದಿಂದ ನಿಗದಿಪಡಿಸಿದ ಗರಿಷ್ಠ ಮಾರಾಟ ದರವನ್ನು ಗ್ರಾ.ಪಂ.ಗಳಿಗೆ ಪಾವತಿಸಿ, ರವಾನೆ ಪರವಾನಿಗೆ ಪಡೆದು, ಕಡಿಮೆ ಭಾರ ಸಾಮರ್ಥ್ಯದ ವಾಹನಗಳಲ್ಲಿ ಸ್ವಂತ ಖರ್ಚಿನಲ್ಲಿ ತುಂಬಿಸಿ ಸಾಗಾಟ ಮಾಡಬೇಕು. ಕಾರ್ಮಿಕರೇ ಮರಳು ತೆಗೆಯಬೇಕು ವಿನಾ ಯಂತ್ರಗಳನ್ನು ಬಳಸುವಂತಿಲ್ಲ. ಮೊದಲ ಆದ್ಯತೆ ಗ್ರಾ.ಪಂ. ವ್ಯಾಪ್ತಿಯ ಬಳಕೆಗೆ. ಗ್ರಾ.ಪಂ. ಗಳು ಗ್ರಾಹಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಜಧನ ಹಾಗೂ ಅನ್ವಯವಾಗುವ ಇತರ ಶುಲ್ಕಗಳನ್ನು ಸ್ವೀಕರಿಸಿ, ವಿಶೇಷ ರಕ್ಷಣಾತ್ಮಕವುಳ್ಳ ಸಾಗಾಣಿಕೆ ಪರವಾನಿಗೆಯನ್ನು ಗ್ರಾಹಕರಿಗೆ ನೀಡಬೇಕು. ಈ ಬಗ್ಗೆ ಅಗತ್ಯವಿರುವ ಎಲ್ಲ ರೀತಿಯ ತಾಂತ್ರಿಕ ತರಬೇತಿ, ನೆರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಡೆಯಬೇಕು.

Advertisement

ಕಣ್ಗಾವಲು

ಮರಳು ತೆಗೆಯುವಲ್ಲಿ ಗ್ರಾ.ಪಂ. ಸಿಬಂದಿ ಕಣ್ಗಾವಲು ಹಾಕಬೇಕು. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ಮರಳು ತೆಗೆಯುವಿಕೆ ಮತ್ತು ಸಾಗಾಣಿಕೆ ಮಾಡಬೇಕು. ಟನ್‌ ಅಳತೆಗೆ ಲಾರಿ ಹಾಗೂ ಅದರಲ್ಲಿ ಹಿಡಿಯುವ ಮರಳಿನ ಪ್ರಮಾಣವನ್ನು ಅಂದಾಜಿಸಿ ನಿಗದಿಪಡಿಸಲಾಗಿದೆ. ಆದ್ದರಿಂದ ಮರಳು ಗಣಿಯಲ್ಲಿ ತೂಗುಯಂತ್ರಗಳು ಇರುವುದಿಲ್ಲ. ಕಣ್ಣಂದಾಜಿನ ತೂಕವೇ ಅಳತೆ!

ಟ್ರಿಪ್‌ಶೀಪ್‌

ಇಂಟಿಗ್ರೇಟೆಡ್‌ ಲೀಸ್‌ ಮ್ಯಾನೇಜ್‌ಮೆಂಟ್‌ ಸಾಫ್ಟ್ವೇರ್‌ ಮೂಲಕ ಟ್ರಿಪ್‌ಶೀಟ್‌ ತೆಗೆದು ಪಂಚಾಯತ್‌ಗೆ ನೀಡಲಾಗುತ್ತದೆ. ಇದರ ಆಧಾರದಲ್ಲಿ ಇಂತಿಷ್ಟು ಲೋಡ್‌, ಇಂತಿಷ್ಟು ಟನ್‌ ಎಂದು ಸರಕಾರಕ್ಕೆ ಮರಳಿನ ಲೆಕ್ಕ ಸಿಗುತ್ತದೆ.

ಕೊರತೆ

ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧವಿದ್ದು, ಅಕ್ಟೋಬರ್‌ವರೆಗೆ ಮರಳುಗಾರಿಕೆಗೆ ಅವಕಾಶವಿಲ್ಲ. ಮುಖ್ಯವಾಗಿ ನಗರ ಭಾಗದಲ್ಲಿ ಶೇ.50ರಷ್ಟು ಕಟ್ಟಡ ನಿರ್ಮಾಣ ಕಾರ್ಯ ಮರಳಿನ ಕೊರತೆಯಿಂದ ಸ್ಥಗಿತಗೊಂಡಿದೆ. ಪರಿಸರ ಇಲಾಖೆ ಮಾರ್ಗಸೂಚಿಯಂತೆ ನಾನ್‌ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ನಿಷೇಧ ಅವಧಿ ಅ.15ರವರೆಗೂ ಇರುವುದರಿಂದ ಮರಳು ಕೊರತೆಗೆ ಕಾರಣವಾಗಿದೆ. 1 ಲೋಡ್‌ ಅಥವಾ 3 ಯುನಿಟ್‌ ಮರಳಿಗೆ 8 ಸಾವಿರದಿಂದ 8,500 ರೂ. ಇದೆ. ಆದರೆ ಬ್ಲ್ಯಾಕ್‌ ನಿಂದ ಖರೀದಿ ಮಾಡಿದಲ್ಲಿ ದುಪ್ಪಟ್ಟು ದರ. ಈ ವರ್ಷ ಬ್ಲ್ಯಾಕ್‌ನಲ್ಲಿಯೂ ಮರಳು ಸಿಗುತ್ತಿಲ್ಲ.

ನಾನ್‌ಸಿಆರ್‌ಝಡ್‌

ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಕುಂದಾಪುರ ತಾಲೂಕಿನ ಬಳ್ಕೂರು, ಹಳ್ನಾಡಿನಲ್ಲಿ ಲೀಸ್‌ ನೀಡಲಾಗಿದೆ. ಇದರಲ್ಲಿ 75 ಸಾವಿರ ಮೆಟ್ರಿಕ್‌ ಟನ್‌ ವರೆಗೂ ಲಭ್ಯವಿದ್ದು, ಸರಕಾರಿ ಕಾಮಗಾರಿಗಳಿಗೆ, ಸಾರ್ವಜನಿಕ ಮತ್ತು ಖಾಸಗಿ ಉದ್ದೇಶಕ್ಕೆ ನೀಡಲಾಗುತ್ತದೆ. ಆದರೆ ಆರಂಭ ಮಾತ್ರ ಆಗಿಲ್ಲ.

ಮಳೆ, ಬೆಳೆ

ಅ.5ರಿಂದ ಹಳ್ಳಿ ಹಳ್ಳದ ಮರಳು ತೆಗೆಯಲು ಪ್ರಾರಂಭಿಸಬಹುದು ಎಂದು ಅನುಮತಿ ನೀಡ ಲಾಗಿದ್ದರೂ ಅಕಾಲಿಕ ಮಳೆಯಿಂದಾಗಿ ಹಳ್ಳದ ನೀರು ಇಳಿದಿಲ್ಲ. ಹರಿವು ಕಡಿಮೆಯಾಗಿಲ್ಲ. ಜತೆಗೆ ಹಳ್ಳದ ಪಕ್ಕದಲ್ಲಿನ ಭತ್ತದ ಬೇಸಾಯ ಮುಗಿದಿಲ್ಲ. ಕಟಾವು ಆಗಿಲ್ಲ. ಮರಳು ತೆಗೆದು ಹಾಕಲು, ಲಾರಿ ಓಡಾಟ ನಡೆಸಲು ಸ್ಥಳವಿಲ್ಲ ಎಂದಾಗಿದೆ. ಇದೆಲ್ಲದರಿಂದಾಗಿ ಗ್ರಾ.ಪಂ.ಗಳ ಮರಳು ಲಭ್ಯವಾಗಲು ಇನ್ನೂ ಕಾಲಾವಕಾಶ ಅಗತ್ಯವಿದೆ.

ಬರೀ 300 ರೂ.

1 ಟನ್‌ಗೆ 80 ರೂ. ರಾಯಧನ, 40 ರೂ. ಎಎಪಿಪಿ ಶುಲ್ಕ, 2 ರೂ. ಐಟಿ-ಟಿಸಿಎಸ್‌ ಶುಲ್ಕ, 8 ರೂ. ಡಿಎಂಎಫ್ಟಿ ಶುಲ್ಕ ಎಂದು 130 ರೂ.ಗಳು, 170 ರೂ. ಪಂಚಾಯತ್‌ ಗೆಂದು ಒಟ್ಟು 300 ರೂ. ಪಡೆಯಲಾಗುತ್ತದೆ. ಉಳಿದಂತೆ ಸಾಗಾಟ ವೆಚ್ಚ, ಕೂಲಿ. ಸಾಗಾಟದ ಲಾರಿ ಗಣಿ ಇಲಾಖೆಯಲ್ಲಿ ನೋಂದಣಿಯಾಗಿರಬೇಕು.

ಆರಂಭ ಆಗಿಲ್ಲ: ಮಳೆ ನೀರು ಹರಿವಿನ ಪ್ರಮಾಣ ಇನ್ನೂ ನದಿಗಳಲ್ಲಿ ತಗ್ಗಿಲ್ಲದ ಕಾರಣ ಗ್ರಾ.ಪಂ.ಗಳಲ್ಲಿ ಮರಳುಗಾರಿಕೆ ಆರಂಭವಾಗಿಲ್ಲ. –ಮಹೇಶ್‌ ಕುಮಾರ್‌ ಹೊಳ್ಳ ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಕುಂದಾಪುರ

 ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next